ನೊಂದ ಮಹಿಳೆಯರ ಭರವಸೆ ''''ಸಖಿ'''' ಒನ್ ಸ್ಟಾಪ್ ಕೇಂದ್ರ

KannadaprabhaNewsNetwork |  
Published : Jun 14, 2024, 01:07 AM ISTUpdated : Jun 14, 2024, 01:08 AM IST
ಪೊಟೋ: 13ಎಸ್ಎಂಜಿಕೆಪಿ02: ಬಿ.ಎಚ್‌.ಕೃಷ್ಣಪ್ಪ | Kannada Prabha

ಸಾರಾಂಶ

ನೊಂದ ಮಹಿಳೆಯರು, ಹೆಣ್ಣು ಮಕ್ಕಳಿಗೆ ನೆರವು ಒದಗಿಸುವ ಉದ್ದೇಶದಿಂದ ‘ಸಖಿ ಒನ್ ಸ್ಟಾಪ್ ಸೆಂಟರ್’ ಕಾರ್ಯನಿರ್ವಹಿಸುತ್ತಿದೆ. ದೌರ್ಜನ್ಯಕ್ಕೆ ಒಳಗಾದ ಮಹಿಳೆಯರ, ಮಕ್ಕಳ ರಕ್ಷಣೆಗಾಗಿ ದಿನದ 24 ಗಂಟೆಗಳು, ವರ್ಷದ 365 ದಿನಗಳ ಕಾಲ ಕಾರ್ಯಗತವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಬಿ.ಎಚ್‌.ಕೃಷ್ಣಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಶಿವಮೊಗ್ಗದ ಸಖಿ-ಒನ್‌ಸ್ವಾಪ್‌ ಸೆಂಟರ್‌ ಕಳೆದ ಕಳೆದ ಐದು ವರ್ಷಗಳಲ್ಲಿ ದೌರ್ಜನ್ಯಕ್ಕೊಳಗಾದ 1400 ಮಹಿಳೆಯರು-ಹೆಣ್ಣುಮಕ್ಕಳಿಗೆ ಆಸರೆಯಾಗಿದೆ !

ಮಹಿಳಾ ದೌರ್ಜನ್ಯ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚು ವರದಿಯಾಗುತ್ತಿರುವ ಜೊತೆಗೆ ಸಖಿಯ ನೆರವು ಪಡೆದವವರ ಸಂಖ್ಯೆಯೂ ಹೆಚ್ಚಳಗೊಂಡಿದೆ.

ಕುಟುಂಬ, ಸಮುದಾಯ, ಕೆಲಸದ ಸ್ಥಳಗಳು, ಖಾಸಗಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ದೌರ್ಜನ್ಯಕ್ಕೊಳಗಾದ ಹೆಣ್ಣು ಮಕ್ಕಳು ಹಾಗೂ ಮಹಿಳೆಯರಿಗೆ ನೆರವು ಒದಗಿಸಲು ಶಿವಮೊಗ್ಗದಲ್ಲಿ 24*7 ಕಾರ್ಯ ನಿರ್ವಹಿಸುತ್ತಿದೆ ‘ಸಖಿ’ ಒನ್ ಸ್ಟಾಪ್ ಸೆಂಟರ್.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ನಗರದ ಆಲ್ಕೋಳ ವೃತ್ತದ ಬಳಿ ಸರ್ಕಾರಿ ಬಾಲಕರ ಬಾಲ ಮಂದಿರದ ಆವರಣದಲ್ಲಿ ನೊಂದ ಮಹಿಳೆಯರಿಗಾಗಿ ‘ಸಖಿ’ ಒನ್ ಸ್ಟಾಪ್ ಸೆಂಟರ್ ಕಾರ್ಯನಿರ್ವಹಿಸುತ್ತಿದೆ.

ದೆಹಲಿಯ ನಿರ್ಭಯಾ ಪ್ರಕರಣದ ಬಳಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು-ಹೆಣ್ಣುಮಕ್ಕಳಿಗೆ ಒಂದೇ ಸೂರಿನಡಿ ಸೌಲಭ್ಯ ಒದಗಿಸಲು ರಾಜ್ಯ ಸರ್ಕಾರವು 2014ರಲ್ಲಿ ‘ಗೆಳತಿ’ ಚಿಕಿತ್ಸಾ ಘಟಕಗಳನ್ನು ಆರಂಭಿಸಿತು. 2019ರಲ್ಲಿ ಈ ಕೇಂದ್ರಗಳನ್ನು ಕೇಂದ್ರ ಸರ್ಕಾರ ತನ್ನ ಸುಪರ್ದಿಗೆ ತೆಗೆದುಕೊಂಡು ‘ಸಖಿ’ ಒನ್ ಸ್ಟಾಪ್ ಸೆಂಟರ್ ಎಂದು ಮರು ನಾಮಕರಣ ಮಾಡಿದೆ.

1400 ಜನ ಮಹಿಳೆರಿಂದ ದೂರು: ಶಿವಮೊಗ್ಗ ಜಿಲ್ಲೆ ‘ಸಖಿ’ ಒನ್ ಸ್ಟಾಪ್ ಸೆಂಟರ್‌ನಲ್ಲಿ 2019 ರಿಂದ ಇಲ್ಲಿಯವರೆಗೂ 1400 ಜನ ಮಹಿಳೆಯರು-ಹೆಣ್ಣುಮಕ್ಕಳು ದೂರು ನೀಡಿದ್ದಾರೆ. ಈ ದೂರುಗಳ ಪೈಕಿ ಕೌಟುಂಬಿಕ ಕಲಹಕ್ಕೆ ಸಂಬಂಧಿಸಿದ ದೂರುಗಳ ಸಂಖ್ಯೆಯೇ ಹೆಚ್ಚಾಗಿದೆ.

ಕೌಟುಂಬಿಕ ದೌರ್ಜನ್ಯ 776 ಪ್ರರಣಗಳು, ಅತ್ಯಾಚಾರ 135, ಲೈಂಗಿಕ ಅಪರಾಧ , ಕಿರುಕುಳ, ಹಲ್ಲೆ, ದೌರ್ಜನ್ಯ ಸಂಬಂಧ 41, ಆಸಿಡ್ ದಾಳಿ 1, ಮಹಿಳೆ ಸಾಗಾಣಿಕೆ 1, ಲೈಂಗಿಕ ದುರುಪಯೋಗಕ್ಕೆ ಒಳಗಾದವರ ಸಂಖ್ಯೆ 107, ಬಾಲ್ಯವಿವಾಹ 76, ಕಾಣೆಯಾದ ಮತ್ತು ಅಪಹರಣ 76, ಸೈಬರ್ ಅಪರಾಧ 11, ವರದಕ್ಷಿಣೆ ಕಿರುಕುಳ 33, ಇನ್ನಿತರೆ ದೌರ್ಜನ್ಯಗಳು 144 ಪ್ರಕರಣಗಳು ಸೇರಿ ಒಟ್ಟು 1400 ಪ್ರಕರಣ ದಾಖಲಾಗಿದೆ.

ಈ ಪ್ರಕರಣಗಳಲ್ಲಿ ಈವರೆಗೆ 1179 ಸಂತ್ರಸ್ತರಿಗೆ ಕಾನೂನು ನೆರವು ಮತ್ತು ಸಮಾಲೋಚನೆ ನೀಡಲಾಗಿದ್ದು, 447 ವೈದ್ಯಕೀಯ ನೆರವು ನೀಡಲಾಗಿದೆ. ದೌರ್ಜನ್ಯ ಕ್ಕೊಳಗಾಗಿ ಮನೊರೋಗದಿಂದ ಬಳಲುತ್ತಿದ್ದ 1092 ಜನರನ್ನು ಸಮಾಲೋಚನೆಗೆ ಒಳಪಡಿಸಲಾಗಿದೆ. 476 ಜನರಿಗೆ ಪೋಲಿಸ್ ನೆರವು, 234 ಜನರಿಗೆ ತಾತ್ಕಾಲಿಕ ಪುನರ್ವಸತಿ ಕಲ್ಪಿಸಲಾಗಿದೆ.

ಒಂದೇ ಸೂರಿನಡಿ 5 ಸೌಲಭ್ಯಗಳು: ನೊಂದವರಿಗೆ ತಾತ್ಕಾಲಿಕ ಆಶ್ರಯ, ಆಪ್ತ ಸಮಾಲೋಚನೆ, ವೈದ್ಯಕೀಯ ನೆರವು, ಪೊಲೀಸ್ ನೆರವು, ಕಾನೂನು ನೆರವು ಈ ಐದು ಸೌಲಭ್ಯಗಳ ಮೂಲಕ ದೌರ್ಜನ್ಯಕ್ಕೊಳಗಾದ ಮಹಿಳೆಯರು ಮತ್ತು ಹೆಣ್ಣು ಮಕ್ಕಳಿಗೆ ನೆರವು ನೀಡಲಾಗುತ್ತದೆ.

ಸಂತ್ರಸ್ತರು ನೀಡಿದ ದೂರಿನ ಆಧಾರದ ಮೇಲೆ ವೈದ್ಯಾಧಿಕಾರಿಗಳ ಮೂಲಕ ವೈದ್ಯಕೀಯ ಪರೀಕ್ಷೆ ಮಾಡಿಸಿ ಚಿಕಿತ್ಸೆ ಕೊಡಿಸಲಾಗುತ್ತದೆ. ತಜ್ಞರಿಂದ ಅಗತ್ಯ ಆಪ್ತ ಸಮಾಲೋಚನೆ ಮಾಡಿಸುವ ಮೂಲಕ ಧೈರ್ಯ ತುಂಬುವ ಕೆಲಸ ಮಾಡಲಾಗುತ್ತದೆ. ದೂರು ನೀಡಿದ ಬಳಿಕ ಪೊಲೀಸ್ ಮಹಾನಿರ್ದೇಶಕರಿಂದ ನಿಯೋಜಿಸ್ಪಟ್ಟ ಇನ್‍ಸ್ಪೆಕ್ಟರ್ ದರ್ಜೆಯ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಕೇಂದ್ರಕ್ಕೆ ಭೇಟಿ ನೀಡಿ ಎಫ್‍ಐಆರ್ ದಾಖಲಿಸಿಕೊಳ್ಳುತ್ತಾರೆ. ಬಳಿಕ ಅದನ್ನು ಸಂಬಂಧಪಟ್ಟ ಪೊಲೀಸ್ ಠಾಣೆಗೆ ವರ್ಗಾಯಿಸಲಾಗುತ್ತದೆ. ಬಳಿಕ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ನೇಮಿಸಲ್ಪಟ್ಟ ಕಾನೂನು ಸಲಹೆಗಾರರಿಂದ ಅಗತ್ಯ ಕಾನೂನು ನೆರವು ಒದಗಿಸಲಾಗುತ್ತದೆ. ಅಲ್ಲದೆ, ದೌರ್ಜನ್ಯಕ್ಕೊಳಗಾದ ಮಹಿಳೆಯರು ಹಾಗೂ ಮಕ್ಕಳಿಗೆ ಸರ್ಕಾರದಿಂದ ಗುರುತಿಸಲ್ಪಟ್ಟ ಸ್ವಯಂ ಸೇವಾ ಸಂಸ್ಥೆ ಅಥವಾ ಸರ್ಕಾರಿ ಗೃಹಗಳಲ್ಲಿ ಆಶ್ರಯ ಒದಗಿಸಿ ರಕ್ಷಣೆ ನೀಡಲಾಗುತ್ತದೆ. ಸಂತ್ರಸ್ತರು ನೇರವಾಗಿ ಕೇಂದ್ರಕ್ಕೆ ಬಂದು ದೂರು ನೀಡಬಹುದು.

24 ಗಂಟೆಯೂ ಸೇವೆ: ಸಖಿ ಕೇಂದ್ರವು 24*7 ಗಂಟೆಯೂ ಕೆಲಸ ಮಾಡುತ್ತದೆ. ಇದರ ಮೇಲ್ವಿಚಾರಣೆ ಜವಾಬ್ದಾರಿಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ವಹಿಸಲಾಗಿದೆ. ಇಲ್ಲಿ ಒಬ್ಬರು ಘಟಕ ಆಡಳಿತಾಧಿಕಾರಿ, ಒಬ್ಬರು ಆಪ್ತ ಸಮಾಲೋಚಕರು, ಇಬ್ಬರು ವಿಷಯ ನಿರ್ವಾಹಕರು, ಇಬ್ಬರು ಕಾನೂನು ಸಲಹೆಗಾರರು, ಭದ್ರತಾ ಸಿಬ್ಬಂದಿ ಹಾಗೂ ಸಹಾಯಕರು ಕಾರ್ಯ ನಿರ್ವಹಿಸುತ್ತಾರೆ.

ಸಂಪರ್ಕ ವಿಳಾಸ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸರ್ಕಾರಿ ಬಾಲಕರ ಬಾಲಮಂದಿರ ಆವರಣ,100 ಅಡಿ ರಸ್ತೆ, ಆಲ್ಕೋಳ, ಶಿವಮೊಗ್ಗ, ಸಖಿ ದೂರವಾಣಿ-08187-223055, ಉಪ ನಿರ್ದೇಶಕರ ಕಛೇರಿ :08182-295514 ಜಿಲ್ಲಾ ಮಕ್ಕಳ ರಕ್ಷಣಾ ಘಟಕ:08182-295709,ಉಚಿತ ಮಕ್ಕಳ ಸಹಾಯವಾಣಿ-1098, ಉಚಿತ ಮಹಿಳಾ ಸಹಾಯವಾಣಿ-181. ಸಂಪರ್ಕಿಸಬಹುದಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

500 ನಾಯಿಗಳಿಗೆ ಚಿಕನ್‌ ರೈಸ್ ನೀಡಲು ವರ್ಷಕ್ಕೆ 1.83 ಕೋಟಿ
ಯಲಹಂಕದಲ್ಲಿ ‘ಚೀನಾದ ಹ್ಯಾಂಗ್‌ಝೌ’ ಮಾದರಿ ರೈಲು ನಿಲ್ದಾಣ