ಹೊಳಲ್ಕೆರೆ: ವೃತ್ತಿ ಧರ್ಮ ಪಾಲಿಸುವ ಸಮಾಜ ಸವಿತಾ ಸಮಾಜ ಎಂದು ಶಾಸಕ ಡಾ.ಎಂ.ಚಂದ್ರಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.
ಪಟ್ಟಣದ ಸವಿತಾ ಸಮಾಜದ ಸಮುದಾಯ ಭವನದಲ್ಲಿ ಸವಿತಾ ಮಹರ್ಷಿ ಜಯಂತಿ ಉದ್ಘಾಟಿಸಿ ಮಾತನಾಡಿದರು.ಶೀಲವಂತ ಸಮಾಜ ಎನ್ನುವ ಹೆಸರಿದ್ದರೆ ಅದು ಸವಿತಾ ಸಮಾಜಕ್ಕೆ ಮಾತ್ರ. ಹಾಗಾಗಿ ನೀವುಗಳು ನಿಮ್ಮ ಜಾತಿಯನ್ನು ಹೇಳಿಕೊಳ್ಳಲು ಹಿಂಜರಿಯುವುದು ಬೇಡ. ಬಿಹಾರದಂತ ದೊಡ್ಡ ರಾಜ್ಯದ ನಿಮ್ಮ ಸಮಾಜಕ್ಕೆ ಸೇರಿದ ಕರ್ಪೂರಿ ಠಾಕೂರ್ರವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಗಿತ್ತು. ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ನಿಮ್ಮ ಸಮಾಜವನ್ನು ಎತ್ತರಕ್ಕೆ ಕೊಂಡೊಯ್ಯಬೇಕೆಂಬ ದೃಷ್ಟಿಯಿಂದ ಕರ್ಪೂರಿ ಠಾಕೂರ್ಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಮದ್ಯಪಾನ ನಿಷೇಧ ಮಾಡಿದ ಹೆಗ್ಗಳಿಕೆ ಕರ್ಪೂರಿ ಠಾಕೂರ್ಗೆ ಸಲ್ಲುತ್ತದೆ ಎಂದು ಸ್ಮರಿಸಿದರು.
ಜಾತಿ ಮುಖ್ಯವಲ್ಲ. ನಡವಳಿಕೆ ಭಾವನೆ ಶ್ರೇಷ್ಟವಾದುದು. ಅಧಿಕಾರ ಶಾಶ್ವತವಲ್ಲ. ಇಂದು ಇರುತ್ತೆ ನಾಳೆ ಹೋಗುತ್ತೆ. ಹಾಗಾಗಿ ಇರುವ ಸಮಯದಲ್ಲಿ ಹತ್ತಾರು ಜನಕ್ಕೆ ಒಳ್ಳೆಯದು ಮಾಡಬೇಕು. ಕಳೆದ 30 ವರ್ಷಗಳಿಂದ ಶಾಸಕನಾಗಿ ದುಡಿಯುತ್ತಿದ್ದೇನೆ. ನನ್ನ ಕ್ಷೇತ್ರದಲ್ಲಿ ಎಲ್ಲಿಗೆ ಹೋಗಲಿ ಅಲ್ಲಿ ಏನು ಸಮಸ್ಯೆಯಿದೆ ಎನ್ನುವುದನ್ನು ತಿಳಿದುಕೊಂಡು ಜನ ಕೇಳುವ ಮುನ್ನವೇ ಅವರಿಗೆ ಸೌಲಭ್ಯಗಳನ್ನು ಒದಗಿಸುತ್ತೇನೆ. ವೃತ್ತಿ ಧರ್ಮಕ್ಕೆ ಬೆಲೆ ಕೊಟ್ಟು ಕೆಲಸ ಮಾಡುವ ಸವಿತಾ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೊಡ್ಡ ಮನಸ್ಸು ಮಾಡುತ್ತಾರೆಂಬ ವಿಶ್ವಾಸವಿದೆ. ರಾಜ್ಯದಿಂದ ಕೇಂದ್ರಕ್ಕೆ ವರದಿ ಹೋಗಬೇಕು ಎಂದು ಹೇಳಿದರು.ತಾಲ್ಲೂಕು ಸವಿತಾ ಸಮಾಜದ ಅಧ್ಯಕ್ಷ ಆರ್.ರಾಜಪ್ಪ, ಪ್ರಧಾನ ಕಾರ್ಯದರ್ಶಿ ಗಿರೀಶ್, ತಹಸೀಲ್ದಾರ್ ಬೀಬಿ ಫಾತಿಮ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಶಿವಪ್ರಕಾಶ್, ಪುರಸಭೆ ಮಾಜಿ ಅಧ್ಯಕ್ಷ ಆರ್.ಎ.ಅಶೋಕ್, ಸದಸ್ಯರುಗಳಾದ ಮುರುಗೇಶ್, ಡಿ.ಸಿ.ಮೋಹನ್, ಪ್ರದೀಪ್ಕುಮಾರ್, ಶ್ರೀನಿವಾಸ್, ಸಾಯಿನಾಥ್, ಧ್ರುವಕುಮಾರ್, ರಾಘು, ತಿಪ್ಪೇಸ್ವಾಮಿ ಸಂಪಿಗೆ, ಹನುಮಂತಪ್ಪ, ನಾಗರಾಜ್, ಎನ್.ಡಿ.ಕುಮಾರ್ ಮತ್ತಿತರರು ಸವಿತಾ ಮಹರ್ಷಿ ಜಯಂತಿಯಲ್ಲಿ ಪಾಲ್ಗೊಂಡಿದ್ದರು.