ಎಸ್‌ಸಿಡಿಸಿಸಿ ಬ್ಯಾಂಕ್‌ ದೇಶಕ್ಕೆ ಮಾದರಿ: ಯು.ಟಿ. ಖಾದರ್‌

KannadaprabhaNewsNetwork | Published : Mar 14, 2024 2:02 AM

ಮಂಗಳೂರಿನ ಎಸ್‌ಸಿಡಿಸಿಸಿ ಬ್ಯಾಂಕ್‌ ಸಭಾಂಗಣದಲ್ಲಿ ಬುಧವಾರ ಎಸ್‌ಸಿಡಿಸಿಸಿ ಬ್ಯಾಂಕ್‌ನ ಅಧ್ಯಕ್ಷರಾಗಿ 7ನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾದ ಡಾ.ಎಂ.ಎನ್‌. ರಾಜೇಂದ್ರ ಕುಮಾರ್‌ ಅವರ ಪದಗ್ರಹಣ ಸಮಾರಂಭ ಹಾಗೂ ಅವರ 75ನೇ ಹುಟ್ಟುಹಬ್ಬ ಸಮಾರಂಭ ನಡೆಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ಸಹಕಾರಿ ಕ್ಷೇತ್ರದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ದೇಶಕ್ಕೆ ಮಾದರಿಯಾಗಿದೆ. ಈ ಮೂಲಕ ಕರಾವಳಿಗೆ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ತಂದುಕೊಡುವ ಕೆಲಸವನ್ನು ಡಾ.ಎಂ.ಎನ್‌. ರಾಜೇಂದ್ರ ಕುಮಾರ್‌ ಮಾಡಿದ್ದಾರೆ ಎಂದು ಕರ್ನಾಟಕ ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್‌ ಹೇಳಿದ್ದಾರೆ.

ನಗರದ ಎಸ್‌ಸಿಡಿಸಿಸಿ ಬ್ಯಾಂಕ್‌ ಸಭಾಂಗಣದಲ್ಲಿ ಬುಧವಾರ ಎಸ್‌ಸಿಡಿಸಿಸಿ ಬ್ಯಾಂಕ್‌ನ ಅಧ್ಯಕ್ಷರಾಗಿ 7ನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾದ ಡಾ.ಎಂ.ಎನ್‌. ರಾಜೇಂದ್ರ ಕುಮಾರ್‌ ಅವರ ಪದಗ್ರಹಣ ಸಮಾರಂಭ ಹಾಗೂ ಅವರ 75ನೇ ಹುಟ್ಟುಹಬ್ಬ ಸಮಾರಂಭದಲ್ಲಿ ಅವರು ಮಾತನಾಡಿದರು.ಇಡೀ ದೇಶದಲ್ಲಿ ಯಾವುದೇ ಸಹಕಾರಿ ಬ್ಯಾಂಕಿನಲ್ಲಿ 7ನೇ ಬಾರಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರೆ ಅದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾತ್ರ. ಇದು ಸುಲಭ ಸಾಧ್ಯವಲ್ಲ. ರಾಜೇಂದ್ರ ಕುಮಾರ್‌ ಅವರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿದ್ದರಿಂದ ಸಾಧ್ಯವಾಗಿದೆ. ಸಹಕಾರಿಗಳ ಒಗ್ಗಟ್ಟು ಇದೇ ರೀತಿಯಲ್ಲಿ ಮುಂದುವರಿಯಲಿ. ಸಹಕಾರ ಕ್ಷೇತ್ರಕ್ಕೆ ರಾಜ್ಯ ಸರ್ಕಾರದಿಂದ ಎಲ್ಲ ರೀತಿಯ ನೆರವು ನೀಡಲು ಬದ್ಧ ಎಂದು ಯು.ಟಿ. ಖಾದರ್‌ ಹೇಳಿದರು.

ವಿಧಾನ ಪರಿಷತ್‌ ಸದಸ್ಯ ಹರೀಶ್‌ ಕುಮಾರ್‌ ಮಾತನಾಡಿ, ರಾಜೇಂದ್ರ ಕುಮಾರ್‌ ಅಧ್ಯಕ್ಷರಾದ ಬಳಿಕ ಎಸ್‌ಸಿಡಿಸಿಸಿ ಬ್ಯಾಂಕ್‌ಗೆ ಭದ್ರ ಬುನಾದಿ ಹಾಕಿಕೊಟ್ಟಿದ್ದು, ಬ್ಯಾಂಕ್‌ ಅಭೂತಪೂರ್ವ ಸಾಧನೆ ಮಾಡಿ ಮಾದರಿಯಾಗಿದೆ. ಸಹಕಾರಿಗಳು ಅವರ ಮೇಲೆ ವಿಶ್ವಾಸವಿರಿಸಿ ಸತತವಾಗಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡುತ್ತಿರುವುದು ಸಂತಸದ ವಿಷಯ. ಬ್ಯಾಂಕ್‌ ಹಾಗೂ ಸಹಕಾರ ಕ್ಷೇತ್ರಕ್ಕೆ ಡಾ.ರಾಜೇಂದ್ರ ಕುಮಾರ್‌ ಅವರ ಸೇವೆ ಇನ್ನಷ್ಟು ದೊರೆಯಲಿ ಎಂದು ಆಶಿಸಿದರು.

ಮಾಜಿ ಸಚಿವ ಅಭಯಚಂದ್ರ ಜೈನ್‌ ಮಾತನಾಡಿ, ರಾಜೇಂದ್ರ ಕುಮಾರ್‌ ಅವರು ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಾಗ 3.5 ಕೋಟಿ ರು. ಇದ್ದ ಬ್ಯಾಂಕಿನ ವ್ಯವಹಾರ ಇದೀಗ 13 ಸಾವಿರ ಕೋಟಿ ರು.ಗೆ ತಲುಪಿಸಿದ್ದು ಗಮನಾರ್ಹ ಸಾಧನೆ. ಇದು ರಾಜೇಂದ್ರ ಕುಮಾರ್‌ ಕಾರ್ಯದಕ್ಷತೆಗೆ ಸಾಕ್ಷಿ. ರೈತಾಪಿ ಜನರ ಆಶಾಕಿರಣವಾಗಿರುವ ಎಸ್‌ಸಿಡಿಸಿಸಿ ಬ್ಯಾಂಕ್‌ ಅವರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದೆ. ಜನರಿಗೆ ಸ್ವಾವಲಂಬನೆಯ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗಿದೆ. ಇದಕ್ಕೆ ರಾಜೇಂದ್ರ ಕುಮಾರ್‌ ಕಾರಣಕರ್ತರಾಗಿದ್ದಾರೆ ಎಂದು ಅಭಿನಂದಿಸಿದರು.

ಜಾಗತಿಕ ಬಂಟರ ಸಂಘಗಳ ಒಕ್ಕೂಟ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ ಮಾತನಾಡಿ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಹಕಾರ ಕ್ಷೇತ್ರ ಬೆಳವಣಿಗೆ ಹೊಂದುವಲ್ಲಿ ರಾಜೇಂದ್ರ ಕುಮಾರ್‌ ದೊಡ್ಡ ಕೊಡುಗೆ ನೀಡಿದ್ದಾರೆ ಎಂದರು.

ಎಸ್‌ಸಿಡಿಸಿಸಿ ಬ್ಯಾಂಕ್‌ ಚುನಾವಣಾಧಿಕಾರಿಯಾಗಿದ್ದ ಮಂಗಳೂರು ಸಹಾಯಕ ಆಯುಕ್ತ ಹರ್ಷವರ್ಧನ್‌, ಸಹಕಾರ ಸಂಘಗಳ ಉಪನಿಬಂಧಕರಾದ ಎನ್‌. ರಮೇಶ್‌, ಲಾವಣ್ಯ, ಸಹಾಯಕ ನಿಬಂಧಕ ಸುಧೀರ್‌ ಕುಮಾರ್‌, ಎಸ್‌ಸಿಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ವಿನಯ ಕುಮಾರ್‌ ಸೂರಿಂಜೆ, ನಿರ್ದೇಶಕರಾದ ಟಿ.ಜಿ. ರಾಜಾರಾಮ ಭಟ್‌, ಭಾಸ್ಕರ ಎಸ್‌. ಕೋಟ್ಯಾನ್‌, ಎಂ. ವಾದಿರಾಜ ಶೆಟ್ಟಿ, ಐಕಳಬಾವ ದೇವಿಪ್ರಸಾದ ಶೆಟ್ಟಿ, ಶಶಿಕುಮಾರ್‌ ರೈ ಬಿ., ಎಸ್‌. ರಾಜು ಪೂಜಾರಿ, ಎಂ. ಮಹೇಶ್‌ ಹೆಗ್ಡೆ, ಬಿ. ಅಶೋಕ್‌ ಕುಮಾರ್‌ ಶೆಟ್ಟಿ, ಕೆ. ಹರೀಶ್ಚಂದ್ರ, ಮೋನಪ್ಪ ಶೆಟ್ಟಿ ಎಕ್ಕಾರು, ಕೆ. ಜೈರಾಜ್‌ ಬಿ. ರೈ, ಎಸ್‌.ಬಿ. ಜಯರಾಮ ರೈ, ಎಸ್‌.ಎನ್‌. ಮನ್ಮಥ, ಕುಶಾಲಪ್ಪ ಗೌಡ ಪಿ. ಇದ್ದರು.

75ನೇ ಹುಟ್ಟುಹಬ್ಬ:

ಸಮಾರಂಭದಲ್ಲಿ ಡಾ.ಎಂ.ಎನ್‌. ರಾಜೇಂದ್ರ ಕುಮಾರ್‌ ಅವರ 75ನೇ ಹುಟ್ಟುಹಬ್ಬವನ್ನು ಬೃಹತ್‌ ಕೇಕ್‌ ಕತ್ತರಿಸುವ ಮೂಲಕ ಆಚರಿಸಲಾಯಿತು. ಗಣ್ಯರು, ರಾಜಕೀಯ ಮುಖಂಡರು, ವಿವಿಧ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಪ್ರತಿನಿಧಿಗಳು, ನವೋದಯ ಟ್ರಸ್ಟ್‌ನ ಪ್ರತಿನಿಧಿಗಳು, ಬ್ಯಾಂಕ್‌ ಸಿಬ್ಬಂದಿ ಈ ವೇಳೆ ರಾಜೇಂದ್ರ ಕುಮಾರ್‌ ಅವರಿಗೆ ಶುಭ ಹಾರೈಸಿದರು.

ಶಾಸಕರಾದ ಯಶ್‌ಪಾಲ್‌ ಸುವರ್ಣ, ಗುರ್ಮೆ ಸುರೇಶ್‌ ಶೆಟ್ಟಿ, ಮಾಜಿ ಸಚಿವ ರಮಾನಾಥ ರೈ, ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿ, ಸುಕುಮಾರ ಶೆಟ್ಟಿ ಆಗಮಿಸಿ ಶುಭ ಹಾರೈಸಿದರು.ಎಲ್ಲರ ಸಹಕಾರದಿಂದ ಅಪೂರ್ವ ಸಾಧನೆ: ರಾಜೇಂದ್ರ ಕುಮಾರ್‌

ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಡಾ.ಎಂ.ಎನ್‌. ರಾಜೇಂದ್ರ ಕುಮಾರ್‌ ಮಾತನಾಡಿ, ಎಲ್ಲರ ಸಹಕಾರವಿದ್ದರೆ ಸಂಸ್ಥೆಯೊಂದು ಅಭೂತಪೂರ್ವ ಬೆಳವಣಿಗೆ ಸಾಧಿಸಬಹುದು ಎಂಬುದಕ್ಕೆ ಎಸ್‌ಸಿಡಿಸಿಸಿ ಬ್ಯಾಂಕ್‌ ಸಾಕ್ಷಿಯಾಗಿದೆ. ಸಹಕಾರ ಕ್ಷೇತ್ರದಲ್ಲಿ ರಾಜಕಾರಣ ಮಾಡದೆ ರೈತರ ಬಗ್ಗೆ ಕಾಳಜಿಯಿಂದ ಕೆಲಸ ಮಾಡುತ್ತಿದ್ದೇವೆ. ಈ ಕಾರಣದಿಂದಲೇ ಅವಿಭಜಿತ ದ.ಕ. ಜಿಲ್ಲೆಯ ಯಾವೊಬ್ಬ ರೈತರೂ ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂದು ಹೇಳಿದರು.ಶೂನ್ಯ ಬಡ್ಡಿ ದರದ ಸಾಲ ಸಹಿತ ರೈತರ ಪರವಾದ ಎಲ್ಲ ಯೋಜನೆಗಳನ್ನು ಎಸ್‌ಸಿಡಿಸಿಸಿ ಬ್ಯಾಂಕ್‌ ಸಮರ್ಪಕವಾಗಿ ಜಾರಿಗೊಳಿಸುತ್ತಿದೆ. ಅವಿಭಜಿತ ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರ ಇನ್ನಷ್ಟು ಬೆಳೆಯಬೇಕು. ಆ ಮೂಲಕ ರಾಷ್ಟ್ರದಲ್ಲೇ ದಾಖಲೆ ಆಗಲಿ ಎಂದರು.