ಸರ್ವರ್ ಸಮಸ್ಯೆ: ಪಡಿತರವಿಲ್ಲದೇ ಪರದಾಟ

KannadaprabhaNewsNetwork |  
Published : Oct 23, 2024, 01:48 AM ISTUpdated : Oct 23, 2024, 01:49 AM IST
ಪೋಟೊ- ೨೨ ಎಸ್.ಎಚ್.ಟಿ. ೨ಕೆ-ಸರ್ವರ್ ಸಮಸ್ಯೆ ಪಡಿತರ ಪಡೆಯಲು ಕೂಲಿ ಕೆಲಸ ಬಿಟ್ಟು ದಿನವಿಡಿ ಕಾಯುತ್ತಾ ನಿಂತಿರುವುದು. | Kannada Prabha

ಸಾರಾಂಶ

ಕಳೆದ ೧೦ ದಿನಗಳಿಂದ ನ್ಯಾಯಬೆಲೆ ಅಂಗಡಿಗಳ ಮುಂದೇ ಜನರು ಸರತಿ ಸಾಲಿನಲ್ಲಿ ನಿಂತು ಕೊನೆಗೆ ಸರ್ವರ್ ಸಮಸ್ಯೆಯಿಂದ ಮನೆಗೆ ಮರಳಿ ಹೋಗುವಂತಹ ದಯನೀಯ ಸ್ಥಿತಿ

ಮಹದೇವಪ್ಪ ಎಂ. ಸ್ವಾಮಿ ಶಿರಹಟ್ಟಿ

ಪಡಿತರ ವ್ಯವಸ್ಥೆಯಡಿ ಸರ್ಕಾರ ಜಾರಿಗೆ ತಂದಿರುವ ನೂತನ ತಂತ್ರಾಂಶದಿಂದ ಸಮಸ್ಯೆಗಳು ಬಗೆಹರಿಯದೇ ಹೊಸ ಸಮಸ್ಯೆ ಉದ್ಬವವಾಗುತ್ತಿದ್ದು, ಸಾರ್ವಜನಿಕರಿಗೆ ಪಡಿತರ ವಿತರಣೆ ಮಾಡಲಾಗದೇ ನ್ಯಾಯ ಬೆಲೆ ಅಂಗಡಿಗಳ ಮಾಲೀಕರು ಹಾಗೂ ಸಿಬ್ಬಂದಿಗಳು ಪರದಾಡುವಂತಾಗಿದೆ.

ಕಳೆದ ೧೦ ದಿನಗಳಿಂದ ನ್ಯಾಯಬೆಲೆ ಅಂಗಡಿಗಳ ಮುಂದೇ ಜನರು ಸರತಿ ಸಾಲಿನಲ್ಲಿ ನಿಂತು ಕೊನೆಗೆ ಸರ್ವರ್ ಸಮಸ್ಯೆಯಿಂದ ಮನೆಗೆ ಮರಳಿ ಹೋಗುವಂತಹ ದಯನೀಯ ಸ್ಥಿತಿ ಸಾರ್ವಜನಿಕರದ್ದಾಗಿದೆ. ಸರ್ವರ್‌ನ್ನು ಹಲವು ಇಲಾಖೆಗಳು ಅವಲಂಬಿಸುತ್ತಿದ್ದು, ಮುಖ್ಯವಾಗಿ ಹೊಸ ಕಾರ್ಡ್ ಹಾಗೂ ತಿದ್ದುಪಡಿಗೂ ಸಮಸ್ಯೆಯಾಗಿದೆ.

ತಿಂಗಳು ಮುಗಿಯುತ್ತಾ ಬಂದರೂ ಅನ್ನಭಾಗ್ಯದ ಅಕ್ಕಿಗಾಗಿ ನಿತ್ಯದ ಕೆಲಸ ಕಾರ್ಯ ಬದಿಗಿಟ್ಟು ನ್ಯಾಯಬೆಲೆ ಅಂಗಡಿಗಳ ಮುಂದೆ ಅಲೆದಾಡುವ ಸ್ಥಿತಿ ಎದುರಾಗಿದ್ದು, ಕೂಲಿನಾಲಿ ಮಾಡಿ ಜೀವನ ಸಾಗಿಸುವ ಬಡ ಕುಟುಂಬದ ಸಮಸ್ಯೆಗಳಂತೂ ಹೇಳತೀರದು. ನ್ಯಾಯ ಬೆಲೆ ಅಂಗಡಿ ಸಮಸ್ಯೆ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ಬಂದರೂ ನಮಗೇನು ಸಂಬಂಧಿವಿಲ್ಲದಂತೆ ಕೈಕಟ್ಟಿ ಕುಳಿತ ಅಧಿಕಾರಿಗಳ ನಿರ್ಲಕ್ಷ್ಯ ಮನೋಭಾವನೆ ಸಾಧುವಲ್ಲ.

ಪಟ್ಟಣದ ಜನತಾ ಬಜಾರ್ ನ್ಯಾಯಬೆಲೆ ಅಂಗಡಿಯಲ್ಲಿಯೇ ಅಂದಾಜು ೧೬೭೦ಕ್ಕೂ ಹೆಚ್ಚು ಪಡಿತರದಾರರು ಇದ್ದು, ಪಂಚಾಯ್ತಿ ವ್ಯಾಪ್ತಿಯಲ್ಲಿ ೩ಸಾವಿರಕ್ಕೂ ಹೆಚ್ಚು ಅರ್ಹ ಪಡಿತರದಾರರು ಇದ್ದಾರೆ. ಸಾಲು ಸಾಲು ಹಬ್ಬ ಹರಿದಿನಗಳ ಇಂತಹ ಸಂದರ್ಭದಲ್ಲಿ ಪಡಿತರ ನೀಡದೇ ಇದ್ದರೆ ಹೇಗೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಸಾರ್ವಜನಿಕರಿಗೆ ನಿಗದಿತ ಪಡಿತರ ವಿತರಣೆ ಮಾಡದೇ ಇದ್ದರೆ ನಮಗೂ ಸಮಸ್ಯೆಯಾಗಲಿದೆ. ಸಾರ್ವಜನಿಕರಿಂದ ವೃಥಾ ಛೀಮಾರಿ ಹಾಕಿಸಿಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಕ್ಲಿಷ್ಟಕರ ಸಮಸ್ಯೆ ಸರ್ಕಾರ ತಕ್ಷಣ ಬಗೆಹರಿಸಬೇಕು ಎಂಬುದು ನ್ಯಾಯಬೆಲೆ ಅಂಗಡಿ ಸಿಬ್ಬಂದಿಗಳ ಮನದಾಳದ ಮಾತು.

ಕಳೆದ ೧೫ ದಿನಗಳಿಂದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಸರ್ವರ್ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಬಯೋಮೆಟ್ರಿಕ್‌ಗಾಗಿ ಇಲಾಖೆ ವೆಬ್ ಸೈಟ್ ಆನ್ ಮಾಡಿದರೆ ದಿಸ್ ಸೈಟ್ ಕಾಂಟ್ ಬೀ ರೀಚಡ್ ಎಂದು ಪರದೆ ಮೇಲೆ ಕಾಣಿಸಿಕೊಳ್ಳುವ ಮೆಸೇಜ್ ಓದಿ ಪಡಿತರ ವಿತರಕರು ಸುಸ್ತಾಗಿದ್ದಾರೆ.

ಆಹಾರ ಮತ್ತು ನಾಗರಿಕ ಇಲಾಖೆಯ ಸರ್ವರ್ ಕೈಕೊಟ್ಟಿದ್ದರಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆ ಮಾಡಲು ಸಾಧ್ಯವಾಗುತ್ತಿಲ್ಲ. ಪಡಿತರಕ್ಕಾಗಿ ಬಿಪಿಎಲ್ ಪಡಿತರ ಚೀಟಿದಾರರು ನಿತ್ಯ ದುಡುಮೆ ಬಿಟ್ಟು ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಪಡಿತರ ಸಿಗದೇ ನ್ಯಾಯಬೆಲೆ ಅಂಗಡಿ ಮಾಲೀಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಾ ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ. ನ್ಯಾಯಬೆಲೆ ಅಂಗಡಿ ಮಾಲೀಕರು ತಮ್ಮದಲ್ಲದ ತಪ್ಪಿಗೆ ಪಡಿತರ ಚೀಟಿದಾರರಿಂದ ಬೈಸಿಕೊಳ್ಳುವ ಪರಿಸ್ಥಿತಿ ಉಂಟಾಗಿದೆ. ಶಿರಹಟ್ಟಿ ಪಟ್ಟಣವೊಂದರಲ್ಲಿಯೇ ಎಪಿಎಲ್ ಮತ್ತು ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಸುಮಾರು ೧.೮೦೦ ಕೂಲಿಕಾರ್ಮಿಕರಿದ್ದು, ದಿನಕ್ಕೆ ₹೨೫೦ ರಿಂದ ₹೩೦೦ ದುಡಿಯುತ್ತಿದ್ದಾರೆ. ಒಂದು ದಿನ ಕೆಲಸಕ್ಕೆ ಹೋಗದಿದ್ದರೆ ಅಂದಿನ ಕೂಲಿ ಹಣ ದೊರೆಯದೇ ಹೊಟ್ಟೆಯ ಮೇಲೆ ತಣ್ಣೀರು ಬಟ್ಟೆ ಹಾಕಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಸರ್ವರ್ ಸಮಸ್ಯೆ ರಾಜ್ಯಮಟ್ಟದಲ್ಲಿಯೇ ಇರುವುದರಿಂದ ಪಡಿತರ ಹಂಚಿಕೆಯಲ್ಲಿ ವಿಳಂಬವಾಗುತ್ತಿದೆ. ಬೆಳಗ್ಗೆ ೭ಗಂಟೆಯಿಂದ ರಾತ್ರಿ ೧೦ ಗಂಟೆವರೆಗೆ ಪಡಿತರ ಹಂಚಿಕೆ ಮಾಡಲು ಮೌಖಿಕವಾಗಿ ನ್ಯಾಯಬೆಲೆ ಅಂಗಡಿಯವರಿಗೆ ತಿಳಿಸಲಾಗಿದೆ. ಸಮಸ್ಯೆ ಸರಿಪಡಿಸುವ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ತಹಸೀಲ್ದಾರ್ ಅನಿಲ್ ಬಡಿಗೇರ ತಿಳಿಸಿದ್ದಾರೆ.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ
ಕಡಿಮೆ ಗುಣದ ಔಷಧಿ ಎರಡೇ ದಿನಕ್ಕೇ ಮಾರುಕಟ್ಟೆಯಿಂದ ವಾಪಸ್‌: ಸಚಿವ