ಕನ್ನಡಪ್ರಭ ವಾರ್ತೆ ಬೆಳಗಾವಿ
ಇಡೀ ಕ್ಷೇತ್ರವನ್ನು ಮಾದರಿಯಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ನಾನು ಹೆಜ್ಜೆ ಇಟ್ಟಿದ್ದೇನೆ. ಒಂದೊಂದಾಗಿ ಎಲ್ಲವೂ ಈಡೇರಲಿವೆ. ಇದಕ್ಕೆ ಜನರ ಸಹಕಾರ ಮುಖ್ಯ. ಮುಂದಿನ ದಿನಗಳಲ್ಲಿ ಹಲವಾರು ಪ್ರಮುಖ ಯೋಜನೆಗಳು ಕಾರ್ಯಗತವಾಗಲಿವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.ಹಿರೇಬಾಗೇವಾಡಿ, ಬೆನಕನಹಳ್ಳಿ ಹಾಗೂ ಹಿಂಡಲಗಾ ಗ್ರಾಮ ಪಂಚಾಯತಿಗಳನ್ನು ಪಟ್ಟಣ ಪಂಚಾಯತಿಗಳಾಗಿ ಮೇಲ್ದರ್ಜೆಗೇರಿಸಿದ ಹಿನ್ನೆಲೆಯಲ್ಲಿ ಸಚಿವರ ಗೃಹ ಕಚೇರಿಗೆ ಆಗಮಿಸಿದ ಗ್ರಾಮ ಪಂಚಾಯತಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಮತ್ತು ಗ್ರಾಮಗಳ ಪ್ರಮುಖ ಸನ್ಮಾನ ಸ್ವೀಕಾರಿಸಿ ಮಾತನಾಡಿದ ಅವರು, ನಾನು ಶಾಸಕಿಯಾಗುವ ಮುನ್ನ 7 ವರ್ಷದ ಹಿಂದೆ ಈ ಕ್ಷೇತ್ರ ಹೇಗಿತ್ತು?, ಈಗ ಹೇಗಾಗಿದೆ ಎನ್ನುವುದನ್ನು ನೀವೆಲ್ಲ ನೋಡುತ್ತಿದ್ದೀರಿ. ಪ್ರತಿ ಊರಲ್ಲಿ ಶಾಲೆಗಳ ಅಭಿವೃದ್ಧಿ, ದೇವಸ್ಥಾನಗಳ ನಿರ್ಮಾಣ, ಸಮುದಾಯ ಭವನಗಳ ನಿರ್ಮಾಣ, ಉತ್ತಮ ರಸ್ತೆಗಳ ನಿರ್ಮಾಣ, ಸರ್ವ ರೀತಿಯ ಮೂಲಭೂತ ಸೌಲಭ್ಯಗಳ ಅಭಿವೃದ್ಧಿ ಮಾಡಲಾಗಿದೆ. ಜಾತಿ, ಧರ್ಮ, ಪಕ್ಷ ಯಾವುದೇ ಭೇದವಿಲ್ಲದೇ ಕ್ಷೇತ್ರ ಅಭಿವೃದ್ಧಿಯತ್ತ ಸಾಗುತ್ತಿದೆ. ಪಕ್ಷಾತೀತವಾಗಿ ಜನರು ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
3 ಪಂಚಾಯತಿಗಳ ಪ್ರತಿನಿಧಿಗಳಿಂದ ಸಚಿವೆ ಹೆಬ್ಬಾಳಕರ, ಎಂಎಲ್ಸಿ ಹಟ್ಟಿಹೊಳಿಗೆ ಕೃತಜ್ಞತೆ
ರಾಜ್ಯದ ಕಾಂಗ್ರೆಸ್ ಸರ್ಕಾರ 2 ವರ್ಷ ಪೂರೈಸುತ್ತಿರುವ ಹೊತ್ತಿನಲ್ಲಿ ಪ್ರಗತಿಯತ್ತ ಕರ್ನಾಟಕ ಹೆಸರಿನಲ್ಲಿ ಸಮಾವೇಶ ಆಯೋಜಿಸಲಾಗುತ್ತಿದೆ. ಇದೇ ವೇಳೆ ಹಿರೇಬಾಗೇವಾಡಿ, ಬೆನಕನಹಳ್ಳಿ ಹಾಗೂ ಹಿಂಡಲಗಾ ಗ್ರಾಮ ಪಂಚಾಯತಿಗಳ ಬಹುದಿನಗಳ ಬೇಡಿಕೆಯ ಮೇರೆಗೆ ಪಟ್ಟಣ ಪಂಚಾಯತಿಗಳಾಗಿ ಮೇಲ್ದರ್ಜೆಗೇರಿಸಲು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಈ ಕುರಿತ ಪ್ರಸ್ತಾವನೆಯನ್ನು ಸಚಿವ ಸಂಪುಟದ ಮುಂದಿಟ್ಟಿದ್ದರು. ಸತತ ಪ್ರಯತ್ನದ ಮೂಲಕ ಪಟ್ಟಣ ಪಂಚಾಯತಿಗಳಾಗಿ ಮೇಲ್ದರ್ಜೆಗೇರಿಸಲು ಈಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಸಿಕ್ಕಿದೆ. ಸತತ ಪ್ರಯತ್ನದ ಮೂಲಕ ಅನುಮೋದನೆ ಪಡೆಯುವಲ್ಲಿ ಸಚಿವರು ಯಶಸ್ವಿಯಾಗಿದ್ದಾರೆ. ಬೆಳಗಾವಿ ಗ್ರಾಮೀಣ ಕ್ಷೇತ್ರ ಪ್ರಗತಿಯತ್ತ ಮತ್ತೊಂದು ದಾಪುಗಾಲು ಇಟ್ಟಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಪಂಚಾಯತಿ ವ್ಯಾಪ್ತಿಯಲ್ಲಿ ಸಂಭ್ರಮ ಮನೆ ಮಾಡಿದ್ದು, ಇದಕ್ಕೆ ಕಾರಣೀಕರ್ತರಾದ ಕ್ಷೇತ್ರದ ಶಾಸಕಿ, ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮತ್ತು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರನ್ನು 3 ಪಂಚಾಯತಿಗಳ ಪ್ರತಿನಿಧಿಗಳು ಸನ್ಮಾನಿಸುವ ಮೂಲಕ, ಕೃತಜ್ಞತೆ ಸಲ್ಲಿಸಿದರು. ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಮತ್ತು 3 ಪಂಚಾಯತಿ ವ್ಯಾಪ್ತಿಯ ಅಭಿವೃದ್ಧಿಗೆ ಶರವೇಗ ಸಿಕ್ಕಿದಂತಾಗಿದೆ. ಇಲ್ಲಿನ ಭೂಮಿಯ ಬೆಲೆ ಹೆಚ್ಚಾಗಲಿದೆ. ಉತ್ತಮ ಮೂಲಭೂತ ಸೌಲಭ್ಯಗಳು ಸಿಗಲಿವೆ. ಉದ್ಯೋಗಾವಕಾಶಗಳು ಹೆಚ್ಚಾಗಲಿವೆ. ಕೇಂದ್ರ, ರಾಜ್ಯ ಸರ್ಕಾರಗಳ ಅನುದಾನ ಪಡೆಯಲು ಅವಕಾಶವಾಗುತ್ತದೆ. ವಾಣಿಜ್ಯ ಚಟುವಟಿಕೆಗಳು ಹೆಚ್ಚಾಗಲಿವೆ. ಈ ಹಿನ್ನೆಲೆಯಲ್ಲಿ ಜನರು ಸಂಭ್ರಮಿಸುತ್ತಿದ್ದಾರೆ.ಅಭಿವೃದ್ಧಿ ಎಂದರೆ ಏನೆಂದೇ ಅರಿಯದ ನಮಗೆ ಕಳೆದ 7 ವರ್ಷಗಳಿಂದ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ ಕಾಣುತ್ತಿದೆ. ಲಕ್ಷ್ಮೀ ಹೆಬ್ಬಾಳಕರ್ ಅವರು ಶಾಸಕರಾದ ನಂತರ ಸರ್ಕಾರವೇ ನಮ್ಮ ಮನೆಬಾಗಿಲಿಗೆ ಬಂದ ರೀತಿ ಅನಿಸುತ್ತಿದೆ. ನೀವು ಇದೇ ರೀತಿ ಮುಂದುವರಿಯಿರಿ, ಸದಾ ನಿಮ್ಮ ಜೊತೆಗೆ ನಾವಿರುತ್ತೇವೆ ಎಂದು ಪ್ರಮುಖರು ಭರವಸೆ ನೀಡಿದರು.