ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಎಸ್‌ಎಫ್‌ಐ ಬೃಹತ್ ಪ್ರತಿಭಟನೆ

KannadaprabhaNewsNetwork | Published : Jul 7, 2024 1:19 AM

ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ ರಾಷ್ಟ್ರ ಮಟ್ಟದ ಪರೀಕ್ಷೆಗಳನ್ನು ನಡೆಸಲು ಅಸಮರ್ಥತೆ ಪ್ರದರ್ಶಿಸಿದೆ.

ಹಗರಿಬೊಮ್ಮನಹಳ್ಳಿ: ನೆಟ್ ಮರು ಪರೀಕ್ಷೆ, ನೀಟ್ ಪರೀಕ್ಷೆಯ ಪ್ರೆಶ್ನೆಪತ್ರಿಕೆ ಸೋರಿಕೆ ವಿರುದ್ಧ ಪಟ್ಟಣದ ಬಸವೇಶ್ವರ ವೃತದಲ್ಲಿ ತಾಲೂಕು ಎಸ್‌ಎಫ್‌ಐ ಘಟಕದಿಂದ ಪ್ರತಿಭಟನೆ ನಡೆಸಿ ಉಪತಹಶೀಲ್ದಾರ್ ಶಿವಕುಮಾರಗೆ ಮನವಿ ಸಲ್ಲಿಸಿದರು.

ತಾಲೂಕು ಸಮಿತಿಯ ಅಧ್ಯಕ್ಷ ಜಯಸೂರ್ಯ ಮಾತನಾಡಿ, ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ ರಾಷ್ಟ್ರ ಮಟ್ಟದ ಪರೀಕ್ಷೆಗಳನ್ನು ನಡೆಸಲು ಅಸಮರ್ಥತೆ ಪ್ರದರ್ಶಿಸಿದೆ. ಜೂನ್ ೪ರಂದು ಘೋಷಿಸಲಾದ ನೀಟ್ ಪರೀಕ್ಷೆಯ ಫಲಿತಾಂಶಗಳು ಸರಿಯಾದ ಪಾರದರ್ಶಕತೆ ಇಲ್ಲದೆ, ಪೇಪರ್ ಸೋರಿಕೆಯಂತಹ ದೂರುಗಳಿಂದ ಲಕ್ಷಾಂತರ ಬಡ ವಿದ್ಯಾರ್ಥಿಗಳು ಬಾಧಿತರಾಗಿದ್ದಾರೆ. ಲಕ್ಷಗಟ್ಟಲೇ ವಿದ್ಯಾರ್ಥಿಗಳು ಹಾಜರಾಗಿದ್ದ ಯುಜಿಸಿ ನೆಟ್ ಪರೀಕ್ಷೆಯ ಪೇಪರ್ ಸೋರಿಕೆ ವರದಿಗಳಿಂದ ರದ್ದುಗೊಳಿಸಲಾಯಿತು. ಒಂದು ರಾಷ್ಟ್ರ, ಒಂದು ಪರೀಕ್ಷೆ ಎಂಬ ಘೋಷಣೆ ಅಡಿಯಲ್ಲಿ ಇಡೀ ಪರೀಕ್ಷಾ ವ್ಯವಸ್ಥೆ ಕುಸಿದಿದೆ. ಅನಿರ್ದಿಷ್ಟ ಅವಧಿಗೆ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯವನ್ನು ಅಪಾಯಕ್ಕೆ ಸಿಲುಕಿಸಿದೆ. ಕೋಚಿಂಗ್ ಸೆಂಟರ್‌ಗಳ ಪ್ರೋತ್ಸಾಹಿಸುವಿಕೆಯನ್ನು ನೀಟ್‌ನಂತಹ ಕೇಂದ್ರೀಕೃತ ಪರೀಕ್ಷೆಗಳ ಪಾಲಿಸಿಗಳಿಂದ ಶಿಕ್ಷಣದಲ್ಲಿ ಖಾಸಗೀಕರಣ ಹೆಚ್ಚುತ್ತಿದೆ. ಇದರಿಂದಾಗಿ ಕೋಟ್ಯಂತರ ತಳ ಸಮುದಾಯದ ಹಾಗೂ ಮಾಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಶಿಕ್ಷಣ ದುಬಾರಿಯಾಗಿದೆ ಎಂದರು.

ನಂದಿತಾ ಮಾತನಾಡಿ, ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಅವಧಿಯಲ್ಲಿ ಶಿಕ್ಷಣ ಇಲಾಖೆಗೆ ಬಜೆಟ್‌ನಲ್ಲಿ ಹಣ ಕಡಿತ ಮಾಡಿರುವುದರಿಂದ ಸರ್ಕಾರಿ ಶಾಲೆಗಳನ್ನು ಮುಚ್ಚುವ ಪರಿಸ್ಥಿತಿ ಎದುರಾಗಿದೆ. ಸರ್ಕಾರ ಕೂಡಲೇ ಇತ್ತೀಚೆಗೆ ನಡೆದ ನೆಟ್ ಮತ್ತು ನೀಟ್ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕು. ಕೇಂದ್ರ ಶಿಕ್ಷಣ ಸಚಿವರು ಕೂಡಲೇ ರಾಜಿನಾಮೇ ನೀಡಬೇಕು. ಪರೀಕ್ಷೆಗಳನ್ನು ಕೇಂದ್ರೀಕರಣ ಗೊಳಿಸುವುದನ್ನು ನಿಲ್ಲಿಸಬೇಕು, ಆಯಾ ರಾಜ್ಯಗಳಿಗೆ ಸ್ವಾಯತ್ತತೆಯನ್ನು ಒದಗಿಸಬೇಕು ಎಂದು ಆಗ್ರಹಿಸಿದರು.

ಎಸ್‌ಎಫ್‌ಐನ ದುರುಗೇಶ್, ಮಹೇಶ್, ಜಗದೀಶ್, ಅಶೋಕ್, ನಾಗರಾಜ್, ಪುಷ್ಪವತಿ, ನಂದಿನಿ, ಸುಲ್ತಾನಾಬೇಗಂ, ದಿನೇಶ್, ಅಜಯ್, ಹುಲುಗಪ್ಪ, ದುರುಗೇಶ್, ಸೇರಿದಂತೆ ಪಟ್ಟಣದ ವಿದ್ಯಾನೀಕೆತನ, ನಂದಿ, ಗಂ.ಭೀ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.