ಮಂಡ್ಯ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಶಕ್ತಿ ಯೋಜನೆ ಸಾಥ್‌ : ಜನಸಾಗರ

KannadaprabhaNewsNetwork | Updated : Dec 22 2024, 12:18 PM IST

ಸಾರಾಂಶ

ಸರ್ಕಾರದ ಶಕ್ತಿ ಯೋಜನೆ ಒಂದೆಡೆಯಾದರೆ, ಸಮ್ಮೇಳನಕ್ಕೆ ಬರುವವರಿಗೆ ಉಚಿತ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸಿದ್ದ ಹಿನ್ನೆಲೆಯಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ 2ನೇ ದಿನ ಜನಸಾಗರವೇ ಹರಿದು ಬಂದಿತು.

ಎಚ್.ಕೆ.ಅಶ್ವಥ್, ಹಳುವಾಡಿ

 ಮಂಡ್ಯ : ಸರ್ಕಾರದ ಶಕ್ತಿ ಯೋಜನೆ ಒಂದೆಡೆಯಾದರೆ, ಸಮ್ಮೇಳನಕ್ಕೆ ಬರುವವರಿಗೆ ಉಚಿತ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸಿದ್ದ ಹಿನ್ನೆಲೆಯಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ 2ನೇ ದಿನ ಜನಸಾಗರವೇ ಹರಿದು ಬಂದಿತು.

ನಗರದ ಹೊರವಲಯದ ಸಾಂಜೋ ಆಸ್ಪತ್ರೆ ಹಿಂಭಾಗದಲ್ಲಿ ನಡೆಯುತ್ತಿರುವ ಕನ್ನಡ ಹಬ್ಬಕ್ಕೆ ಮಂಡ್ಯ ನಗರ ಸೇರಿದಂತೆ ಜಿಲ್ಲೆಯ 7 ತಾಲೂಕುಗಳು, ಹೊರ ಜಿಲ್ಲೆಗಳಿಂದ ಜಿಲ್ಲೆಗೆ ಬರುವ ಸಾಹಿತ್ಯಾಸಕ್ತರು ಹಾಗೂ ಸಾರ್ವಜನಿಕರು ಬರಲು ಉಚಿತ ಬಸ್ ಸಾರಿಗೆ ವ್ಯವಸ್ಥೆ ಮಾಡಲಾಗಿತ್ತು. ಜೊತೆಗೆ ಸರ್ಕಾರದ ಶಕ್ತಿ ಯೋಜನೆಯ ಮಹಿಳೆಯರಿಗೆ ಉಚಿತ ಸಾರಿಗೆ ಬಸ್ ಪ್ರಯಾಣವು ಕೂಡ ಸಮ್ಮೇಳನದಲ್ಲಿ ಜನರು ಸಾಗರದಂತೆ ಹರಿದು ಬರಲು ಕಾರಣವಾಯಿತು.

ಸಾರಿಗೆ ಬಸ್‌ಗಳಲ್ಲಿ ಮಹಿಳೆಯರು, ಹಿರಿಯ ನಾಗರೀಕರು, ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದರು. ಹೊರ ಜಿಲ್ಲೆ ಹಾಗೂ ತಾಲೂಕಿನ ಜನರನ್ನು ಹೊರತು ಪಡಿಸಿ ಉಳಿದ ಸ್ಥಳೀಯರು ಬೈಕ್ , ಕಾರುಗಳಲ್ಲಿ ಸಮ್ಮೇಳನಕ್ಕೆ ಆಗಮಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ವಾಹನಗಳ ನಿಲುಗಡೆಗೆ ನಿಗದಿ ಪಡಿಸಿದ್ದ ಪಾರ್ಕಿಂಗ್ ಜಾಗಗಳನ್ನು ಹೊರತು ಪಡಿಸಿ ಉಳಿದೆಲ್ಲೆಡೆ ಜನವೋ ಜನ. ಊಟಕ್ಕೆ ತೆರೆದಿದ್ದ ಸಾರ್ವಜನಿಕರ ಕೌಂಟರ್ ಜೊತೆಗೆ ನೋಂದಾಯಿತ ಪ್ರತಿನಿಧಿಗಳಿಗೆ ಹಾಕಿದ್ದ ಕೌಂಟರ್‌ಗಳಿಗೂ ಊಟಕ್ಕಾಗಿ ಜನರು ಮುಗಿಬಿದ್ದರು.

ಊಟ ಮುಗಿಯುತ್ತಿದ್ದಂತೆ ಕೆಲವರು ಮನೆಯತ್ತ ಮುಖ ಮಾಡಿದರೆ, ಮತ್ತೆ ಕೆಲವರು ಸಮ್ಮೇಳನದ ಆವರಣದಲ್ಲಿ ತೆರೆದಿದ್ದ ವಸ್ತು ಪ್ರದರ್ಶನ ಮಳಿಗೆ, ವಾಣಿಜ್ಯ ಮಳಿಗೆ, ಪುಸ್ತಕ ಮಳಿಗೆಗಳನ್ನು ತೆರಳಿ ವೀಕ್ಷಿಸುತ್ತಾ ಸಾಗಿದರು. ಇಂದು ನಡೆದ ಬಹುತೇಕ ಗೋಷ್ಠಿಗಳಲ್ಲಿ ಜನರ ಕೊರತೆ ಕಾಡಿತು.

ಸಮ್ಮೇಳನಕ್ಕೆ ಹೆಚ್ಚುವರಿ ಬಸ್ ಗಳ ಅಳವಡಿಕೆ:

ಸಾಹಿತ್ಯ ಸಮ್ಮೇಳನಕ್ಕಾಗಿ 7 ತಾಲೂಕು ಕೇಂದ್ರಕ್ಕೆ 15 ವಿಶೇಷ ಬಸ್‌ಗಳು ಸೇರಿ 105 ಸಾರಿಗೆ ಬಸ್‌ಗಳನ್ನು ಈ ಹಿಂದೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೇ, ಮೈಸೂರು ಮತ್ತು ಬೆಂಗಳೂರಿನಿಂದ ಪ್ರತಿ 30 ನಿಮಿಷಕ್ಕೆ ಒಂದರಂತೆ ವಿಶೇಷ ಬಸ್ ಸೌಲಭ್ಯ ಕಲ್ಪಿಸಿತ್ತು. ಸಮ್ಮೇಳನಕ್ಕೆ ಜನರ ಬರುವಿಕೆ ಹೆಚ್ಚಾದಂತೆ ಮತ್ತೆ ಹೆಚ್ಚುವರಿ 27 ಬಸ್‌ಗಳನ್ನು ಹೆಚ್ಚುವರಿಯಾಗಿ ತೆಗೆದುಕೊಂಡು ನಗರ ಹಾಗೂ ತಾಲೂಕಿಗೆ ಬಿಟ್ಟಿದ್ದು, ಒಟ್ಟು ಸಮ್ಮೇಳನಕ್ಕಾಗಿ 132 ಬಸ್‌ಗಳ ಬಳಕೆ ಮಾಡಿಕೊಳ್ಳಲಾಗಿದೆ.

ಆಟೋಗಳ ಮೂಲಕ ಪ್ರಚಾರ:

ನಗರದ ವಿವಿಧ ಬಡಾವಣೆಗಳಿಂದ ಸಮ್ಮೇಳನದ ಸ್ಥಳಕ್ಕೆ ಜನರನ್ನು ಕರೆತರಲು ಉಚಿತ ಸಾರಿಗೆ ಬಸ್ ಸೌಲಭ್ಯ ಕಲ್ಪಿಸಿರುವ ಬಗ್ಗೆ ನಗರದ ವಿವಿಧ ರಸ್ತೆಗಳಲ್ಲಿ ಆಟೋಗಳ ಮೂಲಕ ಪ್ರಚಾರವನ್ನು ಕೂಡ ಮಾಡಲಾಗುತ್ತಿದೆ. ಇದರಿಂದ ನಗರದ ಪ್ರಮುಖ ಮೂರು ಮಾರ್ಗಗಳಲ್ಲಿ ಸಾರಿಗೆ ಬಸ್‌ಗಳು ಕಳೆದ ಎರಡು ದಿನಗಳಿಂದ ವಿಶೇಷ ಸಂಚಾರದ ಸ್ಟಿಕ್ಕರ್ ಅಳವಡಿಸಿಕೊಂಡು ಸಂಚರಿಸುತ್ತಿವೆ.

ಸಾರಿಗೆ ಬಸ್‌ಗಳು ನಗರ ಮತ್ತು ತಾಲೂಕಿನಿಂದ ಜನರನ್ನು ಸಮ್ಮೇಳನ ನಡೆಯುವ ಜಾಗಕ್ಕೆ ಕರೆತಂದು ಬಿಡುತ್ತಿದ್ದಂತೆ, ಬಂದಷ್ಟೇ ವೇಗವಾಗಿ ಮತ್ತೆ ಜನರನ್ನು ತುಂಬಿಕೊಂಡು ನಗರದ ವಿವಿಧ ಬಸ್ ನಿಲ್ದಾಣ ಹಾಗೂ ಪ್ರಮುಖ ಕೇಂದ್ರ ಬಸ್ ನಿಲ್ದಾಣಕ್ಕೆ ಕರೆತರುತ್ತಿದ್ದ ದೃಶ್ಯ ಕಂಡು ಬಂತು. ಬಹುತೇಕ ಬಸ್ಸುಗಳು ಸಂಪೂರ್ಣ ಭರ್ತಿಯಾಗಿ ಸಂಚಾರ ಮಾಡುತ್ತಿದ್ದವು.

ಸಮ್ಮೇಳನದ ಅಂಗವಾಗಿ ಜಿಲ್ಲೆಯ ಎಲ್ಲಾ ಸರ್ಕಾರಿ ಶಾಲೆಗಳಿಗೆ ಎರಡು ದಿನ ರಜೆ ಘೋಷಣೆ ಮಾಡಿದ್ದರೂ ಕೂಡ ಬಹುತೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ತಮ್ಮ ಶಾಲಾ ವಾಹನಗಳಲ್ಲಿ ವಿದ್ಯಾರ್ಥಿಗಳು, ಶಿಕ್ಷಕರನ್ನು ಸಮ್ಮೇಳನಕ್ಕೆ ಕರತಂದು ವಾಪಸ್ ತಮ್ಮ ಕರೆದೊಯ್ಯುತ್ತಿದ್ದರು.

ಹೆದ್ದಾರಿಯಲ್ಲಿ ಸಂಚಾರಿ ದಟ್ಟಣೆ:

ಬೆಂಗಳೂರು- ಮೈಸೂರು ಹೆದ್ದಾರಿಯ ಎರಡು ಸರ್ವೀಸ್ ರಸ್ತೆಗಳಲ್ಲಿ ಸಾರಿಗೆ ಬಸ್, ಖಾಸಗಿ ವಾಹನಗಳ ಸಂಚಾರ ದಟ್ಟಣೆ ಹೆಚ್ಚಾಗಿತ್ತು. ಸುಮಾರು ನೂರು ಮೀಟರ್ ವರೆಗೆ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಸಂಚಾರಿ ಪೊಲೀಸರು ಎಷ್ಟೆ ಪ್ರಯತ್ನ ಪಟ್ಟರೂ ವಾಹನಗಳ ಸುಗಮ ಸಂಚಾರ ಸಾಧ್ಯವಾಗುತ್ತಿರಲಿಲ್ಲ. ಇದರಿಂದ ಬಹುತೇಕ ಬಸ್ಸುಗಳು ಮಂಡ್ಯ ನಗರಕ್ಕೆ ನೇರವಾಗಿ ಆಗಮಿಸಲು ಸಾಧ್ಯವಾಗದೆ ಮೇಲುಸೇತುವೆಯ ರಾಷ್ಟ್ರೀಯ ಹೆದ್ದಾರಿ ಮೂಲಕ ಚಿಕ್ಕಮಂಡ್ಯ ಸರ್ವೀಸ್ ರಸ್ತೆ ಮೂಲಕ ಮಂಡ್ಯ ನಗರಕ್ಕೆ ಆಗಮಿಸಲು ಅವಕಾಶ ಮಾಡಿಕೊಡಲಾಗಿತ್ತು.

ನಿಲ್ದಾಣದಲ್ಲಿ ಬಸ್ಸಿಗಾಗಿ ಕಾದು ನಿಂತ ಜನರು:

ಕನ್ನಡಹಬ್ಬದಲ್ಲಿ ಪಾಲ್ಗೊಳ್ಳಲು ಮಂಡ್ಯ, ಕೆ.ಆರ್.ಪೇಟೆ, ನಾಗಮಂಗಲ, ಮದ್ದೂರು, ಮಳವಳ್ಳಿ, ಶ್ರೀರಂಗಪಟ್ಟಣ, ಪಾಂಡವಪುರ ತಾಲೂಕು ವ್ಯಾಪ್ತಿಯ ವಿವಿಧ ಪಟ್ಟಣ, ವಿವಿಧ ಹಳ್ಳಿಗಳಿಂದ ಸಾವಿರಾರು ಸಂಖ್ಯೆಯಲ್ಲಿ ನಿರೀಕ್ಷೆಗೂ ಮೀರಿ ಹೆಚ್ಚಿನ ಜನರು ಆಗಮಿಸಿದ್ದರು. ಸಾಹಿತ್ಯ ಸಮ್ಮೇಳನಕ್ಕೆ ಬಸ್ ಗಳ ಅಳವಡಿಕೆಯಿಂದ ಸಾರಿಗೆ ಬಸ್ ಗಳ ಕೊರತೆ, ಸಂಚಾರ ವಿಳಂಬದಿಂದಾಗಿ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿ ಮತ್ತೆ ವಾಪಸ್ ತಮ್ಮೂರಿಗೆ ತೆರಳಲು ಬಸ್ಸಿಗಾಗಿ ಜನರು ಕಾದು ನಿಂತಿದ್ದ ದೃಶ್ಯ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಕಂಡು ಬಂತು.

ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಈ ಹಿಂದೆ 105 ಬಸ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಜಿಲ್ಲೆ, ಹೊರ ಜಿಲ್ಲೆಗಳಿಂದ ನಿರೀಕ್ಷೆಗೂ ಮೀರಿ ಜನರು ಆಗಮಿಸುತ್ತಿರುವುದ್ದರಿಂದ ಹೆಚ್ಚುವರಿ 27 ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಮೈಸೂರು ಜಿಲ್ಲೆಯಿಂದ 30 ಬಸ್ ಗಳನ್ನು ಜಿಲ್ಲೆಗೆ ತೆಗೆದುಕೊಳ್ಳಲಾಗಿದೆ. ಸಮ್ಮೇಳನಕ್ಕೆ ಬಂದ ಜನರು ಮತ್ತೆ ವಾಪಸ್ ತೆರಳಲು ಆಗಿರುವ ತೊಂದರೆಯನ್ನು ಸರಿಪಡಿಸಲಾಗುವುದು.

ನಾಗರಾಜು, ಕೆಎಸ್‌ಆರ್‌ಟಿಸಿ, ಜಿಲ್ಲಾಧಿಕಾರಿಗಳು, ಮಂಡ್ಯ.

 

Share this article