ಮಂಡ್ಯ : ಭಾರತ ಆಪರೇಷ್ ಸಿಂದೂರ ಕಾರ್ಯಾಚರಣೆ ನಡೆಸಿ ಪಾಕಿಸ್ತಾನದ ಉಗ್ರ ನೆಲೆಗಳನ್ನು ಧ್ವಂಸ ಮಾಡಿದ ವೀರ ಸೇನಾನಿಗಳಿಗೆ ಕಾಂಗ್ರೆಸ್ ಅಪಮಾನ ಮಾಡುತ್ತಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್ ಆರೋಪಿಸಿದರು.
ಸಚಿವ ಸಂತೋಷ್ಲಾಡ್, ಶಾಸಕ ಕೊತ್ತನೂರು ಮಂಜುನಾಥ್ ಅವರು ದೇಶದ ವೀರ ಯೋಧರಿಗೆ ಅಪಮಾನ ಮಾಡಿದ್ದಾರೆ. ಒಂದು ಕಡೆ ಕಾಂಗ್ರೆಸ್ ಶಾಂತಿ ಮಂತ್ರ ಜಪಿಸುತ್ತಿದ್ದರೆ, ಮತ್ತೊಂದು ಕಡೆ ಇಂತಹ ಕಾಂಗ್ರೆಸ್ ನಾಯಕರು ಯೋಧರ ವಿರುದ್ಧವೇ ಮಾತನಾಡುತ್ತಾ ಕಾಂಗ್ರೆಸ್ ಸಂಸ್ಕೃತಿಯನ್ನು ಪ್ರದರ್ಶಿಸುತ್ತಿದ್ದಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ದೂರಿದ್ದಾರೆ.
ಅಮೆರಿಕಾ ಅಧ್ಯಕ್ಷ ಟ್ರಂಪ್ ಅವರು ಜಮ್ಮು ಕಾಶ್ಮೀರ ವಿಚಾರದಲ್ಲಿ ಇನ್ನು ಮುಂದೆ ನಾನು ಸಂಧಾನ ಮಾಡುತ್ತೇನೆ ಎಂಬ ಹೇಳಿಕೆ ನೀಡಿದ್ದಾರೆ ಎಂಬ ಅಪಪ್ರಚಾರ ಮಾಡುತ್ತಿದ್ದಾರೆ. ಈ ವಿಚಾರವಾಗಿ ನರೇಂದ್ರ ಮೋದಿಯವರು ಅಧಿಕೃತವಾಗಿ ಪರವಾಗಲಿ ಅಥವಾ ವಿರುದ್ಧವಾಗಲಿ ಒಂದು ಮಾತನ್ನು ಹೇಳಿಲ್ಲ ಎಂಬ ಅಪಪ್ರಚಾರ ಮಾಡುತ್ತಿದ್ದಾರೆ ಎಂದಿದ್ದಾರೆ.
ಮೋದಿಯವರು ಪಾಕಿಸ್ತಾನದ ಜೊತೆ ಮಾತನಾಡುವುದಿದ್ದರೆ ಭಯೋತ್ಪಾದನೆ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ವಿಚಾರವಾಗಿ ಮಾತ್ರ. ದೇಶದ ಏಕತೆ, ಸಮಗ್ರತೆ ವಿಚಾರದಲ್ಲಿ ಮೂರನೇ ವ್ಯಕ್ತಿ ಮೂಗು ತೂರಿಸುವ ಅಗತ್ಯವಿಲ್ಲ ಎಂದು ಅಮೆರಿಕಾಗೇ ಎಚ್ಚರಿಕೆ ನೀಡಿದ್ದಾರೆ. ಇಂತಹ ಮಾಹಿತಿಯನ್ನು ಅರಿಯದ ಸಂತೋಷ್ಲಾಡ್ ಇಲ್ಲ ಸಲ್ಲದ ಹೇಳಿಕೆ ನೀಡುತ್ತಿದ್ದಾರೆ ಎಂದು ಟೀಕಿಸಿದರು.
ನಾಲ್ಕು ವಿಮಾನಗಳನ್ನು ಹಾರಿಸಿದ ಮಾತ್ರಕ್ಕೆ ಎಲ್ಲವನ್ನೂ ಸದೆಬಡಿದಂತಾಗುವುದಿಲ್ಲ. ಪಾಕಿಸ್ತಾನದ ವಿರುದ್ಧ ಇನ್ನೂ ಕಾರ್ಯಾಚರಣೆ ನಡೆಸಬೇಕಿತ್ತು ಎಂದು ಕೊತ್ತನೂರು ಮಂಜುನಾಥ್ ಹೇಳಿರುವುದನ್ನು ವಿರೋಧಿಸಿದ ಮಂಜುನಾಥ್, ಪಾಕಿಸ್ತಾನದಲ್ಲಿ ಏನೆಲ್ಲಾ ನಡೆದಿದೆ. ನಮ್ಮ ಯೋಧರು ಯಾವ ಪ್ರಮಾಣದಲ್ಲಿ ಹಾನಿ ಮಾಡಿದ್ದಾರೆ ಎಂಬುದನ್ನು ಮೊದಲು ಅರಿತು ಮಾತನಾಡಲಿ, ಇಲ್ಲಿದ್ದರೆ ಸ್ವಲ್ಪ ದಿನಗಳ ಕಾಲವಾದರೂ ಸೇನೆಯ ಜೊತೆಗೆ ಕೆಲಸ ಮಾಡಿ, ಅದು ಬಿಟ್ಟು ಇಲ್ಲಿ ಕುಳಿತು ಸುಖಾ ಸುಮ್ಮನೆ ಮಾಡುವುದು ಶಾಸಕರಾಗಿರುವ ನಿಮಗೆ ಶೋಭೆ ತರುವುದಿಲ್ಲ ಎಂದು ಛೇಡಿಸಿದ್ದಾರೆ.