ಧಾರ್ಮಿಕ ಸಭೆಯಲ್ಲಿ ಸ್ವಾಮೀಇ ಮಾತು
ಬಸ್ತಿಹಳ್ಳಿಯ ಶಾಂತಿನಾಥ ಸ್ವಾಮಿಯ ಮಸ್ತಕಾಭಿಷೇಕ ಮುಂದಿನ ವರ್ಷದಿಂದ ಮತ್ತಷ್ಟು ವೈಭವದಿಂದ ನಡೆಯಲಿದೆ. ಮಸ್ತಕಾಭಿಷೇಕದ ಅಂಗವಾಗಿ ಆರಾಧನೆ, ಗ್ರಾಮದಲ್ಲಿ ಉತ್ಸವವನ್ನು ನಡೆಸಬೇಕು. ಶಾಂತಿನಾಥ ಸ್ವಾಮಿ ಮಸ್ತಕಾಭಿಷೇಕ ಊರಿನ ಜಾತ್ರೆಯಂತಾಗಬೇಕು ಎಂದು ಶ್ರವಣಬೆಳಗೊಳ ಜೈನ ಮಠದ ಅಭಿನವ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಹೇಳಿದರು.
ಹಳೇಬೀಡಿನ ಬಸ್ತಿಹಳ್ಳಿಯ ಜಿನಮಂದಿರದಲ್ಲಿ ಭಾನುವಾರ ಶಾಂತಿನಾಥ ಸ್ವಾಮಿ ಮಸ್ತಕಾಭಿಷೇಕ ಮಹೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.ಶಾಂತಿನಾಥರರನ್ನು ಅರಾಧಿಸುವುದರಿಂದ ರೋಗಗಳು ಸುಳಿಯುವುದಿಲ್ಲ. ಶಾಂತಿನಾಥರ ಸ್ಮರಣೆಯಿಂದ ಮಾನಸಿಕ ನೆಮ್ಮದಿಯೊಂದಿಗೆ, ಆರೋಗ್ಯಕರವಾಗಿ ಬದುಕಬಹುದು. ಹೊಯ್ಸಳರು ಹಳೇಬೀಡಿನಲ್ಲಿ ನಿರ್ಮಿಸಿದ ೧೩ ಬಸದಿಗಳ ಪೈಕಿ ಈಗ ಮೂರು ಬಸದಿಗಳು ಉಳಿದಿವೆ. ಬಸದಿಗಳಲ್ಲಿ ಪೂಜಾ ಕಾರ್ಯ ನಿರಂತರವಾಗಿರಬೇಕು. ಬಸದಿಗಳು ಅಭೂತಪೂರ್ವವಾಗಿವೆ. ಶಾಂತಿ, ನೆಮ್ಮದಿ ನೀಡುವ ಕೇಂದ್ರಗಳಾಗಿವೆ ಎಂದು ಸ್ವಾಮೀಜಿ ಹೇಳಿದರು.
ಶಾಂತಿನಾಥ ಸ್ವಾಮಿಯ ವೈಭವದ ಮಸ್ತಕಾಭಿಷೇಕ:
ಮಹಿಳೆಯರು ಸುಮದುರ ಕಂಠದಿಂದ ಸುಶ್ರಾವ್ಯವಾಗಿ ಜಿನ ಭಕ್ತಿಗೀತೆಗಳನ್ನು ಪ್ರಸ್ತುತಪಡಿಸಿದರು. ಶ್ರವಣಬೆಳಗೂಳ ಜೈನಮಠದ ಪೀಠಾಧ್ಯಕ್ಷ ಅಭಿನವ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಸಾನಿಧ್ಯದಲ್ಲಿ ವಿವಿಧ ದ್ರವ್ಯಗಳಿಂದ ಅಭಿಷೇಕ ಆರಂಭವಾದ ತಕ್ಷಣ ನೆರದಿದ್ದ ಭಕ್ತರು ಕೈಜೋಡಿಸಿ ನಮಿಸಿದರು. ೧೦೮ ಕಳಶಗಳಿಂದ ಜಲಾಭಿಷೇಕ ಮಾಡಿದಾಕ್ಷಣ ಮಂದಸ್ಮಿತ ಮೂರ್ತಿಯು ವಿವಿಧ ಭಂಗಿಯಲ್ಲಿ ಕಂಗೊಳಿಸಿತು. ನಂತರ ಎಳನೀರು, ಕ್ಷೀರ (ಹಾಲು), ಕಬ್ಬಿನಹಾಲು, ಚತುಷ್ಕೋನ (ನಾಲ್ಕು ದಿಕ್ಕಿನಲ್ಲಿ ಸ್ಥಾಪಿಸಿದ) ಕಳಸ, ಶ್ರೀಗಂಧ, ಅರಿಸಿನ, ಕಲ್ಕಚೂರ್ಣ (ಅಕ್ಕಿಹಿಟ್ಟು), ಚಂದನ, ಕಷಾಯಗಳಿಂದ ಅಭಿಷೇಕ ನೆರವೇರಿಸಲಾಯಿತು. ಜಗತ್ತಿನ ಸಕಲ ಜೀವಿಗಳಿಗೂ ಸುಖ, ಶಾಂತಿ, ನೆಮ್ಮದಿ, ಮುಕ್ತಿ ದೊರಕಲಿ ಎಂದು ಮಹಾಶಾಂತಿ ಮಂತ್ರದೊಂದಿಗೆ ಶಾಂತಿನಾಥ ಮೂರ್ತಿಗೆ ಶಾಂತಿಧಾರೆ ನೆರವೇರಿತು.