ಶೇಷಮೂರ್ತಿ ಅವಧಾನಿ
ಕನ್ನಡಪ್ರಭ ವಾರ್ತೆ ಕಲಬುರಗಿಕಲಬುರಗಿಗೆ ಕಮೀಶ್ನರೇಟ್ ಬಂತು, ಮೊದ್ಲು ಒಬ್ರೇ ಐಪಿಎಸ್ (ಎಸ್ಪಿ) ಅಧಿಕಾರಿ ಇದ್ದ ಕಡೆ ನಾಲ್ಕಾರು ಮಂದಿ ಐಪಿಎಸ್ ಅಧಿಕಾರಿಗಳು ಬಂದ್ರೂ ಕ್ರೈಂಗಳು ಕಮ್ಮಿ ಆಗಲಿಲ್ಲ, ಕಳವು, ಸುಲಿಗೆಗಳಿಗೂ ನಿರೀಕ್ಷಿತ ಮೂಗುದಾರ ಬೀಳಲಿಲ್ಲ, ದಶಕ ಗತಿಸಿದರೂ ಜನಸ್ನೇಹಿ ಪೊಲೀಸಿಂಗ್ ಇಲ್ಲಿನ್ನೂ ಕನಸಿನ ಮಾತು, ಇಲ್ಲಿನ ಪೊಲೀಸ್ರು ವಿಐಪಿಗಳು, ಮಂತ್ರಿಗಳು ಬಂದಾಗ ಸುತ್ತಮುತ್ತ ಕಾಣ್ತಾರ, ರಾತ್ರಿ ಗಸ್ತು ಅಷ್ಟಕ್ಕಷ್ಟೆ, ಸಿಟಿ ಟ್ರಾಫಿಕ್ ಬಗ್ಗೆ ಮಾತಾಡೋದೇ ಬೇಡ....
ಕಲಬುರಗಿ ಮಹಾ ನಗರಕ್ಕೆ ಕಮೀಶ್ನರೇಟ್ ಕಾಲಿಟ್ಟು ದಶಕ ಸಮೀಪಿಸಿದರೂ ಇಲ್ಲಿನ್ನು ನಿರೀಕ್ಷಿತ ಮಟ್ಟದಲ್ಲಿ ಜನಸ್ನೇಹಿ ಪೊಲೀಸಿಂಗ್ ನಡೆಯುತ್ತಿಲ್ಲ ಎನ್ನುವುದೇ ನಗರ ವಾಸಿಗಳ ಬೇಸರವಾಗಿದೆ. ಅದಕ್ಕೇ ಅವರೆಲ್ಲರೂ ಕಮೀಶ್ನರೇಟ್ ಬಂದ್ರೂ ಪೊಲೀಸಿಂಗ್ ಅದೆಲ್ಲಿ ಸುಧಾರಿಸಿದೆ ಹೇಳಿ? ಎಂದು ಪಾಟೀಸವಾಲು ಹಾಕುತ್ತ ತಮ್ಮದೇ ಆದ ಸೈಲಿಯಲ್ಲಿ ಮೇಲಿನಂತೆ ಮೌಲ್ಯಮಾಪನ ಮಾಡುತ್ತಿದ್ದಾರೆ.ಕಲಬುರಗಿ ಕಥೆ ಇಷ್ಟೇ ಬಿಡಿ, ಯಾರ ಬಂದ್ರೂ ಅಷ್ಟೇ, ಇಲ್ಲಿನ ಪೊಲೀಸಿಂಗ್, ಟೆರಿಫಿಕ್ ಟ್ರಾಫಿಕ್ನಲ್ಲಿ ಸುಧಾರಣೆ ಕನಸಿನ ಮಾತು ಎಂದು ಜನ ಬೇಸರಿಸುತ್ತಿರುವಾಗಲೇ ಕಲಬುರಗಿ ನಗರ ನೂತನ ಪೊಲೀಸ್ ಕಮಿಷನರ್ ಆಗಿ 2009ನೇ ವೃಂದದ ಐಪಿಎಸ್ ಅಧಿಕಾರಿ ಡಾ. ಶರಣಪ್ಪ ಢಗೆ ಆಗಮಿಸಿದ್ದಾರೆ.
ಐಪಿಎಸ್ ಆಫೀಸರ್ಸ್ ಬರ್ತಾರೆ, ಹೋಗ್ತಾರೆ ಬಿಡಿ, ಇದರಲ್ಲೇನಿದೆ ಅನ್ನೋದಾದ್ರೆ ಇಲ್ಲೇ ಇದೆ, ವಿಶೇಷ. ಇವರು ಮೂಲತಃ ಜಿಲ್ಲೆಯ ಗಡಿಭಾಗ ಆಳಂದದ ಖಜೂರಿ ಗ್ರಾಮದವರು.ತಮ್ಮ ಒಂದೂವರೆ ದಶಕದ ಪೊಲೀಸ್ ಅಧಿಕಾರಿ ಸೇವಾ ಅವಧಿಯಲ್ಲಿ ಇದೇ ಮೊದಲ ಬಾರಿಗೆ ತವರು ಜಿಲ್ಲೆ, ತಾವು ಪದವಿ ಓದಿದ ಕಲಬುರಗಿ ನಗರಕ್ಕೇ ಪೊಲೀಸ್ ಕಮೀಶ್ನರ್ ಆಗಿ ಅಧಿಕಾರ ವಹಿಸಿಕೊಂಡಿರೋದರಿಂದ ಇವರ ಮೇಲೆ ನಗರವಾಸಿಗಳ ನಿರೀಕ್ಷೆಗಳು ಸಹಜವಾಗಿಯೇ ಹೆಚ್ಚಿವೆ.
ಪೊಲೀಸಿಂಗ್ ವಿಚಾರದಲ್ಲಿ ಕಲಬುರಗಿ ಈಗ್ಗೆ 2 ದಶಕದ ಹಿಂದೆ ಎಲ್ಲಿತ್ತೋ ಇಂದಿಗೂ ಅಲ್ಲೇ ಇದೆ ಅನ್ನೋದ್ರರಲ್ಲಿ ದೂಸ್ರಾ ಮಾತಿಲ್ಲ, ಪೊಲೀಸ್ ಇಲಾಖೆಗೆ ತರಹೇವಾರಿ ಕಟ್ಟಡಗಳು, ಹತ್ತಾರು ವಾಹನಗಳು ಸೇರ್ಪಡೆಯಾಗಿವೆಯೇ ಹೊರತು ತುರ್ತು ಸ್ಪಂದನೆಯ ಸಂವೇದನಶೀಲತೆ, ಜನಸ್ನೇಹಿ ಪೊಲೀಸಿಂಗ್ ಇಲ್ಲಿನ್ನೂ ಮರೀಚಿಕೆ. ನಗರದ ಗುಣಲಕ್ಷಣ ನಿರ್ಧರಿಸುವ ಟ್ರಾಫಿಕ್ ವ್ಯವಸ್ಥೆ, ಪೊಲೀಸಿಂಗ್ನಲ್ಲಿ ಚೂರು ಪ್ರಗತಿ ಕಂಡಿಲ್ಲ.ಮುಂಚೆ ಪರವಾಗಿಲ್ಲ ಎಂಬಂತಿದ್ದ ರಾತ್ರಿ ಗಸ್ತು, ಹಗಲಿನ ಪೊಲೀಸ್ ಬೀಟ್ಗಳು ಈಗ ನೆನಪಷ್ಟೆ, ಅದನ್ನೆಲ್ಲ ಕಂಡವರು ನಗರ ವಾಸಿಗಳು ಈಗ ಪೊಲೀಸರಂದ್ರೆ ವಿಐಪಿಗಳ ಸಂಚಾರದಲ್ಲಿ ಕಾಣುತ್ತೇವಷ್ಟೆ ಎಂದು ಹಳಹಳಿಸುತ್ತಿದ್ದಾರೆ.
ತಮ್ಮ ಒದಿನ ಅವಧಿಯಲ್ಲಿ ಡಾ. ಶರಣಪ್ಪ ಢಗೆಯವರು ಕಲಬುರಗಿಯನ್ನು ತುಂಬ ಹತ್ತಿರದಿಂದ ಕಂಡಿರ್ತಾರೆ, ಆಗ ಅವರು ಕಂಡಿರೋ ಅನೇಕ ಹಂತದಲ್ಲಿನ ಅಪಸವ್ಯಗಳನ್ನು ಈಗ ಪೊಲೀಸ್ ಕಮೀಶ್ನರ್ ಆಗಿ ಸುಧಾರಣೆ ಮಾಡಿದರೆ ಸಾಕೆಂದು ಹಿರಿಯರು ಹೇಳುತ್ತಿದ್ದಾರೆ.ಉಡ್ತಾ ಕಲಬುರಗಿಗೆ ಮೂಗುದಾರ ಹಾಕೋರ್ಯಾರು!
ಕಲಬುರಗಿ ಮಹಾ ನಗರ ಈಚೆಗೆ ಮದಕ ವಸ್ತುಗಳ ಕಳ್ಳಸಾಗಾಣಿಕೆಯ ತವರಾಗಿದೆ. ಇಲ್ಲಿ ಪತ್ತೆಯಾಗಿರೋ ಪ್ರಕರಣ ಗಮನಿಸಿದರೆ ಸಾಕು ಈ ಮಾತನ್ನು ಯಾರೂ ಅಲ್ಲಗಳೆಯಲಾರರು. ಕಳೆದ 2 ವರ್ಷಗಳಲ್ಲಿ ಕಲಬುರಗಿ ಪೊಲೀಸ್ ಮೀಶ್ನರೇಟ್ನಲ್ಲೇ 125 ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿರೋದು ಆತಂಕ ಮೂಡಿಸಿದೆ. ಅದರಲ್ಲೂ ಶಾಲೆ, ಕಾಲೇಜುಗಳ ಮುಂದೆಯೇ ಗಾಂಜಾ, ಅಫೀಮು, ಚರಸ್ ಕೈಗೆಟುಕುವಂತಾಗಿರದು ಕಳವಳ ಹೆಚ್ಚಿಸಿದೆ. ಈ ಬೆಳವಣಿಗೆ ನಗರದಲ್ಲಿ ಅಪರಾಧ ಸಂಖ್ಯೆ ಹೆಚ್ಚಳಕ್ಕೂ ಕಾರಣವಾಗುತ್ತಿದೆ. ಹೊಸ ಕಮೀಶ್ನರ್ ಈ ಮಾದಕ ಪದಾರ್ಥಗಳ ಕಳ್ಳ ಸಾಗಾಣಿಕೆ, ಅಕ್ರಮ ಮಾರಾಟ ಜಾಲಕ್ಕೆ ಕಡಿವಾಣ ಹಾಕಬೇಕಿದೆ.ಸುಗಮ ಸಂಚಾರ ಕನಸಿನ ಮಾತು!
ಕಲಬುರಗಿಲ್ಲಿ ಸುಗಮ ಸಂಚಾರ ಮರೀಚಿಕೆ. ಅದರಲ್ಲೂ ಸಿಗ್ನಲ್ ಇದ್ದ ಸರ್ಕಲ್ಗಳಲ್ಲೇ ಇಂತಹ ಅವ್ಯವಸ್ಥೆ ಕಾಡುತ್ತಿರೋದು ವಿಶೇಶ. ಅದೆಲ್ಲಿ ಪೊಲೀಸರು ನಿಯೋಜನೆಯಲ್ಲಿರುತ್ತಾರೋ ಅಲ್ಲೇ ಸಿಗ್ನಲ್ ಜಂಪ್, ತ್ರಿಬಲ್ ರೈಡ್, ಮದ್ಯಪಾನ ಮಾಡಿ ವಾಹನ ಚಾಲನೆಯಂತಹ ಸಮಸ್ಯೆಗಳು ಹೆಚ್ಚುತ್ತಿವೆ. ರಾಮ ಮಂದಿರ ವೃತ್ತ, ಖರ್ಗೆ ಪೆಟ್ರೋಲ್ ಬಂಕ್ ವೃತ್ತ, ಹೀರಾಪೂರ ಸರ್ಕಲ್, ಹಾಗರಗಾ ಕಾಸ್, ಆಳಂದ ನಾಕಾದಂತಹ ಜನ, ವಾಹನ ದಟ್ಮೆಗಳಲ್ಲಿ ಬೆಳಗಿನ 9 ರಿಂದ 12 ಗಂಟೆ, ಸಂಜೆ 4 ರಿಂದ 7 ಗಂಟೆ ಪಾದಚಾರಿಗಳು ಹೆಜ್ಜೆ ಇಡಲು ಆಗದಂತಹ ದುರವಸ್ಥೆ. ಬೇಕಾಬಿಟ್ಟಿ ವಾಹನಗಳು ನುಗಗಿ ಎಲ್ಲೆಂದರಲ್ಲಿ ದಟ್ಟಣೆ ಕಾಯೋದು ನಿತ್ಯದ ನೋಟವಾದರೂ ಕೇಳೋರಿಲ್ಲದಂತಾಗಿದೆ.ಪಾರ್ಕಿಂಗ್ ಸಮಸ್ಯೆಗಿಲ್ಲ ಪರಿಹಾರ
ಸೂಪರ್ ಮಾರ್ಕೆಟ್, ರೇಲ್ವೆ ಸ್ಟೇಷನ್, ಬಸ್ ನಿಲ್ದಾಣ, ಶರಣಬಸವೇಶ್ವರ ಮಂದಿರ ಪ್ರದೇಶ ಇಲ್ಲೆಲ್ಲಾ ವಾಹನ ನಿಲುಗಡೆೇ ಬಹುದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಗಂಜ್, ಮಾರ್ಕಟ್ನಲ್ಲಂತೂ ಅಡ್ಡಾದಿಡಡಿ ವಾಹನ ಸಂಚಾರದಿಂದ ಉಸಿರುಗಟ್ಟೋ ವಾತಾವರಣ ನಿರ್ಮಾಣವಾದರೂ ಕೇಳೋರಿಲ್ಲದಂತಾಗಿದೆ.ಭಾರಿ ವಾಹನಗಳಿಂದ ಅಪಘಾತ
ನಗರದಲ್ಲಿ ಭಾರಿ ವಾಹನ ಸಂಚಾರಕ್ಕೆ ನಿಯಂತ್ರಣ ಹೇರಬೇಕು ಎಂದು ನಗರವಾಸಿಗಳು ಆಗ್ರಹಿಸಿದರೂ ಯಾರೂ ಕೇಳುತ್ತಿಲ್ಲ. ರಾಮ ಮಂದಿರ ವೃತ್ತ, ಹೀರಾಪೂರ ವೃತ್ತ, ಅಫಜಲ್ಪುರ ರೇಲ್ವೆ ಮೇಲ್ ಸೇತುವೆಯಲ್ಲಿ ಭಾರಿ ವಾಹನಗಳ ಸಂಚಾರದಿಂದ ಸಾಕಷ್ಟು ಅಪಘಾತಗಳಾಗುತ್ತಿವೆ. ಈ ರಸ್ತೆಗಳಿಂದ ವಾಹನಗಳು ನಗರ ಪ್ರವೇಶವಾಗೋದನ್ನ ತಡೆಯಬೇಕು ಎಂಬುದು ಜನಾಗ್ರಹವಾದರೂ ಅದ್ಯಾಕೋ ಪೊಲೀಸರು ಇದಕ್ಕಿನ್ನು ಸಹಮತ ನೀಡುತ್ತಿಲ್ಲ. ಈ ಕಮೀಶ್ನರ್ ಅವರಾದ್ರೂ ಇದನ್ನು ಗಮನಿಸಿ ಭಾರಿ ವಾಹನ ಸಂಚಾರಕ್ಕೆ ಬ್ರೆಕ್ ಹಾಕಿ ಜನರ ಜೀವ ಕಾಪಾಡುವರೆ ಕಾದು ನೋಡಬೇಕಿದೆ.ಕಮೀಶ್ನರ್ ಸಾಹೇಬರು ನಗರ ಪ್ರದಕ್ಷಿಣೆ ಮಾಡ್ಲಿ
ಕಲಬುರಗಿ ಕಾಡುತ್ತಿರೋ ಸಮಸ್ಯೆಗಳು ಹಲವು, ಕಮೀಶ್ನರ್ ಸಾಹೇಬರು ನಗರ ಪದಕ್ಷಿಣೆ ಹಾಕಲಿ, ಸಂಚಾರ ಸಂಚಕಾರ, ದಟ್ಟಣೆ, ವಾಹನ ಸವಾರರ ಪರದಾಟ, ಪಾದಚಾರಿಗಳ ಗೋಳು ಇತ್ಯಾದಿ ಗೊತ್ತಾಗುತ್ತದೆ. ಚೆಂಬರ್ನಲ್ಲೇ ಕುಳಿತರಾಗದು ಎಂದು ಜನರು ತಮ್ಮನ್ನೆಲ್ಲ ಮುತ್ತಿಕೊಂಡಿರೋ ಸಮಸ್ಯೆಗಳಿಗೆ ಪರಿಹಾರ ದೊರಕಬೇಕಾದರೆ ಖಉದ್ದು ಕಮೀಶ್ನರ್ ಅವರೇ ನಗರ ಪ್ರದಕ್ಷಿಣೆ ಮಾಡಿ ವಾಸ್ತವ ಸಂಗತಿಗಳನ್ನು ಖುದ್ದು ಗ್ರಹಿಸಿ ಪರಿಹಾರ ಸೂಚಿಸಲಿ ಎಂದು ಆಗ್ರಹಿಸುತ್ತಿದ್ದಾರೆ.ಕಮೀಶ್ನರ್ ಮೇಲೆ ನಗರವಾಸಿಗಳ ಹೆಚ್ಚಿದ ನಿರೀಕ್ಷೆ
ಡಾ. ಶರಣಪ್ಪ ಕಲಬುರಗಿಯಲ್ಲಿದ್ದು ಓದಿ ಐಪಿಎಸ್ ಆದವರು. ಮೇಲಾಗಿ ಆಳಂದದ ಖಜೂರಿ ಊರವರು. ನಮ್ಮವರು ಅಧಿಕಾರಿಯಾಗಿ ತಮ್ಮೂರಿಗೆ ಕರ್ತವ್ಯದ ಮೇಲೆ ಬಂದಿದ್ದಾರೆ. ನಮ್ಮ ನಿರೀಕ್ಷೆಗಳು ತುಂಬಾ ಇವೆ ಎಂದು ಜನರೇ ಹೇಳುತ್ತಿದ್ದಾರೆ. ಶರಣಪ್ಪ ಅವರು ಮನಸ್ಸು ಮಾಡಿದರೆ ಸಾಕಷ್ಟು ಜನಪರ ಸುಧಾರಣೆಗಳನ್ನಿಲ್ಲಿ ಮಾಡಬಹುದು. ಅಧಿಕಾರವಂತೂ ಸ್ವೀಕರಿಸಿದ್ದಾರೆ, ಮುಂದೆ ಅದ್ಹೇಗೆ ಕಾರ್ಯನಿರ್ವಹಿಸುವರೋ ಎಂಬುದನ್ನು ಕಾದು ನೋಡೋಣವೆಂದು ಕಮೀಶ್ನರ್ ಅವರ ಕಾರ್ವೈಖರಿಗೆ ಭೂತಗನ್ನಡಿ ಹಿಡಿಯೋ ತವಕದಲ್ಲಿದ್ದಾರೆ.