ಕಲಘಟಗಿ: ಛತ್ರಪತಿ ಶಿವಾಜಿ ಮಹಾರಾಜರು ತಾಯಿ ಜೀಜಾಬಾಯಿಯವರ ಸ್ಫೂರ್ತಿಯಿಂದ ರಾಜ್ಯಕಟ್ಟಲು ಸಾಧ್ಯವಾಯಿತು. ಶಿವಾಜಿ ಜಯಂತಿಯಂದು ಮಾತೆ ಜೀಜಾಬಾಯಿ ಅವರನ್ನು ನೆನೆಯುವುದು ಅತ್ಯವಶ್ಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ಮಾತೆ ಜೀಜಾಬಾಯಿ ಅವರು ಹೆಣ್ಣು ಮಕ್ಕಳಿಗೆ ಆದರ್ಶಪ್ರಾಯರಾಗಿದ್ದಾರೆ. ಶಿವಾಜಿ ಮಹಾರಾಜರು ಎಲ್ಲ ಜಾತಿ ಧರ್ಮದವರಿಗೂ ಗೌರವ ನೀಡುತ್ತಿದ್ದರು. ವಿಶೇಷವಾಗಿ ಮಹಿಳೆಯರಿಗೆ ಸೂಕ್ತ ಗೌರವ, ರಕ್ಷಣೆ ನೀಡಿದ್ದರು. ಹಾಗಾಗಿ ಇಂತಹ ಕಾರ್ಯಕ್ರಮಗಳಲ್ಲಿ ಮಹಿಳೆಯರು ಹೆಚ್ಚೆಚ್ಚು ಪಾಲ್ಗೊಳ್ಳಬೇಕು ಎಂದು ಹೇಳಿದರು.
ಸರ್ವರಿಗೂ ಸಮಪಾಲು ಸಮಬಾಳು ಎಂಬ ದೇಶ ನಮ್ಮದು. ಭಾರತ ದೇಶ ಪುಣ್ಯಭೂಮಿಯಾಗಿದೆ. ಛತ್ರಪತಿ ಶಿವಾಜಿ ಹಾಗೂ ಜೀಜಾಬಾಯಿಯವರ ಆದರ್ಶದ ಹಾದಿಯಲ್ಲಿ ಎಲ್ಲರೂ ನಡೆಯಬೇಕು. ಎಲ್ಲ ಸಮಾಜ ಬಾಂಧವರು ಸೇರಿ ಶಿವಾಜಿ ಜಯಂತಿ ಆಚರಣೆ ಮಾಡುತ್ತಿರುವುದು ಸಂತಸದ ಸಂಗತಿ ಎಂದು ಹೇಳಿದರು.ಪಟ್ಟಣದ ಬೆಂಡಿಗೇರಿ ಓಣಿನಲ್ಲಿ ಆಯೋಜಿಸಲಾಗಿದ್ದ ಛತ್ರಪತಿ ಶಿವಾಜಿ ಮಹಾರಾಜ ಜಯಂತಿಯಲ್ಲಿ ಪಾಲ್ಗೊಂಡ ಸಚಿವ ಲಾಡ್, ಶಿವಾಜಿ ಮೂರ್ತಿಗೆ ಪುಷ್ಪಾರ್ಪನೆಗೈದರು. ಕಲಘಟಗಿ ವಿಧನಾಸಭಾ ಕ್ಷೇತ್ರ ವ್ಯಾಪ್ತಿಯ ಅಂಗವಿಲಕ ಫಲಾನುಭವಿಗಳಿಗೆ ತ್ರಿಚಕ್ರವಾಹನ ವಿತರಿಸಿದರು.