ಕೆಜಿಎಫ್ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯ, ಸಿಬ್ಬಂದಿ ಕೊರತೆ

KannadaprabhaNewsNetwork |  
Published : Mar 19, 2024, 12:45 AM IST
೧೮ಕೆಜಿಎಫ್೩ಸಾರ್ವಜನಿಕ ಆಸ್ಪತ್ರೆಯ ನೂತನ ಕಟ್ಟಡ | Kannada Prabha

ಸಾರಾಂಶ

ಓಪಿಡಿಗಳನ್ನು ನೂತನ ಕಟ್ಟಡಕ್ಕೆ ಸ್ಥಳಾಂತರಿಸಿರುವುದರಿಂದ ಪ್ರತಿನಿತ್ಯ ಬರುವ ರೋಗಿಗಳು ತಮ್ಮ ಸರತಿ ಬಂದು ಚಿಕಿತ್ಸೆ ಪಡೆದುಕೊಳ್ಳುವ ವೇಳೆಗೆ ಸಾಕಪ್ಪಾ ಸಾಕು ಎನ್ನುವಷ್ಟರ ಮಟ್ಟಿಗೆ ಬಸವಳಿಯಬೇಕಾದ ಅನಿವಾರ್ಯತೆ ಎದುರಾಗಿದೆ.

ಕನ್ನಡಪ್ರಭ ವಾರ್ತೆ ಕೆಜಿಎಫ್

ಹಿಂದೆ ಮೈಸೂರು ಮಹಾರಾಜರು ನಿರ್ಮಿಸಿದ್ದ ೧೫೦ ಬೆಡ್‌ಗಳ ಸಾರ್ವಜನಿಕ ಆಸ್ಪತ್ರೆಯನ್ನು ಆಧುನೀಕರಣಗೊಳಿಸಿದ್ದು, ವೈಜ್ಞಾನಿಕ ನಿರ್ಮಿಸಿದ್ದು, ಓಪಿಡಿ ಎಡ ಮತ್ತು ಬಲಬಾಗದಲ್ಲಿ ರೋಗಿಗಳಿಗೆ ವಾರ್ಡ್‌ಗಳನ್ನು ನಿರ್ಮಿಸಿ ವೈದ್ಯರಿಗೆ ಓಪಿಡಿಯಿಂದ ವಾರ್ಡ್‌ಗಳಿಗೆ ಸಲಭವಾದ ರೀತಿಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲು ಅನುಕೂಲವಾಗಿತ್ತು,

ಆದರೆ ೮ ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಿರುವ ಹೊಸ ಓಪಿಡಿ ಕಟ್ಟಡಕ್ಕೆ ಸ್ಥಳಾಂತರಿಸುವುದರಿಂದ ರೋಗಿಗಳಿಗೆ ಕುಳಿತುಕೊಳ್ಳಲು ಸ್ಥಳವಿಲ್ಲದೆ ತೊಂದರೆಯಾಗಿದ್ದು, ಹೊಸ ಓಪಿಡಿಯಲ್ಲಿರುವ ವೈದ್ಯರು ಹಳೇಯ ಆಸ್ಪತ್ರೆ ವಾರ್ಡ್‌ಗಳಿಗೆ ಹೋಗಿ ರೋಗಿಗಳಿಗೆ ಚಿಕಿತ್ಸೆ ನೀಡಲು ತೊಂದರೆಯಾಗಿರುವುದರ ಜೊತೆಗೆ ಆಸ್ಪತ್ರೆಯಲ್ಲಿ ಅಗತ್ಯವಿರುವ ದಾದಿಯರು ಮತ್ತು ವೈದ್ಯರ ಕೊರತೆಯಿಂದ ಪ್ರತಿ ದಿನ ಬರುವ ನೂರಾರು ರೋಗಿಗಳಿಗೆ ಚಿಕಿತ್ಸೆ ನೀಡಲು ಸಾಧ್ಯವಾಗದೆ ರೋಗಿಗಳನ್ನು ಕೋಲಾರಕ್ಕೆ ಕಳುಹಿಸಲಾಗುತ್ತಿದೆ.

ವಿಸ್ತಾರವಾಗಿದ್ದ ಹಳೆಯ ಕಟ್ಟಡ

ಕಿವಿ, ಮೂಗು ಮತ್ತು ಗಂಟಲು ಬೇನೆಯಿಂದ ಬಳಲುತ್ತಿರುವ ರೋಗಿಗಳಿಗೆ, ಮೂಳೆ ಮುರಿತ ಮತ್ತು ಇನ್ನಿತರ ಕಾರಣಗಳಿಂದ ಬಳಲುತ್ತಿರುವ ರೋಗಿಗಳಿಗೆ ಇದುವರೆಗೆ ಸರ್ಕಾರಿ ಆಸ್ಪತ್ರೆಯ ಹಳೆಯ ಕಟ್ಟಡದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು, ಹಳೇ ಕಟ್ಟಡದಲ್ಲಿದ್ದ ಓಪಿಡಿ ಬಳಿ ಚಿಕಿತ್ಸೆಗೆಂದು ಬರುವ ರೋಗಿಗಳಿಗೆ ಸಾಕಷ್ಟು ಸ್ಥಳಾವಕಾಶವಿದ್ದುದರಿಂದ ಮತ್ತು ಓಪಿಡಿ ಹೊರಗೆ ಮರಗಳು ಇರುವುದರಿಂದ ಅವುಗಳ ಕೆಳಗೆ ವೈದ್ಯರಿಗಾಗಿ ಕಾಯುತ್ತಾ ಕುಳಿತುಕೊಂಡು ತಮ್ಮ ಸರತಿ ಬಂದಾಗ ಚಿಕಿತ್ಸೆ ಪಡೆದುಕೊಂಡು ವಾಪಸ್ಸಾಗುತ್ತಿದ್ದರು.

ಆದರೆ ಇತ್ತೀಚೆಗೆ ಕೆಲವು ದಿನಗಳ ಹಿಂದೆ ಇದ್ದಕ್ಕಿದ್ದಂತೆ ಆಸ್ಪತ್ರೆಯ ಹಳೆಯ ಕಟ್ಟಡದಲ್ಲಿದ್ದ ಓಪಿಡಿಗಳನ್ನು ನೂತನ ಕಟ್ಟಡಕ್ಕೆ ಸ್ಥಳಾಂತರಿಸಿರುವುದರಿಂದ ಪ್ರತಿನಿತ್ಯ ಬರುವ ರೋಗಿಗಳು ತಮ್ಮ ಸರತಿ ಬಂದು ಚಿಕಿತ್ಸೆ ಪಡೆದುಕೊಳ್ಳುವ ವೇಳೆಗೆ ಸಾಕಪ್ಪಾ ಸಾಕು ಎನ್ನುವಷ್ಟರ ಮಟ್ಟಿಗೆ ಬಸವಳಿಯಬೇಕಾದ ಅನಿವಾರ್ಯತೆ ಎದುರಾಗಿದೆ.

ಓಪಿಡಿ- ವಾರ್ಡ್‌ ದೂರ ದೂರ

ಆದರೆ ಈಗ ಬದಲಾಯಿಸಿರುವ ಓಪಿಡಿ ಕಟ್ಟಡಕ್ಕೂ, ವಾರ್ಡ್‌ಗಳಿಗೂ ದೂರವಿರುವುದರಿಂದ ಮತ್ತು ಓಪಿಡಿಯಿಂದ ವಾರ್ಡ್‌ಗಳಿಗೆ ಯಾವುದೇ ಇಂಟರ್‌ಕಾಂ ವ್ಯವಸ್ಥೆ ಇಲ್ಲದೇ ಇರುವುದರಿಂದ ತುರ್ತು ಸಮಯ ಎದುರಾದಾಗ ವಾರ್ಡ್‌ನಲ್ಲಿ ಪಾಳಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ನರ್ಸ್‌ಗಳು ಎದ್ದುಬಿದ್ದು ವೈದ್ಯರ ಬಳಿ ಬಂದು ವಿಷಯ ತಿಳಿಸಿದ ನಂತರ ವೈದ್ಯರು ವಾರ್ಡ್‌ಗಳಿಗೆ ತೆರಳಿ ಚಿಕಿತ್ಸೆ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಸಾರ್ವಜನಿಕ ಆಸ್ಪತ್ರೆ, ಮಹಿಳೆಯರು ಮತ್ತು ಮಕ್ಕಳ ಆಸ್ಪತ್ರೆ, ಸಾಂಕ್ರಾಮಿಕ ರೋಗಗಳ ಆಸ್ಪತ್ರೆ ಈ ಮೂರೂ ಆಸ್ಪತ್ರೆಗಳು ಸೇರಿ ಒಟ್ಟಾರೆ ೩೧೦ ಹಾಸಿಗೆಗಳ ದೊಡ್ಡ ಆಸ್ಪತ್ರೆಯಾಗಿದ್ದು, ಪ್ರತಿನಿತ್ಯ ಇಲ್ಲಿಗೆ ಚಿಕಿತ್ಸೆಗೆಂದು ಸುಮಾರು ೧೧೦೦ ಮಂದಿ ಹೊರ ರೋಗಿಗಳು ಬಂದು ಹೋಗುತ್ತಾರೆ. ಆದರೆ ಸಿಬ್ಬಂದಿ, ಫಿಜಿಶಿಯನ್, ಮಕ್ಕಳ ತಜ್ಞರು, ಶಸ್ತ್ರ ಚಿಕಿತ್ಸಕರು, ಸಾಮಾನ್ಯ ಕರ್ತವ್ಯಾಧಿಕಾರಿಗಳು ಮತ್ತು ಐಸಿಯು ವೈದ್ಯಾಧಿಕಾರಿಗಳು ಸೇರಿದಂತೆ ಒಟ್ಟು ಸುಮಾರು ೧೦ಕ್ಕಿಂತಲೂ ಹೆಚ್ಚು ವೈದ್ಯರ ಹುದ್ದೆಗಳು ಖಾಲಿ ಇವೆ,

ವೈದ್ಯರು, ಸಿಬ್ಬಂದಿ ಕೊರತೆ

ಅಲ್ಲದೆ ೧೦ ಕ್ಕಿಂತ ಹೆಚ್ಚು ಶುಶ್ರೂಣಾಧಿಕಾರಿಗಳ ಹುದ್ದೆಗಳು ಮತ್ತು ಸುಮಾರು ೯೫ಕ್ಕಿಂತ ಹೆಚ್ಚಿನ ಡಿ ಗ್ರೂಪ್ ನೌಕರರ ಹುದ್ದೆಗಳು ಖಾಲಿಯಾಗಿರುವುದರಿಂದ ಚಿಕಿತ್ಸೆಗೆ ಬರುವ ಬಹುತೇಕ ರೋಗಿಗಳನ್ನು ಕೋಲಾರ ಮತ್ತು ಬೆಂಗಳೂರಿನ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಶಿಫಾರಸ್ಸು ಮಾಡಿ ಕಳುಹಿಸಲಾಗುತ್ತಿದೆ.

..............ಬಾಕ್ಚಿಕಿತ್ಸೆಗೆಂದು ಬರುವ ರೋಗಿಗಳು ಚೀಟಿಯನ್ನು ಮಾಡಿಸುವುದಕ್ಕೆ ಒಂದೆಡೆ, ಚಿಕಿತ್ಸೆ ಪಡೆಯುವುದಕ್ಕೆ ಮತ್ತೊಂದು ಕಟ್ಟಡಕ್ಕೆ ಅಲೆಯುವುದನ್ನು ತಪ್ಪಿಸಲು ಇತ್ತೀಚೆಗೆ ನಡೆದ ಸಭೆಯಲ್ಲಿ ಚರ್ಚಿಸಿ, ಓಪಿಡಿಯನ್ನು ನೂತನ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಅಲ್ಲಿ ಆಸನ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು.

- ಡಾ. ಸುರೇಶ್ ಕುಮಾರ್, ಜಿಲ್ಲಾ ಶಸ್ತ್ರ ಚಿಕಿತ್ಸಕ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಓರಿಯನ್‌ ಧರೆಗಿಳಿಯೋದು ಹೇಗೆ ?
ಗೃಹಲಕ್ಷ್ಮೀ ಹಣ ಸಾಲದ ಕಂತಿಗೆ ಕಡಿತ ಮಾಡಂಗಿಲ್ಲ : ಸಿಎಂ