ಹೊಸದುರ್ಗ: ಮುಂದಿನ ಒಂದುವರೆ ವರ್ಷದೊಳಗಾಗಿ ಪಟ್ಟಣದ ಎಲ್ಲಾ ಮನೆಗಳಿಗೂ ಯುಜಿಡಿ ಸಂಪರ್ಕ ಕಲ್ಪಿಸಿ ಸಂಪೂರ್ಣ ಸ್ಯಾನಿಟೈಸೆಷನ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಹಾಗೂ ಶಾಸಕ ಬಿ.ಜೆ.ಗೋವಿಂದಪ್ಪ ಹೇಳಿದರು.
ಹಿಂದಿನ ಸಿದ್ದರಾಮಯ್ಯ ಸರ್ಕಾರದಲ್ಲಿ 23 ಕೋಟಿ ರು. ಅನುದಾನದಲ್ಲಿ ಮೊದಲ ಹಂತದ ಒಳಚರಂಡಿ ವ್ಯವಸ್ಥೆಗೆ ಅನುದಾನ ತಂದಿದ್ದೆ. ಈಗ ಮತ್ತೆ 8 ಕೋಟಿ ರು. ಅನುದಾನ ತಂದಿದ್ದೇನೆ. ಒಟ್ಟು 33 ಕೋಟಿ ರು. ವೆಚ್ಚದಲ್ಲಿ ಅರ್ಧಕ್ಕೆ ನಿಂತಿದ್ದ ಒಳಚರಂಡಿ ಕಾಮಗಾರಿ ಮುಂದಿನ ಒಂದುವರೆ ವರ್ಷದೊಳಗೆ ಪೂರ್ಣಗೊಳಿಸಿ ಸಾರ್ವಜನಿಕರ ಬಳಕೆಗೆ ಅನುವು ಮಾಡಿಕೊಡಲಾಗುವುದು ಎಂದರು.
ಪಟ್ಟಣದಲ್ಲಿ ಶುದ್ಧ ಕುಡಿಯುವ ನೀರನ್ನು ಒದಗಿಸುವ ಉದ್ದೇಶದಿಂದ 30 ಕೋಟಿ ರು. ವೆಚ್ಚದಲ್ಲಿ ಜಲ್ ಜೀವನ್ ಯೋಜನೆ ಅಡಿ ಅನುದಾನ ತಂದಿದ್ದು, 9000 ನಲ್ಲಿಗಳನ್ನು ಎಲ್ಲಾ ವಾರ್ಡ್ಗಳಲ್ಲಿನ ಬಡವರಿಗಾಗಿ ಕೊಡಲಾಗುವುದು. ಅತಿ ಶೀಘ್ರದಲ್ಲಿ ಪಟ್ಟಣದ ಎಲ್ಲಾ ವಾರ್ಡ್ಗಳಲ್ಲಿ ಸುಸಜ್ಜಿತವಾದ ರಸ್ತೆ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.ಪುರಸಭಾ ಮುಖ್ಯಾಧಿಕಾರಿ ತಿಮ್ಮರಾಜು ಜಿ.ವಿ.ಮಾತನಾಡಿ, ಮ್ಯಾನ್ಯುಯಲ್ ಸ್ಕ್ಯಾವೆಂಜಿಗ್ ನಿಷೇಧ ಕಾಯ್ದೆಯಡಿ ಮಲ ಹೊರುವ ಪದ್ಧತಿ ಹಾಗೂ ಮನುಷ್ಯರನ್ನು ಬಳಸಿಕೊಂಡು ಶೌಚಾಲಯದ ಪಿಟ್ಗಳನ್ನು ಸ್ವಚ್ಛಗೊಳಿಸುವುದನ್ನು ನಿಷೇಧಿಸಿದೆ. ಇದನ್ನು ಉಲ್ಲಂಘಿಸಿ ಸ್ವಚ್ಛಗೊಳಿಸಿದ್ದಲ್ಲಿ ಶಿಕ್ಷಾರ್ಹ ಅಪರಾಧ ಎಂಬ ವಿಷಯವನ್ನು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಭಿತ್ತಿಪತ್ರ, ಗೋಡೆ ಬರಹ, ಹೋರ್ಡಿಂಗ್ ಅಳವಡಿಕೆ ಮಾಡುವ ಮೂಲಕ ಕ್ರಮವಹಿಸಲಾಗಿದೆ ಎಂದು ತಿಳಿಸಿದರು.