ಕನ್ನಡಪ್ರಭ ವಾರ್ತೆ ಹನೂರು ಮಲೆಮಹದೇಶ್ವರ ಬೆಟ್ಟದಲ್ಲಿ ಎರಡನೇ ಕಾರ್ತಿಕ ಸೋಮವಾರ ವಿಶೇಷ ಪೂಜಾ ಕಾರ್ಯಕ್ರಮಗಳು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಾಲೂರು ಬೃಹನ್ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮಿ ನೇತೃತ್ವದಲ್ಲಿ ಜರುಗಿತು.
ವಿಶೇಷ ಅಲಂಕಾರ: ಎರಡನೇ ಕಾರ್ತಿಕ ಸೋಮವಾರ ದೇಗುಲದಲ್ಲಿ ವಿವಿಧ ಬಗೆಯ ಹೂಗಳಿಂದ ಸಿಂಗರಿಸಿ ತಳಿರು ತೋರಣಗಳಿಂದ ಅಲಂಕಾರ ಮಾಡಲಾಗಿತ್ತು. ಎರಡನೇ ಕಾರ್ತಿಕ ಸೋಮವಾರ ವಿಶೇಷ ದಾಸೋಹ ವ್ಯವಸ್ಥೆಯನ್ನು ನಂಜನಗೂಡು ತಾಲೂಕಿನ ಆಲತ್ತೂರು ಗ್ರಾಮದ ನಂಜುಂಡಸ್ವಾಮಿ ಕುಟುಂಬ ವರ್ಗ ಮಧ್ಯಾಹ್ನದ ದಾಸೋಹ ವ್ಯವಸ್ಥೆಯನ್ನು ಮಾದಪ್ಪನ ಭಕ್ತಾದಿಗಳಿಗೆ ಕಲ್ಪಿಸಿದ್ದರು. ಇದೇ ವೇಳೆಯಲ್ಲಿ ಸಾಲೂರು ಬೃಹನ್ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ದಾಸೋಹ ಭವನದಲ್ಲಿ ಪೂಜೆ ಸಲ್ಲಿಸಿ ಭಕ್ತರಿಗೆ ದಾಸೋಹ ವ್ಯವಸ್ಥೆಗೆ ಚಾಲನೆ ನೀಡಿದರು. ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಇ. ರಘು ಸಹ ಭಕ್ತಾದಿಗಳಿಗೆ ದಾಸೋಹ ಬಡಿಸುವ ಮೂಲಕ ಭಕ್ತಾದಿಗಳಿಗೆ ಯಾವುದೇ ಲೋಪದೋಷಗಳು ಬರದಂತೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು. ದಾಸೋಹ ವ್ಯವಸ್ಥಾಪಕ ಸ್ವಾಮಿ ಹಾಗೂ ಸಿಬ್ಬಂದಿ ಮತ್ತು ಭಕ್ತರು ಉಪಸ್ಥಿತರಿದ್ದರು.
ಪೂಜಾ ಕಾರ್ಯಕ್ರಮಗಳು: ಮಲೆಮಹದೇಶ್ವರ ಬೆಟ್ಟಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಹಾಗೂ ಜಿಲ್ಲೆಯ ವಿವಿಧ ತಾಲೂಕುಗಳಿಂದ ಅಪಾರ ಸಂಖ್ಯೆಯ ಭಕ್ತಾದಿಗಳು 2ನೇ ಕಾರ್ತಿಕ ಸೋಮವಾರ ಜಮಾವಣೆಗೊಂಡಿದ್ದು ಹರಕೆ ಹೊತ್ತ ಭಕ್ತರಿಂದ ಚಿನ್ನದ ರಥೋತ್ಸವ ಹಾಗೂ ಬೆಳ್ಳಿ ರಥೋತ್ಸವ ಮತ್ತು ಹುಲಿವಾಹನ ಉತ್ಸವ ಮತ್ತು ಬಸವನ ಉತ್ಸವ ಹಾಗೂ ಪಂಜಿನ ಸೇವೆ, ಉರುಳು ಸೇವೆ ಸೇರಿದಂತೆ ಹಲವು ಉತ್ಸವ ಜರುಗಿದವು. ಭಕ್ತರು ಹರಕೆ ಕಾಣಿಕೆ ಸಲ್ಲಿಸಿ ಮಾದೇಶ್ವರನಿಗೆ ಉಘೇ ಉಘೇ ಎಂದು ಜೈಕಾರ ಕೂಗಿದರು.ಬಿಗಿ ಬಂದೋಬಸ್ತ್: ಮಲೆಮಾದೇಶ್ವರ ಬೆಟ್ಟದಲ್ಲಿ ದೇವಾಲಯಕ್ಕೆ ವಿಶೇಷ ದೀಪಾಲಂಕಾರ ಮಾಡಲಾಗಿತ್ತು. ಆಯಕಟ್ಟಿನ ಸ್ಥಳಗಳಲ್ಲಿ ವಿಶೇಷವಾಗಿ ಬರುವ ಭಕ್ತಾದಿಗಳಿಗೆ ಯಾವುದೇ ಲೋಪದೋಷಗಳು ಬರದಂತೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಸೂಕ್ತ ಬಂದೋಬಸ್ತ್ ಕಲ್ಪಿಸಲಾಗಿತ್ತು. 2ನೇ ಕಾರ್ತಿಕ ಸೋಮವಾರ ನಡೆಯುವ ಪೂಜಾ ಕಾರ್ಯಕ್ರಮಗಳಿಗೆ ಬರುವ ಭಕ್ತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ವಿಶೇಷ ದಾಸೋಹ ವ್ಯವಸ್ಥೆ ಹಾಗೂ ಸಕಲ ರೀತಿಯಲ್ಲಿಯೂ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯಗಳ ವ್ಯವಸ್ಥೆ, ಸ್ವಚ್ಛತೆಗೆ ಸಹ ಆದ್ಯತೆ ನೀಡಲಾಗಿದೆ. ಬರುವ ಭಕ್ತರಿಗೆ ಯಾವುದೇ ಲೋಪದೋಷಗಳು ಬರದಂತೆ ಕ್ರಮ ಕೈಗೊಳ್ಳುವ ನೆಟ್ಟಿನಲ್ಲಿ ಅಧಿಕಾರಿ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ.