ಕನ್ನಡಪ್ರಭ ವಾರ್ತೆ ಮೈಸೂರು
ಸಂಸ್ಕೃತಿ, ವಿವೇಕ ಮತ್ತು ಸಾಮಾಜಿಕ ಬದ್ಧತೆ ಇಲ್ಲದ ಪದವಿಗಳಿಗೆ ಅರ್ಥವಿಲ್ಲ, ಅದೆಲ್ಲ ಚರಂಡಿ ನೀರಿನಂತೆ ನಿಷ್ಪ್ರಯೋಜಕ ಎಂದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ವಿಶ್ರಾಂತ ನಿರ್ದೇಶಕ, ಪದ್ಮಶ್ರೀ ಡಾ.ಸಿ.ಎನ್. ಮಂಜುನಾಥ್ ತಿಳಿಸಿದರು.ಕ್ರಾಫರ್ಡ್ ಭವನದಲ್ಲಿ ಭಾನುವಾರ ನಡೆದ ಮೈಸೂರು ವಿಶ್ವವಿದ್ಯಾನಿಲಯದ 104ನೇ ಘಟಿಕೋತ್ಸವದಲ್ಲಿ ಘಟಿಕೋತ್ಸವ ಭಾಷಣ ಮಾಡಿದ ಅವರು, ನಮ್ಮ ಯುವಜನರು ನಮ್ಮ ರಾಜ್ಯ ಮತ್ತು ದೇಶವನ್ನು ಉನ್ನತ ಮಜಲಿಗೆ ಕೊಂಡೊಯ್ಯಬೇಕು. ಆದರೆ, ಅನೇಕ ಸುಶಿಕ್ಷಿತ ಜನರೇ ಇವತ್ತು ಕಾನೂನುಬಾಹಿರವಾದ ಸಂಗತಿಗಳಲ್ಲಿ, ಅಪರಾಧಗಳಲ್ಲಿ, ದ್ವೇಷ ಮುಂತಾದ ವಿನಾಶಕಾರಿಯಾದ ವಿಚಾರಗಳಲ್ಲಿ ತೊಡಗಿರುವುದು ಆತಂಕಕಾರಿಯಾಗಿದೆ. ನಮ್ಮ ಬುದ್ಧಿವಂತಿಕೆಯನ್ನು ಹೆಚ್ಚು ರಚನಾತ್ಮಕ ಉದ್ದೇಶಗಳಿಗೆ ಬಳಸಬೇಕು ಎಂದರು.
ವಿದ್ಯಾರ್ಥಿಗಳು ಕನಸು ನನಸಾಗಬೇಕಾದರೆ ಹಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಆತವಿಶ್ವಾಸವಿಲ್ಲದಿದ್ದರೆ ಅಂಥವರಿಗೆ ಯಶಸ್ಸು ಸಾಧ್ಯವಾಗುವುದಿಲ್ಲ. ಪ್ರತಿಯೊಬ್ಬರ ಜೀವನದಲ್ಲಿ ಸವಾಲುಗಳಿರುತ್ತವೆ. ಸಮಸ್ಯೆಗಳಿರುತ್ತವೆ. ಈ ಸಮಸ್ಯೆಗಳು ಎದುರಾಗುವುದು ನಿಮ್ಮನ್ನು ನಾಶಗೊಳಿಸುವುದಕ್ಕಲ್ಲ. ಬದಲಿಗೆ ನಿಮ್ಮ ಅಂತಃಶಕ್ತಿಯನ್ನು ಪರೀಕ್ಷಿಸುವುದಕ್ಕೆ ಎಂದು ಅವರು ಹೇಳಿದರು.ಅಂಕಗಳು ಹಾಗೂ ಶೈಕ್ಷಣಿಕ ಶ್ರೇಷ್ಠತೆಯೇ ನಮ್ಮ ಯಶಸ್ವಿ ಬದುಕಿನ ಮಾನದಂಡವಲ್ಲ. ಕಡಿಮೆ ಅಂಕಗಳನ್ನು ತೆಗೆದುಕೊಂಡವರು ಬದ್ಧತೆ, ಶ್ರಮ ಹಾಗೂ ಶ್ರದ್ಧೆಯಿಂದ ಸಾಧಕರಾಗಬಹುದು. ಸ್ಥಾನಮಾನಕ್ಕಿಂತ ಶ್ರದ್ಧೆ ಬಹಳ ಮುಖ್ಯ. ಹಿರಿತನಕ್ಕಿಂತ ಪ್ರಾಮಾಣಿಕತೆ ಮುಖ್ಯ. ಬೆಲೆ ಬಾಳುವ ವಸ್ತುಗಳಿಗಿಂತ ಮೌಲ್ಯಗಳು ಮುಖ್ಯ. ಅಂಕಗಳಿಗಿಂತ ಮನಸ್ಸನ್ನು ಅಂಕೆಯಲ್ಲಿಡುವುದು ಮುಖ್ಯ ಎಂದು ಅವರು ಸಲಹೆ ನೀಡಿದರು.
ಸೋಲೆಂಬುದು ಕಲಿಕೆಯ ಮೊದಲನೆ ಹೆಜ್ಜೆ. ಯಶಸ್ಸು ಏಕ್ ದಂ ಲಭಿಸಲಾರದು. ಯಾವುದೇ ಪದವೀಧರ ಕನಸೆಂದರೆ ತಮ್ಮ ಭವಿಷ್ಯವನ್ನು ನೇರ್ಪುಗೊಳಿಸಲು ಒಂದು ಉದ್ಯೋಗವನ್ನು ಹಿಡಿಯುವುದು. ಆದರೆ, ಇದು ಸ್ಪರ್ಧಾತಕ ಜಗತ್ತಾಗಿರುವುದರಿಂದ ಅವಕಾಶಗಳಿಗೆ ಮಿತಿ ಇದೆ. ಮನಸ್ಸನ್ನು ಮುಕ್ತವಾಗಿಟ್ಟುಕೊಂಡು ಯಾವುದೇ ಉದ್ಯೋಗವಾದರೂ ಸರಿ ಎಂಬ ಮನಸ್ಥಿತಿ ನಿಮ್ಮದಾಗಿರಲಿ. ಸರ್ಕಾರದ ಕಾರ್ಯಕ್ರಮಗಳನ್ನು ಬಳಸಿಕೊಂಡು ಕೌಶಲ್ಯ ತರಬೇತಿ ಪಡೆಯುವುದು ಅತ್ಯವಶ್ಯ ಎಂದು ಅವರು ಹೇಳಿದರು.ಒತ್ತಡ ಅಂದರೆ ನಿರೀಕ್ಷೆ ಮತ್ತು ಕ್ರಿಯೆ ಇವೆರಡರ ನಡುವಿನ ವ್ಯತ್ಯಾಸ ಮಾತ್ರ. ನಿಮ್ಮ ಗುರಿ ಸಾಧನೆಯ ಹಾದಿಯಲ್ಲಿ ಒಳ ದಾರಿಯನ್ನು ಹಿಡಿಯಬೇಡಿ. ನಿಮ್ಮ ಗುರಿ ಸಾಧನೆಯ ಪಯಣದಲ್ಲಿ ಮುಳ್ಳುಗಳು ಎದುರಾಗಬಹುದು. ಆದರೆ, ಶ್ರಮವನ್ನು ತ್ಯಜಿಸಬಾರದು. ನ್ಯಾಯ ಮಾರ್ಗವನ್ನು ಬಿಡದೆ ಬದುಕಿನ ಮೌಲ್ಯಗಳಿಗೆ ಗೌರವ ಸಲ್ಲಿಸಬೇಕು. ಇತರರೊಡನೆ ನಿಮ್ಮನ್ನು ಹೋಲಿಕೆ ಮಾಡಿಕೊಳ್ಳಬೇಡಿ. ನಿಮ್ಮ ಜೊತೆ ನಿಮ್ಮನ್ನೇ ಹೋಲಿಕೆ ಮಾಡಿಕೊಂಡು ಮುಂದೆ ಸಾಗಬೇಕು. ನಿಮಗೆ ಅತ್ಯುತ್ತಮ ಪ್ರೇರಣೆ ಅಂದರೆ ನೀವೇ ಎಂದು ಅವರು ಕಿವಿಮಾತು ಹೇಳಿದರು.
ಡಿಜಿಟಲ್ ತಂತ್ರಜ್ಞಾನ ಹಾಗೂ ಸಾಮಾಜಿಕ ಮಾಧ್ಯಮದ ಉನ್ನತೀಕರಣ ಜ್ಞಾನ ಮತ್ತು ಚಿಂತನೆಗಳ ಪ್ರಸರಣದಲ್ಲಿ ಕ್ರಾಂತಿಯನ್ನೇ ಉಂಟು ಮಾಡಿದೆ. ಇದು ಇಬ್ಬಾಯಿ ಖಡ್ಗವಂಬುದೂ ನಿಜವೆ. ಒಂದು ಸ್ಮಾರ್ಟ್ಫೋನ್ ಇದ್ದರೆ ಇಡೀ ಜಗತ್ತೇ ನಿಮ್ಮ ಕೈಯಲ್ಲಿದ್ದಂತೆ. ಇದನ್ನು ಸಮರ್ಪಕವಾಗಿ ಬಳಸಿಕೊಳ್ಳಿ ಎಂದರು.ರಾಜ್ಯಪಾಲ ಥಾವರ್ ಚಂದ್ ಗೆಹ್ಲೋತ್, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್, ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್, ಕುಲಸಚಿವೆ ವಿ.ಆರ್. ಶೈಲಜ, ಪರೀಕ್ಷಾಂಗ ಕುಲಸಚಿವ ಡಾ.ಕೆ.ಎಂ. ಮಹದೇವನ್ ಇದ್ದರು.
ವಿವಿ ಸಂಶೋಧನೆಗೆ ಅನುದಾನ ಕೊರತೆ ನೀಗಿಸಿಭಾರತದ ಸರಿ ಸುಮಾರು ಎಲ್ಲಾ ವಿಶ್ವವಿದ್ಯಾನಿಲಯಗಳಲ್ಲಿ ಅನುದಾನದ ಕೊರತೆಯಿಂದಾಗಿ ಸಂಶೋಧನೆ ಹಿಂದೆ ಸರಿದಿದೆ. ಸಂಶೋಧನಾ ಚಟುವಟಿಕೆಗಳಿಗೆ ಸಾಕಷ್ಟು ಸಂಪನ್ಮೂಲವನ್ನು ಒದಗಿಸಬೇಕಾದ್ದು ರಾಜ್ಯ ಸರ್ಕಾರಗಳ ಹಾಗೂ ಯುಜಿಸಿಯ ಕರ್ತವ್ಯವಾಗಿದೆ ಎಂದು ಎಂದು ಜಯದೇವ ಆಸ್ಪತ್ರೆಯ ವಿಶ್ರಾಂತ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ತಿಳಿಸಿದರು.
ಅಮೇರಿಕಾ, ಆಸ್ಟ್ರೇಲಿಯಾ, ಯುನೈಟೆಡ್ ಕಿಂಗ್ ಡಮ್, ದಕ್ಷಿಣ ಕೊರಿಯಾ ಮುಂತಾದ ದೇಶಗಳಿಗೆ ಹೋಲಿಕೆ ಮಾಡಿದರೆ ನಮ್ಮ ದೇಶದಲ್ಲಿ ಉನ್ನತ ಶಿಕ್ಷಣಕ್ಕೆ ನೀಡುವ ಅನುದಾನ ಕನಿಷ್ಠ ಎನ್ನಬಹುದು. ಆ ದೇಶಗಳಲ್ಲಿ ಜಿಡಿಪಿಯ ಶೇ.3.5 ರಷ್ಟು ಅನುದಾನವನ್ನು ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಕಾರ್ಯಗಳಿಗೆ ಮೀಸಲಾಗಿಡುತ್ತಾರೆ. ನಮ್ಮಲ್ಲಿ ನೀಡುವುದು ಕೇವಲ ಶೇ.0.4 ಮಾತ್ರ ಎಂದು ಅವರು ವಿಷಾದಿಸಿದರು.ಉನ್ನತ ಶಿಕ್ಷಣದಲ್ಲಿ ಸಂಶೋಧನೆಯಿಲ್ಲದೆ ಪ್ರಗತಿ ಇಲ್ಲ. ನಾವೀನ್ಯತೆ ಇಲ್ಲ ಮತ್ತು ಹೊಸ ಚಿಂತನೆಗಳು ಇಲ್ಲ. ಸಂಶೋಧನೆಯೇ ಹೊಸ ಹೊಸ ಆವಿಷ್ಕಾರಗಳ ಜೀವಾಳ. ಅದು ಇಲ್ಲದೇ ಕಲಿಕಾ ಕ್ರಿಯೆಯೇ ಸ್ಥಗಿತವಾಗುತ್ತದೆ. ಆದ್ದರಿಂದ ಸಂಬಂಧಿಸಿದ ಸಂಸ್ಥೆಗಳು ಅನುದಾನ ನೀಡಬೇಕು. ಜೊತೆಗೆ ವಿಶ್ವವಿದ್ಯಾನಿಲಯದ ಅಧಿಕಾರಿಗಳು, ಬೋಧಕರು, ಸಿಂಡಿಕೇಟ್ ಸದಸ್ಯರು ಪರಸ್ಪರ ಚರ್ಚೆಗಳನ್ನು ನಡೆಸಿ ವಿಶ್ವವಿದ್ಯಾನಿಲಯದ ಅಭಿವೃದ್ಧಿಗೆ ರೂಪುರೇಷೆಗಳನ್ನು ರೂಪಿಸುವ ಜವಾಬ್ದಾರಿ ನಿಭಾಯಿಸಬೇಕು ಎಂದು ಅವರು ಹೇಳಿದರು.