ಒಳ ಕ್ರೀಡಾಂಗಣ ಉದ್ಘಾಟಿಸಿದ ದೊಡ್ಡನಗೌಡ ಪಾಟೀಲ
ಕನ್ನಡಪ್ರಭ ವಾರ್ತೆ ಹನುಮಸಾಗರಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕಾಗಿ ಯುವ ಜನತೆ ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.
ಗ್ರಾಮದಲ್ಲಿ ಜಂಪರೋಪ್ ಸಂಸ್ಥೆಯ ಒಳ ಕ್ರೀಡಾಂಗಣ ಉದ್ಘಾಟಿಸಿ ಮಾತನಾಡಿದರು. ಗ್ರಾಮದ ಯುವಕರು ಒಳಾಂಗಣದ ಸದುಪಯೋಗ ಪಡೆದುಕೊಳ್ಳಬೇಕು. ವಿದ್ಯಾರ್ಥಿಗಳು ವ್ಯಾಸಂಗದ ಅವಧಿಯಲ್ಲಿ ಪಠ್ಯ ಚಟುವಟಿಕೆಗಳಿಗೆ ಹೆಚ್ಚಿನ ಗಮನ ನೀಡುವುದರೊಂದಿಗೆ ಪಠ್ಯೇತರ ಚಟುವಟಿಕೆಗಳಿಗೆ ಪ್ರಾಧಾನ್ಯತೆ ನೀಡಬೇಕು. ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದರಿಂದ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯ ಹೆಚ್ಚುತ್ತದೆ. ವಿದ್ಯಾರ್ಥಿಗಳು ನಿರಂತರ ಅಭ್ಯಾಸ ಮಾಡಿ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಬೇಕು. ಸುಮಾರು ₹1.55 ಕೋಟಿ ವೆಚ್ಚದಲ್ಲಿ ಲ್ಯಾಂಡ್ ಆರ್ಮಿ ಅವರು ಒಳಾಂಗಣ ಕಟ್ಟಡ ನಿರ್ಮಾಣ ಮಾಡಿದ್ದಾರೆ. ಒಳಾಂಗಣ ನಿರ್ಮಾಣಕ್ಕೆ ಶ್ರಮಿಸಿದ ರಾಜ್ಯ ಜಂಪ್ ರೋಪ್ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ಹೇಳಿದರು.ಇದೇ ವೇಳೆ ಸುಮಾರು ₹50 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಪದವಿ ಪೂರ್ವ ಕಾಲೇಜಿನ ಶಾಲಾ ಕೊಠಡಿಗಳು ಹಾಗೂ ಮೂರನೇ ವಾರ್ಡ್ನಲ್ಲಿ ನರೇಗಾ ಯೋಜನೆಯಡಿ ನಿರ್ಮಾಣ ಮಾಡಿದ 3ನೇ ಅಂಗನವಾಡಿ ಕೇಂದ್ರವನ್ನು ಶಾಸಕರು ಉದ್ಘಾಟಿಸಿದರು.
ಕಾಡಾ ಅಧ್ಯಕ್ಷ ಹಸನಸಾಬ ದೋಟಿಹಾಳ, ಪಿಡಿಒ ದೇವೇಂದ್ರ ಕಮತರ, ಗ್ರಾಪಂ ದ್ವಿತೀಯ ದರ್ಜೆಯ ಲೆಕ್ಕಸಹಾಯಕ ವೀರನಗೌಡ ಪಾಟೀಲ, ಗ್ರಾಪಂ ಅಧ್ಯಕ್ಷ ರುದ್ರಗೌಡ ಗೌಡಪ್ಪನವರ, ಉಪಾಧ್ಯಕ್ಷೆ ಹನುಮವ್ವ ಕಂದಗಲ, ಸದಸ್ಯರಾದ ಶಂಕ್ರಮ್ಮ ನಿರ್ವಾಣಿ, ಮಂಜುನಾಥ ಹುಲ್ಲೂರು, ಶಿವಪ್ಪ ಕಂಪ್ಲಿ, ಶ್ರೀಶೈಲ ಮೋಟಗಿ, ಮಹಮ್ಮದ ರಿಯಾಜ ಖಾಜಿ, ಬಸವರಾಜ ಹಕ್ಕಿ, ಮರೇಗೌಡ ಬೋದೂರ, ಬಿಜೆಪಿ ಮಾಜಿ ತಾಲೂಕಾಧ್ಯಕ್ಷ ಬಸವರಾಜ ಹಳ್ಳೂರ, ಮಲ್ಲಣ್ಣ ಪಲ್ಲೇದ, ಬಸವರಾಜ ಬಾಚಲಾಪೂರ, ಮಂಜುನಾಥ ಗುಳೇದಗುಡ್ಡ, ವಿಶ್ವನಾಥ ನಾಗೂರ, ಹನುಮಂತ ಬಿಂಗಿ, ಸಕ್ರಪ್ಪ ಬಿಂಗಿ, ಜಂಪರೋಪ್ ರಾಷ್ಟ್ರೀಯ ಖಜಾಂಚಿ ರೇಣುಕಾ ಪುರದ, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಬ್ದುಲರಜಾಕ ಟೇಲರ, ಮಂಜುನಾಥ ಗೊಂಡಬಾಳ, ಇಕಬಾಲ್ ಡಲಾಯತ್, ಈರಣ್ಣ ಬದಾಮಿ ಇತರರು ಇದ್ದರು.