- ಎನ್.ಜಯದೇವ ನಾಯ್ಕ ಸನ್ಮಾನ ಕಾರ್ಯಕ್ರಮದಲ್ಲಿ ನ್ಯಾ. ರಾಜೇಶ್ವರಿ ಎನ್. ಹೆಗಡೆ
- ರಾಜ್ಯ ತಾಂಡಾ ಅಭಿವೃದ್ಧಿ ನಿಗಮ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಹಿರಿಯ ವಕೀಲ - - -ಕನ್ನಡಪ್ರಭ ವಾರ್ತೆ, ದಾವಣಗೆರೆ
ಸಾರ್ವಜನಿಕ ಜೀವನದಲ್ಲಿ ಸ್ಥಾನಮಾನಗಳು ಸಮಾಜ ಸೇವೆಗೆ ದೊರೆತ ಅವಕಾಶ ಎಂದು ಭಾವಿಸಿ, ಕರ್ತವ್ಯ ನಿರ್ವಹಿಸಬೇಕು. ಆಗ ಮಾತ್ರ ದೇಶ ಅಭಿವೃದ್ಧಿಯಾಗಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ರಾಜೇಶ್ವರಿ ಎನ್. ಹೆಗಡೆ ಅಭಿಪ್ರಾಯಪಟ್ಟರು.ಜಿಲ್ಲಾ ವಕೀಲರ ಸಂಘ, ದಾವಣಗೆರೆ ವತಿಯಿಂದ ರಾಜ್ಯ ತಾಂಡ ಅಭಿವೃದ್ಧಿ ನಿಗಮ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಹಿರಿಯ ವಕೀಲ ಎನ್.ಜಯದೇವ ನಾಯ್ಕ ಅವರನ್ನು ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ಅವರು ಮಾತನಾಡಿದರು.
ಯಾವುದೇ ವ್ಯಕ್ತಿ ಅಧಿಕಾರ ದೊರೆತಾಗ ಹೆಚ್ಚು ವಿನಯವಂತನಾಗಬೇಕು. ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸುವ ಮೂಲಕ ಜನರ ಕಷ್ಟಗಳಿಗೆ ಸ್ಪಂದಿಸುವ ಹೃದಯವಂತಿಕೆ ಹೊಂದಿರಬೇಕು. ಆಗ ಮಾತ್ರ ಸ್ಥಾನಮಾನಗಳ ಜತೆ ವ್ಯಕ್ತಿಯ ವ್ಯಕ್ತಿತ್ವ ಬೆಳಗಲು ಸಾಧ್ಯ. ಸಾರ್ವಜನಿಕ ರಂಗದಲ್ಲಿ ನಿಸ್ವಾರ್ಥತೆಯಿಂದ ಪ್ರಾಮಾಣಿಕವಾಗಿ ಕೆಲಸ ಮಾಡುವವರ ಸಂಖ್ಯೆ ಕಡಿಮೆ ಆಗುತ್ತಿದೆ. ಈ ನಿಟ್ಟಿನಲ್ಲಿ ಇಂದು ಯುವಜನತೆಗೆ ಆದರ್ಶಗಳನ್ನು ಹೇಳಿಕೊಡುವ, ಆದರ್ಶವಾದ ವ್ಯಕ್ತಿತ್ವದ ಅವಶ್ಯಕತೆ ಇದೆ ಎಂದರು.ಅಭಿನಂದನೆ ಸ್ವೀಕರಿಸಿದ ಎನ್.ಜಯದೇವ ನಾಯ್ಕ ಮಾತನಾಡಿ, ರಾಜಕಾರಣದಲ್ಲಿ ಪ್ರಾಮಾಣಿಕತೆ, ಬದ್ಧತೆ ಮತ್ತು ತತ್ವ ಸಿದ್ಧಾಂತಗಳು ಕಣ್ಮರೆ ಆಗುತ್ತಿವೆ. ಜನತೆ ರಾಜಕೀಯದಿಂದ ವಿಮುಖರಾಗುತ್ತಿದ್ದಾರೆ. ತಮಗೆ ದೊರೆತಿರುವ ಸ್ಥಾನಮಾನವನ್ನು ಶೋಷಿತ ಅಭಿವೃದ್ಧಿ ಮತ್ತು ಸಾರ್ವಜನಿಕರ ಒಳಿತಿಗಾಗಿ ಮೀಸಲಿಡುವುದಾಗಿ ಹೇಳಿದ ಅವರು, ಜಿಲ್ಲಾ ವಕೀಲರ ಸಂಘವು ನೀಡಿದ ಸನ್ಮಾನ ನನ್ನ ಜೀವನದ ಅವಿಸ್ಮರಣೀಯ ಕ್ಷಣ ಎಂದು ಬಣ್ಣಿಸಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ವಕೀಲರ ಸಂಘ ಅಧ್ಯಕ್ಷ ಎಲ್.ಎಚ್. ಅರುಣ್ಕುಮಾರ್ ಮಾತನಾಡಿ, ಜೂನ್ 28, 1972, ಡಾ. ಬಿ.ಆರ್. ಅಂಬೇಡ್ಕರ್ ವಕೀಲರಾದ ದಿನವಾಗಿದೆ. ಅವರ ಅಧ್ಯಕ್ಷತೆಯಲ್ಲಿ ರಚನೆಯಾದ ಸಂವಿಧಾನದ ಅಡಿಯಲ್ಲಿ ಎಲ್ಲ ಅಂಗಗಳು ಕಾರ್ಯನಿರ್ವಹಿಸುತ್ತಿವೆ. ಸಂವಿಧಾನ ಅಡಿಯಲ್ಲಿ ಸಾಮಾನ್ಯರೂ ದೇಶದ ಉನ್ನತ ಹುದ್ದೆಗಳನ್ನು ಅಲಂಕರಿಸುವ ಅವಕಾಶಗಳು ದೊರೆತಿವೆ. ಜಯದೇವ ನಾಯ್ಕರು ಸಂವಿಧಾನದ ಆದರ್ಶಗಳಿಗೆ ಅನುಗುಣವಾಗಿ ಸಾಮಾಜಿಕ ನ್ಯಾಯವನ್ನು ದೊರಕಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುವ ಅಚಲವಾದ ನಂಚಿಕೆ ಇದೆ ಎಂದು ಅಭಿನಂದಿಸಿದರು.ಸಮಾರಂಭದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಮಹಾವೀರ ಮ. ಕರೆಣ್ಣವರ್, ಹಿರಿಯ ವಕೀಲರಾದ ಎಚ್.ಎನ್. ರಾಜಶೇಖರಪ್ಪ, ರಾಮಚಂದ್ರ ಕಲಾಲ್, ಡಿ.ಪಿ. ಬಸವರಾಜ್, ಎನ್.ಎಂ. ಆಂಜನೇಯ, ಮಲ್ಲೇಶ್ ನಾಯ್ಕ, ಟಿ.ಎಚ್. ಸಿದ್ದಪ್ಪ ಲೋಕಿಕೆರೆ, ತಿಪ್ಪೇಶ್ ರಾಥೋಡ್ ಮಾತನಾಡಿದರು.
ಈ ವೇಳೆ ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಎಸ್.ಬಸವರಾಜ್, ಉಪಾಧ್ಯಕ್ಷ ಜಿ.ಕೆ.ಬಸವರಾಜ್ ಗೋಪನಾಳು, ಕಾರ್ಯಕಾರಿ ಸಮಿತಿ ಸದಸ್ಯರಾದ ಕೆ.ಎಂ. ನೀಲಕಂಠಯ್ಯ, ಟಿ.ಎಚ್. ಮಧುಸೂಧನ್, ವಾಗೀಶ್ ಕಟ್ಟಿಗಿಹಳ್ಳಿ ಮಠ, ಎಂ.ಚೌಡಪ್ಪ, ಎಲ್.ನಾಗರಾಜ್ ಇತರರು ಇದ್ದರು.- - - -28ಕೆಡಿವಿಜಿ34ಃ:
ದಾವಣಗೆರೆಯಲ್ಲಿ ಜಿಲ್ಲಾ ವಕೀಲರ ಸಂಘದಿಂದ ಹಿರಿಯ ವಕೀಲ ಎನ್.ಜಯದೇವ ನಾಯ್ಕ ಅವರನ್ನು ಸನ್ಮಾನಿಸಲಾಯಿತು.