ಮಂಜುನಾಥ ಕೆ.ಎಂ
ಕನ್ನಡಪ್ರಭ ವಾರ್ತೆ ಮಂಡ್ಯಆಧುನಿಕತೆ ವಿಧಾನಗಳನ್ನು ಬಳಸಿಕೊಂಡು ಪುಸ್ತಕ ಪ್ರಚಾರ ಮಾಡಬೇಕು. ಪ್ರಚಾರದಿಂದ ದೂರ ಉಳಿದರೆ ಒಳ್ಳೆಯ ಪುಸ್ತಕಗಳು ಮೂಲೆಗುಂಪಾಗುತ್ತವೆ ಎಂದು ಖ್ಯಾತ ಲೇಖಕ ವಸುಧೇಂದ್ರ ಹೇಳಿದರು.
ಕನ್ನಡ ಸಾಹಿತ್ಯ ಸಮ್ಮೇಳನದ ಕರ್ನಾಟಕ ಚಕ್ರವರ್ತಿ ಚಿಕ್ಕದೇವರಾಜ ಒಡೆಯರ್ ವೇದಿಕೆಯಲ್ಲಿ ಶುಕ್ರವಾರ "ಕನ್ನಡ ಪುಸ್ತಕೋದ್ಯಮದ ಸವಾಲುಗಳು ಮತ್ತು ಪರಿಹಾರಗಳು "ಕುರಿತ ಗೋಷ್ಠಿಯಲ್ಲಿ ಭವಿಷ್ಯದ ಕನ್ನಡ ಪುಸ್ತಕೋದ್ಯಮ ಕುರಿತು ಮಾತನಾಡಿದರು.ಕನ್ನಡದಲ್ಲಿ ವರ್ಷಕ್ಕೆ ಸುಮಾರು ಹತ್ತು ಸಾವಿರ ಪುಸ್ತಕಗಳು ಪ್ರಕಟವಾಗುತ್ತವೆ. ಹೀಗಿರುವಾಗ ಒಳ್ಳೆಯ ಪುಸ್ತಕ ಓದುಗನಿಗೆ ಮುಟ್ಟಿಸಲು ಹೇಗೆ ಸಾಧ್ಯ? ಅನಿವಾರ್ಯವಾಗಿ ಪುಸ್ತಕ ಪ್ರಚಾರದ ವಿನೂತನ ಮಾರ್ಗ ಕಂಡುಕೊಳ್ಳಬೇಕಾಗಿದೆ. ಪುಸ್ತಕ ಕುರಿತು ವಿನೂತನವಾಗಿ ಪ್ರಚಾರ ಮಾಡಿ ಓದುಗರನ್ನು ಮುಟ್ಟಬೇಕಾಗಿದೆ. ಇದು ಪ್ರಕಾಶಕರಿಗೆ ದೊಡ್ಡ ಸವಾಲಾಗಿದೆ. ಅನೇಕ ಸವಾಲುಗಳ ನಡುವೆಯೂ ಪ್ರಕಾಶಕರು ಪುಸ್ತಕೋದ್ಯಮ ಉಳಿವಿಗೆ ನಿರಂತರವಾಗಿ ಪ್ರಯತ್ನಿಸುತ್ತಲೇ ಇದ್ದಾರೆ ಎಂದರು.
ಇ-ಬುಕ್ಸ್ ಬಂದ ಬಳಿಕ ಓದುಗರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಕುಸಿತ ಕಾಣುತ್ತದೆ ಎಂದೇ ನಂಬಲಾಗಿತ್ತು. ಆದರೆ, ಇಡೀ ವಿಶ್ವದಲ್ಲಿ ಇ-ಬುಕ್ಸ್ ಬಳಕೆ ಶೇ.10 ರಷ್ಟು ಸಹ ದಾಟಿಲ್ಲ. ಭಾರತದಲ್ಲೂ ಇ-ಬುಕ್ಸ್ನಿಂದ ಮುದ್ರಣ ಪುಸ್ತಕೋದ್ಯಮಕ್ಕೆ ದೊಡ್ಡ ಸಮಸ್ಯೆಯೇನೂ ಆಗಿಲ್ಲ. ಕೃತಕ ಬುದ್ಧಿಮತ್ತೆ ಪುಸ್ತಕೋದ್ಯಮಕ್ಕೆ ಅನೇಕ ಸವಲತ್ತುಗಳನ್ನು ಕೊಟ್ಟಿದೆ. ಆದರೆ, ಅದನ್ನು ಎಷ್ಟು ಬೇಕೋ ಅಷ್ಟನ್ನೇ ಬಳಸಿಕೊಳ್ಳಬೇಕು. ಅಡುಗೆ ಮಾಡುವಾಗ ಬೆಂಕಿಯಿಂದ ಕೈ ಸುಡದಂತೆ ನೋಡಿಕೊಂಡಂತೆಯೇ ಕೃತಕ ಬುದ್ಧಿಮತ್ತೆ ಬಳಕೆ ವೇಳೆ ಎಚ್ಚರದಿಂದಿರಬೇಕು ಎಂದು ತಿಳಿಸಿದರು.ಇದೇ ವೇಳೆ ಪುಸ್ತಕ ಖರೀದಿಗೆ ಸರ್ಕಾರದ ನಿರ್ಲಕ್ಷ್ಯವನ್ನು ಪ್ರಸ್ತಾಪಿಸಿದ ಲೇಖಕ ವಸುಧೇಂದ್ರ ಅವರು, ಪುಸ್ತಕಗಳು ರಾಜಕಾರಣಿಗಳಿಗೆ ಮತ ಬ್ಯಾಂಕ್ ಅಲ್ಲ. ಹೀಗಾಗಿಯೇ ಈ ಉದ್ಯಮದ ಬಗೆಗೆ ರಾಜಕೀಯ ನಾಯಕರಿಗೆ ಆಸಕ್ತಿಗಳಿಲ್ಲ ಎಂದರು.
ಪುಸ್ತಕೋದ್ಯಮದ ಮೇಲೆ ಹೆಚ್ಚುತ್ತಿರುವ ಖರ್ಚಿನ ಹೊರೆ, ದುಬಾರಿಯಾದ ಸಾಫ್ಟ್ವೇರ್, ಕಚ್ಚಾ ಸಾಮಾಗ್ರಿಗಳ ಬೆಲೆ ಏರಿಕೆ ಹೀಗೆ ನಾನಾ ಕಾರಣಗಳು ಪುಸ್ತಕೋದ್ಯಮವನ್ನು ಬಾಧಿಸುತ್ತಿವೆ. ಇವುಗಳ ನಡುವೆ ನಾನಾ ಸಂಸ್ಥೆಗಳು ಆಯೋಜಿಸುತ್ತಿರುವ ಪುಸ್ತಕಹಬ್ಬಗಳು, ಪುಸ್ತಕ ಮೇಳಗಳು ಧನಾತ್ಮಕ ಫಲಿತಾಂಶ ನೀಡಿವೆ. ಪುಸ್ತಕದ ಡಿಜಟಲೀಕರಣ ಮುಂದಿನ ತಲೆಮಾರಿಗೆ ಸಹಾಯಕವಾಗುತ್ತದೆ ಎಂದು ವಸುಧಂದ್ರ ಅಭಿಪ್ರಾಯಪಟ್ಟರು.ಕನ್ನಡ ಪುಸ್ತಕಗಳು ಹಾಗೂ ಓದುಗ ಬಳಗ ಕುರಿತು ಮಾತನಾಡಿದ ಲೇಖಕಿ ಅಕ್ಷತಾ ಹುಂಚದಕಟ್ಟೆ, ರಾಜ್ಯ ಸರ್ಕಾರ ಓದುವ ಸಂಸ್ಕೃತಿಯನ್ನು ಮೂಲ ಅವಶ್ಯಕತೆ ಎಂದು ಪರಿಗಣಿಸಬೇಕು. ಪುಸ್ತಕ ಸಂಸ್ಕೃತಿ ಬೆಳೆಯಲು ಸರ್ಕಾರ ಗಮನ ಹರಿಸಬೇಕು. ಈ ಹಿಂದಿನಿಂದಲೂ ಪುಸ್ತಕ ಓದುಗರ ಸಂಖ್ಯೆ ಹೆಚ್ಚಿಸುವ ಕಾಳಜಿಗಳ ಕಾರ್ಯಗಳು ನಡೆಯುತ್ತಲೇ ಬಂದಿವೆ. ಅರಿವಿನ ಪ್ರಜ್ಞೆ ವಿಸ್ತರಿಸುವ ಪುಸ್ತಕಗಳು ಕನ್ನಡ ಭಾಷೆಯನ್ನೂ ಉಳಿಸುವ ಕೆಲಸ ಮಾಡುತ್ತಿವೆ. ಅರಿವಿನ ಪ್ರಜ್ಞೆ ವಿಸ್ತರಿಸುವ ಕೆಲಸದಲ್ಲಿ ಲೇಖಕರು, ಶಿಕ್ಷಣ ಸಂಸ್ಥೆಗಳು, ಪ್ರಕಾಶಕರು ಹಾಗೂ ಸರ್ಕಾರಗಳ ಪಾತ್ರವೂ ದೊಡ್ಡದಿದೆ ಎಂದು ತಿಳಿಸಿದರು.
ಪ್ರಕಾಶಕರು ಹಾಗೂ ಮುದ್ರಕರು ಎದುರಿಸುತ್ತಿರುವ ಸವಾಲುಗಳು ಮತ್ತು ಪರಿಹಾರಗಳು ಕುರಿತು ಪ್ರಕಾಶಕ ಅಶೋಕ್ ಕುಮಾರ್ ಮಾತನಾಡಿದರು.ಅದೆಷ್ಟೇ ತಂತ್ರಜ್ಞಾನ ಬಂದರೂ ಮುದ್ರಣ ಉದ್ಯಮ ಬೇರೆ ಬೇರೆ ಆಯಾಮಗಳಲ್ಲಿ ಬೆಳವಣಿಗೆ ಕಂಡುಕೊಳ್ಳುತ್ತಿದೆ. ಆದರೆ, ಕಾಗದದ ಬೆಲೆ ತೀವ್ರ ಏರಿಕೆ ಕಂಡುಕೊಂಡಿದ್ದರಿಂದ ಪ್ರಕಾಶಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆಲ ಪ್ರಕಾಶಕರು ತಮ್ಮದೇ ಆದ ನೆಟ್ವರ್ಕ್ ಮೂಲಕ ಪುಸ್ತಕ ಮಾರಿಕೊಳ್ಳುತ್ತಾರೆ. ಇದು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಮುದ್ರಣೋದ್ಯಮದ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಬೇಕು. ಸಬ್ಸಿಡಿ ನೀಡಬೇಕು ಎಂದು ಅಶೋಕ್ ಕುಮಾರ್ ಅವರು ಮನವಿ ಮಾಡಿದರು.
ಮುದ್ರಣ ಕ್ಷೇತ್ರದ ತಲ್ಲಣಗಳು ಕುರಿತು ಮಾತನಾಡಿದ ಕೆ.ಎಲ್.ರಾಜಶೇರ್ ಅವರು, ಮುದ್ರಣೋದ್ಯಮದ ಕಚ್ಚಾ ಸಾಮಾಗ್ರಿಗಳಿಗೆ ಶೇ.18ರಷ್ಟು ಜಿಎಸ್ಟಿ ಕಟ್ಟಬೇಕಾಗಿದೆ. ಪುಸ್ತಕ ಮುದ್ರಣಕ್ಕೆ ಶೇ.5 ರಷ್ಟು ಜಿಎಸ್ಟಿ ಭರಿಸಬೇಕಾಗಿದ್ದು, ಇದು ಪ್ರಕಾಶಕರಿಗೆ ದೊಡ್ಡ ಹೊರೆಯಾಗಿದೆ. ಹೀಗಾಗಿ ಸರ್ಕಾರ ಮುದ್ರಣ ಮಾಧ್ಯಮಕ್ಕೆ ಏಕರೂಪ ತೆರಿಗೆ ನೀತಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.ಸಪ್ನಬುಕ್ ಹೌಸ್ನ ದೊಡ್ಡೇಗೌಡ ಅವರು ಆಶಯ ನುಡಿಗಳನ್ನಾಡಿದರು. ಅಧ್ಯಕ್ಷತೆ ವಹಿಸಿದ್ದ ಗದುಗಿನ ವಿದ್ಯಾನಿಧಿ ಪ್ರಕಾಶನದ ಜಯದೇವ ಮೆಣಸಗಿ ಅವರು, ಆಗಾಗ್ಗೆ ಬದಲಾಗುತ್ತಿರುವ ಸರ್ಕಾರಿ ಶಾಲೆಯಗಳ ಪಠ್ಯಕ್ರಮಗಳು, ರಾಜ್ಯ ಶಿಕ್ಷಣ ನೀತಿಯ ಗೊಂದಲ, ವಿದ್ಯಾರ್ಥಿಗಳು ಪುಸ್ತಕಗಳನ್ನು ಖರೀದಿಸದಿರುವುದು, ಕೊಳ್ಳುವವರ ಸಂಖ್ಯೆಯಲ್ಲಾಗಿರುವ ಇಳಿಮುಖ, ಓದುಗರ ಹೊಸ ತಂತ್ರಜ್ಞಾನದ ಒಲವು ಪುಸ್ತಕೋದ್ಯಮ ಪ್ರಗತಿಗೆ ಕುತ್ತು ತಂದಿದೆ ಎಂದು ಹೇಳಿದರು. ವಿವೇಕಾನಂದ ಪಾಟೀಲ್, ಯ.ಚಿ.ದೊಡ್ಡಯ್ಯ ಹಾಗೂ ಎಲ್.ಕೃಷ್ಣ ಅವರು ಕಾರ್ಯಕ್ರಮ ನಿರ್ವಹಿಸಿದರು.