- (ಮಿಡ್ಲ್ 4ಸಿ)
ಕನ್ನಡಪ್ರಭ ವಾರ್ತೆ ಬೆಂಗಳೂರು
ಮಳೆ ಕೊರತೆಯ ಪರಿಣಾಮ ಜನವರಿಯಲ್ಲಿಯೇ ರಾಜ್ಯದ ಜಲಾಶಯಗಳ ನೀರಿನ ಸಂಗ್ರಹಣಾ ಮಟ್ಟ ಸಾಕಷ್ಟು ಕಡಿಮೆಯಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 50ಕ್ಕಿಂತ ಕಡಿಮೆ ನೀರು ಸಂಗ್ರಹವಿದೆ. ಹೀಗಾಗಿ ಇರುವ ನೀರಿನ ಸಂಗ್ರಹವನ್ನು ಕೃಷಿಗೆ ನೀಡದೇ ಕೇವಲ ಕುಡಿಯುವ ನೀರಿಗೆ ಬಳಕೆ ಮಾಡಬೇಕಾಗಿದೆ.ಮುಂಗಾರು ಕೊರತೆಯಿಂದಾಗಿ ಕಳೆದ ಅಕ್ಟೋಬರ್ ತಿಂಗಳಲ್ಲಿಯೇ ರಾಜ್ಯದಲ್ಲಿ ಬರ ಕಾಣಿಸಿಕೊಂಡು, ಕೃಷಿ ಚಟುವಟಿಕೆಗೆ ಭಾರೀ ಹೊಡೆತ ಬಿದ್ದಿದೆ. ಹೀಗಾಗಿ ರಾಜ್ಯದಲ್ಲಿ ಅಂತರ್ಜಲ ಕುಸಿತ, ಕೆರೆಗಳಲ್ಲಿ ನೀರು ಕೊರತೆಯ ಜತೆಗೆ ಜಲಾಶಯಗಳಲ್ಲೂ ನೀರಿನ ಕ್ಷಾಮ ಕಾಣಿಸಿಕೊಂಡಿದೆ. ಕೃಷ್ಣರಾಜಸಾಗರ, ತುಂಗಭದ್ರಾ, ಆಲಮಟ್ಟಿ, ವಾಣಿವಿಲಾಸ, ಭದ್ರಾ ಜಲಾಶಯಗಳಲ್ಲಿ ನೀರು ಭಾರೀ ಪ್ರಮಾಣದಲ್ಲಿ ಕಡಿಮೆಯಾಗಿದೆ. ಅದರಲ್ಲೂ ತುಂಗಭದ್ರಾ ಜಲಾಶಯದಲ್ಲಿ ಡೆಡ್ ಸ್ಟೋರೇಜ್ ಮಟ್ಟಕ್ಕೆ ತಲುಪಿದೆ. ರಾಜ್ಯದ 22 ಜಲಾಶಯಗಳಲ್ಲಿ ಶೇ. 26.93ರಷ್ಟು ನೀರು ಮಾತ್ರ ಶೇಖರಣೆಯಾಗಿದೆ.ಶೇ. 50ಕ್ಕಿಂತ ಕಡಿಮೆ ನೀರು: ರಾಜ್ಯದ ಜಲಾಶಯಗಳಲ್ಲಿ ಸದ್ಯ 143.33 ಟಿಎಂಸಿ ಅಡಿಗಳಷ್ಟು ನೀರಿದೆ. ಅದೇ 2023ರ ಜ. 21ರಂದು 302.93 ಟಿಎಂಸಿ ಅಡಿಗಳಷ್ಟು ನೀರು ಶೇಖರಣೆಯಾಗಿತ್ತು. ಅದೇ 2022ರ ಜ. 21ರ ವೇಳೆಗೆ 372.16 ಟಿಎಂಸಿ ಅಡಿಗಳಷ್ಟು ನೀರು ಶೇಖರಣೆಯಾಗಿತ್ತು. 2023ರಲ್ಲಿ ಶೇ. 56.76 ಹಾಗೂ 2022ರಲ್ಲಿ ಶೇ. 69.74ರಷ್ಟು ನೀರು ಜಲಾಶಯಗಳಲ್ಲಿತ್ತು. ಅದೇ ಈ ಬಾರಿ ಶೇ. 26.93ರಷ್ಟು ನೀರು ಮಾತ್ರ ಇದ್ದು, ಮುಂಗಾರು ಆರಂಭವಾಗಲು ಇನ್ನೂ ನಾಲ್ಕು ತಿಂಗಳಿದೆ. ಬೇಸಿಗೆ ವೇಳೆ ನೀರಿನ ಬೇಡಿಕೆ ಇನ್ನಷ್ಟು ಹೆಚ್ಚಳವಾಗಲಿದೆ. ಹೀಗಾಗಿ ಮಳೆಗಾಲ ಆರಂಭವಾಗುವ ತನಕ ನೀರನ್ನು ಹಿತಮಿತವಾಗಿ ಬಳಸುವ ಪರಿಸ್ಥಿತಿ ಎದುರಾಗಿದೆ.ಕುಡಿಯಲು ನೀರು ಸಿಗೋದೂ ಅನುಮಾನ:ಕೆಆರ್ಎಸ್, ಆಲಮಟ್ಟಿ, ತುಂಗಭದ್ರಾ ಸೇರಿದಂತೆ ಪ್ರಮುಖ ಜಲಾಶಯಗಳು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೃಷಿ ಚಟುವಟಿಕೆಯ ಜತೆಗೆ ಕುಡಿಯುವುದಕ್ಕೂ ನೀರು ಪೂರೈಸುತ್ತವೆ. ಅದರಲ್ಲೂ ಕೆಆರ್ಎಸ್ ಜಲಾಶಯ ಬೆಂಗಳೂರು ಮಹಾನಗರಕ್ಕೆ ನೀರು ನೀಡುತ್ತದೆ. ಆದರೆ, ಈ ಬಾರಿ ಜಲಾಶಯಗಳೆಲ್ಲವೂ ಖಾಲಿಯಾಗುತ್ತಿರುವ ಕಾರಣ ಕೃಷಿ ಚಟುವಟಿಕೆಗಿರಲಿ, ಕುಡಿಯುವುದಕ್ಕೂ ನೀರು ದೊರಕುವುದು ಅನುಮಾನ ಎನ್ನುವಂತಾಗಿದೆ. ಕೆಲ ಜಲಾಶಯಗಳಿಂದ ಇನ್ನೆರಡು ತಿಂಗಳ ಕಾಲ ಮಾತ್ರ ಕುಡಿಯುವುದಕ್ಕೆ ನೀರು ಪೂರೈಸಬಹುದಾಗಿದೆ. ಹೀಗಾಗಿ ಏಪ್ರಿಲ್ ತಿಂಗಳ ನಂತರ ನೀರಿನ ಪರದಾಟ ಇನ್ನಷ್ಟು ಜಾಸ್ತಿ ಆಗುವ ಆತಂಕ ಎದುರಾಗಿದೆ.