ಹರಪನಹಳ್ಳಿ: ಹರಪನಹಳ್ಳಿ ಕ್ಷೇತ್ರದಲ್ಲಿ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಐದು ಗ್ಯಾರಂಟಿಗಳ ಬಗ್ಗೆ ಮನೆ ಮನೆಗೆ ಅರಿವು ಮೂಡಿಸಿ ಕಾಂಗ್ರೆಸ್ ಇನ್ನಷ್ಟು ಗಟ್ಟಿಗೊಳಿಸಬೇಕು ಎಂದು ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ನೂತನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಸಲಹೆ ನೀಡಿದರು.
ನನ್ನ ಮೇಲೆ ಕೆಲವರು ಆರೋಪ ಮಾಡುತ್ತಿದ್ದು, ಅದರಿಂದ ನನ್ನ ಶಕ್ತಿ ದ್ವಿಗುಣಗೊಳ್ಳುತ್ತದೆ. ನಾನು ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದರೂ ಕಾಂಗ್ರೆಸ್ ಸೇರಿದ್ದೇನೆ. ಕಾಂಗ್ರೆಸ್ ಸಂಘಟನೆಗೆ ದುಡಿಯುತ್ತೇನೆ ಎಂದು ತಿಳಿಸಿದರು.
ಎಲ್ಲರೂ ನಮ್ಮವರೇ ಎಂದು ತಿಳಿದು ಕಾಂಗ್ರೆಸ್ ಸಂಘಟಿಸಿ, ಎಲ್ಲ ಕಾರ್ಯಕರ್ತರನ್ನು ಒಗ್ಗಟ್ಟಾಗಿ ತೆಗೆದುಕೊಂಡು ಹೋಗಿ ಎಂದು ಅವರು ನೂತನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಹೇಳಿದರು.ಹರಪನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ ಮಾತನಾಡಿ, ಸಿಟ್ಟಾದವರನ್ನು, ಬಿಟ್ಟು ಹೋದವರನ್ನು ಸೇರಿದಂತೆ ಎಲ್ಲರನ್ನೂ ಒಟ್ಟುಗೂಡಿಸಿಕೊಂಡು ಕಾಂಗ್ರೆಸ್ ಸಂಘಟನೆ ಮಾಡೋಣ. ಮುಂಬರುವ ಲೋಕಸಭೆ, ಜಿಪಂ ಹಾಗೂ ತಾಪಂ ಚುನಾವಣೆ ಎದುರಿಸೋಣ ಎಂದರು. ಜಾತ್ಯತೀಯವಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಪುರಸಭಾ ಹಿರಿಯ ಸದಸ್ಯ ಅಬ್ದುಲ್ ರಹಿಮಾನ್ ಸಾಹೇಬ್, ಮುಖಂಡ ಅಗ್ರಹಾರ ಅಶೋಕ ಮಾತನಾಡಿ, ತಾಲೂಕಿನಲ್ಲಿ ಕಾಂಗ್ರೆಸ್ ಸಂಘಟಿಸಿ ಶಾಸಕರ ಕೈ ಬಲಪಡಿಸಬೇಕು ಎಂದು ಹೇಳಿದರು.
ಪುರಸಭಾ ಸದಸ್ಯರಾದ ಟಿ. ವೆಂಕಟೇಶ, ಗೊಂಗಡಿ ನಾಗರಾಜ, ಲಾಟಿದಾದಾಪೀರ, ಉದ್ದಾರ ಗಣೇಶ, ಮುಖಂಡರಾದ ವಸಂತಪ್ಪ, ಟಿಎಚ್ಎಂ ಮಂಜುನಾಥ, ಮೈದೂರು ರಾಮಣ್ಣ, ಚಿಕ್ಕೇರಿ ಬಸಪ್ಪ, ಎಲ್. ಮಂಜನಾಯ್ಕ, ಎನ್. ಶಂಕರ, ಶಿವಕುಮಾರನಾಯ್ಕ, ಕಂಚಿಕೇರಿ ಅಂಜಿನಪ್ಪ, ಶಿವರಾಜ, ಮತ್ತೂರು ಬಸವರಾಜ ಇತರರು ಹಾಜರಿದ್ದರು.