ಕನ್ನಡಪ್ರಭ ವಾರ್ತೆ ಬೇಲೂರು
ಪಟ್ಟಣದ ಸರ್ಕಾರಿ ಬಾಲಕಿಯರ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಆನ್ ಲೈನ್ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಗೆದ್ದಂಥ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದ ಕಸಾಪ ಅಧ್ಯಕ್ಷ ಮಾ.ನ. ಮಂಜೇಗೌಡ, ವಿದ್ಯಾರ್ಥಿ ಗಳಲ್ಲಿ ಸ್ಪರ್ಧಾತ್ಮಕ ಮನೋಭಾವನೆಯನ್ನು ಮೂಡಿಸುವ ಕೆಲಸವನ್ನು ಈಗಾಗಲೇ ಶಿಕ್ಷಕರು ಮಾಡುತ್ತಿದ್ದಾರೆ. ಬಹುಮುಖ್ಯವಾಗಿ ನಾಡಿನ, ದೇಶದ ಇತಿಹಾಸ, ವಿಜ್ಞಾನ, ತಂತ್ರಜ್ಞಾನ, ಸಂಸ್ಕ್ರತಿ ಬಗ್ಗೆ ಇಂಥ ಸ್ಪರ್ಧೆಗಳ ಮೂಲಕ ವಿದ್ಯಾರ್ಥಿಗಳಲ್ಲಿ ತಿಳಿವಳಿಕೆ ಮೂಡಿಸುವ ಮೂಲಕ ಸಾಹಿತ್ಯ ಪರಿಷತ್ ನಮ್ಮ ಭಾಷೆ, ಸಂಸ್ಕೃತಿ, ಕಲೆ, ಸಾಹಿತ್ಯವನ್ನು ಉಳಿಸಿ ಬೆಳಸುವಂತಹ ಕೆಲಸ ಮಾಡಿಕೊಂಡು ಬರುತ್ತಿದೆ ಎಂದರು.
ನಂತರ ಮಾತನಾಡಿದ ಕೆಡಿಪಿ ಸದಸ್ಯೆ ಸೌಮ್ಯ ಅನಂದ್, ಯಾವುದೇ ವಿದ್ಯಾರ್ಥಿಗಳು ಅದೃಷ್ಟದ ಮೇಲೆ ನಂಬಿಕೆ ಇಡದೇ ಪ್ರಯತ್ನಗಳ ಮೇಲೆ ನಂಬಿಕೆ ಇಟ್ಟು ಕೆಲಸ ಮಾಡಿದಾಗ ಅದು ಸಫಲವಾಗುತ್ತದೆ. ನಮ್ಮ ಮೂಢನಂಬಿಕೆಗಳನ್ನು ಬಿಟ್ಟು ತಮ್ಮ ವೈಚಾರಿಕ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದ ಅವರು, ಜ್ಞಾನ ವಿಜ್ಞಾನ ಸಮಿತಿಯು ವಿದ್ಯಾರ್ಥಿಗಳಿಗೆ ಮೂಢನಂಬಿಕೆ ವಿರುದ್ಧ ಅರಿವು ಮೂಡಿಸುವ ಉದ್ದೇಶವನ್ನು ಸೂರ್ಯ ಗ್ರಹಣ, ಚಂದ್ರಗ್ರಹಣ, ಆಕಾಶ ವೀಕ್ಷಣೆ, ಪರಿಸರ ಪಯಣ ಹಾಗೂ ಇಂತಹ ರಸಪ್ರಶ್ನೆಗಳನ್ನು ಅಳವಡಿಸುವ ಮೂಲಕ ಅರಿವು ಮೂಡಿಸಲಾಗುತ್ತಿದೆ ಎಂದರು.ಜ್ಞಾನ ವಿಜ್ಞಾನ ಸಂಸ್ಥೆಯ ಗೌರವ ಅಧ್ಯಕ್ಷ ಟಿ.ಡಿ . ತಮ್ಮಣ್ಣಗೌಡ ಮಾತನಾಡಿದರು.
ಹಳೆಬೀಡು ಜ್ಞಾನ ವಿಜ್ಞಾನ ಸಮಿತಿ ಅಧ್ಯಕ್ಷ ತೀರ್ಥೇಗೌಡ, ಉಪನ್ಯಾಸಕ ಸುಜಯ್, ಪ್ರಧಾನ ಕಾರ್ಯದರ್ಶಿ ಮೋಹನ್, ಯೋಗೇಶ್ ಹಾಜರಿದ್ದರು.
ಈ ವೇಳೆ ವಿವಿಧ ಶಾಲೆಗಳಿಂದ ಅಗಮಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.