ಟಾಯ್ಲೆಟ್ ಕ್ಲೀನರ್ ಕುಡಿದ ವ್ಯಕ್ತಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

KannadaprabhaNewsNetwork | Published : Mar 29, 2025 12:32 AM

ಸಾರಾಂಶ

ಆಸಿಡ್ ಮಿಶ್ರಿತ ಟಾಯ್ಲೆಟ್ ಕ್ಲೀನರ್ ಕುಡಿದು ಆತ್ಮಹತ್ಯೆಗೆ ಯತ್ನಿಸಿ, ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದ 40 ವರ್ಷದ ವ್ಯಕ್ತಿಗೆ 6 ತಾಸು ಕಾಲ ಕ್ಲಿಷ್ಚಕರ ಶಸ್ತ್ರಚಿಕಿತ್ಸೆ ನಡೆಸಿ, ಪುನರ್ಜನ್ಮ ಕಲ್ಪಿಸುವಲ್ಲಿ ಎಸ್.ಎಸ್. ನಾರಾಯಣ ಸ್ಪೂಪರ್ ಸ್ಪೆಷಾಲಿಟಿ ಸೆಂಟರ್‌ ವೈದ್ಯರ ತಂಡ ಯಶಸ್ವಿಯಾಗಿದೆ.

- ಎಸ್ಎಸ್ ನಾರಾಯಣ ಆಸ್ಪತ್ರೆಯಲ್ಲಿ ಡಾ.ಹನುಮಂತ ನಾಯ್ಕ ತಂಡ ಸಾಧನೆ

- - -

- ಹರಿದ ಜಠರ ತೆಗೆದು ಹಾಕಿ ಅನ್ನನಾಳವನ್ನು ಹೊರಕ್ಕೆ ತರುವ ಶಸ್ತ್ರಚಿಕಿತ್ಸೆ

- ಸಣ್ಣ ಕರುಳಿನ ಮೂಲಕ ಆಹಾರ ನೀಡುವ ವ್ಯವಸ್ಥೆ ಶಸ್ತ್ರಚಿಕಿತ್ಸೆ ನಡೆಸಿದ ತಂಡ

- - - ಕನ್ನಡಪ್ರಭ ವಾರ್ತೆ ದಾವಣಗೆರೆ ಆಸಿಡ್ ಮಿಶ್ರಿತ ಟಾಯ್ಲೆಟ್ ಕ್ಲೀನರ್ ಕುಡಿದು ಆತ್ಮಹತ್ಯೆಗೆ ಯತ್ನಿಸಿ, ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದ 40 ವರ್ಷದ ವ್ಯಕ್ತಿಗೆ 6 ತಾಸು ಕಾಲ ಕ್ಲಿಷ್ಚಕರ ಶಸ್ತ್ರಚಿಕಿತ್ಸೆ ನಡೆಸಿ, ಪುನರ್ಜನ್ಮ ಕಲ್ಪಿಸುವಲ್ಲಿ ಎಸ್.ಎಸ್. ನಾರಾಯಣ ಸ್ಪೂಪರ್ ಸ್ಪೆಷಾಲಿಟಿ ಸೆಂಟರ್‌ ವೈದ್ಯರ ತಂಡ ಯಶಸ್ವಿಯಾಗಿದೆ.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆಸ್ಪತ್ರೆ ತಜ್ಞವೈದ್ಯ ಡಾ. ಆರ್.ಕೆ. ಹನುಮಂತ ನಾಯ್ಕ ಈ ಕುರಿತು ಮಾತನಾಡಿ, ಹೈಡ್ರೋಕ್ಲೋರಿಕ್ ಆಸಿಡ್, ಇತರೆ ವಿಷಕಾರಿ ರಾಸಾಯನಿಕ ಮಿಶ್ರಿತ ಟಾಯ್ಲೆಟ್ ಕ್ಲೀನರ್‌ ಕುಡಿದಿದ್ದ ನೆರೆಯ ಜಿಲ್ಲೆಯ ವ್ಯಕ್ತಿ ಆರೋಗ್ಯ ಗಂಭೀರ ಸ್ಥಿತಿಯಲ್ಲಿತ್ತು. 6 ಗಂಟೆ ಶಸ್ತ್ರಚಿಕಿತ್ಸೆ ನಡೆಸಿ, ಬದುಕಿಸಿದ್ದೇವೆ ಎಂದರು.

ಟಾಯ್ಲೆಟ್‌ ಕ್ಲೀನರ್‌ ಸೇವಿಸಿ ಅಸ್ವಸ್ತನಾಗಿದ್ದ ವ್ಯಕ್ತಿಯನ್ನು ಸುಮಾರು ಗಂಟೆಗಳ ನಂತರ ಆಸ್ಪತ್ರೆಗೆ ಕರೆ ತಂದಾಗ ಆತನ ಪರಿಸ್ಥಿತಿ ಗಂಭೀರವಾಗಿತ್ತು. ತುರ್ತಾಗಿ ವೆಂಟಿಲೇಟರ್ ಬಲದೊಂದಿಗೆ ಐನೋಟ್ರೋಫಿಕ್ ಸಹಾಯ ನೀಡಲಾಯಿತು ಎಂದರು.

ಚಿಕಿತ್ಸೆ ನಡೆಸಿದ ಪರಿ:

ಹೊಟ್ಟೆಯ ಸಿಟಿ ಸ್ಕ್ಯಾನ್‌ನಲ್ಲಿ ಜಠರ, ಸಮೀಪದ ಸಣ್ಣ ಕರುಳಿನ ಭಾಗಕ್ಕೆ ರಕ್ತಪ್ರವಾಹ ಕಡಿಮೆ ಆಗಿರುವುದು (ಇಸ್ಕೀಮಿಯಾ) ಕಂಡುಬಂದಿತು. ಎಂಡೋಸ್ಕೋಪಿಕ್‌ ಪರೀಕ್ಷೆಯಲ್ಲಿ ರೋಗಿಯ ಅಸ್ವಸ್ತನ ಹೊಟ್ಟೆ ಗಾಯವನ್ನು ಜರ್ಗರ್ ನಾಲ್ಕನೆಯ ಹಂತ ಎಂಬುದಾಗಿ ವರ್ಗೀಕರಿಸಲಾಯಿತು. ಇದು ಕೊರೆಸಿವ್‌ (ಕೊರೆತ) ಗಾಯದ ಅತ್ಯಂತ ಗಂಭೀರ ಹಂತವಾಗಿತ್ತು. ವ್ಯಕ್ತಿಯ ಆರೋಗ್ಯದ ಗಂಭೀರತೆ ಅರಿತ ತಮ್ಮ ತಂಡ ತುರ್ತು ಶಸ್ತ್ರಚಿಕಿತ್ಸೆ ನಡೆಸಿತು ಎಂದು ಹೇಳಿದರು.

ಶಸ್ತ್ರಚಿಕಿತ್ಸೆಯಲ್ಲಿ ಪೂರಾ ಜಠರ (ಟೋಟಲ್ ಗ್ಯಾಸ್ಟ್ರೆಕ್ಟಮಿ) ತೆಗೆದು ಹಾಕಲಾಯಿತು. ಸರ್ವಿಕಲ್ ಈಸೋಫಗೋಸ್ಟಮಿ (ಅನ್ನನಾಳವನ್ನು ಹೊರಕ್ಕೆ ತರುವ) ಶಸ್ತ್ರಚಿಕಿತ್ಸೆ ಮಾಡಲಾಯಿತು. ಡ್ರೇನಿಂಗ್‌ ಟ್ರಾನ್ಸ್‌ ಅಬ್ಡೊಮಿನಲ್‌ ಈಸೋಫಗೊಸ್ಟಮಿ ಮತ್ತು ಫೀಡಿಂಗ್ ಜೆಜುನೋಸ್ಟಮಿ (ಸಣ್ಣ ಕರುಳಿನ ಮೂಲಕ ಆಹಾರ ನೀಡುವ ವ್ಯವಸ್ಥೆ) ನೆರವೇರಿಸಲಾಯಿತು. ರೋಗಿಗೆ ಬದುಕಿಸಲು, ಹರಿದ ಜಠರವನ್ನು ನಿರ್ವಹಿಸಲು ಹಾಗೂ ಬೇರೆ ತೊಂದರೆ ನಿವಾರಿಸಲು ಈ ಶಸ್ತ್ರಚಿಕಿತ್ಸೆ ಅತ್ಯಂತ ಮುಖ್ಯವಾಗಿತ್ತು ಎಂದು ಮಾಹಿತಿ ನೀಡಿದರು.

ವೈದ್ಯಕೀಯ ತಜ್ಞರ ತಂಡದಲ್ಲಿ ಶಸ್ತ್ರಚಿಕಿತ್ಸಾ ಗ್ಯಾಸ್ಟ್ರೋ ಎಂಟರೋಲಾಜಿಯ ಡಾ. ಎನ್.ನಾಗರಾಜ, ಡಾ. ಎಂ.ಜಯಂತ್, ತುರ್ತು ವೈದ್ಯಕೀಯ ವಿಭಾಗದ ಡಾ. ಎಸ್.ಎಸ್ .ನರೇಂದ್ರ, ಡಾ. ಬಿ.ಎಸ್.ಗಣೇಶ, ಡಾ. ಸಿ.ಎನ್. ದಿಲೀಪ್, ಅನಸ್ತೇಷಿಯಾ ತಂಡದ ಡಾ. ಪಿ.ಎಸ್. ಚಿರಾಗ್ ಬಾಬು, ಡಾ.ಜಯಶ್ರೀ ಪಾಟೀಲ್, ಡಾ.ಅನು, ಐಸಿಯು ತಜ್ಞ ಡಾ. ಬಿ.ಆರ್. ಕಿರಣ್, ಡಾ. ಜಿ.ಕೆ. ವಿಶ್ವಾಸ್ ಇದ್ದರು.

ವೈದ್ಯಕೀಯ ನಿಗಾ, ತ್ವರಿತ ಚಿಕಿತ್ಸೆ ಫಲವಾಗಿ, ರೋಗಿ 6 ದಿನ ವೆಂಟಿಲೇಟರ್ ಬೆಂಬಲದಲ್ಲಿದ್ದು, ಈಗ ಚೇತರಿಕೆ ಕಾಣತೊಡಗಿದ್ದಾರೆ. ಶಸ್ತ್ರಚಿಕಿತ್ಸೆ ನಂತರ ರೋಗಿ ಆರೋಗ್ಯದ ಮೇಲೆ ನಿಗಾ ವಹಿಸಲಾಯಿತು, ಬಳಿಕ ರೋಗಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು ಎಂದು ಅವರು ತಿಳಿಸಿದರು.

ಆಸ್ಪತ್ರೆಯ ಅನಸ್ತೇಷಿಯಾ ವಿಭಾಗದ ಡಾ. ಪಿ.ಎಸ್. ಚಿರಾಗ್ ಬಾಬು, ಸುನೀಲ್ ಭಂಢಾರಿ, ಪ್ರಶಾಂತ ಇತರರು ಇದ್ದರು.

- - - -28ಕೆಡಿವಿಜಿ61.ಜೆಪಿಜಿ:

ದಾವಣಗೆರೆಯಲ್ಲಿ ಶುಕ್ರವಾರ ಎಸ್.ಎಸ್. ನಾರಾಯಣ ಹೆಲ್ತ್ ಸೂಪರ್ ಸ್ಪೆಷಾಲಿಟಿ ಸೆಂಟರ್‌ನ ಸರ್ಜಿಕಲ್‌ ಗ್ಯ್ಸಾಸ್ಟ್ರೋ ಎಂಟರೋಲಾಜಿಸ್ಟ್‌ ಡಾ. ಆರ್.ಕೆ. ಹನುಮಂತ ನಾಯ್ಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

Share this article