ಕಲ್ಯಾಣ ಕರ್ನಾಟಕದ ಮುಂಚೂಣಿಯಲ್ಲಿರುವ ಯುನೈಟೆಡ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯು ಆರೋಗ್ಯದ ಎಮರ್ಜೆನ್ಸಿಯಲ್ಲಿ ಜನರೇನು ಮಾಡಬೇಕು ಎಂದು ತಿಳಿಸಲು ಹಾಗೂ ಅರಿವು ಮೂಡಿಸಲು ಸಾಮಾನ್ಯ ಜನರಿಗಾಗಿ ಮತ್ತು ವೈದ್ಯಕೀಯ ವೃತ್ತಿಪರರಿಗಾಗಿ ಸಿಪಿಆರ್ ಮತ್ತು ಬಿಸಿಎಲ್ಎಸ್ ತರಬೇತಿ ಶಿಬಿರ ಏರ್ಪಡಿಸಿತ್ತು.
ಕನ್ನಡಪ್ರಭ ವಾರ್ತೆ ಕಲಬುರಗಿ
ಕಲ್ಯಾಣ ಕರ್ನಾಟಕದ ಮುಂಚೂಣಿಯಲ್ಲಿರುವ ಯುನೈಟೆಡ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯು ಆರೋಗ್ಯದ ಎಮರ್ಜೆನ್ಸಿಯಲ್ಲಿ ಜನರೇನು ಮಾಡಬೇಕು ಎಂದು ತಿಳಿಸಲು ಹಾಗೂ ಅರಿವು ಮೂಡಿಸಲು ಸಾಮಾನ್ಯ ಜನರಿಗಾಗಿ ಮತ್ತು ವೈದ್ಯಕೀಯ ವೃತ್ತಿಪರರಿಗಾಗಿ ಸಿಪಿಆರ್ ಮತ್ತು ಬಿಸಿಎಲ್ಎಸ್ ತರಬೇತಿ ಶಿಬಿರ ಏರ್ಪಡಿಸಿತ್ತು.
ವಿಶ್ವೇಶ್ವರಯ್ಯ ಭವನದಲ್ಲಿ ಆಯೋಜಿಸಲಾಗಿದ್ದ ಈ ಶಿಬಿರಗಳಿಗೆ ರಾಜೀವ್ ಗಾಂಧಿ ವೈದ್ಯಕೀಯ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದ ಡಾ. ರಮಣಗೌಡ ಅವರು ನೃತೃತ್ವದ ತಂಡವು ಸಂಪನ್ಮೂಲ ವ್ಯಕ್ತಿಗಳಾಗಿ ಬಂದು ಶಿಬಿರಾರ್ಥಿಗಳಿಗೆ ತಮ್ಮ ಶ್ರೀಮಂತ ಜ್ಞಾನ ಮತ್ತು ಅಪಾರ ಅನುಭವಗಳ ಮೂಲಕ ಶಿಬಿರಾರ್ಥಿಗಳಿಗೆ ತರಬೇತಿ ನೀಡಿದರು.
ಈ ಶಿಬಿರಗಳಿಗೆ ಸಾರ್ವಜನಿಕರಿಂದ ಮತ್ತು ಆರೋಗ್ಯ ಕ್ಷೇತ್ರದ ವೃತ್ತಿಪರರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು ಸಾಮಾನ್ಯ ಜನರಿಗಾಗಿ ಶುಕ್ರವಾರ ನಡೆದ ಮೊದನೇ ದಿನದ ಕಾರ್ಯಾಗಾರದಲ್ಲಿ 120 ಜನರು ಎರಡು ತಂಡಗಳಲ್ಲಿ ತರಬೇತಿ ಪಡೆದರು. ಬೆಳಗ್ಗೆಯಿಂದ ಮಧ್ಯಾಹ್ನದ ತನಕ ಮೊದಲ ತಂಡ ಹಾಗೂ ಮಧ್ಯಾಹ್ನದ ನಂತರ ಎರಡನೇ ತಂಡವು ತರಬೇತಿ ಪಡೆಯಿತು. ಪೊಲೀಸರು ಮತ್ತು ಸಾಮಾಜಿಕ ಕಾರ್ಯಕರ್ತರು ಭಾಗವಹಿಸಿದ್ದರು.
ವೈದ್ಯಕೀಯ ವೃತ್ತಿಪರರು ಇಲ್ಲದಿದ್ದಾಗ ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾದರೆ ಕೂಡಲೇ ಕೈಗೊಳ್ಳಬೇಕಾದ ಜೀವರಕ್ಷಕ ಕ್ರಮಗಳ ಬಗ್ಗೆ ಚರ್ಚಿಸಲಾಯಿತು. ರೋಗಿಯು ಸಮೀಪದ ಸುಸಜ್ಜಿತ ಆಸ್ಪತ್ರೆಯನ್ನು ತಲುಪುವ ತನಕ ಅತ್ಯಗತ್ಯವಾಗಿ ಮಾಡಬೇಕಾದ ಕೆಲಸಗಳ ಬಗ್ಗೆ ತರಬೇತುದಾರರು ಪ್ರಾತ್ಯಕ್ಷಿಕೆಯ ಮೂಲಕ ವಿವರಿಸಿದರು.
ಕಾರ್ಯಾಗಾರದಲ್ಲಿ ಸಿಪಿಆರ್, ಬಿಸಿಎಲ್ಎಸ್ ಜೀವರಕ್ಷಕ ಕ್ರಮಗಳ ಬಗ್ಗೆ ಚರ್ಚಿಸಲಾಯಿತು. ಎಇಡಿ ಯಂತ್ರವನ್ನು ಉಪಯೋಗಿಸುವುದು ಹೇಗೆ, ವ್ಯಕ್ತಿಯೊಬ್ಬರಿಗೆ ಉಸಿರುಗಟ್ಟಿದರೆ ಅಥವಾ ಹೃದಯ ಬಡಿತ ನಿಂತರೆ ಏನು ಮಾಡಬೇಕು ಎಂಬುದಲ್ಲದೇ ಒಂದು ವರ್ಷದೊಳಗಿನ ಶಿಶುಗಳ ಆರೋಗ್ಯ ದೀಢೀರ್ ಏರುಪೇರಾದರೆ ಏನು ಮಾಡಬೇಕು ಎಂಬಿತ್ಯಾದಿ ವಿಷಯಗಳನ್ನು ಹೇಳಿಕೊಡಲಾಯಿತು.ಯುನೈಟೆಡ್ ಆಸ್ಪತ್ರೆಯೂ ಆರೋಗ್ಯವಂತ ಸಮಾಜ ನಿರ್ಮಾಣದತ್ತ ನಾವು ನಡೆಸುತ್ತಿರುವ ಪ್ರಯತ್ನಗಳ ಭಾಗವಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಕಾರ್ಯನಿರತರಾಗಿರುವ ವೃತ್ತಿಪರರಿಗೆ ವೈದ್ಯಕೀಯ ಕ್ಷೇತ್ರದಲ್ಲಿ ನಡೆಯುತ್ತಿರುವ ಆಧುನಿಕ ಆವಿಷ್ಕಾರಗಳ ಬಗ್ಗೆ, ಹೊಸ ಹೊಸ ತಂತ್ರಜ್ಞಾನಗಳ, ಹೊಸ ಹೊಸ ಜೀವರಕ್ಷಕ ವಿಧಾನಗಳ ಬಗ್ಗೆ ಮಾಹಿತಿ ನೀಡುತ್ತಾ ತರಬೇತುಗೊಳಿಸುವುದು ಬಹಳ ಮುಖ್ಯ. ಸಾರ್ವಜನಿಕರಿಗೂ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವುದು, ವೈದ್ಯರು ಅಥವಾ ಆಸ್ಪತ್ರೆ ಹತ್ತಿರದಲ್ಲಿ ಇಲ್ಲದಿದ್ದಾಗ ದಿಢೀರನೇ ಆರೋಗ್ಯ ಸಮಸ್ಯೆ ಉಂಟಾದರೆ ಅದನ್ನು ನಿಭಾಯಿಸುವುದಕ್ಕೆ ಅವರಿಗೆ ತರಬೇತಿ ನೀಡುವುದೂ ಅಷ್ಟೇ ಮುಖ್ಯ.
- ಡಾ. ವಿಕ್ರಂ ಸಿದ್ದಾರೆಡ್ಡಿ, ವ್ಯವಸ್ಥಾಪಕ ನಿರ್ದೇಶಕರು, ಯುನೈಟೆಡ್ ಆಸ್ಪತ್ರೆ, ಕಲಬುರಗಿ
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.