ನಗರಾಭಿವೃದ್ಧಿಗೆ ಪೂರಕ ಬಜೆಟ್‌ ಅಗತ್ಯ

KannadaprabhaNewsNetwork | Published : Feb 14, 2024 2:16 AM

ಸಾರಾಂಶ

ದೊಡ್ಡಬಳ್ಳಾಪುರ: ನಗರಸಭೆ 2024-25ನೇ ಸಾಲಿನ ಆಯವ್ಯಯ ಸಿದ್ದತೆ ಕುರಿತು ಸಾರ್ವಜನಿಕ ಸಮಾಲೋಚನಾ ಸಭೆ ಇಲ್ಲಿನ ಡಾ.ರಾಜ್‌ಕುಮಾರ್ ಕಲಾ ಮಂದಿರದಲ್ಲಿ ಮಂಗಳವಾರ ನಡೆಯಿತು.

ದೊಡ್ಡಬಳ್ಳಾಪುರ: ನಗರಸಭೆ 2024-25ನೇ ಸಾಲಿನ ಆಯವ್ಯಯ ಸಿದ್ದತೆ ಕುರಿತು ಸಾರ್ವಜನಿಕ ಸಮಾಲೋಚನಾ ಸಭೆ ಇಲ್ಲಿನ ಡಾ.ರಾಜ್‌ಕುಮಾರ್ ಕಲಾ ಮಂದಿರದಲ್ಲಿ ಮಂಗಳವಾರ ನಡೆಯಿತು.

ಕರಡು ಆಯವ್ಯಯ ಸಿದ್ಧತೆಗೆ ಪೂರಕವಾದ ಸಲಹೆಗಳನ್ನು ಸಾರ್ವಜನಿಕರಿಂದ ಪಡೆಯಲಾಯಿತು. ಒಂದು ಹಂತದಲ್ಲಿ ಬಜೆಟ್‌ ತಯಾರಿ ಪೂರ್ವಭಾವಿ ಸಭೆ ಸಾರ್ವಜನಿಕರ ಕುಂದು-ಕೊರತೆ ಸಭೆಯಾಗಿ ಮಾರ್ಪಟ್ಟಿತ್ತು.

ನಗರ ವ್ಯಾಪ್ತಿಯಲ್ಲಿ ಮೂಲಸೌಕರ್ಯಗಳ ಕೊರತೆ ನಿರಂತರವಾಗಿ ಕಾಡುತ್ತಿದೆ. ಗಲ್ಲಿಗಲ್ಲಿಗಳಲ್ಲೂ ಕಸ ನಿರ್ವಹಣೆ ದೊಡ್ಡ ಸವಾಲಾಗಿದೆ. ಘನತ್ಯಾಜ್ಯ ಸಂಗ್ರಹ ನಿರ್ವಹಣೆ ವ್ಯವಸ್ಥೆ ಸರಿ ಇಲ್ಲ. ನಗರಸಭೆ ಸ್ವತ್ತುಗಳ ರಕ್ಷಣೆಗೆ ಯಾವುದೇ ಗಂಭೀರ ಕ್ರಮಗಳನ್ನು ಕೈಗೊಂಡಿಲ್ಲ. ನಾಗರಕೆರೆ ಸಮಗ್ರ ಅಭಿವೃದ್ದಿ ಇಚ್ಛಾಶಕ್ತಿ ಕೊರತೆಯಿದೆ. ಕಳೆದ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದ್ದ ಕೆಲ ಪ್ರಸ್ತಾವನೆಗಳು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಈ ಬಗ್ಗೆ ತುರ್ತು ಕ್ರಮ ಅಗತ್ಯಎಂದರು.

ವಿವಿಧ ವಿಚಾರಗಳ ಪ್ರಸ್ತಾಪ:

ಸಭೆಯಲ್ಲಿ ಯುವ ಸಂಚಲನ ಅಧ್ಯಕ್ಷ ಚಿದಾನಂದ್, ಕನ್ನಡಿಗರ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಬಿ.ಎಸ್.ಚಂದ್ರಶೇಖರ್, ಕನ್ನಡ ಪಕ್ಷದ ಅಧ್ಯಕ್ಷ ವೆಂಕಟೇಶ್, ಶಿವರಾಜ್‌ಕುಮಾರ್ ಕನ್ನಡ ಸೇನಾ ಸಮಿತಿ ತಾಲೂಕು ಅಧ್ಯಕ್ಷ ಜೆ.ಆರ್.ರಮೇಶ್, ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಗಂಗರಾಜ ಶಿರವಾರ, ಮಾಜಿ ನಗರಸಭಾ ಸದಸ್ಯೆ ಪ್ರಮೀಳಾ ಮಹದೇವ್ ಮತ್ತಿತರರು ವಿವಿಧ ವಿಚಾರಗಳನ್ನು ಪ್ರಸ್ತಾಪಿಸಿ ಅನುಷ್ಠಾನಗೊಳಿಸುವಂತೆ ಆಗ್ರಹಿಸಿದರು.

ನಗರದಲ್ಲಿ ಬ್ಯಾನರ್ ಹಾಗೂ ಫ್ಲೆಕ್ಸ್‌ಗಳ ಅಳವಡಿಕೆ ವಿಚಾರದಲ್ಲಿ ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಮುಂದುವರೆದಿದೆ. ರಾಜಕೀಯ ಮುಖಂಡರು ಯಾವುದೇ ನಿಯಮಾವಳಿಗಳನ್ನು ಪಾಲನೆ ಮಾಡದೆ ರಸ್ತೆಗಳಲ್ಲಿ, ವಿದ್ಯುತ್‌ ಕಂಬಗಳಲ್ಲಿ ಫ್ಲೆಕ್ಸ್‌ಗಳನ್ನು ಕಟ್ಟುವುದು ಅವ್ಯಾಹತವಾಗಿ ನಡೆದಿದೆ. ಶಾಸಕರು ಅಳವಡಿಸಿರುವ ಫ್ರೇಮ್‌ಗಳಿಗೆ ನಿಯಮಾನುಸಾರ ಶುಲ್ಕ ಪಾವತಿ ಮಾಡಿದ್ದಾರೆಯೇ ಎಂಬುದರ ಬಗ್ಗೆ ಮಾಹಿತಿ ನೀಡಬೇಕು ಎಂದು ಹಲವರು ಒತ್ತಾಯಿಸಿದರು.

ಬೀದಿ ನಾಯಿಗಳ ಹಾವಳಿ ಮಿತಿ ಮೀರಿದ್ದು, ನಗರಸಭೆ ಅಧಿಕಾರಿಗಳು ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ಮಾಡಿರುವುದಾಗಿ ಹೇಳುತ್ತಾರೆ. ಆದರೆ ಹಲವು ಬೀದಿಗಳಲ್ಲಿ ನಾಯಿಗಳ ಸಂಖ್ಯೆ ನಿಯಂತ್ರಣಕ್ಕೆ ಬಂದಿಲ್ಲ. ಜೊತೆಗೆ ಬೀಡಾಡಿ ಹಸುಗಳು, ಕತ್ತೆ, ಕುದುರೆಗಳ ಹಾವಳಿಯೂ ಮಿತಿ ಮೀರಿದೆ. ಮಾರುಕಟ್ಟೆ ಪ್ರದೇಶದಲ್ಲಿ ಕೆಲವೊಮ್ಮೆ ಓಡಾಡುವುದೇ ಸವಾಲಿನ ಕೆಲಸ. ಈ ಬಗ್ಗೆ ಬಜೆಟ್‌ನಲ್ಲಿ ಸೂಕ್ತ ಕ್ರಮ ಅಗತ್ಯ ಎಂಬ ಅಭಿಪ್ರಾಯ ವ್ಯಕ್ತವಾಯಿತು.

ನಗರಸಭೆ ಬಸ್‌ನಿಲ್ದಾಣ ಸಮರ್ಪಕ ನಿರ್ವಹಣೆ, ಕಳಪೆ ರಸ್ತೆ ಕಾಮಗಾರಿಗಳು, ಶೌಚಾಲಯಗಳ ನಿರ್ವಹಣೆ ವೈಫಲ್ಯ, ಬೀದಿಬದಿ ವ್ಯಾಪಾರಿಗಳಿಗೆ ಸೂಕ್ತ ಸ್ಥಳಾವಕಾಶದ ಕೊರೆತೆ, ಫುಟ್‌ಪಾತ್‌ ಒತ್ತುವರಿ ತೆರವು, ಕೊಳಾಯಿಗಳ ಅಕ್ರಮ ಸಂಪರ್ಕ, ಶುದ್ದ ಕುಡಿಯುವ ನೀರಿನ ಘಟಕಗಳ ಅವ್ಯವಸ್ಥೆ ಸೇರಿದಂತೆ ವಿವಿಧ ವಿಚಾರಗಳ ಕುರಿತು ಹಾಜರಿದ್ದ ಸಾರ್ವಜನಿಕರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಗಮನ ಸೆಳೆದರು.

ನಗರಾಭಿವೃದ್ದಿಗೆ ಪೂರಕವಾದ ಜನಸ್ನೇಹಿ ಬಜೆಟ್‌ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಅಧಿಕಾರಿಗಳು ಹೆಚ್ಚಿನ ಕಾಳಜಿ ವಹಿಸಬೇಕು. ಬರೀ ಘೋಷಣೆಗಳಿಗೆ ಸೀಮಿತವಾಗದೆ ವಾಸ್ತವಿಕ ವಿಚಾರಗಳಿಗೆ ಹತ್ತಿರವಿರುವ ಆಯವ್ಯಯವನ್ನು ಮಂಡಿಸಲು ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.

ಕಳೆದ ವರ್ಷ ನೀಡಿದ್ದ ಸಲಹೆಗಳಲ್ಲಿ ಬಹುತೇಕ ಸಲಹೆಗಳನ್ನು ಜಾರಿಗೆ ತಂದಿಲ್ಲ. ಕೇವಲ ನೆಪಮಾತ್ರಕ್ಕೆ ಎಂಬಂತೆ ಸಮಾಲೋಚನಾ ಸಭೆಗಳನ್ನು ನಡೆಸಲಾಗುತ್ತಿದೆ. ಪ್ರಸ್ತುತ ಸಭೆಯಲ್ಲಿ ಚುನಾಯಿತ ಪ್ರತಿನಿಧಿಗಳ ಪೈಕಿ ಅರ್ಧಕ್ಕೂ ಹೆಚ್ಚು ಸಂಖ್ಯೆಯ ಜನಪ್ರತಿನಿಧಿಗಳು ಗೈರು ಹಾಜರಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ನಗರಸಭೆ ಅಧ್ಯಕ್ಷೆ ಸುಧಾರಾಣಿ ಲಕ್ಷ್ಮೀನಾರಾಯಣ್ ಅಧ್ಯಕ್ಷತೆ ವಹಿಸಿದ್ದರು. ಪೌರಾಯುಕ್ತ ಪರಮೇಶ್, ಉಪಾಧ್ಯಕ್ಷೆ ಫರ್ಹಾನಾ ತಾಜ್, ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಎಸ್.ರವಿಕುಮಾರ್, ಮಾಜಿ ಅಧ್ಯಕ್ಷ ತ.ನ.ಪ್ರಭುದೇವ್ , ಲೆಕ್ಕಾಧಿಕಾರಿ ನಂದೀಶ್, ವಿವಿಧ ಶಾಖೆಗಳ ಅಧಿಕಾರಿಗಳು, ಸಿಬ್ಬಂದಿ, ಮತ್ತಿತರರು ಹಾಜರಿದ್ದರು.13ಕೆಡಿಬಿಪಿ2-

ದೊಡ್ಡಬಳ್ಳಾಪುರ ನಗರಸಭೆ ಬಜೆಟ್‌ ಪೂರ್ವಭಾವಿ ಸಾರ್ವಜನಿಕ ಸಮಾಲೋಚನಾ ಸಭೆ ಮಂಗಳವಾರ ನಡೆಯಿತು.

Share this article