ಭ್ರಷ್ಟಾಚಾರ ಮುಕ್ತ ಆಡಳಿತಕ್ಕೆ ಮೋದಿ ಬೆಂಬಲಿಸಿ: ಕ್ಯಾವಟೂರ್

KannadaprabhaNewsNetwork | Published : Apr 5, 2024 1:06 AM

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಹತ್ತು ವರ್ಷದ ಆಡಳಿತ ಅವಧಿಯಲ್ಲಿ ದೇಶದ ಜನ ಸಾಮಾನ್ಯರಿಗೆ ಹತ್ತಾರು ಯೋಜನೆಗಳ ಲಾಭ ಸಿಕ್ಕಿದೆ.

ಮರ್ಲಾನಹಳ್ಳಿಯಲ್ಲಿ ಬಿಜೆಪಿ ಶಕ್ತಿಕೇಂದ್ರದ ಕಾರ್ಯಕರ್ತರ ಸಭೆಯಲ್ಲಿ ಡಾ. ಬಸವರಾಜ ಮನವಿ

ಕನ್ನಡಪ್ರಭ ವಾರ್ತೆ ಕಾರಟಗಿ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಹತ್ತು ವರ್ಷದ ಆಡಳಿತ ಅವಧಿಯಲ್ಲಿ ದೇಶದ ಜನ ಸಾಮಾನ್ಯರಿಗೆ ಹತ್ತಾರು ಯೋಜನೆಗಳ ಲಾಭ ಸಿಕ್ಕಿದೆ. ಭ್ರಷ್ಟಾಚಾರ ಮುಕ್ತ ಆಡಳಿತ ನಡೆಸಿರುವ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು. ಈ ನಿಟ್ಟಿನಲ್ಲಿ ನನಗೆ ಬೆಂಬಲ ನೀಡಿ ಎಂದು ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ ಕ್ಯಾವಟೂರ್ ಮನವಿ ಮಾಡಿದರು.

ಇಲ್ಲಿಗೆ ಸಮೀಪದ ಮರ್ಲಾನಹಳ್ಳಿ ಗ್ರಾಮದಲ್ಲಿ ಬುಧವಾರ ಸಂಜೆ ನಡೆದ ಬಿಜೆಪಿ ಶಕ್ತಿ ಕೇಂದ್ರದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ನರೇಂದ್ರ ಮೋದಿ ಅವರಿಂದ ದೇಶದ ಸಾಮಾನ್ಯ ಜನರಿಗೆ ಜನ್‌ ಧನ್, ಉಜ್ವಲ್, ಜಲನಿರ್ಮಲ್, ಕಿಸಾನ್ ಸಮ್ಮಾನ್ ಯೋಜನೆಗಳು ನೇರವಾಗಿ ತಲುಪುತ್ತಿವೆ. ಇಂದು ಸಾಮಾನ್ಯ ಕುಟುಂಬದ ಮಹಿಳೆಯರೂ ಬ್ಯಾಂಕಿನಲ್ಲಿ ಉಳಿತಾಯ ಖಾತೆ ಹೊಂದುವಂತಾಗಿದೆ. ಕಡಿಮೆ ಖರ್ಚಿನಲ್ಲಿ ಆರೋಗ್ಯ ಕಾಪಾಡಿಕೊಳ್ಳುವ ದೃಷ್ಟಿಯಿಂದ ಆಯುಷ್ಮಾನ್ ಭಾರತ ಯೋಜನೆ ತಂದಿರುವ ಮೋದಿ ಅವರ ಸರ್ಕಾರ ಬಡವರಿಗೆ ಕೈಗೆಟುಕುವ ಬೆಲೆಯಲ್ಲಿ ಔಷಧ ದೊರೆಯಲು ಪ್ರತಿಯೊಂದು ಊರಿನಲ್ಲೂ ಜನೌಷಧ ಕೇಂದ್ರ ಪ್ರಾರಂಭಿಸಿದ್ದಾರೆ. ದೇಶಕ್ಕೆ ಉಚಿತವಾಗಿ ಕೋವಿಡ್ ಲಸಿಕೆ ನೀಡಿದ್ದಾರೆ. ಕೊಪ್ಪಳ ಲೋಕಸಭೆ ಕ್ಷೇತ್ರದಲ್ಲಿ ಸಂಸದ ಸಂಗಣ್ಣ ಕರಡಿ ಅವರ ನೇತೃತ್ವದಲ್ಲಿ ರೈಲ್ವೆ ಯೋಜನೆ, ಫ್ಲೈ ಒವರ್, ರಾಷ್ಟ್ರೀಯ ಹೆದ್ದಾರಿ, ಶಿಕ್ಷಣ, ಉದ್ಯೋಗ ಖಾತ್ರಿ ಯೋಜನೆಗಳು ಪ್ರಾಮಾಣಿಕವಾಗಿ ಅನುಷ್ಠಾನಗೊಂಡಿವೆ. ಮುಂದಿನ ೨೦೪೭ರೊಳಗೆ ಭಾರತ ಜಗತ್ತಿ ಬಲಿಷ್ಠ ರಾಷ್ಟ್ರವಾಗಬೇಕು ಎಂಬ ಕನಸಿನೊಂದಿಗೆ ಯೋಜನೆ ರೂಪಿಸಿದ್ದಾರೆ ಎಂದರು.

ಅನುದಾನ ನೀಡಿಲ್ಲ:

ಮಾಜಿ ಶಾಸಕ ಬಸವರಾಜ ದಢೇಸೂಗೂರು ಮಾತನಾಡಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಅಭಿವೃದ್ಧಿಗೆ ಅಥವಾ ಇಲಾಖೆಗಳಿಗೆ ನಯಾಪೈಸೆ ಅನುದಾನ ನೀಡಿಲ್ಲ. ರೈತರಿಗೆ ನೀಡಲು ಹಣವಿಲ್ಲದೆ ಕಾರಟಗಿ ವಿಶೇಷ ಎಪಿಎಂಸಿ ಕಚೇರಿ ಸಾಮಗ್ರಿಗಳನ್ನು ಮುಟ್ಟುಗೋಲು ಹಾಕಲಾಗಿದೆ. ಇದೇ ನಮ್ಮ ಜಿಲ್ಲಾ ಉಸ್ತುವಾರಿ ಸಚಿವರ ಸಾಧನೆ ಎಂದರು.

ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣನವರು ಮಾತನಾಡಿ, ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಕೊಪ್ಪಳ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಣುತ್ತಿದೆ. ಇಂದು ಕ್ಷೇತ್ರದಾದ್ಯಂತ ರೈಲು ಸಂಚಾರ ಮಾಡುವಲ್ಲಿ ಕೇಂದ್ರ ಸರ್ಕಾರದ ಕೊಡುಗೆ ಇದೆ ಎಂದರು.

ಎಂಎಲ್‌ಸಿ ಹೇಮಲತಾ ನಾಯಕ, ಕೊಲ್ಲಾ ಶೇಷಗಿರಿರಾವ್, ಲೋಕಸಭಾ ಚುನಾವಣೆಯ ಸಹ ಪ್ರಭಾರಿ ಎಚ್. ಗಿರೇಗೌಡ, ಜಿಪಂ ಮಾಜಿ ಅಧ್ಯಕ್ಷ ಅಮರೇಶ ಕುಳಗಿ, ಮುಖಂಡರಾದ ಕಳಕನಗೌಡ ಪಾಟೀಲ್, ಶರಣಪ್ಪ ಬಾವಿ, ಸೋಮಶೇಖರಗೌಡ ಮುಸ್ಟೂರ್, ರವಿಸಿಂಗ್ ಯರಡೋಣಾ, ವೀರೇಶ ಇಳಿಗೇರ್, ಪ್ರಹ್ಲಾದರಾವ್ ಕುಲಕರ್ಣಿ, ಗಿರಿಜಾಶಂಕರ್ ಪಾಟೀಲ್, ಬಿ. ಕಾಶಿ ವಿಶ್ವನಾಥ, ರತ್ನಕುಮಾರಿ, ಮಂಜುನಾಥ ಮಸ್ಕಿ ಮತ್ತಿತರು ಇದ್ದರು.