ದಂಡಿಗನಹಳ್ಳಿ ಹೋಬಳಿ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಭೆ । ಶ್ರೇಯಸ್ ಪಟೇಲ್ಗೆ ಮತ ನೀಡಲು ಮನವಿಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಜಿಲ್ಲೆಯ ಒಬ್ಬ ತಬ್ಬಲಿ ಮಗನನ್ನು ಇಲ್ಲಿಯ ಜಿಲ್ಲೆಯ ಜನರು ಈ ಬಾರಿ ಕೈಹಿಡಿಯಬೇಕು. ನ್ಯಾಯ ನೀತಿ, ಸತ್ಯ, ಧರ್ಮದ ಕಡೆ ಮತ ನೀಡುವ ಮೂಲಕ ಒಬ್ಬ ಅನಾಥನನ್ನು ಗೆಲ್ಲಿಸಿ ದೆಹಲಿಗೆ ಕಳುಹಿಸಿಕೊಡಬೇಕು ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ತಿಳಿಸಿದರು.ತಾಲೂಕಿನ ದಂಡಿಗನಹಳ್ಳಿ ಹೋಬಳಿ ಕತ್ತರಿಘಟ್ಟ ಗ್ರಾಮದಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿ, ‘ಜಿಲ್ಲೆಯ ಜನರಿಗೆ ಗೊತ್ತಿರುವ ಹಾಗೆ ಪುಟ್ಟಸ್ವಾಮೀಗೌಡರು ಹಾಗೂ ಎಚ್.ಸಿ.ಶ್ರೀಕಂಠಯ್ಯನವರನ್ನು ಹೇಗೆ ಕುತಂತ್ರದಿಂದ ರಾಜಕೀಯದಲ್ಲಿ ನಿರ್ನಾಮ ಮಾಡಿದರೋ ಅದು ಮತದಾರರಿಗೆ ತಿಳಿದಿದೆ. ಆದರೆ ಕುತಂತ್ರಿಗಳ ವಿರುದ್ಧ ಎದುರಾಳಿಯಾಗಿ ನಿಲ್ಲಲು ಮೂರನೇ ತಲೆಮಾರಿನ ಒಬ್ಬ ಅನಾಥ ಹುಡುಗ ಶ್ರೇಯಸ್ ರಾಜಕೀಯಕ್ಕೆ ಬರಬೇಕಾಗದೆ. ಅವನು ಚುನಾವಣೆಗೆ ನಿಲ್ಲುವುದಿಲ್ಲ, ಎದುರಾಳಿಗಳ ವಿರುದ್ಧ ನಾನೊಬ್ಬ ಹೋರಾಡಲು ಕಷ್ಟವಾಗುತ್ತದೆ ಎಂದು ತಿಳಿಸಿದ್ದ. ಆದರೆ ಹೈಕಮಾಂಡ್ ಜತೆ ಮಾತನಾಡಿ ನಾಯಕರಾದ ನಾವು ಗೆಲ್ಲಿಸಿಕೊಂಡು ಬರುತ್ತೇವೆ. ಮತದಾರರು ಧರ್ಮದ ಪರ ಇದ್ದಾರೆ ಎಂದು ಮಾತು ಕೊಟ್ಟು ಬಂದಿದ್ದೇವೆ. ಹಾಸನ ಜಿಲ್ಲೆಯ ಲೋಕಸಭಾ ಚುನಾವಣೆಯನ್ನು ಇಡೀ ದೇಶವೇ ನೋಡುತ್ತಿದೆ. ದಯಮಾಡಿ ಈ ಬಾರಿ ಒಬ್ಬ ಸ್ವಾಭಿಮಾನಿ ಹುಡುಗನಿಗೆ ಮತ ನೀಡಿ’ ಎಂದು ಮನವಿ ಮಾಡಿದರು.
‘ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಈ ಬಾರಿ ಲೋಕಸಭಾ ಚುನಾವಣೆಯು ನನ್ನ ವೈಯಕ್ತಿಕ ಚುನಾವಣೆಯಲ್ಲ, ಜಿಲ್ಲೆಯ ಸ್ವಾಭಿಮಾನಿ ಜನರ ಯಾತ್ರೆಯಾಗಿದೆ, ಜಿಲ್ಲೆಯಲ್ಲಿ ಇದ್ದ ಕೆಟ್ಟ ರಾಜಕೀಯದ ಗ್ರಹಣ ಈ ಬಾರಿ ಬಿಡಲಿದ್ದು ಯಾರು ತಮ್ಮ ಸ್ವಾಭಿಮಾನದ ಬದುಕನ್ನು ಕಟ್ಟಿಕೊಂಡಿದ್ದಾರೋ ಅವರು ಸ್ವಾಭಿಮಾನದ ವ್ಯಕ್ತಿಗೆ ಮತಹಾಕುವುದರಲ್ಲಿ ಯಾವುದೇ ಅನುಮಾನವಿಲ್ಲ’ ಎಂದು ಹೇಳಿದರು.‘ರಾಜ್ಯ ಸರ್ಕಾರ ಬಡವರ ಪರ ಕೆಲಸ ಮಾಡುತ್ತಿದ್ದು ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರು ಸಬಲೀಕರಣರಾಗಿ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ, ಜಿ.ಪುಟ್ಟಸ್ವಾಮಿಗೌಡರನ್ನು ಅಂದು ಜಿಲ್ಲೆಯ ಮತದಾರರು ಕೈಹಿಡಿದಿದ್ದರು, ಆದರೆ ನಂತರದ ಬೆಳವಳಿಗೆಗಳನ್ನು ನೀವು ನೋಡಿದ್ದೀರಾ, ಜೆಡಿಎಸ್ ಪಕ್ಷದ ಕುಟುಂಬದವರು ಹೇಗೆ ದಬ್ಬಾಳಿಕೆ ನಡೆಸಿ ಅಧಿಕಾರ ನಡೆಸಿದ್ದಾರೆ ಎಂದು ನೀವೇ ಕಣ್ಣಾರೆ ಕಂಡಿದ್ದೀರಾ, ಆದರೆ ಈ ಬಾರಿ ಸಿಕ್ಕ ಅವಕಾಶವನ್ನು ಜನ ಕೈಚಲ್ಲುವುದಿಲ್ಲ ಎಂದು ನಂಬಿದ್ದೇವೆ. ಮತ್ತೆ ಇಂತಹ ಅವಕಾಶ ಬರುವುದಿಲ್ಲ’ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಪುಟ್ಟಸ್ವಾಮೀಗೌಡು ಹಾಗೂ ಶ್ರೀಕಂಠಯ್ಯನವರ ನಂತರ ಕಾಂಗ್ರೆಸ್ ಗೆದ್ದ ಇತಿಹಾಸವಿಲ್ಲ. ಆದರೆ ಅವರ ಮೊಮ್ಮಗ ಶ್ರೇಯಸ್ ಪಟೇಲ್ ಅವರನ್ನು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಈ ಅವಕಾಶವನ್ನು ಕಳೆದುಕೊಳ್ಳದೆ ಚುನಾವಣೆಗೆ ನಿಲ್ಲಬೇಕೆಂದು ತಿಳಿಸಿ ಪ್ರಚಾರಕ್ಕೂ ಕೂಡ ಬರುವುದಾಗಿ ಭರವಸೆ ನೀಡಿದ್ದಾರೆ. ಆದ್ದರಿಂದ ಈ ಚುನಾವಣೆಯು ಸ್ವಾಭಿಮಾನದ ಯಾತ್ರೆಯಾಗಿ ಜನರ ಎದುರು ಹೇಳುತ್ತಿದ್ದೇನೆ ಎಂದರು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಲಕ್ಷ್ಮಣ್, ಮಾಜಿ ಶಾಸಕ ಸಿ.ಎಸ್.ಪುಟ್ಟೇಗೌಡ, ಕಾಂಗ್ರೆಸ್ ಮುಖಂಡರಾದ ಎಚ್.ಕೆ.ಮಹೇಶ್, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಎಮ್.ಶಂಕರ್, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಎನ್.ಡಿ.ಕಿಶೋರ್, ಮಾಜಿ ಯೂತ್ ಕಾಂಗ್ರೆಸ್ ಅಧ್ಯಕ್ಷ ಯುವರಾಜ್, ಉಪ್ಪಿನಹಳ್ಳಿ ಶಶಿಕುಮಾರ್, ಎಚ್.ಎನ್.ರವಿ, ಯಲಿಯೂರ್ ಪ್ರಸಾದ್, ನಾಡನಹಳ್ಳಿ ಆನಂದ್, ಬರಗೂರು ಶಂಕರ್, ಕುಂಬೇನಹಳ್ಳಿ ಪಾಂಡುರಂಗ, ಕೇಶವಗೌಡ ಹಾಜರಿದ್ದರು.ಚನ್ನರಾಯಪಟ್ಟಣದ ದಂಡಿಗನಹಳ್ಳಿ ಹೋಬಳಿ ಕತ್ತರಿಘಟ್ಟ ಗ್ರಾಮದಲ್ಲಿ ಏರ್ಪಡಿಸಿದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಅಭ್ಯರ್ಥಿ ಶ್ರೇಯಸ್ ಪಟೇಲ್ ಮಾತನಾಡಿದರು.