ಶಿರಸಿ: ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಲೋಕ ಕಲ್ಯಾಣಾರ್ಥವಾಗಿ ನಡೆಸಲಾಗುವ ನರಸಿಂಹ ಜಯಂತಿ ಹಿನ್ನೆಲೆಯಲ್ಲಿ ರಥೋತ್ಸವ ಭಕ್ತಿ-ಭಾವದಲ್ಲಿ ಸೋಮವಾರ ಬೆಳಗಿನ ಜಾವದ ವೇಳೆಗೆ ಸಂಪೂರ್ಣಗೊಂಡಿತು.
ಸಂಸ್ಥಾನದ ಆರಾಧ್ಯ ದೇವರಾದ ಲಕ್ಷ್ಮೀನರಸಿಂಹ ದೇವರ ರಥೋತ್ಸವು ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹಾಗೂ ಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆಯಿತು.ಕಲ್ಪೋಕ್ತ ಮಹಾ ಪೂಜೆ, ಮಹಾ ಮಂಗಳಾರತಿ, ೧೨ ಗಂಟೆಗೆ ಮಹಾರಥೋತ್ಸವಕ್ಕೇ ದೇವರನ್ನು ಪಲ್ಲಕ್ಕಿಯ ಮೇಲೆ ಮೆರವಣಿಗೆಯ ಮೂಲಕ ಚಂಡೆ, ವೇದಘೋಷ, ವಾಲಗಗಳ ಮೂಲಕ ಒಯ್ದು ತಡರಾತ್ರಿ ೧೨:೪೫ಕ್ಕೆ ಮಹಾರಥದಲ್ಲಿ ದೇವರ ಸ್ಥಾಪನೆ ನಡೆಯಿತು.
ರಥ ಬೀದಿಯಲ್ಲಿ ಸಿಂಗಾರಗೊಂಡ ರಥದಲ್ಲಿ ಶ್ರೀದೇವರನ್ನು ರಥಾರೂಢಗೊಳಿಸುವಾಗ ಭಕ್ತರು ಹರ್ಷೊದ್ಗಾರ ನಡೆಸಿದರು. ಶ್ರೀಗಳ ಕರಕಮಲಗಳಿಂದ ಪೂಜೆ ನಡೆಯಿತು. ರಥದ ಗಾಲಿಪೂಜೆ, ರಥ ಕಾಣಿಕೆ ಸಲ್ಲಿಕೆ ಬಳಿಕ ನಡು ರಾತ್ರಿ ೧ ಗಂಟೆ ವೇಳೆಗೆ ಭಕ್ತರಿಂದ ರಥ ಎಳೆಯುವ ಕಾರ್ಯಕ್ರಮ ನಡೆಯಿತು. ಯತಿಗಳು ರಥವನ್ನು ಅನುಸರಿಸಿ ಸಾಗಿದರು. ರಥವೇರಿದ ಭಗವಂತ ಆಗಮಿಸುವ ದೃಶ್ಯವನ್ನು ಭಕ್ತರು ಇಕ್ಕೆಲದಲ್ಲಿ ನಿಂತು ಕಣ್ತುಂಬಿಕೊಂಡರು.ರಥೋತ್ಸವದ ಬಳಿಕ ಅಷ್ಟಾವಧಾನ ಸೇವೆಯನ್ನು ಸ್ವೀಕರಿಸಿ ದೇವರು ಮತ್ತೆ ಗರ್ಭಗುಡಿಗೆ ೨:೩೦ರ ಪ್ರವೇಶಿಸಿದನು. ಶ್ರೀಮಠದಲ್ಲಿ ಮುಂಜಾನೆ ನೃಸಿಂಹ ಹವನ, ಇತರ ಪೂಜೆಗಳು ಕೂಡ ನಡೆದವು. ಎ.೩೦ರಿಂದಲೇ ರಥೋತ್ಸವದ ಸಂಬಂಧಿ ಧಾರ್ಮಿಕ ಕಾರ್ಯಗಳು ಆರಂಭವಾಗಿದ್ದವು.
ರಥದ ನಿರ್ಮಾಣ ಹಾಗೂ ರಥೋತ್ಸವದಲ್ಲಿ ರಥದ ಗಾಲಿ ನಿರ್ವಹಣೆಯನ್ನು ಮುಸ್ಲಿಂ ಸಮುದಾಯದವರು ತಲ ತಲಾಂತರದಿಂದ ನಡೆಸಿಕೊಂಡು ಬಂದರೆ, ಪ್ರತಿ ವರ್ಷ ನಡೆಸುತ್ತಿದ್ದ ಸಿಡಿಮದ್ದು ಪ್ರದರ್ಶನದಲ್ಲಿ ಕ್ರೈಸ್ತ ಕುಟುಂಬದ ವ್ಯಕ್ತಿ ನಿರ್ವಹಿಸುವುದರಿಂದ ಈ ರಥೋತ್ಸವ ಭಾವೈಕ್ಯದ ರಥೋತ್ಸವ ಎಂದೇ ಹೆಸರಾಗಿದೆ.ರಥದ ನಿರ್ಮಾಣ ಕಾರ್ಯವನ್ನು 15 ದಿನಗಳ ಕಾಲ ಸೋಂದಾದ ಮುಸ್ಲಿಂ ಸಮುದಾಯವದರು ಭಕ್ತಿ ಭಾವದಲ್ಲಿ ನಡೆಸಿಕೊಂಡು ಬಂದಿದ್ದು, ರಥೋತ್ಸವದ ಯಶಸ್ಸಿಗೆ ಸಹಕಾರಿ ಆಯಿತು.
ಇನ್ನು ರಥೋತ್ಸವದ ಬಳಿಕ ರಾತ್ರಿ ಯಕ್ಷ ಶಾಲ್ಮಲಾ ಸ್ವರ್ಣವಲ್ಲೀ ನೇತೃತ್ವದಲ್ಲಿ ಹೆಸರಾಂತ ಕಲಾವಿದರಿಂದ " ಕಂಸ ದಿಗ್ವಿಜಯ -ಕಂಸ ವಧೆ "ಯಕ್ಷಗಾನ ಬಯಲಾಟ ನಡೆಯಿತು. ನಾಗರಾಜ ಜೋಶಿ ಸೋಂದಾ ಸಂಯೋಜಿಸಿದ್ದರು. ಮಠದ ಆಡಳಿತ ಮಂಡಳಿ ಅಧ್ಯಕ್ಷ ವಿ.ಎನ್.ಹೆಗಡೆ ಬೊಮ್ಮನಳ್ಳಿ, ಕಾರ್ಯದರ್ಶಿ ಜಿ.ವಿ.ಹೆಗಡೆ ಗೊಡವೆಮನೆ ಇತರರು ಇದ್ದರು.ಬಾಕ್ಸ್:
ಯುದ್ಧದ ಹಿನ್ನೆಲೆ: ಸಿಡಿಮದ್ದಿಲ್ಲ!ಭಾರತ ಪಾಕಿಸ್ತಾನದ ನಡುವಿನ ಯುದ್ಧದ ಕಾರಣದಿಂದ ನರಸಿಂಹ ದೇವರ ರಥೋತ್ಸವ ವೇಳೆ ಸುಡುಮದ್ದು ಪ್ರದರ್ಶನ ಕೈ ಬಿಡಲಾಗಿದೆ.
ಸ್ವರ್ಣವಲ್ಲೀಯ ಶ್ರೀಗಳ ಸೂಚನೆಯ ಮೇರೆಗೆ ಈ ನಿರ್ಧಾರಕ್ಕೆ ಬರಲಾಗಿದೆ. ಪ್ರತೀ ವರ್ಷ ಅಂಕೋಲಾದ ಕ್ರೈಸ್ತ ಸಮುದಾಯದವರು ಈ ಸೇವೆ ಸಲ್ಲಿಸುತ್ತಿದ್ದರು. ರಥೋತ್ಸವದ ಸಂಭ್ರಮಕ್ಕೆ ಇದು ಮೆರಗಾಗುತ್ತಿತ್ತು. ಹತ್ತಾರು ಸಾವಿರ ಭಕ್ತರ ಹರ್ಷೋದ್ಘಾರಕ್ಕೂ ಕಾರಣವಾಗುತ್ತಿತ್ತು. ಈ ಮಧ್ಯೆ ಶ್ರೀಗಳು ಯುದ್ಧದಲ್ಲಿ ಭಾರತದ ವಿಜಯ ಪ್ರಾಪ್ತಿ ಹಾಗೂ ಸೈನಿಕರ ರಕ್ಷಣೆಗೂ ವಿಶೇಷವಾಗಿ ಪ್ರಾರ್ಥಿಸಿದರು.ಇನ್ನು ಸ್ವರ್ಣವಲ್ಲೀ ಮಠದ ಗುರುಗಳ ಪರಂಪರೆಯಲ್ಲಿ ನಿತ್ಯ ಅನುಷ್ಠಾನವೂ ಹೆಚ್ಚು. ನರಸಿಂಹ ಜಯಂತಿಗೆ ಬಿಡುವೇ ಇಲ್ಲದಷ್ಟು ಧಾರ್ಮಿಕ ಕಾರ್ಯಕ್ರಮಗಳು. ಈ ಮಧ್ಯೆ ಎರಡು ದಿನಗಳ ಕೃಷಿ ಜಯಂತಿ. ಈ ಒತ್ತಡಗಳ ಮಧ್ಯೆಯೂ ವಿಶ್ರಾಂತಿ ಮಾಡದೇ ಧಾರ್ಮಿಕ ಹಾಗೂ ಸಾಮಾಜಿಕ ಬದ್ಧತೆಯ ದ್ಯೋತಕವಾಗಿ ಶ್ರೀಗಳು ಕಂಡು ಬಂದರು. ದೇವರ ಕೈಂಕರ್ಯದಲ್ಲಿ ನಿಷ್ಠೆಯಲ್ಲಿ ತೊಡಗಿಕೊಂಡ ಶ್ರೀಗಳು ನಮ್ಮ ಭಾಗ್ಯ ಎಂಬ ಭಕ್ತಿಯ ಉದ್ಗಾರ ಶಿಷ್ಯರಲ್ಲಿ ವ್ಯಕ್ತವಾದವು.