ತಿಪಟೂರು : ತಾಲೂಕಿನ ಹೊನ್ನವಳ್ಳಿ ಹೋಬಳಿ ಕಲ್ಕೆರೆ ಗ್ರಾಮದ ಸರ್ವೆ ನಂಬರ್ 70/4ರಲ್ಲಿ ದಲಿತ ರೈತ ಎಚ್.ಎನ್. ವಿಶ್ವನಾಥ್ ರವರಿಗೆ ಸೇರಿದ ನಾಲ್ಕು ಎಕರೆ ಜಮೀನಿಗೆ ಸಂಬಂಧಪಟ್ಟಂತೆ ಅವರಿಗೆ ಖಾತೆ, ಪಹಣಿ ಮಾಡಿಕೊಡುವಲ್ಲಿ ತಹಸೀಲ್ದಾರ್ ವಿಳಂಬ ಮಾಡುತ್ತಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗುತ್ತಿದೆ ಎಂದು ದಲಿತ ಮುಖಂಡ ಪೆದ್ದೀಹಳ್ಳಿ ನರಸಿಂಹಯ್ಯ ಆರೋಪಿಸಿದರು.
ನಗರದ ಖಾಸಗಿ ಹೊಟೆಲ್ ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದ ಅವರು ನಾಲ್ಕು ಎಕರೆ ಭೂಮಿಯನ್ನು ಕ್ರಯಕ್ಕೆ ಪಡೆದುಕೊಂಡಿದ್ದರೂ, ಯಾವುದೇ ವ್ಯಾಜ್ಯ, ತೊಂದರೆ ಇಲ್ಲದಿದ್ದರೂ ಕೆಲವರ ಮಾತು ಕೇಳಿಕೊಂಡು ತಹಸೀಲ್ದಾರ್ ಯಾವುದೇ ಕ್ರಮ ವಹಿಸಿಲ್ಲ. ಕೋರ್ಟ್ ಸಹ ಇವರ ಜಮೀನು ರಿಜಿಸ್ಟರ್ ಮಾಡಿ ಎಂದು ಒಪ್ಪಿಗೆ ಸೂಚಿಸಿದ್ದರೂ ಇವರ ಹೆಸರಿಗೆ ಖಾತೆ ಪಹಣಿ ಮಾಡಲು ತಹಸೀಲ್ದಾರ್ ಒಪ್ಪುತ್ತಿಲ್ಲ.
ಅವರ ಜಮೀನಿನ ಒಳಗೆ ಹೋಗಿ ಕೆಲಸ ಮಾಡಲೂ ಸಹ ಸ್ಥಳೀಯರು ಬಿಡುತ್ತಿಲ್ಲ. ವಿಶ್ವನಾಥ್ ಈಗಾಗಲೇ ಈ ಜಮೀನಿನ ಮೇಲೆ ಹತ್ತು ಲಕ್ಷ ರು. ಕೃಷಿ ಸಾಲ ಪಡೆದುಕೊಂಡಿದ್ದಾರೆ. ದಾಖಲಾತಿಗಳು ಸರಿಯಾಗಿಲ್ಲದಿದ್ದರೆ ಬ್ಯಾಂಕ್ ಹೇಗೆ ಸಾಲ ಕೊಡುತ್ತದೆ. ಎಲ್ಲ ಸರಿಯಾಗಿದ್ದರೂ ತಹಸೀಲ್ದಾರ್ ಏಕೆ ಖಾತೆ ಪಹಣಿ ಮಾಡಿಕೊಡುವಲ್ಲಿ ವಿಳಂಬ ಮಾಡುತ್ತಿದ್ದಾರೆ ತಿಳಿಯುತ್ತಿಲ್ಲ.
ಒಟ್ಟಾರೆ ದಲಿತರಿಗೆ ರಕ್ಷಣೆ ಇಲ್ಲದಂತಾಗಿದೆ ಕೂಡಲೆ ವಿಶ್ವನಾಥ್ರವರಿಗೆ ಖಾತೆ ಪಹಣಿ ಮಾಡಿಕೊಡಬೇಕೆಂದು ಒತ್ತಾಯಿಸಿದರು. ಗ್ರಾಮ ಪಂಚಾಯಿತಿ ಸದಸ್ಯ ಯಗಚೀಕಟ್ಟೆ ರಾಘು ಮಾತನಾಡಿ ಕಿಬ್ಬನಹಳ್ಳಿ ಹೋಬಳಿ ಹಟ್ನ ಗ್ರಾಮದಲ್ಲಿ ನಾಲ್ಕು ಜನ ದಲಿತರಿಗೆ 1975ರಲ್ಲಿಯೇ ಜಮೀನು ಮಂಜೂರು ಮಾಡಲಾಗಿದ್ದು ಅಂದಿನಿಂದಲೂ ಸಾಗುವಳಿ ಮಾಡುತ್ತಾ ಬಂದಿರುತ್ತಾರೆ.
ಆದರೆ ಅವರ ಭೂಮಿಯನ್ನು ಎತ್ತಿನ ಹೊಳೆ ಕಾಮಗಾರಿಗೆ ವಶಪಡಿಸಿಕೊಂಡಿದ್ದು ಅವರಿಗೆ 50ಸಾವಿರ ರೂಗಳ ಪರಿಹಾರವನ್ನು ನೀಡಲಾಗಿದೆ. ಇನ್ನು ಜಮೀನು ದಾಖಲಾತಿ ನೀಡಿ ಉಳಿದ ಪರಿಹಾರ ಪಡೆದುಕೊಳ್ಳಲು ತಿಳಿಸಿರುತ್ತಾರೆ. ಆದರೆ ಅವರು ಸಾಗುವಳಿ ಚೀಟಿ ಹೊಂದಿದ್ದರೂ, ಮಂಜೂರಿ, ಸ್ಕೆಚ್ ಎಲ್ಲವೂ ಇದ್ದರೂ ಅವರ ಹೆಸರಿಗೆ ಖಾತೆ ಆಗಿಲ್ಲ ಎಂದು ಅವರಿಗೆ ಪರಿಹಾರ ನೀಡಿಲ್ಲ.
ಇತ್ತ ಇದ್ದ ಭೂಮಿಯನ್ನು ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಅವರಿಗೆ ತಾಲೂಕು ಆಡಳಿತ ಖಾತೆ ಮಾಡಿಸಿಕೊಟ್ಟು ಪರಿಹಾರದ ಹಣ ತಲುಪುವಂತೆ ಮಾಡಬೇಕೆಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಜಿಪಂ ಸದಸ್ಯ ಕೊಪ್ಪ ಶಾಂತಪ್ಪ, ಕುಪ್ಪಾಳು ರಂಗಸ್ವಾಮಿ, ನಾಗರಾಜು, ಶಿವಕುಮಾರ್, ಟಿ.ಕೆ.ಕುಮಾರ್, ರಮೇಶ್ ಸೇರಿದಂತೆ ದಲಿತ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.
ಕುಂದುಕೊರತೆ ಸಭೆ ಕರೆಯಲಿ
ತಿಪಟೂರು ಉಪವಿಭಾಗಾಧಿಕಾರಿಗಳು ಪಿಟಿಸಿಎಲ್ ಕೇಸುಗಳ ಕಡೆ ಗಮನಹರಿಸಿ ಕ್ರಮ ಕೈಗೊಳ್ಳಬೇಕು. ಪಿಟಿಸಿಎಲ್ ಕೇಸುಗಳ ಮೇಲೆ ಕ್ರಮ ಕೈಗೊಳ್ಳುವುದು ಬಹಳ ವಿಳಂಬವಾಗುತ್ತಿರುವುದು ಏಕೆ ತಿಳಿಯುತ್ತಿಲ್ಲ. ಆದಷ್ಟು ಬೇಗ ಈ ಕೇಸುಗಳನ್ನು ವಿಲೇಮಾರಿ ಮಾಡಲಿ ಎಂದು ಉಪವಿಭಾಗಾಧಿಕಾರಿಗಳಿಗೆ ಮನವಿ ಮಾಡಿದ ಅವರು ಸಹಾಯಕ ಪೊಲೀಸ್ ವರಿಷ್ಠಾಧಿಕಾರಿಗಳು ಶೀಘ್ರವೇ ದಲಿತರ ಕುಂದುಕೊರತೆ ಸಭೆಯನ್ನು ಕರೆಯುವಂತೆ ನರಸಿಂಹಯ್ಯ ಆಗ್ರಹಿಸಿದರು.