ದಾವಣಗೆರೆ: ಡೆಂಘೀಜ್ವರ ಪ್ರಕರಣಗಳು ಜಿಲ್ಲೆಯಲ್ಲಿ ಹೆಚ್ಚದಂತೆ, ಸೊಳ್ಳೆಗಳ ನಿರ್ಮೂಲನೆಗೆ ಸ್ಥಳೀಯ ಸಂಸ್ಥೆಗಳ ಸಹಭಾಗಿತ್ವದಲ್ಲಿ ಕಾರ್ಯೋನ್ಮುಖ ಆಗುವಂತೆ ಆರೋಗ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಗೃಹ ಕಚೇರಿಯಲ್ಲಿ ಭಾನುವಾರ ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಅವರು, ಡೆಂಘೀಜ್ವರವು ಈಡಿಸ್ ಈಜಿಫ್ಟೆ ಸೊಳ್ಳೆಯಿಂದ ಹರಡುವ ಕಾಯಿಲೆಯಾಗಿದೆ. ಸ್ಥಳೀಯ ಸಂಸ್ಥೆಗಳ ಸಹಯೋಗದಲ್ಲಿ ಸೊಳ್ಳೆಗಳ ನಿರ್ಮೂಲನೆ, ಸೊಳ್ಳೆಗಳ ಲಾರ್ವಾ ನಾಶಪಡಿಸುವ ಕೆಲಸ ಆಗಲಿ ಎಂದರು.ಜಿಲ್ಲೆಯಲ್ಲಿ ಡೆಂಘೀಜ್ವರ ಪ್ರಕರಣ ಹೆಚ್ಚಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ. ಜನರಿಗೂ ಸಹ ಮುಂಜಾಗ್ರತಾ ಕ್ರಮಗಳ ಬಗ್ಗೆ, ಸೊಳ್ಳೆಗಳ ನಿರ್ಮೂಲನೆಗೆ ವಹಿಸಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಆಗಬೇಕು. ಡೆಂಘೀ ವಿಚಾರದಲ್ಲಿ ಆರೋಗ್ಯ ಇಲಾಖೆ ನಿರ್ಲಕ್ಷ್ಯ ಮಾಡಬಾರದು ಎಂದು ಹೇಳಿದರು.
ಸಂಶೋಧಕರು ಡೆಂಘೀಜ್ವರಕ್ಕೆ ಲಸಿಕೆಗಳ ಮೇಲೆ ಕೆಲಸ ಮಾಡುತ್ತಿದ್ದಾರೆ. ಲಸಿಕೆ ಬರುವವರೆಗೂ ಸಧ್ಯಕ್ಕೆ ಡೆಂಘೀಜ್ವರದ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು. ಸೊಳ್ಳೆಗಳು, ಲಾರ್ವಾ ನಾಶಪಡಿಸುವ ಕೆಲಸ ಆಗಬೇಕು. ಸ್ಥಳೀಯ ಸಂಸ್ಥೆಗಳು ನಿಯಮಿತವಾಗಿ ಫಾಗಿಂಗ್ ಮಾಡಿಸಬೇಕು. ರಾಸಾಯನಿಕಗಳನ್ನು ಸಿಂಪಡಿಸುವ ಮೂಲಕ ಸೊಳ್ಳೆಗಳ ನಿರ್ಮೂಲನೆ ಮಾಡಬೇಕು. ಸಾರ್ವಜನಿಕರು ಮಳೆನೀರು, ಸ್ವಚ್ಛ ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.ಸೊಳ್ಳೆಗಳ ನಿರ್ಮೂಲನೆಗೆ ಕ್ರಮ ಕೈಗೊಳ್ಳುವ ಕೆಲಸ ಸ್ಥಳೀಯ ಸಂಸ್ಥೆ, ಅಧಿಕಾರಿಗಳಿಂದ ಆಗಬೇಕು. ಆರೋಗ್ಯ ಇಲಾಖೆಯೂ ಸೂಕ್ತ ಸಲಹೆ, ಸೂಚನೆ ನೀಡಬೇಕು. ತೀವ್ರವಾದ ಡೆಂಘೀಜ್ವರ ಜೀವಕ್ಕೆ ಅಪಾಯಕಾರಿ. ವೈದ್ಯಕೀಯ ತುರ್ತು ಸ್ಥಿತಿಯಾಗಿದ್ದು, ಆರೋಗ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ಡೆಂಘೀ ನಿಯಂತ್ರಣ, ನಿರ್ಮೂಲನೆ, ತಡೆಗೆ ಕಾರ್ಯೋನ್ಮುಖರಾಗಬೇಕು ಎಂದು ಸೂಚಿಸಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಷಣ್ಮುಖಪ್ಪ, ಅಧಿಕಾರಿ, ಸಿಬ್ಬಂದಿ ಇದ್ದರು.- - - -7ಕೆಡಿವಿಜಿ5: