ಶಿಕ್ಷಕರ ಸಂಪನ್ಮೂಲ ವೇದಿಕೆ ಸ್ಫೂರ್ತಿಗೆ ಇಂದು ಚಾಲನೆ: ಡಯಟ್ ಪ್ರಾಚಾರ್ಯ ಎಂ.ಎಸ್.ಹೆಗಡೆ

KannadaprabhaNewsNetwork | Published : Jan 18, 2025 12:48 AM

ಸಾರಾಂಶ

ಶಿರಸಿಯ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಶಿಕ್ಷಕರ ಸಂಪನ್ಮೂಲ ವೇದಿಕೆಯಾದ ಸ್ಫೂರ್ತಿಗೆ ಜ.17ರ ಶನಿವಾರ ಚಾಲನೆ ನೀಡಲಾಗುವುದು ಎಂದು ಡಯಟ್ ಪ್ರಾಚಾರ್ಯ ಎಂ.ಎಸ್. ಹೆಗಡೆ ತಿಳಿಸಿದ್ದಾರೆ.

ಶಿರಸಿ: ಕಳೆದ ಹನ್ನೆರಡು ವರ್ಷಗಳಿಂದ ತನ್ನ ಕಾರ್ಯಚಟುವಟಿಕೆಯ ಮೂಲಕ ಸಕ್ರಿಯವಾಗಿ ಶೈಕ್ಷಣಿಕ ಏಳ್ಗೆಗೆ ಕಾರಣವಾಗುತ್ತಿರುವ ಶಿರಸಿಯ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಶಿಕ್ಷಕರ ಸಂಪನ್ಮೂಲ ವೇದಿಕೆಯಾದ ಸ್ಫೂರ್ತಿಗೆ ಜ.18ರ ಶನಿವಾರ ಚಾಲನೆ ನೀಡಲಿದೆ ಎಂದು ಡಯಟ್ ಪ್ರಾಚಾರ್ಯ ಎಂ.ಎಸ್. ಹೆಗಡೆ ತಿಳಿಸಿದ್ದಾರೆ.

ನಗರದ ನಿಲೇಕಣಿಯಲ್ಲಿನ ಡಯಟ್ ಸಂಸ್ಥೆಯಲ್ಲಿ ಸುದ್ದಿಗೋಷ್ಠಿ ನಡೆಸಿ, ಶಿಕ್ಷಕರ ಪ್ರತಿಭೆ, ಗುರುತಿಗೆ ಸಾಧನಾ ಸ್ಫೂರ್ತಿ, ಹೊಸ ಮಾದರಿಯ ಕಲಿಕಾ ವಿಧಾನ ಅಳವಡಿಕೆಗೆ ಜ್ಞಾನ ಸ್ಫೂರ್ತಿ ಹಾಗೂ ನಾಡಿನ ಕಲೆಯ ಏಳ್ಗೆ, ಪರಿಚಯ ಹಾಗೂ ಭಾಷಾ ಪ್ರಾವೀಣ್ಯ ವೃದ್ಧಿಗಾಗಿ ಯಕ್ಷ ಸ್ಫೂರ್ತಿ ಆರಂಭಿಸಲಾಗುತ್ತಿದೆ. ಇದರೊಳಗೆ ಆಸಕ್ತ ಶಿಕ್ಷಕರ ಬಳಗ ಜೊತೆಯಾಗಲಿದೆ. ಶಿಕ್ಷಣ ಇಲಾಖೆಯಲ್ಲಿ ಆಡಳಿತಾತ್ಮಕವಾಗಿ ಒಂದು ವಿಭಾಗ ಇದ್ದರೆ, ಶಿಕ್ಷಕರ ತರಬೇತಿಗಾಗಿ ಡಯಟ್ ಕಾರ್ಯ ಮಾಡುತ್ತದೆ. ಶಿರಸಿಯ ಡಯಟ್ ಶಿಕ್ಷಕರ ಹಾಗೂ ಆಮೂಲಕ ಮಕ್ಕಳ ಏಳ್ಗೆಗೆ ಒಂದಿಷ್ಟು ಹೊಸ ಹೊಸ ಚಟುವಟಿಕೆ ನಡೆಸುವುದು ಆಶಯವಾಗಿದೆ. ನಗರದ ಸೇವಾದಳ ಸಭಾಂಗಣದಲ್ಲಿ ಶನಿವಾರ ಮಧ್ಯಾಹ್ನ ೩:೩೦ಕ್ಕೆ ಸಾಮಾಜಿಕ ಕಾರ್ಯಕರ್ತ ಎಸ್.ಕೆ. ಭಾಗವತ್ ಉದ್ಘಾಟಿಸಲಿದ್ದಾರೆ. ಡಿಡಿಪಿಐ ಬಸವರಾಜ್ ಪಿ., ಸುಮನ್ ಹೆಗಡೆ, ಪತ್ರಕರ್ತ ಅಶೋಕ ಹಾಸ್ಯಗಾರ, ಅಧಿಕಾರಿಗಳಾದ ಸದಾನಂದ ಸ್ವಾಮಿ, ನಾಗರಾಜ್ ನಾಯ್ಕ, ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಕಿರಣ್ ನಾಯ್ಕ, ಪ್ರಾಚಾರ್ಯ ಎಂ.ಎಸ್. ಹೆಗಡೆ ಇತರರು ಭಾಗವಹಿಸಲಿದ್ದಾರೆ ಎಂದರು.

ಸಾಧನಾ ಸ್ಫೂರ್ತಿ ಅಡಿಯಲ್ಲಿ ಪ್ರತಿಭಾವಂತ ಮಕ್ಕಳು, ಶಿಕ್ಷಕರನ್ನು ಗುರುತಿಸಿ ಹೊರ ಪ್ರದೇಶಕ್ಕೆ ಪರಿಚಯಿಸಲು ಭಾವನಾ ಸ್ಫೂರ್ತಿ ಎಂಬ ಇ ಪತ್ರಿಕೆ ಪ್ರಕಟಿಸಿ ಮೊಬೈಲ್ ಮೂಲಕ ಅಂಥ ಸಾಧನೆಗಳನ್ನು ನಾಡಿನ ಹಲವೆಡೆ ಪರಿಚಯಿಸುವದಾಗಿದೆ. ಶಿಕ್ಷಕರ ಸಾಧನೆ ಜೊತೆಗೆ ಮಕ್ಕಳ ಕವನ, ಶಿಕ್ಷಕರ, ಮಕ್ಕಳ ಸಾಧನೆ, ಅಧಿಕಾರಿಗಳ ಕಾರ್ಯ, ಶಾಲಾ ಚಟುವಟಿಕೆ, ಶಾಲಾ ಆವಾರ, ಬಿಸಿಯೂಟದ ವಿಶೇಷತೆ, ಹಸಿರು ಶಾಲೆ ಸೇರಿದಂತೆ ಅನೇಕ ವರದಿಗಳು ಇರಲಿವೆ. ವಾನಳ್ಳಿ ಪ್ರೌಢ ಶಾಲೆಯ ಗಣಿತ ಶಿಕ್ಷಕ, ಮುಖ್ಯಾಧ್ಯಾಪಕ ರಾಘವ ಅನಂತ ಹೆಗಡೆ ಐತಾಳಿಮನೆ ಅವರು ನಿರ್ಮಾಣ ಮಾಡಿದ ಗಣಿತ ಕ್ವಿಜ್ ಗೇಮ್ ಮಕ್ಕಳ ಕುತೂಹಲ ಹೆಚ್ಚಿಸುವ ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅಂಕಗಳ ಏರಿಕೆಗೆ ಸಹಕಾರಿ ಆಗಲಿದೆ. ಇದರ ಭಾಗವಾಗಿ ಜ್ಞಾನ ಸ್ಫೂರ್ತಿ ಎಂಬ ವಿಭಾಗ ಆರಂಭಿಸಲಾಗಿದ್ದು, ಪ್ರಥಮ ಹಂತವಾಗಿ ಈ ಪ್ರಯೋಗ ನಡೆಯಲಿದೆ ಎಂದ ಎಂ.ಎಸ್. ಹೆಗಡೆ, ಸಾವಿರಕ್ಕೂ ಅಧಿಕ ಪ್ರಶ್ನೆಗಳು ಒಳಗೊಂಡ ಈ ತಂತ್ರಜ್ಞಾನ ಪವರ್ ಪಾಯಿಂಟ್ ವಿತ್ ವಿಬಿ ಕೋಡ್ ವ್ಯವಸ್ಥೆಯಲ್ಲಿದ್ದು, ಪ್ರತೀ ತರಗತಿಯ ಮಕ್ಕಳನ್ನು ಐದು ತಂಡವಾಗಿಸಿಕೊಂಡು ಇಲ್ಲಿ ಆಟದ ಮಾದರಿಯಲ್ಲಿ ಗಣಿತದ ಪಾಠ ಮಾಡಿಕೊಳ್ಳಬಹುದಾಗಿದೆ. ನೋಡಿದ, ಆಡಿದ ಸಂಗತಿ ಮಗುವಿನ ನೆನಪಿನಂಗಳದಲ್ಲಿ ಹೆಚ್ಚು ಉಳಿಯುತ್ತದೆ ಎಂಬ ಆಶಯದಲ್ಲಿ ತಂತ್ರಜ್ಞಾನ ಬಳಸಿ ಆರು ತಿಂಗಳ ಶ್ರಮದಿಂದ ಇದನ್ನು ನಿರ್ಮಾಣ ಮಾಡಲಾಗಿದೆ. ಒಂದಂಕ, ಎರಡು, ಮೂರು ಅಂಕ, ನಾಲ್ಕು ಹಾಗೂ ಅದಕ್ಕೂ ಅಧಿಕ ಅಂಕದ ಪ್ರಶ್ನೆಗಳ ಗುಂಪೂ ಇದೆ. ವಾನಳ್ಳಿ ಶಾಲೆಯ ಮಕ್ಕಳ ಗಣಿತದ ಪ್ರಗತಿ ಗಮನಿಸಿ ಇದನ್ನು ಎಲ್ಲರಿಗೂ ಹಂಚಲು ಡಯಟ್ ಮುಂದಾಗಿದೆ. ಗಣಿತದ ಜೊತೆಗೆ ವಿಜ್ಞಾನ, ಸಮಾಜ ವಿಜ್ಞಾನ ಸೇರಿದಂತೆ ಎಲ್ಲ ವಿಷಯದಿಂದ ಇದನ್ನು ಸಜ್ಜುಗೊಳಿಸಬಹುದಾಗಿದೆ ಎಂದು ಹೇಳಿದರು.

ಕಲೆಯನ್ನು ಬೆಳೆಸಬೇಕು, ಅದಕ್ಕೂ ಶಿಕ್ಷಕರ ಕೊಡುಗೆ ಇರಬೇಕು ಎಂಬ ಆಶಯದಲ್ಲಿ ಯಕ್ಷ ಸ್ಫೂರ್ತಿ ಕೆಲಸ ಮಾಡಲಿದೆ. ಕನ್ನಡದ ಭಾಷಾ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ ಈ ಕಲೆಯಲ್ಲಿ ನಮ್ಮ ಶಿಕ್ಷಕರೂ ಪಾಲ್ಗೊಳ್ಳುವಂತೆ ಆಗಬೇಕು. ಈ ಮೂಲಕ ಕನ್ನಡ ಭಾಷೆಯ ಬೆಳವಣಿಗೆಗೆ ಕಾರಣವಾಗಬೇಕು. ಶಿಕ್ಷಕರ ಮೂಲಕ ಮಕ್ಕಳಿಗೆ ಇದು ತಲುಪಬೇಕು ಎಂಬ ಕಾರಣಕ್ಕೆ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕ ಕಲಾವಿದರನ್ನು ಸಂಘಟಿಸಿ ಉತ್ತೇಜಿಸಲು ಯೋಜಿಸಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿ.ಎಸ್. ಭಟ್ಟ ಪಂಚಲಿಂಗ, ನಾರಾಯಣ ಭಾಗವತ್, ಈಶ್ವರ ನಾಯ್ಕ, ಭಾಸ್ಕರ ಹೆಗಡೆ, ರಾಘವ ಹೆಗಡೆ, ಸನ್ಮೇಷ ಪಾಟೀಲ, ನಿಲೇಕಣಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಗಣೇಶ ನಾಯ್ಕ ಇತರರು ಇದ್ದರು.

Share this article