ರಾಜಕೀಯ ದುರುದ್ದೇಶಕ್ಕೆ ದೇವಾಲಯಗಳ ಬಳಕೆ ಸಲ್ಲದು

KannadaprabhaNewsNetwork |  
Published : Jul 28, 2025, 02:04 AM IST
ಕಾರ್ಯಕ್ರಮ ಉದ್ಘಾಟಿಸುತ್ತಿರುವ ಸಚಿವ ದಿನೇಶ್‌ ಗುಂಡೂರಾವ್‌. | Kannada Prabha

ಸಾರಾಂಶ

ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆ ವತಿಯಿಂದ ಪುರಭವನದಲ್ಲಿ ದ.ಕ. ಜಿಲ್ಲೆಯ ಇಲಾಖಾ ವ್ಯಾಪ್ತಿಗೊಳಪಡುವ ದೇವಾಲಯಗಳ ವ್ಯವಸ್ಥಾಪನಾ ಸಮಿತಿಗಳ ಸಮಾಲೋಚನಾ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ದೇವಾಲಯಗಳಲ್ಲಿ ಯಾವುದೇ ರೀತಿಯ ದುರ್ಬಳಕೆಗೆ ವ್ಯವಸ್ಥಾಪನಾ ಸಮಿತಿಗಳು ಅವಕಾಶ ನೀಡಬಾರದು. ಅದೇ ರೀತಿ ದೇವಾಲಯಗಳಲ್ಲಿ ರಾಜಕೀಯ ದುರುದ್ದೇಶ ಈಡೇರಿಸಲು ಧಾರ್ಮಿಕತೆ ಬಳಕೆ ಮಾಡುವ ಕೆಲಸ ಆಗಬಾರದು ಎಂದು ಆರೋಗ್ಯ ಮತ್ತು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಸಲಹೆ ನೀಡಿದ್ದಾರೆ.

ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆ ವತಿಯಿಂದ ನಗರದ ಪುರಭವನದಲ್ಲಿ ಶುಕ್ರವಾರ ದ.ಕ. ಜಿಲ್ಲೆಯ ಇಲಾಖಾ ವ್ಯಾಪ್ತಿಗೊಳಪಡುವ ದೇವಾಲಯಗಳ ವ್ಯವಸ್ಥಾಪನಾ ಸಮಿತಿಗಳ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.

ದೇವಾಲಯ ಎಲ್ಲರಿಗೂ ಸೇರಿದ್ದು. ಯಾರದ್ದೋ ವೈಯಕ್ತಿಕ ಸ್ವಾರ್ಥಗಳಿಗೆ ಬಳಕೆ ಆಗಬಾರದು. ದೇವಾಲಯಗಳು ಧಾರ್ಮಿಕ, ಸಾಮಾಜಿಕ ಹಿತದೃಷ್ಟಿಯಿಂದ ಬಳಕೆ ಆಗಬೇಕೇ ಹೊರತು, ರಾಜಕೀಯ ದುರುದ್ದೇಶಕ್ಕೆ ಬಳಕೆಯಾಗಬಾರದು. ಧಾರ್ಮಿಕತೆಯಲ್ಲಿ ರಾಜಕೀಯ ಸೇರಿಸುವುದು ಆಗಬಾರದು ಎಂದು ತಿಳಿಸಿದರು.

ಮಸೂದೆ ತಡೆಹಿಡಿದಿದ್ದಾರೆ:

ಆದಾಯ ಹೆಚ್ಚಿರುವ ದೇವಾಲಯಗಳ ಆದಾಯದಲ್ಲಿ ಶೇ.5ರಿಂದ 10ರಷ್ಟನ್ನು ಆರ್ಥಿಕವಾಗಿ ತೀರ ಸಂಕಷ್ಟದಲ್ಲಿರುವ ಸಣ್ಣ ದೇವಾಲಯಗಳ ಅಭಿವೃದ್ಧಿಗೆ ಬಳಕೆ ಮಾಡುವುದು, ಅರ್ಚಕ ವರ್ಗದ ಕಲ್ಯಾಣ, ಅವರ ಮಕ್ಕಳಿಗೆ ಸ್ಕಾಲರ್‌ಶಿಪ್‌ ಇತ್ಯಾದಿ ವಿಚಾರಗಳನ್ನೊಳಗೊಂಡ ಮಸೂದೆಯನ್ನು ರಾಜ್ಯ ಸರ್ಕಾರ ಪಾಸ್‌ ಮಾಡಿದ್ದು, ಅದಕ್ಕೂ ವಿರೋಧ ಮಾಡಿ ಈಗ ಅನವಶ್ಯಕವಾಗಿ ತಡೆಹಿಡಿದಿದ್ದಾರೆ. ಈ ಮಸೂದೆ ಈಗ ರಾಷ್ಟ್ರಪತಿ ಬಳಿಯೇ ಇದೆ ಎಂದು ದಿನೇಶ್‌ ಗುಂಡೂರಾವ್‌ ಅಸಮಾಧಾನ ವ್ಯಕ್ತಪಡಿಸಿದರು.

ಅರ್ಚಕರ ತಸ್ತೀಕ್‌ ಏರಿಕೆ:

ಅರ್ಚಕರ ವಾರ್ಷಿಕ ತಸ್ತೀಕ್‌ನ್ನು ಆರಂಭಿಸಿದ್ದು ಮಾಜಿ ಮುಖ್ಯಮಂತ್ರಿ ಗುಂಡೂರಾವ್‌. ಸಿದ್ದರಾಮಯ್ಯ ಅವರ ಹಿಂದಿನ ಸರ್ಕಾರದಲ್ಲಿ ವಾರ್ಷಿಕ 24 ಸಾವಿರ ರು. ಇದ್ದ ತಸ್ತೀಕ್‌ನ್ನು 36 ಸಾವಿರ ರು.ಗೆ ನಂತರ 48 ಸಾವಿರ ರು.ಗೆ ಏರಿಕೆ ಮಾಡಲಾಗಿತ್ತು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಒಮ್ಮೆ ಮಾತ್ರ ಏರಿಕೆ ಮಾಡಿದ್ದರು. ಇದೀಗ ಮತ್ತೆ ಕಾಂಗ್ರೆಸ್‌ ಸರ್ಕಾರ ಕಳೆದ ವರ್ಷ ತಸ್ತೀಕ್‌ ಮೊತ್ತವನ್ನು 72 ಸಾವಿರ ರು.ಗೆ ಏರಿಕೆ ಮಾಡಿದೆ. ಆದರೆ ಕೆಲವು ಜನ ಹಾಗೂ ಸಂಘಟನೆಗಳು ಕಾಂಗ್ರೆಸ್‌ನ್ನು ಹಿಂದೂ ವಿರೋಧಿ ಎಂದು ಅಪಪ್ರಚಾರ ಮಾಡುತ್ತಾರೆ ಎಂದು ಆಕ್ಷೇಪಿಸಿದರು.

ದೇವಾಲಯ ಹಣ ಸರ್ಕಾರಕ್ಕೂ ಹೋಗ್ತಿಲ್ಲ:

ವಿಧಾನ ಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ, ದೇವಾಲಯ ಅಂಗಳದಲ್ಲಿ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳನ್ನು ಬಿಟ್ಟು ಬೇರೆ ಯಾವ ಚಟುವಟಿಕೆಗಳೂ ನಡೆಯಕೂಡದು. ಪ್ರತಿ ಕ್ಷೇತ್ರದ ಧಾರ್ಮಿಕ ಪಾವಿತ್ರ್ಯತೆಯನ್ನು ಕಾಪಾಡುವ ಜವಾಬ್ದಾರಿ ವ್ಯವಸ್ಥಾಪನಾ ಸಮಿತಿಗಳ ಮೇಲಿದೆ ಎಂದು ಸಲಹೆ ನೀಡಿದರು.

ದೇವಾಲಯಗಳ ಹಣ ಇತರ ಉದ್ದೇಶಗಳಿಗೆ ಬಳಕೆ ಮಾಡಲಾಗುತ್ತಿದೆ ಎನ್ನುವುದು ಅಪ್ಪಟ ಸುಳ್ಳು. ದೇವಾಲಯದ ಹಣದಲ್ಲಿ ಒಂದು ಪೈಸೆ ಕೂಡ ಸರ್ಕಾರಕ್ಕೂ ಹೋಗುತ್ತಿಲ್ಲ. ಈ ಹಣ ಶೇ.100ರಷ್ಟು ದೇವಾಲಯಗಳಿಗೇ ಉಪಯೋಗವಾಗುತ್ತಿದೆ. ಈ ಕುರಿತು ದೇವಾಲಯಗಳಲ್ಲಿ ಫಲಕಗಳನ್ನು ಅಳವಡಿಸಿ ಜನರಿಗೆ ತಿಳಿಸುವ ಕಾರ್ಯ ಆಗಬೇಕಿದೆ ಎಂದು ಭಂಡಾರಿ ಹೇಳಿದರು.ವಿಧಾನ ಪರಿಷತ್‌ ಸದಸ್ಯ ಐವನ್‌ ಡಿಸೋಜ ಮಾತನಾಡಿದರು. ಧಾರ್ಮಿಕ ಪರಿಷತ್‌ ಜಿಲ್ಲಾ ಸದಸ್ಯ ಲಕ್ಷ್ಮೀಶ ಗಬ್ಲಡ್ಕ ಉಪನ್ಯಾಸ ನೀಡಿದರು. ಸಂಪನ್ಮೂಲ ವ್ಯಕ್ತಿಯಾಗಿ ರಾಘವ ಎಚ್‌. ಅವರು ವ್ಯವಸ್ಥಾಪನಾ ಸಮಿತಿಗಳ ಜವಾಬ್ದಾರಿಗಳ ಕುರಿತು ತಿಳಿಸಿದರು.

ಮಾಜಿ ಸಚಿವ ರಮಾನಾಥ ರೈ, ಮಾಜಿ ಎಂಎಲ್ಸಿ ಹರೀಶ್‌ ಕುಮಾರ್‌, ಗೇರು ನಿಗಮ ಅಧ್ಯಕ್ಷೆ ಮಮತಾ ಗಟ್ಟಿ, ಮೂಡ ಅಧ್ಯಕ್ಷ ಸದಾಶಿವ ಉಳ್ಳಾಲ್‌, ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಜಿಲ್ಲಾಧಿಕಾರಿ ದರ್ಶನ್‌ ಎಚ್‌.ವಿ., ಜಿಪಂ ಸಿಇಒ ಡಾ.ನಾರ್ವಡೆ ವಿನಾಯಕ ಕರ್ಬಾರಿ, ಧಾರ್ಮಿಕ ದತ್ತಿ ಇಲಾಖೆ ಸದಸ್ಯೆ ಮಲ್ಲಿಕಾ ಪಕ್ಕಳ ಮತ್ತಿತರರು ಇದ್ದರು.

-----------

ಕುಕ್ಕೆ ದೇವಸ್ಥಾನ ನಂ.1

ರಾಜ್ಯದಲ್ಲಿ ಕಳೆದ ವರ್ಷ 155 ಕೋಟಿ ರು. ಆದಾಯದೊಂದಿಗೆ ಕುಕ್ಕೆ ಸುಬ್ರಹ್ಮಣ್ಯ ದೇವಾಲಯ ರಾಜ್ಯದಲ್ಲೇ ನಂ.1 ಸ್ಥಾನದಲ್ಲಿದ್ದು, 2ನೇ ಸ್ಥಾನದಲ್ಲಿ ಕೊಲ್ಲೂರು ದೇವಾಲಯವಿದೆ ಎಂದು ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದರು.

ಕಟೀಲು ದುರ್ಗಾಪರಮೇಶ್ವರಿ ದೇವಾಲಯ ಆದಾಯ 35 ಕೋಟಿ ರು. ಇದ್ದರೆ, ಪೊಳಲಿ ದೇವಾಲಯ 9.50 ಕೋಟಿ ರು., ಸೌತಡ್ಕ ದೇವಾಲಯ 13 ಕೋಟಿ ರು., ಕದ್ರಿ ದೇವಾಲಯ 8.50 ಕೋಟಿ ರು., ಪುತ್ತೂರು ಮಹಾಲಿಂಗೇಶ್ವರ ದೇವಾಲಯ 7.50 ಕೋಟಿ ರು., ಮಂಗಳಾದೇವಿ ದೇವಾಲಯಕ್ಕೆ 4.50 ಕೋಟಿ ರು. ಆದಾಯ ಬಂದಿದೆ ಎಂದು ಬಪ್ಪನಾಡು ದೇವಾಲಯ ಸಿಇಒ ಶ್ವೇತಾ ಪಳ್ಳಿ ಸಭೆಗೆ ಮಾಹಿತಿ ನೀಡಿದರು.

-----------

ರಾತ್ರಿ ಧಾರ್ಮಿಕ ಚಟುವಟಿಕೆಗೆ ಸೂಕ್ತ ನಿರ್ಧಾರ

ರಾತ್ರಿ 11.30ರ ಬಳಿಕ ಧಾರ್ಮಿಕ ಕಾರ್ಯಕ್ರಮಗಳಿಗೆ ಅನುಮತಿ ಪಡೆಯುವ ಕುರಿತು ಸಮಾಲೋಚನಾ ಸಭೆಯಲ್ಲಿ ಉತ್ತರಿಸಿದ ಸಚಿವ ದಿನೇಶ್‌ ಗುಂಡೂರಾವ್‌, ಇದು ಸುಪ್ರೀಂ ಕೋರ್ಟ್‌ನ ಆದೇಶ. ದ.ಕ. ಜಿಲ್ಲೆಯ ಧಾರ್ಮಿಕ ಪದ್ಧತಿಗಳನ್ನು ನೋಡಿಕೊಂಡು ಪೊಲೀಸ್‌ ಇಲಾಖೆ ಜತೆ ಚರ್ಚಿಸಿ ಒಳ್ಳೆಯ ತೀರ್ಮಾನ ಕೈಗೊಳ್ಳಲಿದ್ದೇವೆ. ವ್ಯವಸ್ಥಾಪನಾ ಸಮಿತಿಯವರ ಇತರ ಬೇಡಿಕೆಗಳನ್ನು ಇಲಾಖೆ ಮತ್ತು ಸರ್ಕಾರದ ಮಟ್ಟದಲ್ಲಿ ಈಡೇರಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.

PREV

Recommended Stories

ನನ್ನ ಬಗ್ಗೆ ಮಾತನಾಡುವವರಿಗೆ ಸಿಗಂದೂರು ಚೌಡೇಶ್ವರಿ ತಕ್ಕ ಬುದ್ಧಿ ಕಲಿಸಲಿದ್ದಾಳೆ : ಮಧು ಬಂಗಾರಪ್ಪ
ಡಾ.ಪ್ರಭಾಕರ್‌ ಕೋರೆ 78ನೇ ಜನ್ಮದಿನ ಅರ್ಥಪೂರ್ಣ ಆಚರಣೆ