ಅಖಿಲ ಭಾರತ ವೀರಶೈವ ಸಭಾ ಒತ್ತಾಯದಿಂದ ಬಂದಿದೆ

KannadaprabhaNewsNetwork |  
Published : Jul 05, 2024, 12:52 AM IST
ಸಾಣೆ ಹಳ್ಳಿಯಲ್ಲಿ ನಡೆಯುತ್ತಿರುವ ವಚನ ಕಮ್ಮಟ ಕಾರ್ಯಕ್ರಮದಲ್ಲಿ ಗದುಗಿನ ತೋಟದ ಸಿದ್ದರಾಮ ಸ್ವಾಮೀಜಿ ಮಾತನಾಡಿದರು  | Kannada Prabha

ಸಾರಾಂಶ

ಸಾಣೇಹಳ್ಳಿಯಲ್ಲಿ ನಡೆಯುತ್ತಿರುವ ವಚನ ಕಮ್ಮಟ ಕಾರ್ಯಕ್ರಮದಲ್ಲಿ ಗದುಗಿನ ತೋಟದ ಸಿದ್ದರಾಮ ಸ್ವಾಮೀಜಿ ಮಾತನಾಡಿದರು.

ವಚನ ಕಮ್ಮಟದ 4ನೇ ದಿನದ ಕಾರ್ಯಕ್ರಮದಲ್ಲಿ ಗದುಗಿನ ತೋಟದ ಸಿದ್ಧರಾಮ ಸ್ವಾಮೀಜಿ

ಕನ್ನಡಪ್ರಭ ವಾರ್ತೆ ಹೊಸದುರ್ಗ

ಅಖಿಲ ಭಾರತ ವೀರಶೈವ ಸಭಾ ಎನ್ನುವಂಥದ್ದು ಒತ್ತಾಯದಿಂದ ಬಂದಿದ್ದು, ಅದನ್ನು ಲಿಂಗಾಯತ ಸಭಾ ಎಂದು ಮರು ನಾಮಕರಣ ಮಾಡಬೇಕು ಎಂದು ಗದುಗಿನ ತೋಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.

ತಾಲೂಕಿನ ಸಾಣೇಹಳ್ಳಿಯ ಶಾಮನೂರು ಶಿವಶಂಕರಪ್ಪ ಒಳಾಂಗಣ ರಂಗಮಂದಿರದಲ್ಲಿ ನಡೆದ ವಚನ ಕಮ್ಮಟದ 4ನೇ ದಿನದ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.

ವೀರಶೈವ ಎನ್ನುವ ಪದವನ್ನು ವಚನಗಳಲ್ಲಿ ಇಲ್ಲ. ವೀರಶೈವ ಪದ ಮೊಟ್ಟಮೊದಲು ಬಳಕೆಯಾಗಿರುವುದು ಭೀಮ ಕವಿಯ ಬಸವಪುರಾಣದಲ್ಲಿ. ಇವತ್ತು ವೀರಶೈವ ಪದದ ಮೇಲೆ ಹಕ್ಕು ಸಾಧಿಸುವ ವ್ಯಕ್ತಿಗಳು ಇವತ್ತು ನಮ್ಮ ಮಧ್ಯೆ ಇದ್ದಾರೆ. ವೀರಶೈವ ಪದ ಪ್ರಾಮುಖ್ಯತೆಗೆ ಹುಟ್ಟಿಕೊಂಡಿದೆಯೇ ಹೊರತು ಹಕ್ಕು ಚಲಾಯಿಸುವುದಕ್ಕಲ್ಲ. ತಂತ್ರ, ಕಾರ್ಯತಂತ್ರ, ಕುತಂತ್ರದಿಂದ ವೀರಶೈವ ಪದವನ್ನು ಸೇರಿಸಲಾಗಿದೆ ಎಂದರು.

9ನೇ ತರಗತಿಯ ಪಠ್ಯಪುಸ್ತಕದಲ್ಲಿ ಬಸವಣ್ಣನವರ ಬಗ್ಗೆ ಯಾವುದೇ ವಾದ ವಿವಾದಗಳಿಲ್ಲದೇ ಪರಿಷ್ಕರಣೆಯಾಗಿದೆ. ಆದರೆ ಇವತ್ತು ವೀರಶೈವರು ತಮ್ಮ ಅಸ್ಥಿತ್ವ ಉಳಿಸಿಕೊಳ್ಳುವುದಕ್ಕಾಗಿ ಅದರ ವಿರುದ್ಧವಾಗಿ ಹೋರಾಟಗಳು ಮಾಡುತ್ತಿದ್ದಾರೆ. ಆದ್ದರಿಂದ ನಾವೆಲ್ಲಾ ಸೇರಿಕೊಂಡು ಲಿಂಗಾಯತ ಧರ್ಮದ ಅಸ್ಮಿತೆಯನ್ನು ಉಳಿಸುವ ಕೆಲಸ ಮಾಡಬೇಕು. ಹಿಂದು ಎನ್ನುವುದು ಧರ್ಮವಲ್ಲ; ಅದೊಂದು ಭೌಗೋಳಿಕ ಪ್ರದೇಶ. ಅದೊಂದು ಜೀವನದ ಮಾರ್ಗ. ಹಿಂದು ಧರ್ಮಕ್ಕೂ ಲಿಂಗಾಯತ ಧರ್ಮಕ್ಕೂ ತುಂಬಾ ವ್ಯತ್ಯಾಸ. ಲಿಂಗವಂತ ಧರ್ಮ ಏಕದೇವ ನಿಷ್ಠೆ ಹೊಂದಿದವರು. ಹಿಂದುಗಳ ಪ್ರಭಾವಕ್ಕೆ ಒಳಗಾಗಿ ಲಿಂಗಾಯತರು ಸಹ ಹೋಮ, ಹವನ ಇತ್ಯಾದಿ ವೈದಿಕ ಆಚರಣೆ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದರು.

ಬಸವಾದಿ ಶಿವಶರಣರಿಗೆ ವೈದಿಕ ಪುರೋಹಿತ ಶಾಹಿಯಿಂದ ಸಾಮಾನ್ಯ ಜನರನ್ನು ಮುಕ್ತಗೊಳಿಸಬೇಕು ಎನ್ನುವ ಕಾರಣಕ್ಕೆ ವಚನ ಚಳವಳಿ ಮಾಡಿದರು. ಶ್ರಮಿಕರಿಗೆ ಹಾಗೂ ವೈಶ್ಯರಿಗೆ ಗುಡಿ-ಗುಂಡಾರಗಳಲ್ಲಿರುವ ದೇವರನ್ನು ಪೂಜಿಸುವ ಅಧಿಕಾರವಿರಲಿಲ್ಲ. ಪೂಜಾರಿ ಪುರೋಹಿತರ ಮಧ್ಯೆ ದೊಡ್ಡ ಕಂದಕ ಸೃಷ್ಟಿಯಾಯಿತು. ಇದನ್ನು ಮನಗಂಡೇ ಬಸವಾದಿ ಶರಣರು ಅಂಗೈಯಲ್ಲಿ ಇಷ್ಟಲಿಂಗವನ್ನು ಕರುಣಿಸಿದರು. ನಮ್ಮ ದೇವರನ್ನು ನಾವೇ ಪೂಜಿಸಬೇಕು ಎನ್ನುವ ಧಾರ್ಮಿಕ ಹಿನ್ನಲೆಯಲ್ಲಿ ಇಷ್ಟಲಿಂಗವನ್ನು ಪೂಜಿಸಬಹುದು ಎಂದು ಇಷ್ಟಲಿಂಗದ ಪರಿಕಲ್ಪನೆ ತಂದುಕೊಟ್ಟರು. ಸಮಾಜದಲ್ಲಿದ್ದ ವರ್ಣ, ವರ್ಗ, ಜಾತಿ ಬೇಧವನ್ನು ತೊಡೆದು ಹಾಕಿ ಸಾಮಾಜಿಕ ಸಮಾನತೆಗಾಗಿ ಹೋರಾಟ ಮಾಡಿದರು ಎಂದರು.

ಬೆಂಗಳೂರಿನ ಬಸವರಾಜ ಸಬರದ ಅವರು ಅಷ್ಟಾವರಣ ಕುರಿತು ಮಾತನಾಡಿ, 12 ನೆಯ ಶತಮಾನಕ್ಕಿಂತ ಮೊದಲು ಬ್ರಾಹ್ಮಣರು ಮಾತ್ರ ಗುರುವಾಗಲಿಕ್ಕೆ ಸಾಧ್ಯವಾಗಿತ್ತು. ನಂತರ ಶರಣರು ಇದನ್ನು ವಿರೋಧಿಸಿ ಹುಟ್ಟಿನಿಂದ ಗುರುವಾಗುವುದು ತಪ್ಪು. ಅರ್ಹತೆ, ಸಾಧ್ಯತೆ, ಪ್ರಯತ್ನದಿಂದ ಗುರುವಾಗಲು ಸಾಧ್ಯ ಎಂದು ಚೆನ್ನಬಸವಣ್ಣನವರನ್ನು ಗುರುಸ್ಥಾನದಲ್ಲಿ ಕೂರಿಸಿದರು. ಅನೇಕ ಗುರುಪರಂಪರೆಯ ಹುಟ್ಟಿಗೆ ಶರಣರ ಗುರುಸಿದ್ಧಾಂತ ಕಾರಣವಾಯಿತು. ಗುರು ಶಿಷ್ಯನನ್ನು ಗುರುವನ್ನಾಗಿ ಮಾಡಬೇಕು. ಕಾವಿತೊಟ್ಟವರು ಜಂಗಮರಲ್ಲ ಬಿಳಿಬಟ್ಟೆ ತೊಟ್ಟವರು ಭಕ್ತರಲ್ಲ ಎಂದರು.

ಕಾರ್ಯಕ್ರಮದಲ್ಲಿ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಿದ್ದು, 70 ಜನ ಶಿಬಿರಾರ್ಥಿಗಳು ಉಪಸ್ಥಿತಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಠಿಣ ಪರಿಶ್ರಮ, ಶಿಸ್ತು, ಸಮಯ ನಿರ್ವಹಣೆಯಿಂದ ಯಶಸ್ಸು: ವಿಕ್ರಂ ದತ್
ಪರಶುರಾಮ ದ್ವಾರಕ್ಕೆ ಶೀರೂರು ಶ್ರೀ ಗುದ್ದಲಿ ಪೂಜೆ