ಮೌಲ್ಯಾಂಕನ ಪರೀಕ್ಷೆ ಪದ್ಧತಿ ರದ್ದುಗೊಳಿಸಬೇಕು

KannadaprabhaNewsNetwork | Published : Apr 6, 2024 12:52 AM

ಸಾರಾಂಶ

ಮೌಲ್ಯಾಂಕನ ಪರೀಕ್ಷಾ ಪದ್ಧತಿ ಅವೈಜ್ಞಾನಿಕವಾಗಿದ್ದು, ಹಲವಾರು ಲೋಪದೋಷಗಳಿಂದ ಕೂಡಿದೆ. ರಾಜ್ಯ ಸರ್ಕಾರ, ಶಿಕ್ಷಣ ಇಲಾಖೆ ಕೂಡಲೇ ಈ ಪದ್ಧತಿ ರದ್ದುಪಡಿಸಬೇಕು. ಮೊದಲಿದ್ದ ಪರೀಕ್ಷಾ ಪದ್ಧತಿಯನ್ನೇ ಮುಂದುವರಿಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ರಾಜ್ಯ ಅನುದಾನ ರಹಿತ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ ಅಧ್ಯಕ್ಷ ರೇವಣಸಿದ್ದಪ್ಪ ಹೊನ್ನಾಳಿಯಲ್ಲಿ ಹೇಳಿದ್ದಾರೆ.

- ಅನುದಾನ ರಹಿತ ಖಾಸಗಿ ಶಾಲಾ ಅಡಳಿತ ಮಂಡಳಿಗಳ ಒಕ್ಕೂಟ ಅಧ್ಯಕ್ಷ ರೇವಣಸಿದ್ದಪ್ಪ ಒತ್ತಾಯ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ

ಮೌಲ್ಯಾಂಕನ ಪರೀಕ್ಷಾ ಪದ್ಧತಿ ಅವೈಜ್ಞಾನಿಕವಾಗಿದ್ದು, ಹಲವಾರು ಲೋಪದೋಷಗಳಿಂದ ಕೂಡಿದೆ. ರಾಜ್ಯ ಸರ್ಕಾರ, ಶಿಕ್ಷಣ ಇಲಾಖೆ ಕೂಡಲೇ ಈ ಪದ್ಧತಿ ರದ್ದುಪಡಿಸಬೇಕು. ಮೊದಲಿದ್ದ ಪರೀಕ್ಷಾ ಪದ್ಧತಿಯನ್ನೇ ಮುಂದುವರಿಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ರಾಜ್ಯ ಅನುದಾನ ರಹಿತ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ ಅಧ್ಯಕ್ಷ ರೇವಣಸಿದ್ದಪ್ಪ ಹೇಳಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಲಾ ಶಿಕ್ಷಣ ಇಲಾಖೆ 5, 8 ಹಾಗೂ 9ನೇ ತರಗತಿಗಳಿಗೆ ಪಬ್ಲಿಕ್ ಪರೀಕ್ಷೆ ನಡೆಸುವುದಕ್ಕೆ ಬದಲಾಗಿ ಮೌಲ್ಯಾಂಕನ ಮಾಡುತ್ತೇವೆ ಎಂದು ಪರೀಕ್ಷೆ ನಡೆಸಿದ್ದಾರೆ. ಪಬ್ಲಿಕ್ ಪರೀಕ್ಷೆ ಮಾದರಿಯಲ್ಲಿಯೇ ಆಯಾ ಶಾಲೆಗಳಲ್ಲಿ ಪರೀಕ್ಷೆ ನಡೆಸಿದ್ದಾರೆ. ಅದಕ್ಕೆ ಕೊಠಡಿ ಮೇಲ್ವೀಚಾರಕರಾಗಿ ಬೇರೆ ಶಾಲೆ ಶಿಕ್ಷಕರನ್ನು ನೇಮಿಸಿ ಕಾರ್ಯನಿರ್ವಹಿಸುವಂತೆ ನೋಡಿಕೊಂಡಿದ್ದು ಮಕ್ಕಳಲ್ಲಿ ಆತಂಕ ಉಂಟುಮಾಡಿದೆ ಎಂದು ದೂರಿದರು.

ರುಪ್ಸಾ ಸಂಘಟನೆ ಹಾಗೂ ಶಾಲಾ ಶಿಕ್ಷಣ ಇಲಾಖೆ ನಡುವೆ ಒಂದು ರೀತಿಯ ಶೀತಲಸಮರ ಶುರುವಾಗಿ, ವಿವಾದ ಕೋರ್ಟ್ ಮೇಟ್ಟಿಲೇರಿದೆ. ಅನಂತರ ಕೋರ್ಟ್ ಆದೇಶಕ್ಕೆ ತಲೆಬಾಗಿ ಪರೀಕ್ಷೆ ಹೇಗೋ ನಡೆಸಲಾಯಿತು. ಆದರೆ, ಮೌಲ್ಯಮಾಪನ ಮಾಡಿದ ರೀತಿ ಆಶ್ಚರ್ಯ ತಂದಿದೆ ಎಂದು ಹೇಳಿದರು.

ಮೌಲ್ಯಮಾಪನ ಮಾಡಿದ ಕೆಲವು ಶಿಕ್ಷಕರು, ಮಕ್ಕಳು ಸರಿಯಾದ ಉತ್ತರ ಬರೆದಿದ್ದರೂ ಅಂಕಗಳನ್ನು ಕೊಟ್ಟಿಲ್ಲ. ಆದರೆ ಕೆಲವರು ಸರಿಯಾದ ಉತ್ತರ ಬರೆಯದಿದ್ದರೂ ಅಂಕಗಳನ್ನು ಕೊಟ್ಟಿದ್ದಾರೆ. ಕೆಲವು ಉತ್ತರ ಪತ್ರಿಕೆಗಳಲ್ಲಿ ಅಂಕಗಳನ್ನು ಸರಿಯಾಗಿ (ಟೋಟಲ್ ) ಕೂಡಿಲ್ಲ. ಒಟ್ಟು ಅಂಕಗಳು ಎಂದು ನಮೂದಿಸಿಲ್ಲ. ಈ ರೀತಿ ಅಸಮರ್ಪಕ ಮತ್ತು ಆವೈಜ್ಞಾನಿಕ ಉತ್ತರಪತ್ರಿಕೆಯ ಮರುಮೌಲ್ಯಮಾಪನಕ್ಕೆ ಮತ್ತು ಮರುಎಣಿಕೆಗೆ ಯಾವುದೇ ಅವಕಾಶವೂ ಇಲ್ಲ ಎಂದು ಇಲಾಖೆ ತಿಳಿಸಿದೆ. ಹಾಗಾದರೆ, ಈ ರೀತಿಯ ಪರೀಕ್ಷೆ ನಡೆಸುವುದು ಶಿಕ್ಷಣ ಇಲಾಖೆಗೆ ಬೇಕಿತ್ತಾ ಎಂದು ಪ್ರಶ್ನಿಸಿದರು.

ಶಾಲೆಗಳಿಗೆ ಹಿಂತಿರುಗಿಸಿ ಕೊಟ್ಟ ಉತ್ತರಪತ್ರಿಕೆಗಳಲ್ಲಿ ನಮ್ಮ ಶಾಲಾ ಮಕ್ಕಳಿಗೆ ನಾವೇ ಅಂಕಗಳನ್ನು ನೀಡುವುದಾದರೆ, ಮೌಲ್ಯಾಂಕನ ಮತ್ತು ಮೌಲ್ಯಮಾಪನಕ್ಕೆ ಅರ್ಥವೇನು? ಮೌಲ್ಯಮಾಪನ ಮಾಡಿದ ನಂತರ, ಅಂಕಗಳನ್ನು ಮೌಲ್ಯಮಾಪನ ಕೇಂದ್ರದಲ್ಲಿ ನಮೂಸಿದಿಕೊಳ್ಳಲು ಇಲಾಖೆ ಅವಕಾಶ ಮಾಡಿಕೊಟ್ಟಿಲ್ಲ. ಮೌಲ್ಯಮಾಪನವಾದ ಉತ್ತರ ಪತ್ರಿಕೆಗಳನ್ನು ಆಯಾ ಶಾಲೆಯವರೇ ತೆಗೆದುಕೊಂಡು ಹೋಗಿದ್ದಾರೆ. ಅನಂತರ ಶಾಲೆಯಲ್ಲಿ ಅವರವರೇ ತಿದ್ದಿಕೊಂಡರೆ, ಮೌಲ್ಯಮಾಪನಕ್ಕೆ ಬೆಲೆ ಎಲ್ಲಿ ಬಂತು ಎಂದರು.

ಸುದ್ದಿಗೋಷ್ಠಿಯಲ್ಲಿ ಒಕ್ಕೂಟ ಉಪಾಧ್ಯಕ್ಷ ಎನ್.ಕೆ. ಆಂಜನೇಯ, ಕಡಗಣ್ಣಾರ ರಾಜು, ಪ್ರಧಾನ ಕಾರ್ಯದರ್ಶಿ ವರುಣಾಚಾರಿ ಉಪಸ್ಥಿತರಿದ್ದರು.

- - -

ಕೋಟ್‌ - ಮೌಲ್ಯಮಾಪಕರಿಗೆ ಯಾವುದೇ ತರಬೇತಿ ಇರಲಿಲ್ಲ. ಪ್ರತಿ ಆರು ಜನ ಮೌಲ್ಯಮಾಪಕರಿಗೆ ಒಬ್ಬ ಡಿಸಿ ಅಂತ ನೇಮಿಸುತ್ತಿದ್ದರು. ಇಲ್ಲಿ ಅದಕ್ಕೂ ಅವಕಾಶವಿರಲಿಲ್ಲ. ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯುವ ಸಂದರ್ಭದಲ್ಲಿಯೇ 5, 8, 9ರ ಮೌಲ್ಯಮಾಪನ ಕಾರ್ಯ ಮಾಡಿದ್ದು ಸರಿಯಲ್ಲ. ಹಲವಾರು ತಪ್ಪುಗಳಿಂದ ಕೂಡಿದ ಮೌಲ್ಯಾಂಕನದ ಅಗತ್ಯ ಇರಲಿಲ್ಲ

- ರೇವಣಸಿದ್ದಪ್ಪ, ಒಕ್ಕೂಟ ಅಧ್ಯಕ್ಷ

- - - -5ಎಚ್.ಎಲ್.ಐ1:

ಅವೈಜ್ಞಾನಿಕ ಮೌಲ್ಯಾಂಕನ ಪರೀಕ್ಷೆ ಪದ್ಧತಿ ರದ್ದುಗೊಳಿಸಬೇಕು ಎಂದು ಒಕ್ಕೂಟ ಅಧ್ಯಕ್ಷ ರೇವಣಸಿದ್ದಪ್ಪ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

Share this article