ಕನ್ನಡಪ್ರಭ ವಾರ್ತೆ ದೇವನಹಳ್ಳಿ
ರಾಜಕೀಯ ದುರುದ್ದೇಶ ಹಾಗೂ ವ್ಯವಹಾರಿಕ ವೈರಿಗಳಿಂದ ಸಚಿವ ಕೆ.ಎಚ್. ಮುನಿಯಪ್ಪನವರ ವಿರುದ್ಧ ಅವಹೇಳನಕಾರಿ ಮಾತುಗಳುಳ್ಳ ನಕಲಿ ಧ್ವನಿ ಸುರಳಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಷಡ್ಯಂತರ ರೂಪಿಸಿ ನನ್ನ ರಾಜಕೀಯ ಏಳಿಗೆಯನ್ನು ತುಳಿಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಡಿಸಿಕೆ ಡೆವಲಪರ್ಸ್ನ ಮಾಲೀಕ ಹಾಗೂ ಕಾಂಗ್ರೆಸ್ ಮುಖಂಡ ಡಿ.ಸಿ ಚಂದ್ರು ಸ್ಪಷ್ಟನೆ ನೀಡಿದ್ದಾರೆ.ಪಟ್ಟಣದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಕೆ.ಎಚ್. ಮುನಿಯಪ್ಪ ನವರು ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಅವರ ಬಗ್ಗೆ ನನಗೆ ಅಗಾಧ ಗೌರವವಿದ್ದು, ಯಾರೋ ಕಿಡಿಗೇಡಿಗಳು ನನ್ನ ವಿರುದ್ಧ ಕಳಂಕ ಬರುವ ಹಾಗೆ ಮಾಡುತ್ತಿದ್ದಾರೆ. ಹಾಗಾಗಿ ಕೆ.ಎಚ್. ಮುನಿಯಪ್ಪ ಅವರು ಹಾಗೂ ಆ ಸಮುದಾಯದವರ ಮೇಲೆ ನನಗೆ ಅಪಾರವಾದ ಗೌರವ ಪ್ರೀತಿ ಇದೆ. ಆ ನಕಲಿ ಆಡಿಯೋದಿಂದ ನೋವು ಉಂಟಾಗಿದ್ದರೆ ಕ್ಷಮೆಯಾಚಿಸುತ್ತೇನೆ ಎಂದರು.ಕೆಲ ಪತ್ರಿಕೆಗಳಲ್ಲಿ ಜಿಲ್ಲಾ ಪಂಚಾಯಿತಿ ಆಕಾಂಕ್ಷಿ ಎಂದು ವ್ಯಕ್ತಪಡಿಸಿದ ದಿನದಿಂದ ಇಂತಹ ಸಮಸ್ಯೆಗಳು ಹೆಚ್ಚಾಗಿದೆ. ಪ್ರಜಾಪ್ರಭುತ್ವದಲ್ಲಿ ರಾಜಕೀಯವಾಗಿ ಸ್ಥಾನವನ್ನು ಅಪೇಕ್ಷಿಸುವುದು ಹಾಗೂ ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಳ್ಳುವುದು ತಪ್ಪಾ. ಮೂರು ನಾಲ್ಕು ದಿನಗಳಿಂದ ಅಂಬೇಡ್ಕರ್ ಸೇನೆ ರಾಜ್ಯಧ್ಯಕ್ಷರಾದ.ಪಿ ಮೂರ್ತಿ ಅವರನ್ನು ಭೇಟಿ ಮಾಡಿ ಅವರಿಗೆ ಸತ್ಯ ಸತ್ಯತೆಯನ್ನು ತಿಳಿಸಿದ್ದೇವೆ. ನಕಲಿ ಆಡಿಯೋದ ಹರಿಬಿಟ್ಟಿರುವವರ ವಿರುದ್ಧ ಪ್ರಕರಣ ದಾಖಲಾಗಿದೆ ಹಾಗೂ ನ್ಯಾಯಾಲಯದಲ್ಲಿ ತಡೆಯಾಜ್ಞೆ ತರಲಾಗಿದೆ. ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಜನತೆಯ ಮೇಲೆ ಹಾಗೂ ಪ್ರತಿಯೊಂದು ಸಮುದಾಯದ ಮೇಲೆ ಪರಸ್ಪರ ವ್ಯಕ್ತಿಯ ಮೇಲೆ ಸದಾ ಗೌರವವಿದ್ದು, ಯಾವುದೇ ಸಾಮಾಜಿಕ ಸೇವೆಗೆ ಸದಾ ಸಿದ್ಧನಾಗಿದ್ದೇನೆ ಎಂದರು.ಇದೇ ವೇಳೆ ಕರ್ನಾಟಕ ಭೀಮಸೇನೆ ಕಾರ್ಯದರ್ಶಿ ದೇವರಾಜ್, ಮುನಿರಾಜು ಅಂಬೇಡ್ಕರ್ ಸೇನೆ ಕಾರ್ಯದರ್ಶಿ ದೇವರಾಜ್ ಸಂಚಾಲಕ ಗಿರೀಶ್ ಪ್ರಭುದ್ಧಿ, ಛಲಪತಿ, ಮುನಿಯಪ್ಪ, ಮುನಿರಾಜು ಮತ್ತಿತರು ಇದ್ದರು.೧೯ ದೇವನಹಳ್ಳಿ ಚಿತ್ರಸುದ್ದಿ: ೦೧ ಸುದ್ದಿಗೋಷ್ಠಿಯಲ್ಲಿ ಕಾಂಗ್ರೇಸ್ ಮುಖಂಡ ಡಿ.ಸಿ.ಚಂದ್ರು ಮಾತನಾಡಿದರು.