ಸಂಚಲನ ಮೂಡಿಸಿದ ಬಿಜೆಪಿ ಜೆಡಿಎಸ್‌ ಮೈತ್ರಿ

KannadaprabhaNewsNetwork | Published : Apr 15, 2024 1:16 AM

ಸಾರಾಂಶ

ಎನ್‍ಡಿಎ ಮೈತ್ರಿಕೂಟವು ದೇಶ ಹಾಗೂ ದೇಶದ ಜನರ ಒಳಿತಿಗಾಗಿ ಕೆಲಸ ಮಾಡಲಿದೆ. ಪ್ರಧಾನಿ ಮೋದಿ ಜಾರಿಗೊಳಿಸಿದ ಯೋಜನೆಗಳಿಂದ ದೇಶದ ಜನರ ಬದುಕಿನಲ್ಲಿ ಸುಧಾರಣೆಯಾಗಿದೆ.

ಹರಪನಹಳ್ಳಿ: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ರಾಜ್ಯದಲ್ಲಿ ಸಂಚಲನ ಮೂಡಿಸಿದೆ ಎಂದು ಹರಿಹರ ಮಾಜಿ ಶಾಸಕ. ಎಚ್.ಎಸ್. ಶಿವಶಂಕರ್ ಹೇಳಿದರು.

ಪಟ್ಟಣದ ನಟರಾಜ ಕಲಾಭವನದಲ್ಲಿ ಆಯೋಜಿಸಲಾಗಿದ್ದ ಜೆಡಿಎಸ್ ಬಿಜೆಪಿ ಮೈತ್ರಿ ಸಭೆ ಉದ್ಘಾಟಿಸಿ ಮಾತನಾಡಿದರು.

ಎನ್‍ಡಿಎ ಮೈತ್ರಿಕೂಟವು ದೇಶ ಹಾಗೂ ದೇಶದ ಜನರ ಒಳಿತಿಗಾಗಿ ಕೆಲಸ ಮಾಡಲಿದೆ. ಪ್ರಧಾನಿ ಮೋದಿ ಜಾರಿಗೊಳಿಸಿದ ಯೋಜನೆಗಳಿಂದ ದೇಶದ ಜನರ ಬದುಕಿನಲ್ಲಿ ಸುಧಾರಣೆಯಾಗಿದೆ. ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಜಿ.ಎಂ. ಸಿದ್ದೇಶ್ವರ ಬಹಳಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ ಎಂದು ಹೇಳಿದರು.

ರಾಜ್ಯದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಜನಪ್ರಿಯತೆ ದಿನದಿಂದ ದಿನಕ್ಕೆ ಇನ್ನು ಎತ್ತರಕ್ಕೆ ಹೋಗುತ್ತಿರುವುದು ಚುನಾವಣಾ ರಣಭೂಮಿಯಲ್ಲಿರುವ ನಮ್ಮಕಾರ್ಯಕರ್ತರಿಗೆ ಉತ್ಸಾಹ ತಂದುಕೊಟ್ಟಿದೆ ಎಂದು ಹೇಳಿದರು.

ದಾವಣಗೆರೆ ಜಿಲ್ಲಾ ಜೆಡಿಎಸ್ ಅದ್ಯಕ್ಷ ಬಿ.ಚಿದಾನಂದಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಕಾಂಗ್ರೆಸ್ ದರ್ಪದ ರಾಜಕೀಯ ಮಾಡಿಕೊಂಡು ಬಂದಿದೆ.

ರಾಜ್ಯ ಹಾಗೂ ದೇಶದ ಅಭಿವೃದ್ಧಿಗೆ ಬಿಜೆಪಿ-ಜೆಡಿಎಸ್ ಮೈತ್ರಿ ಅವಶ್ಯವಾಗಿತ್ತು. ಹಿಂದೆ ರಾಜ್ಯದಲ್ಲಿ ಬಿಜೆಪಿ ಜತೆಗೆ ಮೈತ್ರಿ ಸರ್ಕಾರ ರಚಿಸಿದಾಗ ಪಕ್ಷಕ್ಕೆ ಹೆಚ್ಚಿನ ಕೆಲಸ ಮಾಡಲು ಸಾಧ್ಯವಾಗಿತ್ತು. ಆದರೆ, ಕಾಂಗ್ರೆಸ್ ಜತೆಗಿನ ಮೈತ್ರಿ ವೇಳೆ ಹೆಚ್ಚಿನ ಬೆಂಬಲ ದೊರಕಲಿಲ್ಲ ಎಂದರು.

ಜೆಡಿಎಸ್ ತಾಲೂಕು ಅದ್ಯಕ್ಷ ಶಿರಹಟ್ಟಿ ದಂಡೆಪ್ಪ ಮಾತನಾಡಿ, ಜೆಡಿಎಸ್ ಕರ್ನಾಟಕದ ಪ್ರಾದೇಶಿಕ ಪಕ್ಷವಾಗಿ, ರಾಜ್ಯ ರಾಜಕಾರಣದಲ್ಲಿ ತನ್ನದೇ ಮಹತ್ವ ಹೊಂದಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮೋಸ ಮಾಡುತ್ತಿದೆ. ಎಸ್‍ಸಿಪಿ, ಟಿಎಸ್‍ಪಿ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ವ್ಯಯಿಸುತ್ತಿದೆ ಎಂದು ದೂರಿದ ಅವರು ರಾಜ್ಯದ ಬೊಕ್ಕಸ ಖಾಲಿಯಾಗಿದೆ ಎಂದು ತಿಳಿಸಿದರು.

ಕೇಂದ್ರದಲ್ಲಿ ಅಧಿಕಾರಕ್ಕೆ ಬರದಿದ್ದರೆ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಬೇಕಾಗುತ್ತದೆ ಎಂದು ಕಾಂಗ್ರೆಸ್‍ನವರೇ ಹೇಳುತ್ತಿದ್ದಾರೆ. 2006ರಲ್ಲಿ ಬಿಜೆಪಿ ಜೊತೆ ಜೆಡಿಎಸ್‌ನ ಕುಮಾರಸ್ವಾಮಿ ಕೈಜೋಡಿಸುವುದರೊಂದಿಗೆ ರಾಜ್ಯ ರಾಜಕಾರಣದಲ್ಲಿ ಹೊಸಪರ್ವ ಹುಟ್ಟುಹಾಕಿ ಈಗ ಮತ್ತೆ ಜೆಡಿಎಸ್ ಬಿಜೆಪಿ ಮೈತ್ರಿಯಿಂದ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಬಂದಿದೆ ಎಂದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಕೊಟ್ರೇಶ, ಕೆ.ಆನಂದಪ್ಪ, ಜಿಲ್ಲಾ ಕಾರ್ಯಾಧ್ಯಕ್ಷ ಟಿ.ಗಣೇಶ ದಾಸಕರಿಯಪ್ಪ, ಮುಖಂಡರಾದ ಡಾ.ಎಂ. ಸುರೇಶ, ನಾಗರಾಜ, ರಾಜಪ್ಪ, ಎಂ.ಮಲ್ಕಪ್ಪ, ಟಿ.ಗೋಣೆಪ್ಪ, ಸಣ್ಣವೀರಪ್ಪ, ಎಂ.ಮಲ್ಲಿಕಾರ್ಜುನ, ಟಿ.ಮಂಜುನಾಥ, ಬಸವರಾಜ, ಅಜ್ಜಯ್ಯ, ಮುನೇಗೌಡ, ಸಾಸ್ವಿಹಳ್ಳಿ ಬಸಣ್ಣ, ಬಸವರಾಜ ಕಲ್ಲಳ್ಳಿ ಸೇರಿದಂತೆ ಇತರರು ಹಾಜರಿದ್ದರು.

Share this article