ರಕ್ತದ ಬಣ್ಣ ಒಂದೇ ಆಗಿದ್ದು, ಜಾತಿ ಧರ್ಮಗಳಿಲ್ಲ: ಡೆನಿಸ್ ಡೆಸಾ

KannadaprabhaNewsNetwork | Published : Jan 28, 2024 1:18 AM

ಸಾರಾಂಶ

ತೋಟ್ಟಂನ ಸಮನ್ವಯ-ಸರ್ವಧರ್ಮ ಸೌಹಾರ್ದ ಸಮಿತಿ ನೇತೃತ್ವದಲ್ಲಿ ಸ್ಥಳೀಯ ಶ್ರೀ ಭಕ್ತಿ ಉದಯ ಪಂಡರೀನಾಥ ಭಜನಾ ಮಂದಿರ, ಸೈಂಟ್ ಆನ್ಸ್ ಚರ್ಚ್, ಜಾಮಿಯ ಮಸೀದಿ ಮತ್ತು ಇತರ ಸಂಘಟನೆಗಳ ಸಹಯೋಗದಲ್ಲಿ ‘ಸ್ವಯಂ ಪ್ರೇರಿತ ಬ್ರಹತ್ ರಕ್ತಾದಾನ ಶಿಬಿರ’ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ರಕ್ತದಾನಕ್ಕಿಂತ ಮಹತ್ತರವಾದ ದಾನ ಇನ್ನೊಂದಿಲ್ಲ. ಪ್ರತಿಯೊಬ್ಬರ ರಕ್ತದ ಬಣ್ಣ ಒಂದೇ ಆಗಿದ್ದು, ರಕ್ತಕ್ಕೆ ಯಾವುದೇ ಜಾತಿ ಧರ್ಮಗಳಿಲ್ಲ ಎಂದು ತೊಟ್ಟಂ ಸಂತ ಅನ್ನಮ್ಮ ಚರ್ಚಿನ ಧರ್ಮಗುರು ಡೆನಿಸ್ ಡೆಸಾ ಹೇಳಿದರು.

ಅವರು ಇಲ್ಲಿನ ತೋಟ್ಟಂನ ಸಮನ್ವಯ-ಸರ್ವಧರ್ಮ ಸೌಹಾರ್ದ ಸಮಿತಿ ನೇತೃತ್ವದಲ್ಲಿ ಸ್ಥಳೀಯ ಶ್ರೀ ಭಕ್ತಿ ಉದಯ ಪಂಡರೀನಾಥ ಭಜನಾ ಮಂದಿರ, ಸೈಂಟ್ ಆನ್ಸ್ ಚರ್ಚ್, ಜಾಮಿಯ ಮಸೀದಿ ಮತ್ತು ಇತರ ಸಂಘಟನೆಗಳ ಸಹಯೋಗದಲ್ಲಿ ‘ಸ್ವಯಂ ಪ್ರೇರಿತ ಬ್ರಹತ್ ರಕ್ತಾದಾನ ಶಿಬಿರ’ವನ್ನು ಉದ್ಘಾಟಿಸಿ ಮಾತನಾಡಿದರು.

ಮನುಕುಲವನ್ನು ಕಾಪಾಡುವುದಕ್ಕಾಗಿ ಭಗವಂತನು ಬಹುಶಃ ಪ್ರತಿಯೊಬ್ಬರಿಗೂ ಒಂದೇ ಬಣ್ಣದ ರಕ್ತವನ್ನು ಕೊಟ್ಟಿದ್ದಾನೆ ಎಂದವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಗಜಾನನ ಯಕ್ಷಗಾನ ಕಲಾಸಂಘ ಅಧ್ಯಕ್ಷ ಶಶಿಧರ್ ಎಂ. ಅಮೀನ್ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಮಲ್ಪೆ ಠಾಣೆಯ ಠಾಣಾಧಿಕಾರಿ ಸುಶ್ಮಾ, ಜಿಲ್ಲಾಸ್ಪತ್ರೆಯ ಸರ್ಜನ್‌ ಡಾ.ವೀಣಾ ಕುಮಾರಿ, ಸಮನ್ವಯ ಸರ್ವಧರ್ಮ ಸೌಹಾರ್ದ ಸಮಿತಿಯ ಅಧ್ಯಕ್ಷ ರಮೇಶ್ ತಿಂಗಳಾಯ, ಜೀವ ಸಂಜೀವಿನಿ ರಕ್ತದಾನ ಬಳಗದ ಅಧ್ಯಕ್ಷ ಶ್ರೀನಿವಾಸ್, ಬಡಾನಿಡಿಯೂರು ಪಂಚಾಯಿತಿ ಸದಸ್ಯ ಪ್ರವೀಣ್, ಸಿಎಸ್ಐ ಎಬನೇಜರ್ ಚರ್ಚ್‌ ಧರ್ಮಗುರು ಎಡ್ವಿನ್ ಜೋಸೇಫ್ ಮತ್ತು ಸ್ಥಳೀಯ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ರಕ್ತದಾನ ಮಾಡಿದ ಎಲ್ಲಾ ದಾನಿಗಳಿಗೆ ಜಿಲ್ಲಾಸ್ಪತ್ರೆ ವತಿಯಿಂದ ಪ್ರಮಾಣ ಪತ್ರಗಳನ್ನು ನೀಡಿ ಆಭಿನಂದಿಸಲಾಯಿತು. ಸರ್ವಧರ್ಮ ಸೌಹಾರ್ದ ಸಮಿತಿಯ ಕಾರ್ಯದರ್ಶಿ ಲೆಸ್ಲಿ ಆರೋಜಾ ಕಾರ್ಯಕ್ರಮ ನಿರೂಪಣೆ ಮಾಡಿದರು.60ನೇ ಬಾರಿ ರಕ್ತದಾನ ಮಾಡಿದ ಧರ್ಮಗುರು

ಸಾಸ್ತಾನ ಸಂತ ಅಂತೋನಿ ಚರ್ಚಿನ ಧರ್ಮಗುರು ಸುನೀಲ್ ಡಿಸಿಲ್ವಾ ಕೇವಲ ರಕ್ತದಾನ ಮಾಡುವ ಉದ್ದೇಶದಿಂದ ಆಗಮಿಸಿ ತಮ್ಮ 60ನೇ ಬಾರಿಯ ರಕ್ತದಾನ ಮಾಡಿದರು. ಅಲ್ಲದೆ ರಕ್ತದಾನ ಮಾಡಲು ಕಾರಣಾವಾದ ಘಟನೆಯನ್ನು ಹಾಗೂ ರಕ್ತದಾನದಿಂದ ಜೀವಕ್ಕೆ ಆಗುವ ಒಳ್ಳೆಯ ಪರಿಣಾಮಗಳನ್ನು ವಿವರಿಸಿದರು.

Share this article