ಸಿದ್ದರಾಮಯ್ಯ ಜೈಲಿಗೆ ಹೋಗುವ ದಿನ ಹತ್ತಿರದಲ್ಲಿದೆ: ಜನಾರ್ದನ ರೆಡ್ಡಿ

KannadaprabhaNewsNetwork |  
Published : Oct 05, 2024, 01:39 AM IST
ಸಂಡೂರಿಗೆ ಶುಕ್ರವಾರ ಆಗಮಿಸಿದ ಮಾಜಿ ಸಚಿವ ಹಾಗೂ ಗಂಗಾವತಿ ಶಾಸಕ ಗಾಲಿ ಜನಾರ್ಧನರೆಡ್ಡಿಯವರನ್ನು ಭವ್ಯವಾಗಿ ಸ್ವಾಗತಿಸಲಾಯಿತು.  | Kannada Prabha

ಸಾರಾಂಶ

ಈಗ ನಾನು ಅನುಭವಿಸಿದ ನೋವನ್ನು ಅವರು ಅನುಭವಿಸುವ ಕಾಲ ಬಂದಿದೆ.

ಸಂಡೂರು: ಸಿದ್ದರಾಮಯ್ಯ ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿ, ಜಿಲ್ಲೆಯ ಜನರ ಪ್ರೀತಿಯಿಂದ ದೂರ ಮಾಡಿದ್ದರು. ಈಗ ನಾನು ಅನುಭವಿಸಿದ ನೋವನ್ನು ಅವರು ಅನುಭವಿಸುವ ಕಾಲ ಬಂದಿದೆ. ಸಿದ್ದರಾಮಯ್ಯ ಜೈಲಿಗೆ ಹೋಗುವ ದಿನ ಹತ್ತಿರದಲ್ಲಿದೆ ಎಂದು ಮಾಜಿ ಸಚಿವ ಹಾಗೂ ಗಂಗಾವತಿ ಶಾಸಕ ಗಾಲಿ ಜನಾರ್ಧನ ರೆಡ್ಡಿ ಹೇಳಿದರು.

ಪಟ್ಟಣದ ವಿಜಯ ವೃತ್ತದಲ್ಲಿ ಬಿಜೆಪಿ ಸಂಡೂರು ಮಂಡಲದಿಂದ ಹಮ್ಮಿಕೊಂಡಿದ್ದ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಬಳ್ಳಾರಿ ಜಿಲ್ಲೆಯನ್ನು ರಾಜ್ಯ, ದೇಶದಲ್ಲಿ ಅಷ್ಟೇ ಅಲ್ಲ, ಪ್ರಪಂಚದಲ್ಲೇ ಪ್ರಸಿದ್ಧ ಕೇಂದ್ರವನ್ನಾಗಿ ಮಾಡುವುದು, ಇಲ್ಲಿ ಜಿಂದಾಲ್‌ನಂತಹ ಹಲವು ಕೈಗಾರಿಕೆಗಳು ಸ್ಥಾಪನೆಯಾಗಬೇಕು. ಜಿಲ್ಲೆಯ ಜನತೆಗೆ ಉದ್ಯೋಗಾವಕಾಶಗಳು ದೊರೆತು ಅಭಿವೃದ್ಧಿ ಕಾಣುವಂತಾಗಬೇಕು ಎಂಬ ಕನಸನ್ನು ಹೊಂದಿದ್ದೆ. ಆದರೆ, ನನ್ನ ಕನಸಿಗೆ ತಣ್ಣೀರನ್ನು ಎರಚಲಾಯಿತು. ಸಂಡೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಮನೆ ಮನೆಗೆ ಬಂದು ಬಿಜೆಪಿ ಅಭ್ಯರ್ಥಿಯ ಪರವಾಗಿ ಮತಯಾಚಿಸುವೆ. ಬಿಜೆಪಿ ಅಭ್ಯರ್ಥಿ ಗೆಲುವಿಗೆ ಶ್ರಮಿಸುವೆ ಎಂದರು.

ಬಿಜೆಪಿ ಮುಖಂಡ ಕೆ.ಎಸ್. ದಿವಾಕರ್ ಮಾತನಾಡಿ, ಈ.ತುಕಾರಾಂ ನಾಲ್ಕು ಬಾರಿ ಶಾಸಕರಾಗಿದ್ದಾರೆ. ಸಂಡೂರಿನ ಜನತೆಗೆ ಶುದ್ಧ ಕುಡಿಯುವ ನೀರನ್ನು ಕೊಡಲಾಗಿಲ್ಲ. ನಾರಿಹಳ್ಳಕ್ಕೆ ಸಂಡೂರಿನ ಚರಂಡಿ ನೀರು ಹೋಗಿ ಸೇರುತ್ತಿದೆ. ಸಂಡೂರಿನ ಜನತೆ ಅದೇ ನೀರನ್ನೇ ಕುಡಿಯುವಂತಾಗಿದೆ. ಬಿಜೆಪಿಯ ಆಡಳಿತಾವಧಿಯಲ್ಲಿ ಹಾಗೂ ಜನಾರ್ದನ ರೆಡ್ಡಿ ಮಂತ್ರಿಯಾಗಿದ್ದ ಸಂದರ್ಭದಲ್ಲಿ ₹೨೦೦ ಕೋಟಿ ವೆಚ್ಚದಲ್ಲಿ ಸಂಡೂರು-ಹೊಸಪೇಟೆ, ಕೂಡ್ಲಿಗಿ, ತೋರಣಗಲ್ಲು, ಶ್ರೀಕುಮಾರಸ್ವಾಮಿ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಯಿತು. ಈ ಬಾರಿಯ ಉಪ ಚುನಾವಣೆಯಲ್ಲಿ ಬಿಜೆಪಿ ಬಾವುಟ ಹಾರಿಸಲು ಎಲ್ಲರೂ ಒಟ್ಟಾಗಿ ಶ್ರಮಿಸೋಣ ಎಂದರು.

ಸಭೆಗೂ ಮುಂಚೆ ಸಂಡೂರಿಗೆ ಆಗಮಿಸಿದ ಗಾಲಿ ಜನಾರ್ಧನ ರೆಡ್ಡಿ ಅವರನ್ನು ಕಲಾ ತಂಡಗಳೊಂದಿಗೆ ಹೂಮಳೆ ಸುರಿಸಿ ಭವ್ಯವಾಗಿ ಸ್ವಾಗತಿಸಲಾಯಿತು. ಗಾಲಿ ಜನಾರ್ಧನ ರೆಡ್ಡಿ ಪಟ್ಟಣದಲ್ಲಿಯ ಪ್ರಭುದೇವರ ಸಂಸ್ಥಾನ ವಿರಕ್ತಮಠಕ್ಕೆ ತೆರಳಿ, ಶ್ರೀಮಠದ ಪ್ರಭುಸ್ವಾಮೀಜಿಯವರ ಆಶೀರ್ವಾದ ಪಡೆದರು. ಸಾರ್ವಜನಿಕ ಸಭೆಯ ನಂತರ ಅವರು ಸಂಡೂರಿನ ಪುರಾಣ ಪ್ರಸಿದ್ಧ ಶ್ರೀಕುಮಾರಸ್ವಾಮಿ, ಶ್ರೀಹರಿಶಂಕರ ಹಾಗೂ ಶ್ರೀಉಡಚಲಾಪರಮೇಶ್ವರಿ ದೇವಸ್ಥಾನಗಳಿಗೆ ತೆರಳಿ, ದರ್ಶನ ಪಡೆದರು.

ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಬಂಗಾರು ಹನುಮಂತು, ಜಿಲ್ಲಾ ಘಟಕದ ಉಪಾಧ್ಯಕ್ಷ ಜಿ.ಟಿ. ಪಂಪಾಪತಿ, ಸಂಡೂರು ಮಂಡಲ ಅಧ್ಯಕ್ಷ ನಾನಾಸಾಹೇಬ್ ನಿಕ್ಕಂ, ಮುಖಂಡರಾದ ಉಡೇದ ಸುರೇಶ್, ಅಡಿವೆಪ್ಪ, ಓಬಳೇಶ್, ದರೋಜಿ ರಮೇಶ್, ಆರ್.ಟಿ. ರಘುನಾಥ್, ರಾಮಕೃಷ್ಣ, ಪ್ರವೀಣ್ ಕೆ., ತಿರುಮಲ, ಬಾಬುನಾಯ್ಕ್, ಪ್ರಭುಗೌಡ, ದೀಪಾ, ಪುಷ್ಪಾ, ಕರಡಿ ಯರಿಸ್ವಾಮಿ, ವಿ.ಎಸ್. ಶಂಕರ್, ಪಿ.ವಿ. ಶ್ರೀನಿವಾಸಲು, ಪರಶುರಾಮ್ ಮುಂತಾದವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದು ಮಧ್ಯಾಹ್ನ 3ಕ್ಕೆ ಪಿಯುಸಿ ಫಲಿತಾಂಶ
ಕಾಡುಪ್ರಾಣಿಗಳ ಸಂತಾನಶಕ್ತಿ ಹರಣಕ್ಕೆ ರಾಜ್ಯ ಸರ್ಕಾರದಿಂದ ಚಿಂತನೆ: ಖಂಡ್ರೆ