ಕನಕಪುರ: ಈಗಿನ ಮಕ್ಕಳು ಭವಿಷ್ಯದಲ್ಲಿ ಉದ್ಯೋಗ ಪಡೆಯುವುದಕ್ಕಿಂತ ಚೆನ್ನಾಗಿ ಓದಿ ನೀವೇ ನೂರಾರು ಉದ್ಯೋಗ ಸೃಷ್ಟಿ ಮಾಡುವ ಗುರಿ ಇಟ್ಟು ಕೊಳ್ಳುವಂತೆ ಡಿಸಿಎಂ ಡಿ.ಕೆ. ಶಿವಕುಮಾರ್ ಮಕ್ಕಳಿಗೆ ಕಿವಿಮಾತು ಹೇಳಿದರು.
ನಗರದಲ್ಲಿ ರೂರಲ್ ಎಜುಕೇಷನ್ ಸೊಸೈಟಿ ಸ್ಥಾಪಕ ಅಧ್ಯಕ್ಷ ಹಾಗೂ ಮಾಜಿ ಶಾಸಕ ಎಸ್. ಕರಿಯಪ್ಪ 125ನೇ ಜನ್ಮ ದಿನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂದು ಪೂಜ್ಯ ಕರಿಯಪ್ಪನವರ 125ನೇ ಜಯಂತ್ಯುತ್ಸವ ಕಾರ್ಯಕ್ರಮ ಆಚರಿಸುತ್ತುದ್ದೇವೆ. ಇಂದು ಶ್ರೀರಾಮನವಮಿಯನ್ನು ಬಹಳ ಅದ್ಧೂರಿಯಾಗಿ ಹಳ್ಳಿ ಹಳ್ಳಿಗಳಲ್ಲೂ ಆಚರಿಸುತ್ತಿದ್ದಾರೆ. ಸಮಾಜ ಸೇವೆ ಮಾಡುವವರನ್ನು ಸಮಾಜ ಗುರುತಿಸುತ್ತದೆ. ಹೀಗಾಗಿ ನಮ್ಮಲ್ಲಿ ರಾಮನ ತಂದೆ ದಶರಥನಿಗಿಂತ ರಾಮನ ಬಂಟ ಹನುಮನಿಗೆ ಹೆಚ್ಚು ದೇವಾಲಯಗಳಿವೆ. ಕರಿಯಪ್ಪನವರು ಸಮಾಜದಲ್ಲಿ ಮಾಡಿರುವ ಸೇವೆ, ಕನಕಪುರಕ್ಕೆ ಅವರು ಕೊಟ್ಟಿರುವ ಶಕ್ತಿ ಅಪಾರವಾದುದು ಎಂದು ತಿಳಿಸಿದರು.
ಶಾಲೆಯಲ್ಲಿ ಟಿಸಿ ಕೊಟ್ಟು ಕಳಿಸಿದ್ದರು:ಕರಿಯಪ್ಪನವರು ನಮ್ಮ ತಾಲೂಕಿನಲ್ಲಿ ಜ್ಞಾನದ ಸುಗಂಧವನ್ನು ಇಡೀ ಪ್ರಪಂಚಕ್ಕೆ ಹರಡಿದ್ದು, ಹೀಗಾಗಿ ನಾವು ಅವರನ್ನು ಸ್ಮರಿಸುತ್ತಿದ್ದೇವೆ. ಅಮ್ಮನ ನೆನಪು ಪ್ರೀತಿಯ ಮೂಲ, ಗುರುವಿನ ನೆನಪು ಜ್ಞಾನದ ಮೂಲ, ದೇವರ ನೆನಪು ಭಕ್ತಿಯ ಮೂಲ, ಈ ಮೂರರ ನೆನಪು ಮನುಷ್ಯತ್ವದ ಮೂಲ, ಮನುಷ್ಯತ್ವ ಮೋಕ್ಷಕ್ಕೆ ಮೂಲ. ನಾವು ಪೂಜ್ಯ ಕರಿಯಪ್ಪನವರನ್ನು ಸ್ಮರಿಸುತ್ತಾ ಅವರ ಮಾರ್ಗದರ್ಶನದಲ್ಲಿ ಸಾಗಿ ಅವರ ಋಣ ತೀರಿಸಲು ನಾವೆಲ್ಲರೂ ಸೇರಿದ್ದೇವೆ. ನನಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಬೇಕು ಎಂದು ನಮ್ಮ ಪೋಷಕರು ಬೆಂಗಳೂರಿನಲ್ಲಿ ಎನ್ಪಿಎಸ್ ಶಾಲೆಗೆ ಸೇರಿಸಿದರು. ನನ್ನ ತುಂಟಾಟ ಹೆಚ್ಚಾಗಿ ನನಗೆ ಅವರು ಟಿಸಿ ಕೊಟ್ಟು ಕಳಿಸಿದರು.
ಮತ್ತೆ ಅದೇ ಶಾಲೆಗೆ ಸೇರಿಸಬೇಕು ಎಂದು ಶಾಸಕರಾಗಿದ್ದ ಕರಿಯಪ್ಪನವರ ಬಳಿಗೆ ನನ್ನನ್ನು ಕರೆತಂದರು. ನಂತರ ಅವರು ಆಗಿನ ಶಿಕ್ಷಣ ಸಚಿವ ಮಲ್ಲಿಕಾರ್ಜುನಸ್ವಾಮಿ ಅವರ ಬಳಿಗೆ ಕರೆದುಕೊಂಡು ಹೋದರು. ಅವರ ಮಾತಿಗೂ ಶಾಲೆಯ ಪ್ರಾಂಶುಪಾಲ ಗೋಪಾಲಕೃಷ್ಣ ಅವರು ನನಗೆ ಸೀಟು ಕೊಡಲಿಲ್ಲ. ನಂತರ ನಾವು ಸಿಎಂ ದೇವರಾಜ ಅರಸು ಅವರ ಮನೆಗೆ ಹೋದೆವು. ಅವರು ನಮಗೆ ವಿದ್ಯಾವರ್ಧಕ ಶಾಲೆಯಲ್ಲಿ ಸೀಟು ಕೊಡಿಸಿದರು. ಹೀಗೆ ನನ್ನ ಬದುಕಿನಲ್ಲಿ ಬದಲಾವಣೆ ಪಡೆಯಲು ಕರಿಯಪ್ಪನವರು ಕೂಡ ಪಾತ್ರ ವಹಿಸಿದ್ದರು ಎಂದು ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕಿದರು.
ಅಂದೇ ನನ್ನ ಮನಸ್ಸಿನಲ್ಲಿ ನಿಶ್ಚಯಿಸಿ ಶಾಸಕರು, ಮಂತ್ರಿಗಳು, ಮುಖ್ಯಮಂತ್ರಿಗಳ ಮನೆ ನೋಡಿ ನಾನು ಅವರಂತೆ ಶಾಸಕನಾಗಬೇಕೆಂದು ರಾಜಕೀಯ ಕ್ಷೇತ್ರದಲ್ಲಿ ಅಲ್ಲಿಂದ ಇಲ್ಲಿಯವರೆಗೆ ಬಂದಿದ್ದೇನೆ. ನೀವೆಲ್ಲರೂ ನನ್ನ ಬೆಳೆಸಿದ್ದೀರಿ. ಮುಂದೆ ಏನೋ ಗೊತ್ತಿಲ್ಲ, ಕರಿಯಪ್ಪನವರು ನಾಲ್ಕು ಬಾರಿ ಶಾಸಕರಾಗಿದ್ದರು. ತಾಲೂಕಿನ ಜನತೆ ನನ್ನನ್ನು ಎಂಟು ಬಾರಿ ಗೆಲ್ಲಿಸಿ ಶಕ್ತಿ ನೀಡಿದ್ದಾರೆ. ಈ ಶಾಲಾ ಆಡಳಿತ ಮಂಡಳಿಗೆ ಹೊಸ ರೂಪ ನೀಡುತ್ತಿರುವುದು ಶ್ಲಾಘನೀಯ. ನಾನು ಹುಟ್ಟುತ್ತಾ ಕೃಷಿಕ, ವೃತ್ತಿಯಲ್ಲಿ ಉದ್ಯಮಿ, ಆಯ್ಕೆಯಲ್ಲಿ ಶಿಕ್ಷಣ ತಜ್ಞ, ಆಸಕ್ತಿಯಲ್ಲಿ ರಾಜಕಾರಣಿಯಾಗಿದ್ದೇನೆ ಎಂದು ತಮ್ಮ ಆಸಕ್ತಿಗಳನ್ನು ಹಂಚಿಕೊಂಡರು.
ಕನಕಪುರದ ಗಾಂಧಿ ಕರಿಯಪ್ಪ: ಕನಕಪುರದ ಗಾಂಧೀ ಎಂದೇ ಖ್ಯಾತಿ ಗಳಿಸಿದ್ದ ಕರಿಯಪ್ಪನವರು ಗ್ರಾಮೀಣ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು ಎಂದು ಆಗಿನ ಕಾಲದಲ್ಲಿ ರೂರಲ್ ಎಜುಕೇಶನ್ ಸೊಸೈಟಿ ಆರಂಭಿಸಿದರು. ಈ ಸಂಸ್ಥೆಯಲ್ಲಿ ಮೊದಲು ರೇಷ್ಮೆ ಅಧ್ಯಯನ ಆರಂಭಗೊಂಡಿತು. ಈ ಭಾಗದಲ್ಲಿ ಹಾಲು ಹಾಗೂ ರೇಷ್ಮೆ ಬೆಳೆ ಆಧಾರಸ್ತಂಭ, ನೀವು ಉದ್ಯೋಗವನ್ನೇ ನಂಬಿಕೊಂಡು ಇರದೇ ನೀವೇ ನೂರು ಉದ್ಯೋಗ ಸೃಷ್ಟಿ ಮಾಡುವಂತಾಗಬೇಕೆಂಬ ಉದ್ದೇಶದಿಂದ ಇಲ್ಲಿ ಕೃಷಿ ಕಾಲೇಜು ಆರಂಭಿಸಲು ನಾನು ಸೂಚಿಸಿ ಅನುಮೋದನೆ ಕೊಡಿಸಿದ್ದೇನೆ. ತಾಲೂಕಿನ ಮಕ್ಕಳು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಬಾಂಗ್ಲಾದೇಶ ನೊಬೆಲ್ ಪ್ರಶಸ್ತಿ ವಿಜೇತ ಮೊಹಮದ್ ಯೂನಸ್ ಅವರು ಒಂದು ಮಾತು ಹೇಳಿದ್ದು, ನೀವು ಒಬ್ಬ ವ್ಯಕ್ತಿಗೆ ಮೀನನ್ನು ಊಟವಾಗಿ ಕೊಟ್ಟರೆ ಅದು ಆ ಒಂದು ಹೊತ್ತಿಗೆ ಮಾತ್ರ ಸಹಾಯವಾಗುತ್ತದೆ. ಆದರೆ ಅದೇ ವ್ಯಕ್ತಿ ಗೆ ಮೀನುಗಾರಿಕೆ ಕಳಿಸಿದರೆ, ಅವನ ಇಡೀ ಜೀವನಕ್ಕೆ ನೆರವಾಗುತ್ತದೆ. ಅದೇ ರೀತಿ ನೀವು ಬೇರೆಯವರಿಗೆ ಉದ್ಯೋಗ ನೀಡುವ ಉದ್ಯಮಿಗಳಾಗಿ ಬೆಳೆಯಬೇಕು ಎಂದು ಸಲಹೆ ನೀಡಿದರು.
ನೀರಿನಲ್ಲಿ ನೆನೆಯದ, ಅಗ್ನಿಯಲ್ಲಿ ಸುಡದ ಗುಪ್ತ ನಿಧಿ ಎಂದರೆ ಅದು ವಿದ್ಯೆ ಮಾತ್ರ. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಈ ಗುಪ್ತ ನಿಧಿ ಸಿಗಬೇಕು ಎಂದು ಆಗಿನ ಕಾಲದಲ್ಲಿ ಕರಿಯಪ್ಪನವರು ಶಿಕ್ಷಣ ಕ್ಷೇತ್ರಕ್ಕೆ ಆದ್ಯತೆ ನೀಡಿದರು. ಕರಿಯಪ್ಪನವರು ಲಕ್ಷಾಂತರ ಜನರಿಗೆ ವಿದ್ಯೆ ನೀಡಿದ ಸರಸ್ವತಿ ಪುತ್ರ. ಇದೇ ಜಿಲ್ಲೆಯಲ್ಲಿ ಕರಿಯಪ್ಪ, ಶ್ರೀ ಶಿವಕುಮಾರ ಸ್ವಾಮೀಜಿ, ಶ್ರೀ ಬಾಲಗಂಗಾಧರ ನಾಥ ಸ್ವಾಮಿಗಳು, ವೆಂಕಟಪ್ಪನವರು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯನ್ನುಂಟು ಮಾಡಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಸದಸ್ಯ ಡಾ.ಮಂಜುನಾಥ್, ವಿಧಾನ ಪರಿಷತ್ ಸದಸ್ಯ ಎಸ್.ರವಿ, ಸುಧಾಮ್ ದಾಸ್, ಆರ್ಇಎಸ್ ಸಂಸ್ಥೆಯ ಅಧ್ಯಕ್ಷ ಎಚ್.ಕೆ. ಶ್ರೀಕಂಠು ಸೇರಿದಂತೆ ಆಡಳಿತ ಮಂಡಳಿ ನಿರ್ದೇಶಕರು ಹಾಗೂ ಬೋಧಕ, ಬೋಧಕೇತರ ವರ್ಗ ಮತ್ತು ವಿದ್ಯಾರ್ಥಿ ಗಳು ಉಪಸ್ಥಿತರಿದ್ದರು.
"ನಾವು ಬೆಂಗಳೂರಿನವರು " ಪುನರುಚ್ಚರಿಸಿದ ಡಿಸಿಎಂ
ನಾವೆಲ್ಲರೂ ಬೆಂಗಳೂರಿನವರು ಸಂಗಮ, ಮದ್ದೂರು, ಮಳವಳ್ಳಿ, ತುಮಕೂರು, ಹೊಸಕೋಟೆ ಗಡಿವರೆಗಿನವರೆಲ್ಲರೂ ಬೆಂಗಳೂರಿಗರೆ. ಆಡಳಿತಾತ್ಮಕ ದೃಷ್ಟಿಯಿಂದ ಬೇರೆ ಬೇರೆ ಜಿಲ್ಲೆಯಾಗಿದೆ. ನಾವು ರಾಜಕಾರಣಿಗಳು ಯುದ್ಧ ನಡೆಸುವಂತೆ ನಡೆದುಕೊಳ್ಳುತ್ತಿದ್ದೇವೆ. "ಯುದ್ಧ ಗೆಲ್ಲುವವನು ವೀರನಲ್ಲ, ಜನರ ಮನಸ್ಸನ್ನು ಗೆಲ್ಲುವವನು ನಿಜವಾದ ವೀರ " ಎಂದು ತಮ್ಮ ವಿರೋಧಿಗಳಿಗೆ ಟಾಂಗ್ ನೀಡಿದರು.
"ಮನುಷ್ಯ ಹುಟ್ಟುವಾಗ ತಂದೆ-ತಾಯಿ, ದೇವರು-ಗುರು ಹಾಗೂ ಸಮಾಜದ ಋಣದಲ್ಲಿ ಮನುಷ್ಯ ಹುಟ್ಟುತ್ತಾನೆ. ಈ ಋಣವನ್ನು ಧರ್ಮದಿಂದ ತೀರಿಸಬೇಕು ಎಂದು ಮಹಾಭಾರತದಲ್ಲಿ ಭೀಷ್ಮ ಹೇಳಿದ್ದಾರೆ. ಇಲ್ಲಿ ನಾವು ಯಾರೂ ಶಾಶ್ವತವಲ್ಲ. ನಾವು ಹುಟ್ಟು ಸಾವಿನ ಮಧ್ಯೆ ಏನು ಸಾಧನೆ ಮಾಡುತ್ತೇವೋ ಅದೇ ಶಾಶ್ವತ " ಎಂದು ಶಿವಕುಮಾರ್ ಹೇಳಿದರು.
ಶಿಕ್ಷಣ ಪ್ರಬಲವಾದ ಅಸ್ತ್ರ:
ಅದನ್ನು ಯಾರೂ ಬೇಕಾದರೂ ಬಳಸಬಹುದು, ಅದರಿಂದ ಜಗತ್ತನ್ನು ಬದಲಿಸಬಹುದು ಎಂದು ನೆಲ್ಸನ್ ಮಂಡೇಲಾ ಹೇಳಿದ್ದಾರೆ. ನಾನು ಪದವಿ ಓದುವಾಗಲೇ ದೇವೇಗೌಡರ ವಿರುದ್ಧ ಸ್ಪರ್ಧೆ ಮಾಡಲು ಅವಕಾಶ ಸಿಕ್ಕಿತು. ನಾನು ಪದವಿ ಪೂರ್ಣಗೊಳಿಸಲು ಆಗಲಿಲ್ಲ. ನಂತರ ನನ್ನ 47ನೇ ವಯಸ್ಸಿನಲ್ಲಿ ಮೈಸೂರು ಮುಕ್ತ ವಿವಿಯಲ್ಲಿ ಪದವಿ ಪಡೆದೆ ನಾನು ಶಾಸಕನಾಗಿ, ಮಂತ್ರಿಯಾಗಿದ್ದಕ್ಕಿಂತ ಹೆಚ್ಚು ಸಂತೋಷಗೊಂಡಿದ್ದು ಪದವಿ ಪಡೆದಾಗ. ನಾನು ಮೊದಲ ಬಾರಿಗೆ ಶಾಸಕನಾಗಿ ವಿಧಾನಸಭೆಗೆ ಹೋದಾಗ ಘಟಾನುಘಟಿ ನಾಯಕರಿದ್ದರು. ಅವರ ಮಾತು ಕೇಳಿದಾಗ, ನಾನು ಚೆನ್ನಾಗಿ ಓದಿಕೊಂಡು ಬರಬೇಕಿತ್ತು ಎಂದು ಅನಿಸಿತ್ತು. ಎಲ್ಲದಕ್ಕಿಂತ ಶಿಕ್ಷಣ ದೊಡ್ಡದು ಎಂದು ಆಗ ಅನಿಸಿತು " ಎಂದು ಬೇಸರ ವ್ಯಕ್ತಪಡಿಸಿದರು.
"ನೀವೆಲ್ಲರೂ ಈ ಸಂಸ್ಥೆಗೆ ಹೆಚ್ಚಿನ ದಾನ ಕೊಡಿಸಿ, ಈ ಸಂಸ್ಥೆಯನ್ನು ಇನ್ನಷ್ಟು ಹೆಮ್ಮರವಾಗಿ ಬೆಳೆಯುವಂತೆ ಮಾಡಿ. ಪ್ರಕೃತಿಯಲ್ಲಿ ಮರ, ಗಿಡ, ನದಿ, ಹಸು ಪರೋಪಕಾರಕ್ಕಾಗಿಯೇ ಇವೆ. ನಮ್ಮ ಈ ದೇಹ ಶಾಶ್ವತವಲ್ಲ, ಹೀಗಾಗಿ ನಾವು ಬದುಕಿರುವಷ್ಟು ದಿನ ಬೇರೆಯವರಿಗೆ ಉಪಕಾರ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ನೀವೆಲ್ಲರೂ ಈ ಸಂಸ್ಥೆಯ ಬೆಳವಣಿಗೆಗೆ ಸಹಕಾರ ನೀಡಬೇಕು. ನಾನು ಕೂಡ ಶಿಕ್ಷಣ ಸಂಸ್ಥೆಗಳಿಗಾಗಿ ಸುಮಾರು 25 ಎಕರೆ ಜಾಗ ದಾನ ಮಾಡಿದ್ದೇವೆ ಎಂದು ತಿಳಿಸಿದರು.