ಜಿಲ್ಲಾ ಬಹುಜನ ಸಮಾಜ ಪಕ್ಷದ ಕಾರ್ಯಕರ್ತರ ಸಭೆ,
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಶೋಷಿತರು ಮುಂಚೂಣಿಗೆ ಧಾವಿಸುವ ಹಾಗೂ ಅಧಿಕಾರ ಪಡೆಯಲಿಚ್ಚಿಸುವ ನಿಟ್ಟಿನಲ್ಲಿ ಅಂಬೇಡ್ಕರ್ ಸಿದ್ಧಾಂತವನ್ನು ಪ್ರತಿಬಿಂಬಿಸುವ ಪಕ್ಷದ ಕೈಬಲಪಡಿಸುವುದು ಪ್ರತಿಯೊಬ್ಬರ ಧ್ಯೇಯವಾಗಬೇಕು ಎಂದು ಬಹುಜನ ಸಮಾಜ ಪಕ್ಷದ ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ ಹೇಳಿದರು.
ನಗರದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಮಂಗಳವಾರ ನಡೆದ ಜಿಲ್ಲಾ ಬಹುಜನ ಸಮಾಜ ಪಕ್ಷದ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದರು. ದೇಶವನ್ನಾಳಿದ ಎರಡು ರಾಷ್ಟ್ರೀಯ ಪಕ್ಷಗಳ ಕೊಡುಗೆ ಶೂನ್ಯ. ನೆಹರು ಕಾಲಘಟ್ಟದಿಂದ ಮೋದಿ ಕಾಲದವರೆಗೂ ಶೋಷಿತರಿಗೆ ಸ್ಪಂದಿಸುವ ಗುಣ ಬೆಳೆಸಿಕೊಂಡಿಲ್ಲ. ಒಂದೆಡೆ ಬಿಜೆಪಿ ಧರ್ಮಗಳ ನಡುವೆ ವಿಷಬೀಜ ಭಿತ್ತಿದರೆ, ಇನ್ನೊಂದೆಡೆ ಕಾಂಗ್ರೆಸ್ ದಲಿತರ ಮತಕ್ಕಾಗಿ ಓಲೈಕೆ ರಾಜಕಾರಣ ಮಾಡಿ ಅಧಿಕಾರ ಗಿಟ್ಟಿಸಿಕೊಳ್ಳುತ್ತಿದೆ ಎಂದು ದೂರಿದರು.ನೂರಾರು ವರ್ಷಗಳಿಂದ ವಾಸಿಸುವ ಬಹುಜನರಿಗೆ ಇಂದಿಗೂ ಸ್ವಂತ ನಿವೇಶನ, ಭೂಮಿಗಳಿಲ್ಲ. ಕೇಂದ್ರ ಸರ್ಕಾರ ರೈತರಿಗೆ ಸ್ಪಂದಿಸುತ್ತಿಲ್ಲ ಹಾಗೂ ವಿದ್ಯಾವಂತ ಯುವಕರಿಗೆ ಉದ್ಯೋಗ ಒದಗಿಸದಿರುವ ಕಾರಣ ಆತ್ಮಹತ್ಯೆಗೆ ಶರಣಾಗುವವರ ಸಂಖ್ಯೆ ಹೆಚ್ಚುತ್ತಿದೆ. ಉದ್ಯಮಿಗಳಿಗೆ ಪರೋಕ್ಷವಾಗಿ ಸಾಲ ಮನ್ನಾ ಮಾಡುವ ಕೇಂದ್ರ ರೈತರಿಗೆ ಬೆಳೆ ಪರಿಹಾರ ನೀಡದೇ ದೂಷಿಸುತ್ತಿದೆ ಎಂದು ಆರೋಪಿಸಿದರು.
ದೇಶದ ಬೆನ್ನೆಲು ರೈತರಿಗೆ ನೆರವಾಗುತ್ತೇವೆ ಎಂದು ಹೇಳುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕೃಷಿ ಚಟುವಟಿಕೆ ಬಳಸುವ ಕೀಟನಾಶಕ, ರಸಗೊಬ್ಬರಗಳನ್ನು ಐದು ಪಟ್ಟು ಬೆಲೆ ಏರಿಸಿ, ಹಿಂಬದಿಯಿಂದ ಅದೇ ರೈತರಿಗೆ ಕಿಸಾನ್ ಸಮಾನ್ ಯೋಜನೆಯಡಿ ವಾರ್ಷಿಕ 6 ಸಾವಿರ ಹಣ ಜಮಾವಣೆ ಮಾಡುತ್ತಿರುವುದು ಸರಿಯೇ ಎಂದು ಪ್ರಶ್ನಿಸಿದರು.ಸರ್ಕಾರಿ ವಲಯದ ಸಂಸ್ಥೆ ಖಾಸಗೀಕರಣವಾಗಿ ಹಲವಾರು ಮಂದಿ ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಈ ನಡುವೆ ಯುವಕರಿಗೆ ಹೊಸದಾಗಿ ಉದ್ಯೋಗ ಕಲ್ಪಿಸುವುದಾಗಿ ಪ್ರಧಾನಮಂತ್ರಿಯವರು ಪೊಳ್ಳು ಭರವಸೆ ನೀಡುತ್ತಿರುವುದು ಹಾಸ್ಯಾಸ್ಪದ ಎಂದ ಅವರು, ಕೇಂದ್ರದ ನಡೆ ರೈತರಿಗೆ ಸುಣ್ಣವಾದರೆ, ಉದ್ಯಮಿಗಳಿಗೆ ಬೆಣ್ಣೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಸಿದ್ದರಾಮಯ್ಯ ಕಾಂಗ್ರೆಸ್ ಸರ್ಕಾರ ಅಹಿಂದಾ ಮುಖವಾಡ ಧರಿಸಿ ದಲಿತರು, ಹಿಂದುಳಿದವರು ಹಾಗೂ ಶೋಷಿತರಿಗೆ ಮಂಕುಬೂದಿ ಎರಚುತ್ತಿದೆ. ಎಸ್ಸಿ, ಎಸ್ಟಿಯವರಿಗೆ ಮೀಸಲಿಟ್ಟಿದ ಲಕ್ಷಾಂತರ ಹಣವನ್ನು ಪಕ್ಷದ ಚಟುವಟಿಕೆ ಹಾಗೂ ಇನ್ನಿತರೆ ಕಾರ್ಯಕ್ಕೆ ದುರ್ಬಳಕೆ ಮಾಡಿ ಕೊಂಡು ಜನಸಾಮಾನ್ಯರಿಗೆ ಕಣ್ಣೋರೆಸುವ ತಂತ್ರಗಾರಿಕೆ ರೂಪಿಸುತ್ತಿದೆ ಎಂದರು.ಇದೀಗ ರಾಜ್ಯದ ಶಿಗ್ಗಾಂವಿ, ಸಂಡೂರು ಹಾಗೂ ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಹಿಂದೆ ಕೈಗೊಂಡ ಮೂರು ಪಕ್ಷದ ಸಾಧನೆಗಳನ್ನು ಚರ್ಚಿಸದೇ, ಪರಸ್ಪರ ಕೆಸರೆಚಾಟದಲ್ಲಿ ತೊಡಗಿವೆ. ಸಿದ್ದರಾಮಯ್ಯ ಅವರದು ಮುಡಾ ಪ್ರಕರಣವಾದರೆ, ಬಿಜೆಪಿ ಶೇ.40 ಕಮೀಷನ್ ಆರೋಪ ಮುಂದಿಟ್ಟು ಮತ ಸೆಳೆಯುವ ಪ್ರಯತ್ನದಲ್ಲಿ ನಿರಂತರ ತೊಡಗಿರುವುದು ಮತದಾರರ ಹಲವಾರು ಪ್ರಶ್ನೆಗಳು ಕಾಡುತ್ತಿದೆ ಎಂದು ಹೇಳಿದರು.
ಬಿಎಸ್ಪಿ ರಾಜ್ಯ ಉಪಾಧ್ಯಕ್ಷ ಝಾಕೀರ್ ಹುಸೇನ್ ಮಾತನಾಡಿ, ರಾಜ್ಯ ಸಮಿತಿಗೆ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳು ಮುಂಬರುವ ಚುನಾವಣೆಗಳಲ್ಲಿ ಪಕ್ಷವನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಪದಾಧಿಕಾರಿಗಳಿಗೆ ಶಕ್ತಿ ತುಂಬುವ ಕಾರ್ಯದಲ್ಲಿ ಮುಂದಾಗುತ್ತಿದೆ ಎಂದರು.ಬಿಎಸ್ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಬಿಎಸ್ಪಿ ರಾಜ್ಯ ಸಂಯೋಜಕ ಅಶೋಕ್ ಚಕ್ರವರ್ತಿ, ಉಸ್ತುವಾರಿ ಗಂಗಾಧರ್ ಬಹುಜನ್, ಕಾರ್ಯದರ್ಶಿ ಕೆ.ಬಿ.ಸುಧಾ, ಜಿಲ್ಲಾ ಉಪಾಧ್ಯಕ್ಷೆ ಮಂಜುಳಾ, ತಾಲೂಕು ಅಧ್ಯಕ್ಷ ಎಚ್.ಕುಮಾರ್, ಮುಖಂಡರಾದ ಪರಮೇಶ್, ಜಾಕೀರ್ ಆಲಿಖಾನ್, ವೇಲಾಯುಧನ್, ಮಂಜಯ್ಯ, ಶಂಕರ್, ಪಿ.ಕೆ.ಮಂಜುನಾಥ್ ಉಪಸ್ಥಿತರಿದ್ದರು.
--5 ಕೆಸಿಕೆಎಂ 1ಚಿಕ್ಕಮಗಳೂರಿನ ಅಂಬೇಡ್ಕರ್ ಸಮುದಾಯ ಭವನದಲ್ಲಿ ಮಂಗಳವಾರ ನಡೆದ ಜಿಲ್ಲಾ ಬಹುಜನ ಸಮಾಜ ಪಕ್ಷದ ಕಾರ್ಯಕರ್ತರ ಸಭೆಯನ್ನು ಪಕ್ಷದ ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ ಅವರು ಉದ್ಘಾಟಿಸಿದರು. ಝಾಕೀರ್ ಹುಸೇನ್, ಅಶೋಕ್ ಚಕ್ರವರ್ತಿ, ಕೆ.ಟಿ. ರಾಧಾಕೃಷ್ಣ, ಗಂಗಾಧರ್, ಪರಮೇಶ್ ಇದ್ದರು.