ಅಮರಗೋಳ ನವಗ್ರಾಮದ ಮನೆಗಳ ನರಕ ಯಾತನೆ

KannadaprabhaNewsNetwork | Published : Mar 11, 2025 12:48 AM

ಸಾರಾಂಶ

ರೋಣ ತಾಲೂಕಿನ ಅಮರಗೋಳ ನವಗ್ರಾಮದಲ್ಲಿ ಮನೆಗಳು ನಿರ್ಮಾಣಗೊಂಡು 12 ವರ್ಷವಾಗಿಲ್ಲ. ಸ್ವಲ್ಪ ಮಳೆಯಾದರೂ ಸಾಕು ಸೋರುತ್ತಿವೆ. ಮನೆಗಳ ಕಿಟಕಿ, ಕದ ಕಿತ್ತುಹೋಗಿವೆ.

ಪಿ.ಎಸ್. ಪಾಟೀಲ

ಕನ್ನಡಪ್ರಭ ವಾರ್ತೆ ರೋಣ

ತಾಲೂಕಿನ ಅಮರಗೋಳ ನವಗ್ರಾಮದಲ್ಲಿ ಮನೆಗಳು ನಿರ್ಮಾಣಗೊಂಡು 12 ವರ್ಷವಾಗಿಲ್ಲ. ಸ್ವಲ್ಪ ಮಳೆಯಾದರೂ ಸಾಕು ಸೋರುತ್ತಿವೆ. ಮನೆಗಳ ಕಿಟಕಿ, ಕದ ಕಿತ್ತುಹೋಗಿವೆ.

ಮಳೆಗಾಲದಲ್ಲಿ ಮಹಿಳೆಯರಿಗೆ ತೀವ್ರ ತೊಂದರೆಯಾಗುತ್ತಿದೆ. ರೋಗ ರುಜಿನಗಳು ಬಂದಲ್ಲಿ ಚಿಕಿತ್ಸೆಗೆ ಆಸ್ಪತ್ರೆ ಇಲ್ಲಿಲ್ಲ. ಜಾನುವಾರುಗಳ ಆಸ್ಪತ್ರೆಯಿಲ್ಲ. ಉದ್ಯಾನವನವಿಲ್ಲ, ದೇವಸ್ಥಾನವಿಲ್ಲ, ಇದೆಲ್ಲದಕ್ಕೂ ಸಾಕಷ್ಟು ಜಾಗೆ ಕಾಯ್ದಿರಿಸಿದ್ದು, ಆ ಜಾಗೆಯಲ್ಲಿ ಜಾಲಿಕಂಟೆ ಬೆಳೆದಿವೆ.

ಮಲಪ್ರಭಾ ನದಿ ಪ್ರವಾಹಕ್ಕೆ ಪದೇ ಪದೇ ತುತ್ತಾಗುತ್ತಿದ್ದ ಅಮರಗೋಳವನ್ನು 2010ರಲ್ಲಿ ಮೂಲ ಗ್ರಾಮದಿಂದ 7 ಕಿಮೀ ದೂರದಲ್ಲಿ ರೋಣ ರಸ್ತೆಯಲ್ಲಿನ ಜಗನ್ನಾಥ ನಗರ ನವಗ್ರಾಮಕ್ಕೆ ಹೊಂದಿಕೊಂಡೇ ರೈತರಿಂದ 46 ಎಕರೆ ಪ್ರದೇಶವನ್ನು ಭೂಸ್ವಾಧೀನ ಕಾಯ್ದೆಯಡಿ ವಶಪಡಿಸಿಕೊಂಡಿತು. ಈ ಪ್ರದೇಶದಲ್ಲಿ ಗದಗ ನಿರ್ಮಿತಿ ಕೇಂದ್ರದವರು 415 ಮನೆಗಳನ್ನು ನಿರ್ಮಿಸಿ 2012ರಲ್ಲಿ ಸರ್ಕಾರಕ್ಕೆ ಹಸ್ತಾಂತರಿಸಿದರು.

2019ರ ವರೆಗೆ ಮೂಲ ಗ್ರಾಮದಲ್ಲಿ‌ ಸಂಪೂರ್ಣ ಮನೆ ಕಳೆದುಕೊಂಡ 20 ‌ಕುಟುಂಬಗಳು ಮಾತ್ರ ವಾಸವಾಗಿದ್ದರು. ನವಗ್ರಾಮದಲ್ಲಿ ಕುಡಿವ ನೀರು, ವಿದ್ಯುತ್, ಚರಂಡಿ, ರಸ್ತೆ, ಶಾಲೆ, ಅಂಗನವಾಡಿ ಸೇರಿದಂತೆ ಯಾವುದೇ ಅಗತ್ಯ ಸೌಲಭ್ಯಗಳಿಲ್ಲದೆ ನರಕಯಾತನೆ ಅನುಭವಿಸಿದರು. ಮಕ್ಕಳು ಶಾಲೆ ಬಿಟ್ಟು ಮನೆಯಲ್ಲಿಯೇ ಕುಳಿತುಕೊಂಡರು. ಕೆಲ ಮಕ್ಕಳು ಶಾಲೆಗೆ ನಿತ್ಯವೂ ''''''''ನವಗ್ರಾಮ''''''''ದಿಂದ 4 ಕಿಮೀ ಹೊಳೆಆಲೂರು, ಅಲ್ಲಿಂದ 3 ಕಿಮೀ ಸೇರಿ 7 ಕಿಮೀ ದೂರ ಮೂಲ ಅಮರಗೋಳ ಗ್ರಾಮಕ್ಕೆ ಹೋಗಿ ಬರುತ್ತಿದ್ದರು.

ಆದರೆ 2019ರ ಸೆಪ್ಟಂಬರ್‌ನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಭರ್ತಿಯಾದ ರೇಣುಕಾ‌ ಜಲಾಶಯದಿಂದ 15 ಸಾವಿರಕ್ಕೂ ಹಚ್ಚು ಕ್ಯುಸೆಕ್‌ ನೀರು ಹರಿ ಬಿಡಲಾಯಿತು. ಜೊತೆಗೆ ಬೆಣ್ಣಿಹಳ್ಳದ ಅಪಾರ ಪ್ರಮಾಣದ ನೀರಿನಿಂದ ಮಲಪ್ರಭೆ ಉಕ್ಕಿದ ಪರಿಣಾಮ ಅಮರಗೋಳ ಗ್ರಾಮ ಮತ್ತೆ (2019) ಜಲಾವೃತಗೊಂಡು, ಆಗ ಮೂಲ ಗ್ರಾಮದ ಜನತೆ ಮತ್ತೆ ಅನೇಕ‌ ತೊಂದರೆ ಎದುರಿಸುವಂತಾಯಿತು. ಜಿಲ್ಲಾಡಳಿತಕ್ಕೆ ಮತ್ತಷ್ಟು ತೆಲೆನೋವಾಯಿತು. ಆಗ ಜಿಲ್ಲಾ ಆಡಳಿತ ಜನರನ್ನು ಮೂಲ ಗ್ರಾಮದಿಂದ ನವಗ್ರಾಮಕ್ಕೆ ಸ್ಥಳಾಂತರಿಸಿತು.

ಒಟ್ಟು 415 ಮನೆಗಳನ್ನು ನಿರ್ಮಿಸಲಾಗಿದ್ದು 282 ಫಲಾನುಭವಿಗಳನ್ನು ಆಯ್ಕೆ ಮಾಡಿ, ಇದರಲ್ಲಿ 267 ಫಲಾನುಭವಿಗಳಿಗ ಹಕ್ಕುಪತ್ರ ವಿತರಿಸಲಾಗಿದೆ.‌ ಇನ್ನು 15 ಪಲಾನುಭವಿಗಳಿಗ ಹಕ್ಕುಪತ್ರ ವಿತರಣೆ ಬಾಕಿಯಿದೆ.

ತಾಲೂಕಿನ ಒಟ್ಟು 11 ಗ್ರಾಮಗಳ ಪೈಕಿ ಶೆ. 85ರಷ್ಟು ಅಮರಗೋಳ ಮೂಲ ಗ್ರಾಮ ತೊರೆದು ನವಗ್ರಾಮದ ಆಸರೆ ಸೂರಿನಲ್ಲಿ‌ ವಾಸವಾಗಿದ್ದಾರೆ. ನವಗ್ರಾಮದಲ್ಲಿ 2 ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ. ಅಮರಗೋಳ,‌ ಕುರವಿನಕೊಪ್ಪ ಮತ್ತು ಹೊಳೆಆಲೂರ (ಜಗನ್ನಾಥ ನಗರ) ನವಗ್ರಾಮಗಳಿಗೆ ಪೂರೈಕೆಯಾಗುವ ನೀರು ಜಲ ಸಂಗ್ರಹಗಾರ ಒಂದೇ ಇರುವದರಿಂದ‌ ಕೆಲವೊಮ್ಮೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಬಹುಗ್ರಾಮ ಕುಡಿವ ನೀರು ಯೋಜನೆ ಮೂಲಕವೇ ಇಲ್ಲಿನ ಮನೆಗಳಿಗೆ ನೀರು ಪೂರೈಸಲಾಗುತ್ತಿದೆ. ಎತ್ತರದ ಪ್ರದೇಶದಲ್ಲಿರುವ ಕೆಲ ಮನೆಗಳಿಗೆ ಆಗಾಗ ನೀರಿನ ಸಮಸ್ಯೆ ಉಂಟಾಗುತ್ತಿದೆ. ಸದ್ಯ ಬೇಸಿಗೆ ಆರಂಭಗೊಂಡಿದ್ದು , ಸ್ಥಳೀಯ ಗ್ರಾಪಂ ಮುಂಜಾಗ್ರತ ಕ್ರಮ ಕೈಗೊಂಡು ಜನ, ಜಾನುವಾರುಗಳಿಗೆ ನೀರಿನ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಬೇಕು.

ನವಗ್ರಾಮದಲ್ಲಿ 10ಕ್ಕೂ ಹೆಚ್ಚು ಕಾಂಕ್ರೀಟ್‌ ರಸ್ತೆಗಳನ್ನು ಹಾಕಲಾಗಿದೆ. ಆದರೆ ರಸ್ತೆಯ ಎರಡು ಬದಿ ಚರಂಡಿ ನಿರ್ಮಿಸದೇ ಕಾಂಕ್ರೀಟ್‌ ರಸ್ತೆ ನಿರ್ಮಿಸುತ್ತಿರುವುದಕ್ಕೆ ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗಟಾರ ನಿರ್ಮಿಸದೇ ಕೋಟ್ಯಂತರ ಅನುದಾನ ಖರ್ಚು ಮಾಡಿ‌‌‌ ಸಿ.ಸಿ‌. ರಸ್ತೆ ನಿರ್ಮಿಸಿದರೂ ಉಪಯೋಗವಾಗುವುದಿಲ್ಲ. ಕೆಲವೇ ದಿನಗಳಲ್ಲಿ ಇಲ್ಲಿನ ರಸ್ತೆಗಳು ಬಿರುಕು ಬಿಡುವುದರಲ್ಲಿ ಯಾವದೇ ಸಂದೇಹವಿಲ್ಲ ಎನ್ನುತ್ತಾರೆ ಇಲ್ಲಿನ‌ ನಿವಾಸಿಗಳು.

ವಿತರಣೆಯಾದ 267 ಹಕ್ಕುಪತ್ರಗಳ ಪೈಕಿ ಈವರೆಗೆ ಕೇವಲ 50 ಮನೆಗಳ ಹಕ್ಕುಪತ್ರ ಗ್ರಾ.ಪಂ.ದಲ್ಲಿ ನೋಂದಣಿ ಮಾಡಿಸಲಾಗಿದ್ದು , ಹಕ್ಕುಪತ್ರ ನೋಂದಣಿಗೆ ಸಾವಿರ ರುಪಾಯಿಗೆ ಹೆಚ್ಚು ಖರ್ಚಾಗುತ್ತಿದ್ದು, ಹೀಗಾಗಿ ಫಲಾನುಭವಿಗಳು ಹಿಂದೇಟು ಹಾಕುತ್ತಿದ್ದಾರೆ. ಆದರೆ ವಾಸ್ತವ ಸಂಗತಿಯೇ ಬೇರೆಯಿದ್ದು, ನವಗ್ರಾಮದಲ್ಲಿ ಮನೆಗಳ ಹಕ್ಕುಪತ್ರ ಗ್ರಾಪಂನಲ್ಲಿ ನೋಂದಣಿ ಮಾಡಿಸಿಕೊಂಡಲ್ಲಿ, ಮೂಲ ಗ್ರಾಮದಲ್ಲಿನ ಮನೆ ಹಕ್ಕನ್ನು, ಸೌಲಭ್ಯವನ್ನು ಸಂಪೂರ್ಣ ಕಳದೆಕೊಳ್ಳಬಹುದಾದ ಆತಂಕದಿಂದ ಬಹುತೇಕರು ಹಕ್ಕುಪತ್ರ ನೋಂದಣಿ ಮಾಡಿಸಿಕೊಳ್ಳಲು ಮುಂದಾಗಿಲ್ಲ.

ನವಗ್ರಾಮದಲ್ಲಿ ವಾಸವಿರುವ ಶೇ.85ರಷ್ಟು ಕುಟುಂಬಗಳಲ್ಲಿ ಬಹುತೇಕರು ಕುಟುಂಬಗಳು ಮೂಲ ಗ್ರಾಮಕ್ಕೆ ನಿತ್ಯವೂ ಹೋಗಿ ಬರುವದು, ಕೆಲ ದಿನಗಳವರೆಗೆ ಅಲ್ಲಿಯ ಇರುವುದನ್ನು ಮಾಡುತ್ತಿದ್ದಾರೆ. ತಮ್ಮ ಜಮೀನುಗಳು ಮೂಲ ಗ್ರಾಮದ ಹತ್ತಿರ ಇರುವುದರಿಂದ ಇದು ಸಾಮಾನ್ಯವಾಗಿದ್ದು, ಸಂಪೂರ್ಣವಾಗಿ ಮೂಲ ಗ್ರಾಮ ತೊರೆಯಲು ಅಸಾಧ್ಯವಾಗಿದೆ ಎನ್ನುತ್ತಾರೆ ಅಮರಗೋಳ ಗ್ರಾಮಸ್ಥರು.

ಇಲ್ಲಿನ ಯಾವುದೇ ರಸ್ತೆಗೂ ಗಟಾರ ನಿರ್ಮಿಸಿಲ್ಲ. ಗಟಾರ ಇಲ್ಲದ್ದರಿಂದ‌ ಗಲೀಜು‌ ನೀರು ನಿಂತಲ್ಲೆ ನಿಲ್ಲುತ್ತದೆ. ಸೊಳ್ಳೆ ಕಾಟ ವಿಪರೀತವಾಗಿದೆ. ಜನ ಮತ್ತು ಜಾನುವಾರುಗಳಿಗೆ ಆಸ್ಪತ್ರೆ ನಿರ್ಮಿಸಬೇಕು ಎನ್ನುತ್ತಾರೆ ಅಮರಗೋಳ ನವಗ್ರಾಮ ನಿವಾಸಿ ಹನಮಂತಗೌಡ ಪಾಟೀಲ, ಶಾಂತವ್ವ ಮುನವಳ್ಳಿ ಹೇಳಿದರು.

ನೀರಿನ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು. ಹಕ್ಕುಪತ್ರ ಕಡ್ಡಾಯ ನೋಂದಣಿಗೆ ಜಾಗೃತಿ ಮೂಡಿಸಲಾಗುವುದು. ಎಲ್ಲಾ ರಸ್ತೆಗಳು ಕಾಂಕ್ರೀಟ್ ರಸ್ತೆಗಳಾಗಿ ಪರಿವರ್ತಿಸಲಾಗುವುದು. ರಸ್ತೆ ಬದಿ ಗಟಾರ ನಿರ್ಮಾಣಕ್ಕೆ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಅಮರಗೋಳ ಪಿಡಿಒ ಶಿವಕುಮಾರ ಡೊಳ್ಳಿನ ಹೇಳಿದರು.

Share this article