ಕಡೂರಲ್ಲಿ ಇಂದು ಇತಿಹಾಸ ಪ್ರಸಿದ್ಧ ಬಂಡಿ ಜಂಪ ಮಹೋತ್ಸವ

KannadaprabhaNewsNetwork | Published : Mar 11, 2025 12:52 AM

ಸಾರಾಂಶ

ಕಡೂರು, ಎರಡನೇ ದಕ್ಷಿಣ ಕಾಶಿ ಖ್ಯಾತಿಯ ವೇದಾನದಿ ತಟದ ಕಡೂರು ತಾಲೂಕಿನ ಯಗಟಿಪುರದ ಇತಿಹಾಸ ಪ್ರಸಿದ್ಧ ಶ್ರೀ ಕಪಿಲ ಮಲ್ಲಿ ಕಾರ್ಜುನ ಸ್ವಾಮಿ ಲಿಂಗೋದ್ಭವವನ್ನು ಮೊದಲು ಕಂಡ ಹಾಲುಮತದ ಕಪಿಲ ಮಲ್ಲಿಕಾರ್ಜುನ ಸ್ವಾಮಿಯ ಮೂಲ್ವೀಕರು, ಭಕ್ತರು ಸೇರಿ 9 ವರ್ಷಕ್ಕೊಮ್ಮೆ ನಡೆಸುವ ‘ಬಾಯಿಬೀಗ ಬಂಡಿ ಜಂಪ ಮಹೋತ್ಸವ ಆಚರಣೆಗೆ ಕ್ಷಣಗಣನೆ ಆರಂಭವಾಗಿದೆ.

ಹಾಲುಮತದ ಕಪಿಲ ಮಲ್ಲಿಕಾರ್ಜುನ ಸ್ವಾಮಿಯ ಮೂಲ್ವೀಕರು ಅನಾದಿ ಕಾಲದಿಂದಲೂ ಜಾತ್ರಾ ಮಹೋತ್ಸವ ಆಚರಣೆ

ಕನ್ನಡಪ್ರಭ ವಾರ್ತೆ, ಕಡೂರು

ಎರಡನೇ ದಕ್ಷಿಣ ಕಾಶಿ ಖ್ಯಾತಿಯ ವೇದಾನದಿ ತಟದ ಕಡೂರು ತಾಲೂಕಿನ ಯಗಟಿಪುರದ ಇತಿಹಾಸ ಪ್ರಸಿದ್ಧ ಶ್ರೀ ಕಪಿಲ ಮಲ್ಲಿ ಕಾರ್ಜುನ ಸ್ವಾಮಿ ಲಿಂಗೋದ್ಭವವನ್ನು ಮೊದಲು ಕಂಡ ಹಾಲುಮತದ ಕಪಿಲ ಮಲ್ಲಿಕಾರ್ಜುನ ಸ್ವಾಮಿಯ ಮೂಲ್ವೀಕರು, ಭಕ್ತರು ಸೇರಿ 9 ವರ್ಷಕ್ಕೊಮ್ಮೆ ನಡೆಸುವ ‘ಬಾಯಿಬೀಗ ಬಂಡಿ ಜಂಪ ಮಹೋತ್ಸವ ಆಚರಣೆಗೆ ಕ್ಷಣಗಣನೆ ಆರಂಭವಾಗಿದೆ. ಪಿ. ಕೋಡಿಹಳ್ಳಿಯ ಹಾಲುಮತದ ಕಪಿಲ ಮಲ್ಲಿಕಾರ್ಜುನ ಸ್ವಾಮಿಯ ಮೂಲ್ವೀಕರು ಅನಾದಿ ಕಾಲದಿಂದಲೂ ಜಾತ್ರಾ ಮಹೋತ್ಸವ ಮಾಡುತ್ತ 9 ವರ್ಷಕ್ಕೊಮ್ಮೆ ಬಾಯಿಬೀಗ ಜಂಪ ಮಹೋತ್ಸವ ಮಾಡುತ್ತಾರೆ. ಪಿ.ಕೋಡಿಹಳ್ಳಿಯಿಂದ ಪುರದವರೆಗೂ ನಡೆಮಡಿಯೊಂದಿಗೆ ಗುರುಕಲಶ, ಹೇರಡಿಗೆ, ಬಾಯಿಬೀಗ, ಮೂರು-ಬಂಡಿಗಳು ಸಾಂಪ್ರಾದಾಯಿಕವಾಗಿ ಸಹಸ್ರಾರು ಭಕ್ತರು ಕಾಲ್ನಡಿಗೆಯಲ್ಲಿ ಈ ಮಹೋತ್ಸವಕ್ಕೆ ಬರುತ್ತಾರೆ.

ಜಂಪ ಮಹೋತ್ಸವ: ಪ್ರತಿ 9 ವರ್ಷಕ್ಕೊಮ್ಮೆ ಮೂರು ಬಂಡಿಗಳ ಜೊತೆಗೆ ಗೊಬ್ಬರ ಮೀಸಲು ನೀಡಿ ಜಂಪ ಮಹೋತ್ಸವ ಆಚರಿಸಿಕೊಂಡು ಬರುತ್ತಿದ್ದಾರೆ. ಸ್ವಾಮಿ ಜಂಪಮಹೋತ್ಸವಕ್ಕೆ ಕಡೂರು ತಾಲೂಕಿನ ಸುತ್ತಮುತ್ತಲ ಸೇರಿದಂತೆ ನೆರೆಯ ಗ್ರಾಮಗಳ ಭಾಗದ ಮೂಲ್ವೀಕ ಭಕ್ತರು ಎತ್ತಿನ ಗಾಡಿ ಮತ್ತು ಟ್ರಾಕ್ಟರ್ ಗಳ ಮೂಲಕ ಪುರಕ್ಕೆ ಆಗಮಿಸಿ ಜಂಪದ ಜಮೀನಲ್ಲಿ ಬಿಡಾರ(ಟೆಂಟ್) ಹಾಕಿ ಜಾತ್ರೆಯಲ್ಲಿ ಭಾಗಿಯಾಗುತ್ತಾರೆ.

ದೇವಾಲಯ ಮುಜರಾಯಿ ಇಲಾಖೆಗೆ ಒಳಪಟ್ಟಿದ್ದರೂ ಹಾಲುಮತದ ಮೂಲ್ವೀಕರ ಮುದ್ರೆಅಯ್ಯನೋರು ಹಾಗೂ ಪೂಜಾರರ ನೇತೃತ್ವದಲ್ಲಿ ಮಘಾ ನಕ್ಷತ್ರದ ಮಹೂರ್ತದಲ್ಲಿ ಮಾ.12ರಂದು ನಡೆಯುವ ಸ್ವಾಮಿ ಬ್ರಹ್ಮ ರಥೋತ್ಸವದಂದು ಪ್ರಥಮ ಪೂಜೆ ಕಾರ್ಯಕ್ರಮನೆರವೇರಿದ ಬಳಿಕ ಬಂಡಿಯಲ್ಲಿ ತಂದ ಮೀಸಲನ್ನು ಸ್ವಾಮಿಗೆ ಸಮರ್ಪಿಸಲಾಗುತ್ತದೆ.

ಜಂಪ ಮಹೋತ್ಸವ ಆಚರಣೆಗೆ ಅಂತಿಮ ಸಿದ್ಧತೆಯಲ್ಲಿರುವ ಮೂಲ್ವೀಕರ ಭಕ್ತರ ಪೈಕಿ 3ನೇ ಬಂಡಿಯ ಭಕ್ತರು ಗೊಬ್ಬರದ ಎತ್ತಿನ ಬಂಡಿ ಅಲಂಕೃತಗೊಳಿಸಿ ಜಂಪದ ಉತ್ಸವಕ್ಕೆ ಸಿದ್ಧಗೊಂಡಿದ್ದು ಸಿಗೇಹಡ್ಲು ಗ್ರಾಮದಿಂದ ಮಾ.11ರಂದು ಹೊರಡುವ ಮೀಸಲು ಜೊತೆ ಗೊಬ್ಬರದ ಬಂಡಿಯೊಂದಿಗೆ ಅದ್ಧೂರಿ ಮೆರವಣಿಗೆ ಮೂಲಕ ಮೂರನೇ ಬಂಡಿಯ ಭಕ್ತರು ಪುರದವರೆಗೆ ಗ್ರಾಮ ದೇವರ ಉತ್ಸವದೊಂದಿಗೆ ಜಂಪದಲ್ಲಿ ಪಾಲ್ಗೊಳ್ಳಲಿದ್ದಾರೆ. ಜಾತ್ರೆಗಾಗಿಯೇ ಬಂಡಿ ಹೊರಡುವ ಸಿಗೇಹಡ್ಲು ಗ್ರಾಮ ಶೃಂಗಾರಗೊಂಡಿದೆ.

-- ಬಾಕ್ಸ್ ಸುದ್ದಿ--

ಜಾತ್ರೆ ಮಾ.10ರ ಸೋಮವಾರ ಹೊಳೆಪೂಜೆಯೊಂದಿಗೆ ಧಾರ್ಮಿಕ ಕಾರ್ಯಗಳಿಗೆ ಚಾಲನೆ ನೀಡಲಾಗಿದ್ದು, ಮಾ.11ರ ಮಂಗಳವಾರ ಪಿ.ಕೋಡಿಹಳ್ಳಿಯಿಂದ ಪುರದವರೆಗೆ ಬಾಯಿಬೀಗ ಬಂಡಿ ಜಂಪಮಹೋತ್ಸವ ಸಂಜೆ ವಿಜೃಂಭಣೆಯಿಂದ ಜರುಗಲಿದೆ. ಮಾ.12ರ ಬುಧವಾರ ಮಧಾಹ್ಯ 2ಗಂಟೆಗೆ ಶ್ರೀ ಸ್ವಾಮಿ ಬ್ರಹ್ಮ ರಥೋತ್ಸವ ಹಾಗೂ ಸಂಜೆ ಧಾರ್ಮಿಕ ಸಮಾರಂಭ ಜರುಗಲಿದೆ. ಮಾ.13ರ ಗುರುವಾರ ಬೆಳಗಿನ ರಥೋತ್ಸವ, ಮೂಲ್ವೀಕ ಭಕ್ತರುಗಳಿಗೆ ಮುಡಿಸೇವೆ ನಡೆಯಲಿದೆ. ಮಾ.14ರ ಶುಕ್ರವಾರ ಗಂಗೋಧ್ಬವ ದರ್ಶನದೊಂದಿಗೆ ಜಂಪ ಮಹೋತ್ಸವ ಸಂಪನ್ನಗೊಳ್ಳಲಿದೆ.

ದೇವಾಲಯದ ಇತಿಹಾಸ: ವೇದಾನದಿ ದಂಡೆಯಲ್ಲಿ ಅಂದಿನ ಅರತೋಳಲು(ಈಗೀನ ಪುರ) ಎಂಬ ಗ್ರಾಮದಲ್ಲಿ ದಾವಣಗೆರೆ ಮೂಲದ ವಲಸೆ ಬಂದ ವೀರಪ್ಪಶೆಟ್ಟಿಗೌಡ ಮತ್ತು ಪತ್ನಿ ಪಾರ್ವತಿ ದಂಪತಿ ಬಳಿ ಪಿ.ಕೋಡಿಹಳ್ಳಿ ಹಾಲುಗೊಲದ(ಹಾಲುಮತ) ಸಮಾಜದ ಬೀರಪ್ಪ ಎಂಬುವನು ಆಕಳುಗಳನ್ನು ಕಾಯುತ್ತಿದ್ದ. ಅದರಲ್ಲಿ ಕಪಿಲೆ ಎಂಬ ಹಸು ಒಂದು ದಿನ ಸಂಜೆ ಕಪಿಲೆ ವೇದಾ ನದಿ ಎಡದಂಡೆಯ ಮೇಲಿನ ಹುತ್ತಕ್ಕೆ ಹಾಸಲು ಎರೆಯುವುದನ್ನು ಬೀರಪ್ಪ ನೋಡಿ ತಮ್ಮ ಗೌಡರಿಗೆ ತಿಳಿಸಿದನು.

ಅದನ್ನು ಪರೀಕ್ಷಿಸಲು ಮರುದಿನ ಬೀರಪ್ಪನೊಂದಿಗೆ ವೀರಪ್ಪಶೆಟ್ಟಿ ತೆರಳಿದಾಗ ನಿತ್ಯದಂತೆ ಕಪಿಲೆ(ಹಸು) ಹುತ್ತಕ್ಕೆ ಹಾಲು ಎರೆಯುವುದನ್ನು ಕಂಡು ಅಚ್ಚರಿಗೊಳಗಾಗಿ ಹುತ್ತ ಬಗೆಸಿದಾಗ. ಹುತ್ತದೊಳಗೆ ಮಲಗಿದ್ದ ದೊಡ್ಡ ಸರ್ಪ ನೋಡಿ ಸ್ಥಳದಲ್ಲೇ ಪೂಜಾ ಕಾರ್ಯ ನೆರವೇರಿಸಿದಾಗ ಶಾಂತವಾದ ಸರ್ಪ ನೈವೇದ್ಯದ ಹಾಲು ಕುಡಿದು ಉತ್ತರ ದಿಕ್ಕಿನತ್ತ ಹರಿದು ಹೋಯಿತು. ಸರ್ಪ ಮಂಡಲ ಹಾಕಿದ್ದ ಮಧ್ಯಭಾಗದಲ್ಲಿ ಶಿವಲಿಂಗ ಕಾಣಿಸಿಕೊಂಡಿತು. ಲಿಂಗದ ಹಿಂಬದಿಯ ನಾಲ್ಕು ಅಂಗುಲದ ಗುಂಡಿಯಲ್ಲಿ ಗಂಗೆಯೂ ತುಂಬಿತ್ತು. ಸರ್ಪ ಭೂಷಣನಾಗಿ ಗಂಗೆಯೊಂದಿಗೆ ಸಾಕ್ಷತ್ ಪರಶಿವನು ಅವತರಿಸಿದಂತೆ ಗೋಚರಿಸಿತು.

ಕನಸಿನಲ್ಲಿ ಬಂದ ಸ್ವಾಮಿ ಉದ್ಭವಿಸಿದ ಜಾಗದಲ್ಲಿ ದೇವಸ್ಥಾನ ನಿರ್ಮಿಸುವಂತೆ ಆದೇಶಿಸಿದ ಕಾರಣ ಕ್ರಿ.ಶ 1015 ರಿಂದ 1102 ಸಾಲಿನ ಸುಮಾರಿನಲ್ಲಿ ದ್ವಾರ ಸಮುದ್ರದ ಅರಸ ಹರಿಹರ ಸೋಮೇಶ್ವರ ರಾಜನಿಂದ ದೇಗುಲ ನಿರ್ಮಾಣಗೊಂಡಿದ್ದು ಇತಿಹಾಸದಲ್ಲಿದೆ. ಸ್ವಾಮಿ ದೇಗುಲ ಅಭಿವೃದ್ದಿಗೊಂಡು ಇಂದಿಗೂ ಅಸಂಖ್ಯಾತ ಭಕ್ತರ ಶ್ರದ್ಧಾ ಕೇಂದ್ರವಾಗಿದೆ.

10ಕೆಕೆೆಡಿಯು1.ಕಡೂರು ತಾಲೂಕಿನ ಯಗಟಿಪುರದ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಮೂಲ ಉದ್ಬವ ಲಿಂಗ.10ಕೆಡಿಯು1ಎ. ಯಗಟಿಪುರದ ಶ್ರೀ ಮಲ್ಲಿಕಾರ್ಜುನ ಸ್ವಾಮಿ.

Share this article