ಕನ್ನಡಪ್ರಭ ವಾರ್ತೆ ಬಾಗಲಕೋಟೆ
ನಗರದ ಬಿ.ವಿ.ವಿ. ಸಂಘದ ಎಸ್. ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಹಾನಗಲ್ಲ ಶ್ರೀ ಕುಮಾರೇಶ್ವರ ಆಸ್ಪತ್ರೆಯ ಆವರಣದಲ್ಲಿರುವ ಶಿವಾಲಯದಲ್ಲಿ ಶಿವರಾತ್ರಿ ನಿಮಿತ್ತ ಶುಕ್ರವಾರ ಸಂಜೆ ಸಂಗೀತ ಶಿವರಾತ್ರಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಿತಾರ್ ವಾದನದ ನಿನಾದ, ವಚನ ಸಂಗೀತ, ಶಿವಸ್ತುತಿ, ಭಕ್ತಿ ಸಂಗೀತ, ಭಕ್ತಿ ಗೀತೆಗಳು ಮತ್ತು ನಾದ ವೈಭವ ಪ್ರಸ್ತುತ ಪಡಿಸಲಾಯಿತು.
ಇದಕ್ಕೂ ಮುಂಚೆ ನಡೆದ ಕಾರ್ಯಕ್ರಮದಲ್ಲಿ ಬಿ.ವಿ. ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಮಾತನಾಡಿ, ದೇವರನ್ನು ಪ್ರಾರ್ಥಿಸುವ ವಿಧಾನಗಳಲ್ಲಿ ಸಂಗೀತಕ್ಕೆ ಪ್ರಥಮ ಆದ್ಯತೆ ಇದೆ. ಮಹಾಶಿವರಾತ್ರಿ ನಿಮಿತ್ತ ಸಂಗೀತ ಕಾರ್ಯಕ್ರಮ ಆಯೋಜಿಸಿ ಸಂಗೀತದ ವಿವಿಧ ಪ್ರಕಾರಗಳನ್ನು ಪ್ರಸ್ತುತಪಡಿಸಲಾಗುತ್ತಿದೆ ಎಂದು ಹೇಳಿದರು.ಡಾ.ಕಾಶಿಲಿಂಗ ಮಠ ಅವರ ಸಿತಾರ ನಾದದೊಂದಿಗೆ ಸಂಗೀತ ಶಿವರಾತ್ರಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಡಾ.ದೊಡ್ಡಮನಿ ಅವರ ವಚನ ಸಂಗೀತ, ಅದಿತಿ ಅವರ ಭಕ್ತಿಗೀತೆಗಳು, ಪರಿಮಳಾ ಅವಧಾನಿ ಅವರ ಭಕ್ತಿಕುಸುಮಾಂಜಲಿ ಕಾರ್ಯಕ್ರಮಕ್ಕೆ ಮೆರುಗು ನೀಡಿದವು.
ಡಾ.ಸಿದ್ಧರಾಮಯ್ಯ ಮಠಪತಿ ಅವರ ನಾದ ವೈಭವದೊಂದಿಗೆ ಸಂಗೀತ ಶಿವರಾತ್ರಿ ಕಾರ್ಯಕ್ರಮ ಮುಕ್ತಾಯಗೊಂಡಿತು. ಡಾ.ಎಸ್.ಡಿ. ಕೆಂಗಲಗುತ್ತಿ ನಿರೂಪಿಸಿದರು. ಈಶ್ವರನ ದರ್ಶನಕ್ಕೆ ಮತ್ತು ಸಂಗೀತ ಶಿವರಾತ್ರಿ ಕಾರ್ಯಕ್ರಮಕ್ಕೆ ಆಗಮಿಸಿದ ಭಕ್ತಾದಿಗಳಿಗೆ ಪ್ರಸಾದ ವಿತರಿಸಲಾಯಿತು.