ಸಂಗೊಳ್ಳಿ ರಾಯಣ್ಣ ನಾಮಫಲಕ ಅಳವಡಿಕೆಗೆ ವಿರೋಧ ಸರಿಯಲ್ಲ

KannadaprabhaNewsNetwork | Published : Aug 25, 2024 2:03 AM

ಸಾರಾಂಶ

ದೊಡ್ಡಉಳ್ಳಾರ್ತಿಯು ದೇಶದಾದ್ಯಂತ ಹೆಸರು ಮಾಡಿದ ಗ್ರಾಮವಾಗಿದೆ. ರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ಸಂಶೋಧನಾ ಕೇಂದ್ರಗಳು ಉಳ್ಳಾರ್ತಿ ಭಾಗದಲ್ಲಿವೆ

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ತಾಲೂಕಿನ ದೊಡ್ಡಉಳ್ಳಾರ್ತಿ ಗ್ರಾಮದ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಕ್ಷೇಮಾಭಿವೃದ್ಧಿ ಸಂಘ ಜಿಲ್ಲಾಧಿಕಾರಿ, ತಹಸೀಲ್ದಾರ್, ತಾಪಂ ಕಾರ್ಯ ನಿರ್ವಹಣಾಧಿಕಾರಿ ಹಾಗೂ ಗ್ರಾಪಂ ಆಡಳಿತ ನಿಗದಿಪಡಿಸಿದ ಸ್ಥಳದಲ್ಲೇ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ನಾಮಫಲಕವನ್ನು ಸ್ಥಾಪಿಸಿದ ಬಗ್ಗೆ ಅಲ್ಲಿನ ಕೆಲವರು ಮಾದ್ಯಮಗಳ ಮೂಲಕ ಅಸಮಾಧಾನ ವ್ಯಕ್ತಪಡಿಸಿರುವುದು ಸರಿಯಲ್ಲವೆಂದು ಎಐಟಿಯುಸಿ ಕಾರ್ಮಿಕ ಸಂಘಟನೆ ರಾಜ್ಯ ಸಂಚಾಲಕ ಸಿ.ವೈ.ಶಿವರುದ್ರಪ್ಪ ತಿಳಿಸಿದ್ದಾರೆ.

ನಗರದ ಪ್ರವಾಸಿಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದೊಡ್ಡಉಳ್ಳಾರ್ತಿಯು ದೇಶದಾದ್ಯಂತ ಹೆಸರು ಮಾಡಿದ ಗ್ರಾಮವಾಗಿದೆ. ರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ಸಂಶೋಧನಾ ಕೇಂದ್ರಗಳು ಉಳ್ಳಾರ್ತಿ ಭಾಗದಲ್ಲಿವೆ. ಸಂಗೊಳ್ಳಿರಾಯಣ್ಣ ಮಹಾನ್ ದೇಶಭಕ್ತನಾಗಿದ್ದು, ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ. ಇಂತಹ ಸಾವಿರಾರು ಜನರ ಹೋರಾಟದ ಫಲವಾಗಿ ನಾವೆಲ್ಲರೂ ಇಂದು ಸ್ವಾತಂತ್ರ್ಯೋತ್ಸವದ ಜೊತೆಗೆ ನಮ್ಮ ದೇಶದ ಅಭಿವೃದ್ಧಿ ಕಂಡುಕೊಂಡಿದ್ದೇವೆ. ಇಂತಹ ಮಹಾನ್ ನಾಯಕನ ನಾಮಫಲಕ ಅಳವಡಿಕೆಗೆ ಆಕ್ಷೇಪಣೆ ಎತ್ತುವುದು ಸರಿಯಲ್ಲ. ಸರ್ಕಾರದಿಂದ ಅನುಮತಿ ಪಡೆದೆ ಈ ಕಾರ್ಯ ಮಾಡಲಾಗಿದ್ದು, ಇದಕ್ಕೆ ವಿರೋಧ ವ್ಯಕ್ತಪಡಿಸುವುದು ನೋವಿನ ಸಂಗತಿ. ರಾಯಣ್ಣ ನಾಮಫಲಕದಿಂದ ಗ್ರಾಮದ ಕೀರ್ತಿ ಇನ್ನೂ ಹೆಚ್ಚುತ್ತದೆ ಎಂದರು.

ಸಮಿತಿ ಅಧ್ಯಕ್ಷ ದೊಡ್ಡಉಳ್ಳಾರ್ತಿ ಕರಿಯಣ್ಣ ಮಾತನಾಡಿ, ಕಾನೂನು ಬಿಟ್ಟು ರಾಯಣ್ಣನ ನಾಮಫಲಕ ಅಳವಡಿಸಲಾಗಿಲ್ಲ. ಜಿಲ್ಲಾಧಿಕಾರಿ, ತಹಸೀಲ್ದಾರ್, ಉಪವಿಭಾಗಾಧಿಕಾರಿ, ಇಒ ಸೇರಿದಂತೆ ಎಲ್ಲಾ ಅಧಿಕಾರಿಗಳು ಈ ಬಗ್ಗೆ ಕೂಲಂಕುಷವಾಗಿ ಚರ್ಚೆ ನಡೆಸಿದ್ದಾರೆ. ಗ್ರಾಮದ ರಿ.ಸರ್ವೇ, ನಂ. ೧/೨ರ ೧೦ ಗುಂಟೆ ಪ್ರದೇಶದಲ್ಲಿರುವ ಕಟ್ಟಡಗಳನ್ನು ಹೊರತು ಪಡಿಸಿ ಖಾಲಿ ಜಾಗದಲ್ಲೇ ಅವಕಾಶ ಮಾಡಿಕೊಟ್ಟಿದ್ದು, ಅಲ್ಲಿಯೇ ನಾಮಫಲಕ ಅಳವಡಿಸಿದೆ. ಯಾವುದೇ ಸರ್ಕಾರಿ ಕಟ್ಟಡ ದ್ವಂಸಗೊಳಿಸಲಾಗಿಲ್ಲ, ಆದರೂ ಸಹ ಅನಗತ್ಯವಾಗಿ ಆರೋಪ ಮಾಡುವುದು ಸರಿಯಲ್ಲ, ಸರ್ಕಾರದಿಂದ ಕಾನೂನಾತ್ಮಕವಾಗಿ ಅನುಮತಿ ಪಡೆದು ನಾಮಫಲಕ ಅಳವಡಿಸಲಾಗಿದೆ. ಈ ಬಗ್ಗೆ ಅನಗತ್ಯವಾಗಿ ವಿವಾದ ಸೃಷ್ಠಿ ಮಾಡುವುದು ಸರಿಯಲ್ಲ. ಗ್ರಾಮದಲ್ಲಿ ಯಾವುದೇ ನಾಮಫಲಕ ಅಳವಡಿಕೆಯಾದರೂ ಅದನ್ನು ನಮ್ಮ ಸಂಘ ಸ್ವಾಗತಿಸಿ ಗೌರವಿಸಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ರಾಜಣ್ಣ, ಕೆ.ಗೋಪಾಲ, ಸಿ.ಜಿ.ಶಿವಣ್ಣ, ಗಿರೀಶ್, ಗುರುಮೂರ್ತಿ, ಆರ್.ವೆಂಕಟೇಶ್, ಭೀಮಣ್ಣ, ಎಚ್.ವೆಂಕಟೇಶ್ ಮುಂತಾದವರು ಉಪಸ್ಥಿತರಿದ್ದರು.

Share this article