ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯ । ಒತ್ತುವರಿ ತೆರವಿಗೆ ಆಗ್ರಹ
ಕನ್ನಡಪ್ರಭವಾರ್ತೆ ಕುಷ್ಟಗಿ
ರೈತರ ಜೀವನಾಡಿ ಎಂದೇ ಕರೆಯಲ್ಪಡುವ ತಾಲೂಕಿನ ಹಳ್ಳಗಳು ಸ್ವಚ್ಛತೆಗಾಗಿ ಕಾಯುತ್ತಿವೆ. ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಗಿಡ, ಕಸಕಡ್ಡಿ, ಕಲ್ಲು, ಮುಳ್ಳುಗಳು ತುಂಬಿಕೊಂಡು ಹಾಳಾಗುತ್ತಿವೆ.ತಾಲೂಕಿನ ದೋಟಿಹಾಳ, ಕೇಸೂರು, ಬಿಜಕಲ್, ಬಳೂಟಗಿ, ತೆಗ್ಗಿಹಾಳ, ಬನ್ನಟ್ಟಿ, ಮುದೆನೂರು ಸೇರಿದಂತೆ ಹತ್ತಾರು ಹಳ್ಳಗಳಲ್ಲಿ ಜಾಲಿಗಿಡ ಮರಗಳು, ಹುಲ್ಲು, ಕಸ, ಸೇರಿ ನಾನಾ ಬಗೆಯ ಗಿಡ-ಗಂಟಿಗಳು ಬೆಳೆದು ಹಳ್ಳಗಳು ಸಂಪೂರ್ಣ ಹಳ್ಳದ ರೂಪವನ್ನೇ ಕಳೆದುಕೊಂಡಿವೆ. ಇದನ್ನು ಸ್ವಚ್ಛಗೊಳಿಸಿ ನೀರನ್ನು ಉಪಯೋಗ ಮಾಡಲು ಅನುಕೂಲ ಮಾಡಿಕೊಡಬೇಕು ಎಂಬ ಕೂಗು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.
ಹಳ್ಳಗಳ ಮಧ್ಯದ ಭಾಗದಲ್ಲಿ ಜಾಲಿ ಮರಗಳು, ಹುಲ್ಲು ಬೆಳೆದಿದೆ. ಅಲ್ಲದೆ ಅಕ್ರಮ ಮರಳು ದಂಧೆಗೆ ನಲುಗಿರುವ ಹಳ್ಳಗಳಲ್ಲಿ ಬೃಹತ್ ಪ್ರಮಾಣದ ಗುಂಡಿಗಳು ನಿರ್ಮಾಣವಾಗಿವೆ. ಸುಮಾರು 50-60 ಮೀಟರ್ ಅಗಲದ ಹಳ್ಳಗಳು ಈಗ ಮಾರುದ್ದವಷ್ಟೆ ಮಾತ್ರ ಉಳಿದಿವೆ. ಕೆಲ ರೈತರು ಹಳ್ಳದ ಜಾಗ ಒತ್ತುವರಿ ಮಾಡಿಕೊಂಡು ಕೃಷಿ ಚಟುವಟಿಕೆ ಮತ್ತು ಮರಳು ದಂಧೆಗೆ ಬಳಸಿಕೊಳ್ಳುತ್ತಿರುವುದರಿಂದ ಹಳ್ಳದ ನಕ್ಷೆಯೇ ಸಂಪೂರ್ಣ ಬದಲಾಗಿದೆ. ಈ ಹಿಂದೆ ಬೇಸಿಗೆ ಕಾಲದಲ್ಲಿ ಹತ್ತಾರು ಗ್ರಾಮಗಳು ಹಳ್ಳದ ನೀರನ್ನೇ ನಂಬಿ ಜೀವನ ಸಾಗಿಸುತ್ತಿದ್ದವು. ಎತ್ತು, ಎಮ್ಮೆ, ಆಕಳು, ಕುರಿ, ಮೇಕೆಗಳಿಗೆ ಇಲ್ಲಿ ನೀರು ಕುಡಿಸಲಾಗುತ್ತಿತ್ತು. ಆದರೆ ಕಳೆದ ಸುಮಾರು 10 ವರ್ಷಗಳಿಂದ ಹಳ್ಳದಲ್ಲಿ ಅಂತರ್ಜಲಮಟ್ಟ ಕುಸಿದು ಹನಿ ನೀರಿಗಾಗಿ ಪರದಾಡುವಂತಾಗಿದೆ.
ಹಳ್ಳಗಳನ್ನು ಸ್ವಚ್ಛತೆಗೊಳಿಸುವ ಜತೆಗೆ ಅಗತ್ಯ ಇರುವ ಕಡೆಗಳಲ್ಲಿ ಚೆಕ್ ಡ್ಯಾಂ ನಿರ್ಮಿಸಬೇಕು. ಒತ್ತುವರಿಯಾಗಿರುವ ಹಳ್ಳದ ಜಾಗ ತೆರವುಗೊಳಿಸಬೇಕು ಎನ್ನುವ ಕೂಗು ಇದೀಗ ತಾಲೂಕಿನ ರೈತರು, ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.