ಕನ್ನಡಪ್ರಭವಾರ್ತೆ ಚಿತ್ರದುರ್ಗಜಾತಿ, ಧರ್ಮ ಮೀರಿ ಎಲ್ಲವನ್ನು, ಎಲ್ಲರನ್ನು ಅಪ್ಪಿಕೊಳ್ಳುವುದು ಸಾಹಿತ್ಯದ ಗುಣವೆಂದು ಹಿರಿಯ ನ್ಯಾಯವಾದಿ ಹಾಗೂ ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ಗೌರವಾಧ್ಯಕ್ಷ ಬಿ.ಕೆ. ರಹಮತುಲ್ಲಾ ಹೇಳಿದರು.ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆಯ ಹದಿನೆಂಟನೆ ವಾರ್ಷಿಕೋತ್ಸವದ ಅಂಗವಾಗಿ ಪತ್ರಕರ್ತರ ಭವನದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಸಾಹಿತ್ಯ ಹಾಗೂ ಸಾಂಸ್ಕೃತಿಕ ಹಬ್ಬ ಉದ್ಘಾಟಿಸಿ ಮಾತನಾಡಿದ ಅವರು, ಸಾಹಿತ್ಯಕ್ಕೂ ಜಾತಿ ಧರ್ಮಕ್ಕೂ ಒಂದಕ್ಕೊಂದು ಸಂಬಂಧವಿಲ್ಲ. ಜಾತಿ ಧರ್ಮ ಮೀರಿ ಎಲ್ಲರೂ ಸಾಹಿತ್ಯದ ಕೆಲಸ ಮಾಡಬೇಕೆಂದರು.ಹಳೆಗನ್ನಡದಲ್ಲಿ ಪಂಪ ರನ್ನ ಜೈನ ಧರ್ಮದವರಾಗಿದ್ದರೂ ಬಾದಾಮಿ ಶಾಸನವನ್ನು ಉಲ್ಲೇಖಿಸಿದ್ದಾರೆ. ನಡುಗನ್ನಡದಲ್ಲಿ ಕುಮಾರವ್ಯಾಸ, ರಾಘವಾಂಕ, ಹರಿಹರ ದೇವರು ಧರ್ಮ ಪುರಾಣವನ್ನು ರಚಿಸಿದ್ದಾರೆ. ಹೊಸಗನ್ನಡದಲ್ಲಿ ನಾಲ್ಕು ಭಾಗಗಳಾಗಿ ನವೋದಯ ಸಾಹಿತ್ಯದ ಮೂಲಕ ರಾಷ್ಟ್ರಭಕ್ತಿ, ದೇಶಪ್ರೇಮ, ದೇಶದ ಪ್ರಗತಿ ಕುರಿತು ಬಿಂಬಿಸಿದ್ದಾರೆ ಎಂದು ತಿಳಿಸಿದರು.
ಡಾ. ನಿಸಾರ್ ಅಹಮದ್ ಹುಟ್ಟಿನಿಂದ ಮುಸಲ್ಮಾನರಾದರೂ ಅವರೊಬ್ಬ ಹೆಸರಾಂತ ಕವಿಯಾಗಿ, ಕನ್ನಡದ ಸೇವೆ ಮಾಡಿದ್ದರಿಂದ ಇಂದಿಗೂ ಎಲ್ಲರ ಮನದಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆಂದು ಸ್ಮರಿಸಿದರು.ಸಾಹಿತ್ಯಕ್ಕೆ ಎಲ್ಲರನ್ನು ಒಂದೂಡಿಸಿ ಸೌಹಾರ್ದತೆಯಿಂದ ಬದುಕಿಸುವಂತಹ ಶಕ್ತಿಯಿದೆ. ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ಆರಂಭದಲ್ಲಿ ಚಿಕ್ಕ ಗಿಡವಾಗಿ ಹುಟ್ಟಿಕೊಂಡಿದ್ದು, ಇಂದು ದೊಡ್ಡ ಆಲದ ಮರವಾಗಿ ಬೆಳೆದು ನಿಂತಿದೆ. ಇದಕ್ಕೆ ಎಲ್ಲರ ಸಹಕಾರ ಕಾರಣ ಎಂದು ಹರ್ಷ ವ್ಯಕ್ತಪಡಿಸಿದರು.ಸನ್ಮಾನ ಸ್ವೀಕರಿಸಿ ಮಾತನಾಡಿದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಕೆ.ಎಂ. ವೀರೇಶ್, ಕನ್ನಡ ನಾಡು, ನುಡಿ, ನೆಲ, ಜಲ, ಭಾಷೆಯ ಬಗ್ಗೆ ಎಲ್ಲರಲ್ಲೂ ಅಭಿಮಾನವಿರಬೇಕು. ಅಶೋಕ್ ಬಾದರದಿನ್ನಿ ಅತ್ಯುತ್ತಮ ರಂಗ ನಿರ್ದೇಶಕರಾಗಿ ರಂಗಭೂಮಿಗೆ ತನ್ನದೆ ಆದ ಕೊಡುಗೆ ನೀಡಿದ್ದಾರೆ. ವಚನ ಸಾಹಿತ್ಯ, ಶರಣ ಸಾಹಿತ್ಯ ಹನ್ನೆರಡನೆ ಶತಮಾನದ ಬಸವಾದಿ ಶರಣರ ಪರಿಕಲ್ಪನೆ ಎಂದು ತಿಳಿಸಿದರು.
ಯಾವುದೇ ಒಂದು ಸಂಸ್ಥೆ ವೇದಿಕೆಯನ್ನು ಕಟ್ಟುವಾಗ ಅನೇಕ ಹಿಂಸೆ ನೋವು ಸಂಕಟ ಅವಮಾನ ಅನುಭವಿಸಬೇಕಾಗುತ್ತದೆ. ನಂತರ ಸನ್ಮಾನ ಹುಡುಕಿಕೊಂಡು ಬರುತ್ತದೆ. ಮುರುಘಾಮಠದಲ್ಲಿ ಅನೇಕ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದೇನೆ. ನಂತರ ವಿಕಲಚೇತನರ ಶಾಲೆ ತೆರೆದು ಅವರ ಸೇವೆಯ ಮೂಲಕ ಬಾಪೂಜಿ ವಿದ್ಯಾಸಂಸ್ಥೆಯನ್ನು ಕಟ್ಟಿದ್ದೇನೆ. ಶೈಕ್ಷಣಿಕ ಕ್ಷೇತ್ರದಲ್ಲಿ ಸಲ್ಲಿಸಿರುವ ನನ್ನ ಸೇವೆಯನ್ನು ಗುರುತಿಸಿ ಮೈಸೂರು ವಿಶ್ವವಿದ್ಯಾನಿಲಯ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ ಎಂದು ನುಡಿದರು.ಗೌರವ ಡಾಕ್ಟರೇಟ್ ಪ್ರಶಸ್ತಿಯಿಂದ ನನ್ನ ಮೇಲೆ ಜವಾಬ್ದಾರಿ ಜಾಸ್ತಿಯಾಗಿದೆ. ಸಾಹಿತ್ಯದ ಸೇವೆ ಮಾಡುವ ಮನಸ್ಸುಗಳು ಹೆಚ್ಚಾಗಬೇಕು. ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆಯನ್ನು ದಯಾ ಪುತ್ತೂರ್ಕರ್ ಕಳೆದ ಹದಿನೆಂಟು ವರ್ಷಗಳಿಂದ ಮುನ್ನಡೆಸಿಕೊಂಡು ಬರುತ್ತಿರುವುದು ಸುಲಭದ ಕೆಲಸವಲ್ಲ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷನಾಗಿದ್ದಾಗ ಚಿತ್ರದುರ್ಗದಲ್ಲಿ ಎಪ್ಪತ್ತೈದನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ನಡೆಸಿದ್ದೇನೆ. ಈಗ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಸಮ್ಮೇಳನ ಚಿತ್ರದುರ್ಗದಲ್ಲಿ ನಡೆಸುವ ಅವಕಾಶ ಸಿಕ್ಕಿದೆ ಎಂದು ಹೇಳಿದರು.ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ಸಂಸ್ಥಾಪಕಿ ದಯಾ ಪುತ್ತೂರ್ಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ಅಧ್ಯಕ್ಷ ಎಸ್.ಎಚ್. ಶಫಿವುಲ್ಲಾ ಹದಿನೆಂಟನೆ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ತನುಶ್ರಿ ಪ್ರಕಾಶನದ ಸಂಸ್ಥಾಪಕ ರಾಜು ಸೂಲೇನಹಳ್ಳಿ ಉಪನ್ಯಾಸ ನೀಡಿದರು. ಶೋಭ ಮಲ್ಲಿಕಾರ್ಜುನ್, ಸತ್ಯಪ್ರಭಾ ವಸಂತಕುಮಾರ್ ವೇದಿಕೆಯಲ್ಲಿದ್ದರು.