ಲಿಂಗರಾಜು ಕೋರಾ
ಬೆಂಗಳೂರು ವಿಶ್ವವಿದ್ಯಾಲಯ ರಾಜ್ಯದ ಶ್ರೀಮಂತ ವಿವಿಗಳಲ್ಲಿ ಒಂದಾಗಿತ್ತು. ಆದರೆ, ಈ ವಿವಿಯನ್ನು ಮೂರು ಹೋಳುಗಳಾಗಿ ವಿಭಜಿಸಿದ ನಂತರ ಮೂಲ ಬೆಂಗಳೂರು ವಿಶ್ವವಿದ್ಯಾಲಯದ (ಈ ವಿವಿ ವಿಭಜನೆಗೊಂಡು ಬೆಂಗಳೂರು ಉತ್ತರ ಹಾಗೂ ಬೆಂಗಳೂರು ನಗರ ಎಂದು ಪ್ರತ್ಯೇಕಗೊಂಡವು) ಆಂತರಿಕ ಆದಾಯ ಕುಸಿತ, ವಿವಿಯ ಮೂಲನಿಧಿ ವೃದ್ಧಿಯಾಗದ ಹಿನ್ನೆಲೆಯಲ್ಲಿ ತನ್ನ ನಿವೃತ್ತ ನೌಕರರ ಪಿಂಚಣಿಗೆ ಸರ್ಕಾರದ ಮುಂದೆ ಕೈಚಾಚುವ ಸ್ಥಿತಿ ತಲುಪಿದೆ.
ವಿವಿಗಳ ವಿಭಜನೆಯಿಂದಾಗಿ ಆಂತರಿಕ ಆದಾಯ ತೀವ್ರ ಕುಸಿತಗೊಂಡು ಪಿಂಚಣಿಗೂ ದುಡ್ಡಿಲ್ಲದೆ ಆರ್ಥಿಕವಾಗಿ ದುಸ್ಥಿತಿ ಎದುರಿಸುತ್ತಿರುವ ರಾಜ್ಯದ ಅತಿ ಹಳೆಯ ವಿವಿಗಳಾದ ಧಾರವಾಡದ ಕರ್ನಾಟಕ ವಿವಿ, ಮೈಸೂರು ವಿವಿ ಮತ್ತು ಮಂಗಳೂರು ವಿವಿಗಳ ಸಾಲಿಗೆ ಈಗ ಬೆಂಗಳೂರು ನಗರ ವಿವಿಯೂ ಸೇರ್ಪಡೆಯಾಗುತ್ತಿದೆ.ಹಿಂದಿನಿಂದ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕುಲಪತಿ, ಕುಲಸಚಿವ, ಹಣಕಾಸು ಅಧಿಕಾರಿಗಳಾಗಿದ್ದ ಒಂದಷ್ಟು ದೂರದೃಷ್ಟಿಯುಳ್ಳ ಆಡಳಿತಗಾರರು ಭವಿಷ್ಯದ ದೃಷ್ಟಿಯಿಂದ ಪ್ರತೀ ವರ್ಷ ವಿವಿಯ ಆದಾಯದ ಒಂದಷ್ಟು ಮೊತ್ತವನ್ನು ಮೂಲ ನಿಧಿಯಾಗಿ ಸ್ಥಾಪಿಸಿದ್ದರು. ಅದು ಎಂಟು ವರ್ಷಗಳ ಹಿಂದೆ 700 ಕೋಟಿ ರು. ದಾಟಿತ್ತು. ಕಷ್ಟದ ಸ್ಥಿತಿಯಲ್ಲೂ ಈ ಹಣ ತೆಗೆದಿರಲಿಲ್ಲ. ಇದರಿಂದ ಬರುತ್ತಿದ್ದ ಬಡ್ಡಿ ಮೊತ್ತದಿಂದ ನಿವೃತ್ತ ನೌಕರರ ಪಿಂಚಣಿ, ಇನ್ನಿತರೆ ಸಿಬ್ಬಂದಿ ವೇತನ ಬಳಕೆಯಾಗುತ್ತಿತ್ತು. ಇಲ್ಲದೆ ಹೋಗಿದ್ದರೆ ಬೆಂಗಳೂರು ವಿವಿ ಮೂರು ಹೋಳಾದ ದಿನದಿಂದಲೇ ತೀವ್ರ ಆರ್ಥಿಕ ಸಂಕಷ್ಟ ಎದುರಿಸಬೇಕಾಗಿತ್ತು ಎನ್ನುತ್ತಾರೆ ಇಲ್ಲಿ ಆಡಳಿತ ನಡೆಸಿದ ಕೆಲ ವಿಶ್ರಾಂತ ಕುಲಪತಿಗಳು.
ಪ್ರಸಕ್ತ ವಿವಿಯ ಆಂತರಿಕ ಆದಾಯ, ಸರ್ಕಾರ ಕಾಯಂ ನೌಕರರಿಗೆ ನೀಡುವ ವೇತನ ಎಲ್ಲವೂ ಸೇರಿದರೂ ಒಟ್ಟಾರೆ ಸುಮಾರು 250 ಕೋಟಿ ರು.ಗಳಷ್ಟಿದೆ. ಆದರೆ, ಇದರಲ್ಲಿ ಬಹುಪಾಲು 200 ಕೋಟಿ ರು.ಗಳಿಗೂ ಹೆಚ್ಚು ಕಾಯಂ ನೌಕರರ ವೇತನ, ನಿವೃತ್ತಿ ನೌಕರರ ಪಿಂಚಣಿಗೇ ಹೋಗುತ್ತದೆ. ಇನ್ನುಳಿದ ಹಣ ಅತಿಥಿ ಶಿಕ್ಷಕರು, ಗುತ್ತಿಗೆ, ಹೊರಗುತ್ತಿಗೆ ನೌಕರರ ವೇತನ, ವಿವಿ ಹಾಸ್ಟೆಲ್ ನಿರ್ವಹಣೆ, ರಸ್ತೆ, ಕಟ್ಟಡ ನಿರ್ವಹಣೆ, ಸಣ್ಣ ಪುಟ್ಟ ದುರಸ್ತಿ ಸೇರಿ ಒಟ್ಟಾರೆ ಕ್ಯಾಂಪಸ್ ನಿರ್ವಹಣೆಗೆ ಬಳಕೆಯಾಗುತ್ತಿದೆ. ಕಳೆದ ಮೂರು ವರ್ಷಗಳಿಂದ ಕೊರತೆ ಬಜೆಟ್ ಮಂಡಿಸುತ್ತಿದೆ. ವರ್ಷದಿಂದ ವರ್ಷಕ್ಕೆ ಕೊರತೆ ಬಜೆಟ್ ಮೊತ್ತ ಹೆಚ್ಚಾಗುತ್ತಾ ಬಂದಿದೆ.
ವಿಭಜನೆ ಬಳಿಕ ಕುಸಿದ ಬೆಂ.ವಿವಿ ಆದಾಯ:
ಬೆಂಗಳೂರು ವಿವಿಯನ್ನು ಅವೈಜ್ಞಾನಿಕವಾಗಿ ವಿಭಜನೆ ಮಾಡಿದ್ದರಿಂದ 800ಕ್ಕೂ ಹೆಚ್ಚು ಸಂಯೋಜಿತ ಕಾಲೇಜುಗಳು, 3.5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಮೂರೂ ವಿವಿಗೆ ಹಂಚಿಹೋದರು. ವಿವಿಗಳಿಗೆ ಪ್ರಮುಖ ಆದಾಯ ಮೂಲವೇ ಖಾಸಗಿ ಕಾಲೇಜುಗಳ ಸಂಯೋಜನಾ ಶುಲ್ಕ. ಆದರೆ, ಮೂಲ ಬೆಂಗಳೂರು ವಿವಿಗೆ ಬಂದ 300ಕ್ಕೂ ಕಡಿಮೆ ಕಾಲೇಜುಗಳಲ್ಲಿ ಹೆಚ್ಚಿನವು ಸರ್ಕಾರಿ ಕಾಲೇಜುಗಳಾಗಿದ್ದವು. ನಿವೃತ್ತಿ ಅಂಚಿನ ನೌಕರರೆಲ್ಲರೂ ಮೂಲ ವಿವಿಯಲ್ಲೇ ಉಳಿದರು. ಇದರಿಂದ ಸಂಯೋಜನಾ ಶುಲ್ಕ ಗಣನೀಯವಾಗಿ ಇಳಿಯಿತು, ಹೊರೆ ಹೆಚ್ಚಾಯಿತು.
ವಿವಿ ಇತಿಹಾಸ-ಸಾಧನೆ
ಕೋಟ್
ವಿವಿಯ ಆಂತರಿಕ ಆದಾಯ ಕಡಿಮೆಯಾಗಿ ನಿವೃತ್ತರ ಪಿಂಚಣಿಗೆ ಹಣದ ಕೊರತೆ ಆರಂಭವಾಗಿರುವುದು ನಿಜ. ಸದ್ಯದವರೆಗೆ ಹೇಗೋ ನಿಭಾಯಿಸಿಕೊಂಡು ಬರುತ್ತಿದ್ದೇವೆ. ಸರ್ಕಾರ ಬಹಳ ಸಣ್ಣ ನೆರವು ನೀಡುತ್ತಿದೆ. ಮುಂದೆ ನಿವೃತ್ತರ ಸಂಖ್ಯೆ ಇನ್ನಷ್ಟು ಹೆಚ್ಚಾದಂತೆ ಸರ್ಕಾರ ಹೆಚ್ಚಿನ ನೆರವು ನೀಡಬೇಕಾಗುತ್ತದೆ. ಇಲ್ಲದಿದ್ದರೆ ವಿಶ್ವವಿದ್ಯಾಲಯದ ಪೂರ್ಣ ಆಂತರಿಕ ಆದಾಯವೂ ಪಿಂಚಣಿಗೆ ಸಾಲುವುದಿಲ್ಲ. ಇತರೆ ಶೈಕ್ಷಣಿಕ, ಸಂಶೋಧನಾ ಚಟುವಟಿಕೆಗಳಿಗೆ ಹೊಡೆತ ಬೀಳಬಹುದು.
ಡಾ. ಜಯಕರ ಎಸ್.ಎಂ, ಕುಲಪತಿ, ಬೆಂಗಳೂರು ವಿಶ್ವವಿದ್ಯಾಲಯಕೋಟ್
ಮೂಲನಿಧಿಗೆ ಕೈಹಾಕಬಾರದುನಾವು ನಮ್ಮ ಕುಟುಂಬ ನಿರ್ವಹಣೆಗೆ ಹೇಗೆ ಹಣ ಕೂಡಿಡುತ್ತೇವೋ ಹಾಗೆ ಒಂದು ವಿವಿಯ ಆಡಳಿತ ವಹಿಸಿಕೊಂಡಾಗ ಆ ವಿವಿಯ ಭವಿಷ್ಯಕ್ಕೆ ಪ್ರತೀ ವರ್ಷ ಒಂದಷ್ಟು ಅನುದಾನ ಕೂಡಿಡುತ್ತಾ ಹೋಗುವುದು ಜವಾಬ್ದಾರಿ. ಹಿಂದಿನವರು ಮಾಡಿದ್ದರು ನಾವೂ ಅದನ್ನು ಮಾಡಿದ್ದೆವು. ಮುಂದಿನವರೂ ಮಾಡಬೇಕು. ಮೂಲನಿಧಿಗೆ ಸರ್ಕಾರವಾಗಲಿ, ಯಾರೇ ಆಗಲಿ ಕೈ ಹಾಕಬಾರದು.
-- ಪ್ರೊ.ಬಿ.ತಿಮ್ಮೇಗೌಡ, ಬೆಂವಿವಿ ವಿಶ್ರಾಂತ ಕುಲಪತಿಖಾಸಗಿಗಳಿಗೆ ಮಾರಾಟ
ದೇಶ, ಸಮಾಜದ ಬೆಳವಣಿಗೆಗೆ ಶಿಕ್ಷಣ, ಸಾಕ್ಷರತೆ ಬಹಳ ಮುಖ್ಯ. ಹಾಗಾಗಿ ವಿವಿಗಳ ಆಂತರಿಕ ಆದಾಯದ ಜೊತೆಗೆ ಸರ್ಕಾರಗಳೂ ಪ್ರತೀ ವರ್ಷ ನಿರ್ದಿಷ್ಟ ಅನುದಾನ ನೀಡಬೇಕು. ಆದರೆ, ಪಕ್ಷಾತೀತವಾಗಿ ಎಲ್ಲ ಸರ್ಕಾರಗಳೂ ವಿಶ್ವವಿದ್ಯಾಲಯಗಳ ಬಗ್ಗೆ ತೋರುತ್ತಿರುವ ಅಸಡ್ಡೆ ಇನ್ನೂ 10 ವರ್ಷ ಹೀಗೇ ಮುಂದುವರೆದರೆ ಬಾಗಿಲು ಹಾಕುವ ಸ್ಥಿತಿ ಬರುತ್ತದೆ ಅಥವಾ ಖಾಸಗಿಯವರ ಸಹಭಾಗಿತ್ವದಲ್ಲಿ ಉದ್ಧಾರ ಮಾಡುತ್ತೇವೆ ಎಂದು ಸಾರ್ವಜನಿಕ ವಿವಿಗಳನ್ನು ಮಾರುವ ಹುನ್ನಾರಕ್ಕೆ ಸರ್ಕಾರಗಳು ಇಳಿಯುತ್ತವೆ.-- ಪ್ರೊ.ಕೆ.ಎನ್. ನಿಂಗೇಗೌಡ, ಬೆಂ.ವಿವಿ ನಿವೃತ್ತ ಕುಲಸಚಿವ