ಕುಟುಂಬದ ನೆಮ್ಮದಿಯಲ್ಲಿ ಹೆಣ್ಣು ಮಕ್ಕಳ ಪಾತ್ರ ಪ್ರಮುಖ: ಅಭಿನವ ಮೃತ್ಯುಂಜಯ ಶ್ರೀಗಳು

KannadaprabhaNewsNetwork | Published : Apr 11, 2024 12:58 AM

ಸಾರಾಂಶ

ಗದಗ ತಾಲೂಕಿನ ಕಳಸಾಪುರ ಗ್ರಾಮದ ಈಶ್ವರ ಬಸವಣ್ಣ ದೇವರ 14ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ 21 ಜೋಡಿ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಮಣಕವಾಡ ದೇವಮಂದಿರ ಮಠದ ಅಭಿನವ ಮೃತ್ಯುಂಜಯ ಶ್ರೀಗಳು ಉದ್ಘಾಟಿಸಿದರು.

ಗದಗ: ಪ್ರತಿಯೊಂದು ಕುಟುಂಬ ನೆಮ್ಮದಿಯಿಂದ ಬದುಕಬೇಕಾದಲ್ಲಿ ಹೆಣ್ಣು ಮಕ್ಕಳ ಪಾತ್ರ ಪ್ರಮುಖವಾಗಿರುತ್ತದೆ ಎಂದು ಮಣಕವಾಡ ದೇವಮಂದಿರ ಮಠದ ಅಭಿನವ ಮೃತ್ಯುಂಜಯ ಶ್ರೀಗಳು ಹೇಳಿದರು.

ಅವರು ತಾಲೂಕಿನ ಕಳಸಾಪುರ ಗ್ರಾಮದ ಈಶ್ವರ ಬಸವಣ್ಣ ದೇವರ 14ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ 21 ಜೋಡಿ ಸಾಮೂಹಿಕ ವಿವಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ದೇವರು ಹೆಣ್ಣುಮಕ್ಕಳಿಗೆ ಕೊಟ್ಟಿರುವ ತಾಳ್ಮೆಯಿಂದಲೇ ಎಲ್ಲವನ್ನೂ ಗೆಲ್ಲುತ್ತಾಳೆ, ಗೆಲ್ಲಬೇಕು ಎನ್ನುವುದು ನಮ್ಮ ಸಮಾಜ ಅಪೇಕ್ಷೆಯಾಗಿದೆ ಎಂದು ಹೇಳಿದರು.

ಈ ನಾಡಿನೊಳಗೆ ಶರೀಫ ಶಿವಯೋಗಿಗಳು, ಸಿದ್ಧಾರೂಢರು, ನವಲಗುಂದ ನಾಗಲಿಂಗ ಶಿವಯೋಗಿಗಳು, ಎಮ್ಮಿಗನೂರ ಜಡೆಸಿದ್ದರು, ಚಳಗುರ್ಕಿ ಯರಿ ತಾತನವರು ಸಂಸಾರದ ಮೇಲೆ ಸವಾರಿ ಮಾಡಿದ್ದಾರೆ. ಅಂತೆಯೇ ಲೋಕಪೂಜ್ಯರಾಗಿದ್ದಾರೆ. ನೀವು ಸಂಸಾರಕ್ಕೆ ಅಂಟಿಕೊಳ್ಳದೆ ಸಂಸಾರದಲ್ಲಿದ್ದುಕೊಂಡು ಸದ್ಗತಿ ಪಡೆಯಬೇಕು. ಸಮಾಜಕ್ಕೆ ಒಳ್ಳೆಯ ಮಕ್ಕಳನ್ನು ಹೆತ್ತು ಕೊಡಬೇಕು ಎಂದರು.

ಸಾನ್ನಿಧ್ಯವಹಿಸಿದ್ದ ಶಿವಗಂಗಾ ಕ್ಷೇತ್ರದ ಮಲಯ ಶಾಂತಮುನಿ ಶಿವಾಚಾರ್ಯರು ಮಾತನಾಡಿ, ಮದುವೆ ಸ್ವರ್ಗಲೋಕದಲ್ಲಿ ನಿಶ್ಚಯವಾಗಿರುತ್ತದೆ. ಅವರನ್ನು ಭೂಲೋಕದಲ್ಲಿ ಹುಡುಕಿ ಮದುವೆ ಮಾಡುವುದು ನಮ್ಮ ಕರ್ತವ್ಯವಾಗಿದೆ. ಅದ್ದರಿಂದ ಮದುವೆಗೆ ಬ್ರಹ್ಮಗಂಟು ಎನ್ನುತ್ತಾರೆ. ಗಂಡ-ಹೆಂಡತಿ ಅರಿತು ಜೀವನ ನಡೆಸಬೇಕು ಎಂದರು.

ಸಮ್ಮುಖವಹಿಸಿದ್ದ ಅಡ್ನೂರಿನ ಅಭಿನವ ಪಂಚಾಕ್ಷರ ಶಿವಾಚಾರ್ಯ ಸ್ವಾಮೀಜಿ, ಓಂಕಾರಗಿರಿ ಓಂಕಾರೇಶ್ವರ ಶ್ರೀಮಠದ ಫಕೀರೇಶ್ವರ ಶಿವಾಚಾರ್ಯರು, ನಾಗರಾಳ ಬಸವಧರ್ಮ ಮಠದ ಶಾಂತವೀರ ಮಹಾಸ್ವಾಮೀಜಿ, ರವುಡಕುಂದ ಸಿದ್ದಾಶ್ರಮದ ಡಾ. ಸಿದ್ರಾಮೇಶ್ವರ ಶರಣರು, ಗಜೇಂದ್ರಗಡದ ಚಂದ್ರಶೇಖರ ಶರಣರು, ಕೋಟ್ನಿಕಲ್ ಸಂಗಮೆಶ್ವರಮಠದ ಸಂಗಯ್ಯ ತಾತನವರು ಮಾತನಾಡಿದರು.

ಗ್ರಾಪಂ ಅಧ್ಯಕ್ಷೆ ಅನಸೂಯಾ ಪಾಟೀಲ, ಪಿ.ಸಿ. ಹಿರೇಮಠ, ಉದಯಕುಮಾರ ದೇಸಾಯಿ, ಸಿ.ಬಿ. ಪಲ್ಲೇದ, ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ ಉಪಸ್ಥಿತರಿದ್ದರು.

ರಂಜಿತಾ ಬಡಿಗೇರ ಪ್ರಾರ್ಥಿಸಿದರು. ಶಿವಲಿಂಗಯ್ಯಶಾಸ್ತ್ರಿಗಳು ಸಿದ್ದಾಪುರ ಕಾರ್ಯಕ್ರಮ ನಿರೂಪಿಸಿದರು. ಮಹಾರಥೋತ್ಸವದ ಆನಂತರ ರಸಮಂಜರಿ ಕಾರ್ಯಕ್ರಮ ಜರುಗಿತು.

Share this article