ಕನ್ನಡಪ್ರಭ ವಾರ್ತೆ ಬೈಲಹೊಂಗಲ
ರಾಷ್ಟ್ರೀಯ ಸ್ವಯಂಸೇವಕ ಸಂಘಟನೆ ನೂರು ವರ್ಷ ಪೂರೈಸುತ್ತಿದೆ ಎಂದರೆ ಸಾಮಾನ್ಯ ಸಂಗತಿಯಲ್ಲ. ಹಿರಿಯರ ನಿಸ್ವಾರ್ಥ ಭಾವದ ಸೇವೆಯಿಂದ, ಹಿಂದೂ ಸಮಾಜ ಸಂಘಟಿತವಾಗುತ್ತಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಬೆಳಗಾವಿ ವಿಭಾಗ ಕಾರ್ಯವಾಹ ಸಂಜಯ ಅಡಿಕೆ ಹೇಳಿದರು.ನಗರದ ಸೋಮವಾರ ಪೇಟೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ಧಿ ನಿಮಿತ್ತ ನೂತನ ಕಾರ್ಯಾಲಯ ಉದ್ಘಾಟಿಸಿ, ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು. ಹಿಂದೂ ಸಮಾಜ ಸಂಘಟಿತವಾಗುವಲ್ಲಿ ಆರ್ಎಸ್ಎಸ್ ಪಾತ್ರ ಬಹಳ ಪ್ರಾಮುಖ್ಯತೆ ವಹಿಸಿದೆ. ಆರ್ಎಸ್ಎಸ್ ಅನೇಕ ಏಳುಬೀಳುಗಳನ್ನು ಕಂಡಿದೆ. ಸಂಘದ ಮೇಲೆ ಮೂರು ಬಾರಿ ನಿರ್ಬಂಧ ಹಾಕಿದರು ಸಂಘ ತನ್ನ ಕೆಲಸದಿಂದ ಹಿಂದೆ ಸರಿದಿಲ್ಲ. ಹೀಗೆ ಆರ್ಎಸ್ಎಸ್ ನಿರಂತರ ಶಾಖೆಯ ಮುಖಾಂತರ ಹಿಂದೂ ಸಮಾಜದ ಸಂಘಟನೆ ಮಾಡುತ್ತಾ ಬಂದಿದೆ. ಇದರ ಹಿಂದೆ ಸಂಘಟನೆಗಾಗಿ ಅನೇಕ ಹಿರಿಯರ ತ್ಯಾಗ, ಬಲಿದಾನಗಳು ಆಗಿವೆ ಎಂದರು.
ಇಡೀ ತಮ್ಮ ಜೀವನವನ್ನು ಸಂಘಟನೆಗಾಗಿ ಸಮರ್ಪಣೆ ಗೈದ ಅನೇಕ ಹಿರಿಯರು ನಮಗೆ ಪ್ರೇರಣೆ. ಅವರೆಲ್ಲರೂ ಒಂದು ಕಾಲದಲ್ಲಿ ಕತ್ತೆ ಅಂತ ಆದರೂ ಕರೆಯಿರಿ ಆದರೆ ಹಿಂದೂ ಎಂದು ಮಾತ್ರ ನನ್ನನ್ನು ಕರೆಯಬೇಡಿ, ಎನ್ನುವಂತಹ ಭಾವ ಹಿಂದೂ ಸಮಾಜದಲ್ಲಿ ಇತ್ತು, ಆದರೆ ಇವತ್ತು ನಾವೆಲ್ಲರೂ ಗರ್ವದಿಂದ ಹೇಳುತ್ತಿದ್ದೇವೆ. ನಾವೆಲ್ಲ ಹಿಂದೂ ಎಂದು ಇದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆಯ ಪರಿಣಾಮ ಹಿಂದೂ ಸಮಾಜ ಜಾಗೃತಗೊಳ್ಳುತಿದೆ. ಹೀಗಾಗಿ ನಾವೆಲ್ಲರೂ ಬರುವ ವಿಜಯದಶಮಿದಂದು ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ 100 ವರ್ಷ ತುಂಬಲಿದೆ. ಆ ಸಂದರ್ಭದಲ್ಲಿ ನಾವೆಲ್ಲರೂ ಸಂಘದ ಉತ್ಸವಗಳಲ್ಲಿ ಭಾಗಿಯಾಗಬೇಕು. ಅತಿ ಹೆಚ್ಚು ಗಣವೇಶ ದಾರಿ ಸ್ವಯಂಸೇವಕರಾಗಿ ಭಾಗಿಯಾಗಬೇಕು ಎಂದರು.ದಿವ್ಯ ಸಾನ್ನಿಧ್ಯ ವಹಿಸಿದ ನಗರದ ಮಡಿವಾಳೇಶ್ವರ ಮಠದ ಮಡಿವಾಳೇಶ್ವರ ಮಹಾಸ್ವಾಮೀಜಿ ಮಾತನಾಡಿ, ಹಿಂದೂ ಸಮಾಜದಲ್ಲಿ ಸಂಘಟನೆಯಾಗುವುದು ಬಹಳ ಮುಖ್ಯವಾಗಿದೆ. ಅಂತಹ ಕೆಲಸವನ್ನು ಆರ್ಎಸ್ಎಸ್ ಮಾಡುತ್ತಿದೆ. ಆದ್ದರಿಂದ ನಾವೆಲ್ಲರೂ ಒಂದಾಗಿ ಹಿಂದೂಗಳ ಸಂಘಟಿಸುವಲ್ಲಿ ಹೆಚ್ಚು ಪ್ರಯತ್ನ ಹಾಕೋಣ ಅದೇ ರೀತಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ಧಿ ವರ್ಷದ ಈ ನೂತನ ಕಾರ್ಯಾಲಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಬಹಳ ಸಂತೋಷದ ಸಂಗತಿ ಯಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಪ್ರಗತಿಪ ರೈತರಾದ ಸಂಗಪ್ಪ ಕಾದ್ರೊಳ್ಳಿ ಆಗಮಿಸಿದ್ದರು. ಬೆಳಗಾವಿ ಆರ್ಎಸ್ಎಸ್ ಕಾರ್ಯವಾಹ ಮಾರುತಿ ಮೆಳ್ಳಿಕೇರಿ, ವಿಎಚ್ಪಿ ಜಿಲ್ಲಾ ಅಧ್ಯಕ್ಷ ಪ್ರಮೋದ ಕುಮಾರ ವಕ್ಕುಂದಮಠ, ಪುರಸಭೆ ಅಧ್ಯಕ್ಷ ವಿಜಯ ಬೋಳನ್ನವರ, ಮುರಳಿಧರ ಮಾಳೋದೆ, ವಿರೂಪಾಕ್ಷಯ್ಯ ಕೋರಿಮಠ, ಬಿ.ಬಿ.ಗಣಾಚಾರಿ, ಮುಕುಂದ ಕುಲಕರ್ಣಿ, ಯಲ್ಲಪ್ಪ ಮಡಿವಾಳರ, ಶಿವಾನಂದ ಬಡ್ಡಿಮನಿ, ಶಿವಾನಂದ ಬೆಳಗಾವಿ, ಬಸವರಾಜ ನಾಗನೂರ, ಡಾ.ಬಾಳಿ, ಕಾಶೀನಾಥ ಬಿರಾದರ, ದಯಾನಂದ ಗೆಜ್ಜಿ, ಆನಂದ ವಾಲಿ, ಅರ್ಜುನ ಕಲಕುಟಕರ, ಸುಭಾಸ ತುರಮರಿ, ರಮೇಶ ನೇಗಿನಾಳ, ಗಿರೀಶ ಹರಕುಣಿ, ಪ್ರಶಾಂತ ಅಮ್ಮಿನಬಾವಿ, ಜಗದೀಶ ಲೋಕಾಪೂರ, ಬಸವರಾಜ ಬಡಿಗೇರ ಹಾಗೂ ನೂರಾರು ಕಾರ್ಯಕರ್ತರು ಇದ್ದರು.