ಕನ್ನಡಪ್ರಭ ವಾರ್ತೆ ಪಾಂಡವಪುರ
ಶೈಕ್ಷಣಿಕ ಕಾರ್ಯಕಲಾಪಗಳನ್ನು ಚುರುಕುಗೊಳಿಸುವ ನಿಟ್ಟಿನಲ್ಲಿ ಪತ್ಯೇತರ ಚಟುವಟಿಕೆಗಳ ಹಾಗೂ ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಪರಿಚಯಿಸುವ ಭಾಗವಾಗಿ ಪ್ರಥಮ ಹಂತದಲ್ಲಿ ತರಗತಿವಾರು ನಡೆದ ಚುನಾವಣೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ಮುಖ್ಯ ಚುನಾವಣಾಧಿಕಾರಿಯಿಂದ ನಾಮಪತ್ರ ಪಡೆದು ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ, 10 ರು. ಠೇವಣಿಯಾಗಿಟ್ಟು ನಾಮಪತ್ರ ಸಲ್ಲಿಸಿದರು.
ಒಟ್ಟು 13 ಮಂತ್ರಿ ಸ್ಥಾನಗಳಿಗೆ 24 ಮಂದಿ ವಿದ್ಯಾರ್ಥಿಗಳು ಓರ್ವ ಸೂಚಕ ಮತ್ತು ಅನುಮೋದಕರ ಸಹಿಯೊಂದಿಗೆ ಉಮೇದುವಾರಿಕೆ ಸಲ್ಲಿಸಿದ್ದರು. ಲೋಕಸಭೆ ಮತ್ತು ವಿಧಾನಸಭೆ ಸಾರ್ವತ್ರಿಕ ಚುನಾವಣೆ ಮಾದರಿಯಲ್ಲಿಯೇ ವಿದ್ಯಾರ್ಥಿ ಅಭ್ಯರ್ಥಿಗಳು ತರಗತಿವಾರು ಮತ ಯಾಚನೆ ಮಾಡಿ ಬೆಂಬಲಿಸುವಂತೆ ಕೋರಿದರು.ಬಳಿಕ ನಡೆದ ಮತದಾನದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಸಿಬ್ಬಂದಿ ಸೇರಿ ಒಟ್ಟು 128 ಮಂದಿ ಸರತಿ ಸಾಲಿನಲ್ಲಿ ನಿಂತು ಉತ್ಸಾಹದಿಂದ ಮತ ಹಕ್ಕು ಚಲಾಯಿಸಿದರು. ನಂತರ ನಡೆದ ಮತ ಎಣಿಕೆಯಲ್ಲಿ 109 ಮತಗಳು ಸ್ವೀಕಾರಾರ್ಹವಾದವು. ಇನ್ನುಳಿದಂತೆ 2 ನೋಟಾ ಮತ್ತು 17 ಕುಲಗೆಟ್ಟ ಮತಗಳಾಗಿದ್ದವು.
ಮುಖ್ಯ ಚುನಾವಣಾಧಿಕಾರಿಯಾಗಿ ಮುಖ್ಯ ಶಿಕ್ಷಕ ಎನ್.ಮಹದೇವಪ್ಪ ಅವರು ಇಡೀ ಚುನಾವಣಾ ಪ್ರಕ್ರಿಯೆಯನ್ನು ವ್ಯವಸ್ಥಿತವಾಗಿ ನಡೆಸಿದರು. ಮತಗಟ್ಟೆಯ ಅಧಿಕಾರಿಗಳಾಗಿ ಶಿಕ್ಷಕರಾದ ಆರ್.ಸಿ.ನಾಗೇಗೌಡ, ಕೆ.ಎನ್.ಜಯರಾಂ, ಸಿ.ಮಹೇಶ, ಚನ್ನೇಗೌಡ, ಸಿಬ್ಬಂದಿ ಎಂ.ಎಚ್.ಕಾರ್ತಿಕ್, ಶಿಕ್ಷಕಿಯರಾದ ಬಿ.ಚಂಪಾ, ಕರೀಮುನ್ನೀಸಾ, ಶೋಭಾ ಪವಾರ, ಎಸ್.ಟಿ.ಸವಿತಾ, ಬಿ.ಆರ್.ಸೌಮ್ಯಲತಾ ಕಾರ್ಯನಿರ್ವಹಿಸಿದರು. ಕಾಲೇಜಿನ ಪ್ರಾಂಶುಪಾಲ ಎಚ್.ಎನ್.ರಾಮಕೃಷ್ಣೇಗೌಡ ಚುನಾವಣೆ ಉಸ್ತುವಾರಿ ವಹಿಸಿದ್ದರು.