ಎಲ್ಲಾ ಸಂಪತ್ತಿಕ್ಕಿಂತ ಆರೋಗ್ಯ ಬಹಳ ಮುಖ್ಯವಾಗಿದೆ. ಆರೋಗ್ಯದಿಂದ ಜನರು ಇದ್ದರೆ ಎಲ್ಲಾ ಸಾಧನೆ ಮಾಡಲು ಸಾಧ್ಯ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಕ್ರಿಯಾಶೀಲತೆ ಶ್ಲಾಘನೀಯ.
ಹಾನಗಲ್ಲ ಹಾಗೂ ಹಾವೇರಿ ತಾಲೂಕಿನ ಆಶಾ ಕಾರ್ಯಕರ್ತರಿಗೆ ಕ್ಯಾನ್ಸರ್ ಜಾಗೃತಿ, ತರಬೇತಿ ಹಾಗೂ ಪರೀಕ್ಷಾ ಶಿಬಿರ ಸಮಾರಂಭ
ಕನ್ನಡಪ್ರಭ ವಾರ್ತೆ ಹಾವೇರಿ
ಆರೋಗ್ಯದ ಕ್ಷೇತ್ರದಲ್ಲಿ ಕೆಲಸ ಮಾಡುವ ಆಶಾ ಕಾರ್ಯಕರ್ತರಿಗೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ದಶಮಾನೋತ್ಸವ ನಿಮಿತ್ತವಾಗಿ ಕ್ಯಾನ್ಸರ್ ಜಾಗೃತಿ, ತರಬೇತಿ ಹಾಗೂ ಪರೀಕ್ಷಾ ಶಿಬಿರ ಆಯೋಜನೆ ಮಾಡಿದ್ದು ಶ್ಲಾಘನೀಯ ಎಂದು ವಿಧಾನಸಭಾ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಹೇಳಿದರು.
ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ೧೦೦ ವರ್ಷದ ಶತಮಾನೋತ್ಸವದ ಅಂಗವಾಗಿ ರೆಡ್ಕ್ರಾಸ್ ಸಂಸ್ಥೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹಾವೇರಿ ವೈದ್ಯಕೀಯ ಮಹಾವಿದ್ಯಾಲಯ, ಜಿಲ್ಲಾಸ್ಪತ್ರೆ, ರಾಜ್ಯ ಮತ್ತು ಜಿಲ್ಲಾ ಆಶಾ ಕಾರ್ಯಕರ್ತರ ಸಂಘದ ಆಶ್ರಯದಲ್ಲಿ ಮೊದಲನೇ ಹಂತದ ಹಾನಗಲ್ಲ ಹಾಗೂ ಹಾವೇರಿ ತಾಲೂಕಿನ ಆಶಾ ಕಾರ್ಯಕರ್ತರಿಗೆ ಕ್ಯಾನ್ಸರ್ ಜಾಗೃತಿ, ತರಬೇತಿ ಹಾಗೂ ಪರೀಕ್ಷಾ ಶಿಬಿರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವ ಆಶಾ ಕಾರ್ಯಕರ್ತರ ಸೇವೆ ಸ್ಮರಣೀಯವಾಗಿದೆ. ಎಲ್ಲಾ ಸಂಪತ್ತಿಕ್ಕಿಂತ ಆರೋಗ್ಯ ಬಹಳ ಮುಖ್ಯವಾಗಿದೆ. ಆರೋಗ್ಯದಿಂದ ಜನರು ಇದ್ದರೆ ಎಲ್ಲಾ ಸಾಧನೆ ಮಾಡಲು ಸಾಧ್ಯ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಕ್ರಿಯಾಶೀಲತೆ ಶ್ಲಾಘನೀಯ. ರೆಡ್ ಕ್ರಾಸ್ ಸಂಸ್ಥೆ ಜಿಲ್ಲೆಯಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿದ್ದು, ನಾವೆಲ್ಲರೂ ಸಹಕಾರ ನೀಡಬೇಕಿದೆ. ಹಾವೇರಿ ನಗರದಲ್ಲಿ ಬ್ಲಡ್ ಬ್ಯಾಂಕ್ ಸ್ಥಾಪಿಸಲು ₹೫ ಲಕ್ಷ ನೀಡಲಾಗುವುದು ಎಂದು ಭರವಸೆ ನೀಡಿದರು.
ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಗೌರವ ಕಾರ್ಯಾಧ್ಯಕ್ಷ ಸಂಜೀವಕುಮಾರ ನೀರಲಗಿ ಮಾತನಾಡಿ, ಸ್ಥಳೀಯ ಆಶಾ ಕಾರ್ಯಕರ್ತರು ಜನರಿಗೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಲಹೆ ಸೂಚನೆ ನೀಡಿದರೆ ಉತ್ತಮ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯವಾಗಲಿದೆ. ರೆಡ್ ಕ್ರಾಸ್ ಸಂಸ್ಥೆ ಸಾಮಾಜಿಕ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದೆ ಎಂದರು.
ಗೌರವ ಕಾರ್ಯದರ್ಶಿ ಡಾ. ನೀಲೇಶ ಎಂ.ಎನ್. ಪ್ರಾಸ್ತಾವಿಕವಾಗಿ ಮಾತನಾಡಿ, ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಆಶಾ ಕಾರ್ಯಕರ್ತರ ಆರೋಗ್ಯವು ಮುಖ್ಯ ಎಂದು ಪರಿಗಣಿಸಿ ತರಬೇತಿ ನೀಡಲಾಗುತ್ತಿದೆ. ಕ್ಯಾನ್ಸರ್ಗೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ತಿಳಿದುಕೊಂಡು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ರೆಡ್ ಕ್ರಾಸ್ ಸಂಸ್ಥೆಯ ಡಾ. ಸರಿತಾ, ಆಶಾ ಕಾರ್ಯಕರ್ತರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಿ. ನಾಗಲಕ್ಷ್ಮೀ ಮಾತನಾಡಿದರು. ಡಾ. ಅಕ್ಷತಾ, ಡಾ. ಶೃತಿ, ಡಾ. ನೀತು, ಡಾ. ಗಗನ ಮಾಳೋದೆ, ಡಾ. ಮುತ್ತು, ಡಾ. ಸಂತೋಷ ದಡ್ಡಿ, ಡಾ. ಆಶೀಫ್, ಡಾ. ಜೀನು ಇತರರು ಕ್ಯಾನ್ಸರ್ ಜಾಗೃತಿ, ತರಬೇತಿ ಹಾಗೂ ಪ್ರಾಥಮಿಕ ಪರೀಕ್ಷೆ ಮಾಡಲು ಸಹಕಾರ - ತರಬೇತಿ ನೀಡಿದರು.
ಈ ಸಂದರ್ಭದಲ್ಲಿ ಡಿಎಚ್ಒ ಡಾ. ರಾಘವೇಂದ್ರಸ್ವಾಮಿ ಎಚ್.ಎಸ್., ಟಿಎಚ್ಒ ಡಾ. ಪ್ರಭಾಕರ ಕುಂದೂರ, ರೆಡ್ ಕ್ರಾಸ್ ಸಂಸ್ಥೆಯ ಖಜಾಂಚಿ ಪ್ರಭು ಹಿಟ್ನಳ್ಳಿ, ಜಿಲ್ಲಾ ಗೌರವ ಸಹಕಾರ್ಯದರ್ಶಿ ನಿಂಗಪ್ಪ ಆರೇರ, ಜಿಲ್ಲಾ ಸಮಿತಿ ಸದಸ್ಯ ಹನಮಂತಪ್ಪ ಗೊಲ್ಲರ, ಉಡಚಪ್ಪ ಮಾಳಗಿ, ರವಿ ಹಿಂಚಿಗೇರಿ, ಶಂಕರ ಸುತಾರ, ಡಾ. ಅಂಕಿತ ಆನಂದ ಇತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.